
ತುಮಕೂರು: ಅನಗತ್ಯ ವಿಷಯಗಳು, ಬೇಡವಾದ ಚರ್ಚೆಗಳು ಮನುಷ್ಯನ ಮಾನಸಿಕ ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತಿವೆ ಎಂದು ಲೇಖಕಿ ಬಾ.ಹ.ರಮಾಕುಮಾರಿ ಅಭಿಪ್ರಾಯ ವ್ಯಕ್ತಪಡಿಸಿದರು.
ವರದಕ್ಷಿಣೆ ವಿರೋಧಿ ವೇದಿಕೆ, ಸಾಂತ್ವನ ಕೇಂದ್ರ ಹಾಗೂ ಅಕ್ಷಯ ಇಂಜಿನಿಯರಿಂಗ್ ಕಾಲೇಜು ಇವುಗಳ ಸಂಯುಕ್ತಾಶ್ರಯದಲ್ಲಿ ಲಿಂಗಾಪುರದ ಅಕ್ಷಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಆರೋಗ್ಯ ಅರಿವು ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಮಗೆ ಬೇಕಿರುವ ವಿಷಯಗಳಿಗಿಂತ ಬೇಡವಾದ ವಿಷಯಗಳಿಗೆ ಹೆಚ್ಚು ಗಮನ ಕೊಡುತ್ತೇವೆ, ಇವು ಅನಗತ್ಯ ಚರ್ಚೆಗಳಿಗೆ ದಾರಿ ಮಾಡಿಕೊಡುತ್ತದೆ. ಒಬ್ಬ ವ್ಯಕ್ತಿಯ ಮಾನಸಿಕ ಆರೋಗ್ಯ ಹಾಳಾಗುವುದಕ್ಕೆ ಅನಾರೋಗ್ಯಕರ ಚರ್ಚೆಗಳೂ ಕಾರಣವಾಗುತ್ತವೆ. ಶುದ್ಧ ಮನುಸ್ಸು ಮತ್ತು ಕಲಿಯುವ ತವಕ ಇದ್ದರೆ ಇಂತಹ ಅನಗತ್ಯ ವಿಷಯಗಳಿಗೆ ಕಡಿವಾಣ ಹಾಕಲು ಸಾಧ್ಯವಿದೆ ಎಂದರು.
ಓದುವ ಹವ್ಯಾಸ ಇರುವವರಲ್ಲಿ ಸದಭಿರುಚಿ ಇರುತ್ತದೆ. ಬದುಕಿನ ಪ್ರೀತಿಯನ್ನು ಓದು ಕಲಿಸುತ್ತದೆ. ಓದಿನಿಂದಲೇ ಜ್ಞಾನ ಸಂಪಾದನೆಯೂ ಸಾಧ್ಯ. ಕಥೆ,ಕಾದಂಬರಿ, ಪತ್ರಿಕೆಗಳನ್ನು ಓದುವ ಸದಭಿರುಚಿ ಬೆಳೆಸಿಕೊಂಡರೆ ಮನಸ್ಸು ಉಲ್ಲಾಸಗೊಳ್ಳುತ್ತದೆ. ಪರಸ್ಪರ ಪ್ರೀತಿಯಿಂದ ಬಾಳ್ಮೆ ಮಾಡುವಂತಹ ಮನಸ್ಸನ್ನು ಸಂಪಾದಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಮಾನಸಿಕ ಆರೋಗ್ಯ ಕುರಿತು ವಿಷಯ ಮಂಡಿಸಿ ಮಾತನಾಡಿದ ಅನಿಲ್ ನ್ಯೂರೋ ಸೈಕ್ಯಾಟ್ರಿ ಅಂಡ್ ಡಿ ಅಡಿಕ್ಷನ್ ಸೆಂಟರ್ನ ಮನೋವೈದ್ಯರಾದ ಡಾ.ಅನಿಲ್ ಕುಮಾರ್ ನಮ್ಮ ಸಮಾಜದಲ್ಲಿ ಅನಾರೋಗ್ಯಕ್ಕೆ ತುತ್ತು ಮಾಡುವಂತಹ ಹಾದಿಗಳು ಹೇರಳವಾಗಿವೆ. ದುರಂತವೆಂದರೆ ಮಾನಸಿಕ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆದುಕೊಳ್ಳುವವರು ಶೇ.15 ರಷ್ಟು ಮಾತ್ರ. ಉಳಿದ ಬಹುತೇಕ ಮಂದಿ ಮಾಟ ಮಂತ್ರಗಳ ಮೊರೆ ಹೋಗುತ್ತಾರೆ. ಅದನ್ನೇ ನಂಬುತ್ತಾರೆ. ಈ ವೈಜ್ಞಾನಿಕ ಯುಗದಲ್ಲಿಯೂ ಮನುಷ್ಯರ ಸಹಜ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲಾಗದಂತಹ, ಮಾಟ ಮಂತ್ರಗಳಿಗೆ ಬಲಿಯಾಗುವ ದೃಶ್ಯಗಳನ್ನು ನೋಡುವಂತಹ ಪರಿಸ್ಥಿತಿಯಲ್ಲಿ ಇರುವುದೇ ಒಂದು ವಿಷಾದಕರ ಸಂಗತಿ ಎಂದರು.
ನಂಬಿಕೆಗಳು ಇರಬೇಕು. ಆದರೆ ಮೂಢ ನಂಬಿಕೆಗಳು ಬದುಕನ್ನೇ ಬಲಿ ತೆಗೆದುಕೊಳ್ಳುತ್ತವೆ ಎಂಬ ಎಚ್ಚರಿಕೆ ಇರಬೇಕು. ದೆವ್ವ ಬಿಡಿಸುವ ಆಟದಲ್ಲಿ ಅಂಗಾಂಗಗಳಿಗೆ ಬರೆ ಹಾಕುವ ಮೂಲಕ ಮತ್ತಷ್ಟು ಮಾನಸಿಕ ಘಾಸಿ ಉಂಟು ಮಾಡಿದರೆ ಇನ್ನು ಕೆಲವರು ನೋವು ನಿವಾರಕ ಮಾತ್ರೆಗಳ ಮೊರೆ ಹೋಗುತ್ತಾರೆ. ಇವೆರಡೂ ಅಪಾಯಕಾರಿ. ಎಲ್ಲರೂ ದೈಹಿಕ ಆರೋಗ್ಯದ ಕಡೆಗೆ ಗಮನ ಹರಿಸುತ್ತಿದ್ದಾರೆಯೇ ಹೊರತು ಮಾನಸಿಕ ಆರೋಗ್ಯದ ಕಡೆಗೆ ಗಮನ ಕೊಡುತ್ತಿಲ್ಲ ಎಂದರು.
ಈಗ ಒತ್ತಡದ ಜೀವನ ಅನಿವಾರ್ಯವಾಗಿದೆ. ಆದರೆ ಅದನ್ನು ನಿಭಾಯಿಸುವ ಕೌಶಲ್ಯ ಬೇಕು. ಅಂತಹ ಕೌಶಲ್ಯ ಯಾರು ಬೆಳೆಸಿಕೊಳ್ಳುತ್ತಾರೋ ಅವರು ಮಾನಸಿಕ ಮತ್ತು ದೈಹಿಕವಾಗಿ ಸಧೃಢರಾಗಿರುತ್ತಾರೆ. ವಿದ್ಯಾರ್ಥಿ ದೆಸೆಯಲ್ಲಿ ಸಹವಾಸ ಇರಬೇಕು. ಆದರೆ ಎಂತಹವರ ಸಹವಾಸ ಎಂಬುದನ್ನು ಯೋಚಿಸಿ ನಿರ್ಧಾರ ಕೈಗೊಳ್ಳಬೇಕು. ಮದ್ಯ, ಮಾದಕ ವಸ್ತುಗಳ ಬಳಕೆ ಹಾದಿ ಹಿಡಿದರೆ ಇಡೀ ಜೀವನವೇ ನರಕವಾಗುತ್ತದೆ ಎಂಬುದರ ಬಗ್ಗೆ ಎಚ್ಚರಿಕೆ ಇರಬೇಕು ಎಂದರು.
ಆಪ್ತ ಸಮಾಲೋಚಕರು, ಸಾಮಾಜಿಕ ಅಭಿವೃದ್ಧಿ ಸಲಹೆಗಾರರಾದ ಸಿ.ಸಿ. ಪಾವಟೆ ಅವರು ಸಂವಾದದಲ್ಲಿ ಪ್ರಕ್ರಿಯಿಸಿ ಮಾತನಾಡಿ ಮನುಷ್ಯರಿಗೆ ರೋಗ ಬರುತ್ತಿರುವುದು ವೈರಾಣುಗಳಿಂದಲ್ಲ. ದೈಹಿಕ ಅನಾರೋಗ್ಯದಿಂದಲೂ ಅಲ್ಲ. ಬದಲಾಗಿ ಆತನ ಯೋಚನಾ ಲಹರಿಗಳಿಂದ. ವಿಪರೀತ ಯೋಚನೆಗಳು, ಕೆಟ್ಟ ಆಲೋಚನೆಗಳೇ ಮನುಷ್ಯನ ಮಾನಸಿಕ ಆರೋಗ್ಯವನ್ನು ಹಾಳು ಮಾಡುತ್ತಿವೆ. ಇದರಿಂದ ಹೊರಬರಲು ಇರುವ ಮಾರ್ಗಗಳೆಂದರೆ ಎಲ್ಲರೊಂದಿಗೆ ವಿಶ್ವಾಸಪೂರ್ವಕವಾಗಿ ಪ್ರೀತಿಯಿಂದ ಬೆರೆಯುವುದು, ಎಲ್ಲವನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತಾ ನಗುಮೊಗದಿಂದ ಸಮಸ್ಯೆಗಳನ್ನು ಬಗೆಹರಿಸುವ ಕೌಶಲ್ಯ. ಇಷ್ಟಿದ್ದರೆ ಸಮಸ್ಯೆಗಳನ್ನು ದೂರ ಇಡಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಅಕ್ಷಯ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲರಾದ ಡಾ. ಕೆ.ವಿ.ಶ್ರೀನಿವಾಸರಾವ್ ಮಾತನಾಡಿ ಮನಸ್ಸು ನಿಗ್ರಹ ಮಾಡಿಕೊಳ್ಳುವ ಶಕ್ತಿ ರೂಢಿಸಿಕೊಂಡರೆ ಪರಿಪೂರ್ಣ ವ್ಯಕ್ತಿತ್ವ ಹೊಂದಲು ಸಾಧ್ಯ. ಈಗಿನ ಕಾಲಘಟ್ಟದಲ್ಲಿ ಎಲ್ಲರೂ ಮೊಬೈಲ್ಗಳ ಹಿಂದೆ ಬಿದ್ದಿರುವುದರಿಂದ ಸಾಕಷ್ಟು ಸಮಯ ಅಲ್ಲಿಯೇ ವ್ಯರ್ಥವಾಗುತ್ತಿದೆ. ಇವುಗಳಿಗೆ ಒಂದು ಮಿತಿ ಎಂಬುದು ಇರಬೇಕು. ಇಲ್ಲದೆ ಹೋದರೆ ಅನಾಹುತಗಳು ಕಟ್ಟಿಟ್ಟ ಬುತ್ತಿ ಎಂದರು.
ಪಾರ್ವತಮ್ಮ ರಾಜಕುಮಾರ್, ಗಂಗಲಕ್ಷ್ಮಿ ಸಂಗಡಿಗರು ಅರಿವಿನ ಗೀತೆಗಳನ್ನು ಹಾಡಿದರು. ಲೇಖಕಿ ಕಮಲ ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕ ರಾಕೇಶ್ ಎಸ್. ಸ್ವಾಗತಿಸಿದರು. ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ ಕಾರ್ಯಕ್ರಮ ನಿರೂಪಿಸಿದರು.