ಕೇಬಿಯ ಕಾವ್ಯ ಮಾದಿಗರ ಹಟ್ಟಿಯ ಬಣಗದ ಕೂಸು

ತನ್ನ ಕುಲಮೂಲದ ‘ಮಾದಿಗರ ಹಟ್ಟಿಯ ಬಣಗದ
ಕೂಸು’ ತಾನೆಂಬ ಪ್ರಜ್ಞೆಯನ್ನು ನಿರಂತರ ಕಾಪಿಟ್ಟುಕೊಂಡು ಕಾವ್ಯಯಾನವನ್ನು ಮುನ್ನಡೆಸುತ್ತಿದ್ದ ಕವಿ ಕೇಬಿಯದು ದುರ್ಗಮ ಮಾರ್ಗ ಎಂದು ಲೇಖಕ ಅಗ್ರಹಾರ ಕೃಷ್ಣ ಮೂರ್ತಿ ಹೇಳಿದರು.

ಚಲನ ಪ್ರಕಾಶನ ಸಹಕಾರಿ ಮತ್ತು ಕೆ.ಬಿ.ಗೆಳೆಯರ ಬಳಗದ ವತಿಯಿಂದ ತುಮಕೂರಿನ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಕೆ.ಬಿ.ಸಿದ್ದಯ್ಯ ಅವರ ಹಸ್ತಪ್ರತಿ ಮತ್ತು ಮುದ್ರಣದ ತೊಗಲ ಮಂಟಪ ಖಂಡಕಾವ್ಯವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

.ಸಾಹಿತ್ಯ ಮತ್ತು ಸಾಮಾಜಿಕ ವಲಯದಲ್ಲಿ ಉಂಟಾದ ಬದಲಾವಣೆ ಗಳು ಈಗಾಗಲೇ ಚರ್ಚಿತವಾಗಿವೆ. ಸಾಮಾಜಿಕ ಹೋರಾಟಗಳು ಹೊಸ ಆಯಾಮವನ್ನು ಪಡೆದವು. ಈ ಹೋರಾಟಗಳಲ್ಲಿ ಬಹುಮುಖ್ಯ ಪಾತ್ರಧಾರಿಗಳಾಗಿದ್ದವರಲ್ಲಿ ಕೇಬಿ ಪಾತ್ರ ಬಹಳ ದೊಡ್ಡದು. ಆ ಒಂದು ದಾರುಣಗೀತೆಯೇ ಸಾಕು ಎಲ್ಲ ಕಾಲದ ಹೋರಾಟಗಳಿಗೂ ಸ್ಫೂರ್ತಿ ನೀಡಲು. ಆ ಬಗ್ಗೆ ನಾನು ಇಲ್ಲಿ ವಿವರಿಸಲು ಹೋಗುವುದಿಲ್ಲ. ಸಾಹಿತ್ಯದಲ್ಲಿ, ಮುಖ್ಯವಾಗಿ ಕಾವ್ಯ ತನ್ನ ಮಗ್ಗಲು ಬದಲಿಸಿಕೊಳ್ಳತೊಡಗಿತು. ಹೀಗೆ ಕಾವ್ಯದ ಮಗ್ಗಲು ಬದಲಿಸಿದವರಲ್ಲಿ ಹಲವರಿದ್ದಾರೆ. ಸಿದ್ದಲಿಂಗಯ್ಯ, ಗೋವಿಂದಯ್ಯ, ಆನಂತರದ ಮಾಲಗತ್ತಿ, ಎಲ್ಲೆಚ್, ಮೂಡ್ನಾಕೂಡು ಮತ್ತೂ ನಂತರದ ಸುಬ್ಬು, ಎನ್ನೆ ಮತ್ತಿತರರು. ಅವರಲ್ಲಿ ವಿಶಿಷ್ಟ ರೀತಿಯ ಕಾವ್ಯವನ್ನು ರಚಿಸಿದ ಕವಿ ಕೇಬಿ. ಅಡಿಗಪೂರ್ವ ಕಾಲದಲ್ಲಿ ಆಧ್ಯಾತ್ಮಿಕ, ಮೆಟಫಿಸಿಕಲ್ ಮಾರ್ಗದಲ್ಲಿ ಕಾವ್ಯ ಬರೆದವರು ಕಡಿಮೆ ಎಂದು ಹೇಳಿದರು.

ಕೇಬಿಯವರು ಎದ್ದು ಕಾಣುವ ಮತ್ತು ಮಹತ್ವದ ಕಾವ್ಯ ರಚಿಸಿದವರು ಮಧುರಚೆನ್ನರೊಬ್ಬರೇ,ಅಡಿಗಾನಂತರದಲ್ಲಿ ‘ದಲಿತ’ ‘ದಲಿತೇತರ ಎಂಬ ವಿಭಾಗ ಮಧ್ಯದ ಮೆಟಾಫಿಸಿಕಲ್ ಮಾರ್ಗ ಹಿಡಿದವರ ಕೆಲವು ಹೆಸರುಗಳು ನಮಗೆ ಕಾಣಿಸುತ್ತವೆ. ಅಥವಾ ಅವರು ಹಾಗೆ ಗುರುತಿಸಲ್ಪಡುತ್ತಾರೆ. ಅಂಥವರ ಇಡೀ ಕಾವ್ಯ ನಮಗ್ರವೂ ಅಧ್ಯಾತ್ಮವಲ್ಲ. ತಮ್ಮ ಸೆಕ್ಯುಲರ್ ಕವಿತೆಗಳ ಜೊತೆಗೆ ಇಂಥ ರಚನೆಗಳನ್ನು ಮಾಡಿದ್ದಾರೆ. ಈ ದೃಷ್ಟಿಯಿಂದ ಕೇಬಿ ಕಾವ್ಯ ಭಿನ್ನ ನೆಲೆಯಲ್ಲಿ ಕಾಣಿಸುತ್ತದೆ. ಆತ ಬಿಡಿ ಕವಿತೆಗಳ ಗೋಜಿ ಹೋದವರಲ್ಲ. ಕಾವ್ಯಗೋಷ್ಠಿಗಳಲ್ಲಿ ವಾಚನ ಮಾಡುವಾಗ ತಪ್ಪುಖಂಡಕಾವ್ಯಗಳ ಭಾಗಗಳನ್ನೇ ವಾಚಿಸುತ್ತಿದ್ದುದುಂಟು. ಆಧ್ಯಾತ್ಮ ಮಾರ್ಗದ ಕಾವ್ಯಕ್ಕೂ ಕೆಲವು ಸರ್ವಸಮ್ಮತ ಸಾರ್ವತ್ರಿಕ ಲಕ್ಷಣ
ಗಳಿರುತ್ತವೆ ಎಂದರು.

ಅಲ್ಲಿ ಸಾಧನೆ ಗೈಯುವವರು ಹಲವು ಮಾರ್ಗಗಳಲ್ಲಿ ಮುನ್ನೆಡೆದು ಒಂದೇ ಗುರಿಯನ್ನು ತಲುಪುತ್ತಾರೆ ಎನಿಸುತ್ತದೆ. ಅದು ದೇವನೊಬ್ಬ ನಾಮ ಹಲವು ಎಂಬ ಕ್ಲೀಷೆಯಂತೆ. ವೈಯಕ್ತಿಕವಾಗಿ ನನಗೆ ಈ ಆಧ್ಯಾತ್ಮ, ಮೆಟಫಿಸಿಕಲ್ ಇತ್ಯಾದಿಗಳ ಬಗ್ಗೆ ಕಿಂಚಿತ್
ಜ್ಞಾನವೂ ಇಲ್ಲ. ಆದರೆ ಕೇಬಿ ಕಾವ್ಯದಲ್ಲಿ ಪ್ರಾಕ್ಟಿಸ್ ಮಾಡುತ್ತಿದ್ದ ಆಧ್ಯಾತ್ಮ ಕ್ಲಾಸಿಕಲ್ ಅಥವಾ ಅಭಿಜಾತ ಆಧ್ಯಾತ್ಮದ ಮಾದರಿಯಲ್ಲ ಎಂಬುದು ತಿಳಿಯುತ್ತದೆ. ಮತ್ತು ಕ್ಲಿಷ್ಟವೆನಿಸಿದರೂ ಕುತೂಹಲ ವನ್ನುಂಟು ಮಾಡುತ್ತದೆ. ಕುಲಮೂಲ, ಕುಲಗೀತೆ, ಕುಲಗುರು,
ಕುಲದೇವದೇವಿಯರು, ಕುಲಕಸುಬು ಮುಂತಾದ ಆದಿಮ ಪ್ರತಿಮೆಗಳ ಶೋಧನೆಯಲ್ಲಿ ಕೇಬಿ ಕಾವ್ಯ ಮುಳುಗಿರುತ್ತದೆ. ಜೊತೆಗೆ ವ್ಯಕ್ತಿಯೊಬ್ಬನ ಬಿಡುಗಡೆಗೆ, ಆಧುನಿಕ ಇರುವಿಕೆ (ಅಸ್ತಿತ್ವ)ಗಾಗಿ ನಡೆಸಬೇಕಾದ ತಾಕಲಾಟ, ಸಂಧಾನಗಳ ವಾಸ್ತವತೆಯನ್ನು ಚಿತ್ರಿಸುತ್ತದೆ ಎಂದು ನುಡಿದರು.

ಸಿದ್ದಯ್ಯನವರ ಕಾವ್ಯ ಸುಡುಸುಡುವ ಮಂಜುಗಡ್ಡೆಯಾಗಿದೆ ಎನ್ನುವುದಕ್ಕೆ ಕಾರಣಗಳಿವೆ. ಆದರೆ ಅವುಗಳನ್ನು ಹುಡುಕಲು ಹೋಗುವುದಿಲ್ಲ. ಕನ್ನಡ ಸಾಹಿತ್ಯದಲ್ಲಿ 70-80ರ ದಶಕವನ್ನು ಬಹಳ ಮುಖ್ಯವಾಗಿ ಕಣ್ಣೆದುರಿನ ಸಾಮಾಜಿಕ, ರಾಜಕೀಯ ಮತ್ತು ಸಾಹಿತ್ಯಕ ಚಿತ್ತದೊಳಗೆ ನಿಜವಾದ ಉತ್ಕ್ರಾಂತಿಯನ್ನು ಮಾಡಿದ ಸಂದರ್ಭ ಎಂದು ನಾವು ಭಾವಿಸಬೇಕು ಎಂದು ಹೇಳಿದರು.

ಬಸವಲಿಂಗಪ್ಪ ಸಾಹಿತಿಯಾಗಿಲ್ಲದ ಕಾರಣದಿಂದ ಸಾಹಿತ್ಯ ಕ್ಷೇತ್ರದಲ್ಲಿ ಅವರನ್ನು ಅಸ್ಪೃಶ್ಯರನ್ನಾಗಿ ಮಾಡಿದೆ. ಅವರು ಮಾಡಿದ ಕೆಲವು ಹೇಳಿಕೆಗಳು ಮತ್ತು ಮಹತ್ತರ ಘೋಷಣೆಗೆಳು ಅವು ಸಾಹಿತ್ಯದ ದಿಕ್ಕನ್ನು ಬದಲಾಗುವಂತೆ ಮಾಡಿದವು. ಹಾಗಾಗಿ ಇನ್ನು ಮುಂದಾದರೂ ಸಾಹಿತ್ಯದಲ್ಲಿ ಬಸವಲಿಂಗಪ್ಪ ಅವರ ಹೆಸರನ್ನು ದಾಖಲಿಸಬೇಕಾಗಿದೆ. ಸಾಂಸ್ಕೃತಿಕ, ಸಾಹಿತ್ಯಕ ವ್ಯಕ್ತಿ ಎಂದೇ ಗುರುತಿಸಬೇಕು ಎಂದರು.

ಕಾವ್ಯ ಏಕಕಾಲಕ್ಕೆ ಆಧ್ಯಾತ್ಮಿಕವೂ ರಾಜಕೀಯವೂ ಆಗಿರಬೇಕು ಎಂಬುದು ಕೆ.ಬಿ.ಸಿದ್ದಯ್ಯನವರ ನಿಲುವಾಗಿತ್ತು. ಹಾಗಾಗಿಯೇ ಅವರ ಕಾವ್ಯಕ್ಕೆ ವಿಶೇಷ ಮಹತ್ವ ಸಿಕ್ಕಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಕರ್ನಾಟಕದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ ಮಾತನಾಡಿ, ಕೊಟ್ಟಶಂಕರ್ ಅವರು ಕೆ.ಬಿ.ಸಿದ್ದಯ್ಯ ಅವರ ಕಾವ್ಯವನ್ನು ಪ್ರಕಟಿಸುವ ಮೂಲಕ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ತೊಗಲು ಮಂಟಪ ಕೃತಿಯನ್ನು ಸಿದ್ದಯ್ಯನವರ ಕೈಬರೆಹದ ಜೊತೆಗೆ ಮುದ್ರಣವನ್ನು ಮಾಡಿಸಿರುವುದು ಮೆಚ್ಚಬೇಕಾದ ಸಂಗತಿ ಎಂದರು.

ಕೆ.ಬಿ.ಸಿದ್ದಯ್ಯನವರ ಬತ್ತಳಿಕೆಯಲ್ಲಿ ಇನ್ನು ಏನೇನು ಇದೆಯೋ ಎಂಬುದನ್ನು ಕೊಟ್ಟಶಂಕರ್ ಹುಡುಕಿ ಪ್ರಕಟಿಸಬೇಕು ಎಂದು ಸಲಹೆ ನೀಡಿದರು.

ಕೇಂದ್ರ ವಲಯದ ಐಜಿಪಿ ಡಾ.ಬಿ.ಆರ್. ರವಿಕಾಂತೇಗೌಡ ಮಾತನಾಡಿ, ಕವಿ ಕೆ.ಬಿ.ಸಿದ್ದಯ್ಯ ಅವರಂಥ ಕೆಲವು ಸಾಹಿತಿಗಳು ಲೋಕವಿರೋಧಿಗಳು. ಸಾಮಾನ್ಯರು ಯೋಚಿಸಿದಂತೆ ಅವರು ಯೋಚಿಸುವುದಿಲ್ಲ. ದಲಿತ, ಹಿಂದುಳಿದವನಾದ ನಾನು ಮುಟ್ಟಿದ್ದರಿಂದಲೇ ಅಕ್ಷರ ಬಿಡುಗಡೆಗೊಂಡಿತು ಎಂದು ಕೆ.ಬಿ.ಸಿದ್ದಯ್ಯ ಹೇಳುತ್ತಾರೆ. ಹೀಗಾಗಿ ಅವರು ಭಿನ್ನವಾಗಿ ಆಲೋಚಿಸುವ ವ್ಯಕ್ತಿಯಾಗಿದ್ದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬಿ.ಎಂ.ಪುಟ್ಟಯ್ಯ, ಕವಯತ್ರಿ ಸವಿತಾ ನಾಗಭೂಷಣ್, ಹಿರಿಯ ಹೋರಾಟಗಾರ ಕೋಟಗಾನಹಳ್ಳಿ ರಾಮಯ್ಯ, ಚರಕ ಆಸ್ಪತ್ರೆಯ ಡಾ.ಬಸವರಾಜು, ಗಂಗರಾಜಮ್ಮ ಕೆ.ಬಿ.ಸಿದ್ದಯ್ಯ, ಕೊಟ್ಟಶಂಕರ್ ಉಪಸ್ಥಿತರಿದ್ದರು.

ಚೈತ್ರ ಕೊಟ್ಟಶಂಕರ್ ಸ್ವಾಗತಿಸಿದರು. ಡಾ.ಶಿವಣ್ಣ ತಿಮ್ಲಾಪುರ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *