
ತುಮಕೂರು: ನಗರದಲ್ಲಿ ಸ್ಮಾರ್ಟ್ಸಿಟಿ ಯೋಜನೆಯಡಿಯಲ್ಲಿ ನವೀಕರಣಗೊಂಡಿರುವ ನಗರದ ಮಹಾತ್ಮಗಾಂಧಿ ಕ್ರೀಡಾಂಗಣ ಅವ್ಯವಸ್ಥೆಗಳ ಆಗರವಾಗಿ ಕ್ರಿಡಾಪಟುಗಳಿಗೆ, ಕ್ರೀಡಾಸಕ್ತರಿಗೆ, ಕ್ರೀಡಾ ಪೋಷಕರಿಗೆ ನಿರಾಸೆ ಮೂಡಿಸಿದೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ಭಾನುವಾರ ಕ್ರೀಡಾಪಟುಗಳು, ಕ್ರೀಡಾಪೋಷಕರು, ಕಾಂಗ್ರೆಸ್ ಮುಖಂಡರೊಂದಿಗೆ ಕ್ರೀಡಾಂಗಣಕ್ಕೆ ಭೇಟಿ ನೀಡಿ ಕ್ರೀಡಾಂಗಣದ ಪರಿಶೀಲನೆಗೆ ಜಿಲ್ಲಾಡಳಿತದ ಪರವಾಗಿ ಆಗಮಿಸಿದ್ದ ಉಪವಿಭಾಗಾಧಿಕಾರಿ ಹೋಟೆಲ್ ಶಿವಪ್ಪ ಅವರಿಗೆ ಸಮಸ್ಯೆಗಳ ಆಗರವನ್ನು ಮುಂದಿಟ್ಟರು.
ಈ ವೇಳೆ ಮಾತನಾಡಿದ ಮುರಳೀಧರ ಹಾಲಪ್ಪ ಅವರು, ಕ್ರೀಡಾಂಗಣಕ್ಕೆ 65 ಕೋಟಿ ಬೇಸಿಕ್ ಹಣ ಬಿಡುಗಡೆಯಾದರೂ ಸಹ ಅದನ್ನು ಸಕ್ರಿಯವಾಗಿ ಉಪಯೋಗಿಸದೆ ಕ್ರೀಡಾಪಟುಗಳಿಗೆ ಅಗತ್ಯವಾಗಿ ಬೇಕಾಗಿರುವಂತಹ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆ, ಸೆಕ್ಯುರಿಟಿ ವ್ಯವಸ್ಥೆ, ವಿದ್ಯುತ್ ದೀಪದ ವ್ಯವಸ್ಥೆ, ಸ್ವಚ್ಚತೆ ಇಲ್ಲದೇ ಇರುವುದು ಬೇಸರ ತರಿಸಿದೆ ಎಂದರು.
ಇಲ್ಲಿರುವ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರನ್ನು ಈಗಾಗಲೇ ಸಸ್ಪೆಂಡ್ ಮಾಡಲಾಗಿದೆ. ಹಾಗಾಗಿ ಉಪವಿಬಾಗಾಧಿಕಾರಿಗಳು ಇದರ ಉಸ್ತುವಾರಿ ವಹಿಸಿದ್ದು, ಬೆಂಗಳೂರಿಗೆ ಸಮೀಪದಲ್ಲಿರುವ, ವಿಮಾನ ನಿಲ್ದಾಣಕ್ಕೆ ಸಮೀಪವಿರುವ ತುಮಕೂರಿನ ಅಂತರಾಷ್ಟ್ರೀಯ ಮಹಾತ್ಮಗಾಂಧಿ ಕ್ರೀಡಾಂಗಣ ಎಲ್ಲಾ ಕ್ರೀಡಾಪಟುಗಳಿಗೆ ಸದ್ವಿನಿಯೋಗವಾಗಬೇಕು, ಇಲ್ಲಿ ಇಂಡೋರ್ ಸ್ಟೇಡಿಯಂನ್ನು ಕಲ್ಯಾಣ ಮಂಟಪದ ರೀತಿಯಲ್ಲಿ ಮಾಡಿದ್ದಾರೆ. ಇಂತಹ ಸ್ಟೇಡಿಯಂ ಯಾವುದೇ ರೀತಿಯಲ್ಲೂ ಉಪಯೋಗಕ್ಕೆ ನೀಡದೆ ಬೀಗ ಜಡಿದಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ನೀಡಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತದ ಪರವಾಗಿ ಉಪವಿಭಾಗಾಧಿಕಾರಿ ಹೋಟೆಲ್ ಶಿವಪ್ಪ ಅವರು ಭಾನುವಾರ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ಇಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲ, ಮಹಿಳಾ ಮತ್ತು ಪುರುಷ ಕ್ರೀಡಾಪಟುಗಳಿಗೆ ಪ್ರತ್ಯೇಕ ಶೌಚಾಲಯವಿದ್ದರೂ ಬೀಗ ಜಡಿದ ಪರಿಣಾಮ ಕ್ರೀಡಾಪಟುಗಳಿಗೆ ತೊಂದರೆಯಾಗಿದೆ. ಪಾರ್ಕಿಂಗ್ ವ್ಯವಸ್ಥೆಗೆ ಕ್ರೀಡಾಂಗಣದ ಒಳಗೆ ಅವಕಾಶವಿದ್ದರೂ ಒಳಗೆ ಬಿಡದೆ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಜೆ 6 ಗಂಟೆ ನಂತರ ವಿದ್ಯುತ್ ದೀಪಗಳನ್ನು ಆಫ್ ಮಾಡಿ ಹೋಗುತ್ತಾರೆ. ಇದರಿಂದ ಕ್ರೀಡಾಪಟುಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದರು.
ಫುಟ್ ಬಾಲ್ ಆಟಗಾರರಿಗೆ ಕ್ರೀಡಾಂಗಣದ ಸುತ್ತಲೂ ನೆಟ್ ಹಾಕಿಸಿ ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸಬೇಕು, ಜೊತೆಗೆ ಸ್ಪೋಟ್ರ್ಸ್ ಕಾಂಪ್ಲೆಕ್ಸ್ನಲ್ಲಿ ಎಲ್ಲಾ ಕ್ರೀಡೆಗಳಿಗೆ ಆಧ್ಯತೆ ಕೊಡಬೇಕು, ಕ್ರೀಡಾಂಗಣದಲ್ಲಿ ಮೂಲಭೂತ ಸೌಲಭ್ಯಗಳಿಗೆ ಆಧ್ಯತೆ ಕಲ್ಪಿಸಿ ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸಬೇಕೆಂದು ನೂತನ ಸರ್ಕಾರಕ್ಕೆ ಮನವಿ ಮಾಡಿದರು.
ರಾಷ್ಟ್ರೀಯ ಕ್ರೀಡಾಪಟು ಅನಿಲ್ ಮಾತನಾಡಿ, ನವೀಕರಣಗೊಂಡಿರುವ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಸ್ಪೋಟ್ರ್ಸ್ ಕಾಂಪ್ಲೆಕ್ಸ್ ನಿರ್ಮಾಣ ಮಾಡಿದ್ದು, 4 ಅಂತಸ್ತುಗಳುಳ್ಳ ಈ ಸ್ಪೋಟ್ರ್ಸ್ ಕಾಂಪ್ಲೆಕ್ಸ್ನ್ನು ಯಾರಿಗೋ ಅನುಕೂಲ ಮಾಡಿಕೊಡುವ ಉದ್ಧೇಶದಿಂದ ಕಮರ್ಷಿಯಲ್ ಕಾಂಪ್ಲೆಕ್ಸ್ ಬಳಕೆಗೆ ನೀಡಲಾಗುತ್ತಿದೆ. ಯಾವುದೇ ರಾಜ್ಯದಲ್ಲೂ ಕ್ರೀಡಾಂಗಣವನ್ನು ಕಮರ್ಷಿಯಲ್ ಬಳಕೆಗೆ ನೀಡಿಲ್ಲ, ಇಲ್ಲಿ ಮಾತ್ರ ಕಮಿರ್ಷಿಯಲ್ ಬಳಕೆಗೆ ನೀಡಲು ಹೊರಟಿದ್ದಾರೆ. ಇದರಿಂದ ಕ್ರೀಡಾಪಟುಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಂದು ಅಂತಸ್ತಿನಲ್ಲಿ ಒಳಾಂಗಣ ಕ್ರೀಡೆಗಳಿಗೆ ಅವಕಾಶ ಕಲ್ಪಿಸಿದರೆ ಅದರಲ್ಲೇ ಎಲ್ಲಾ ರೀತಿಯ ಒಳಾಂಗಣ ಕ್ರೀಡೆಗಳಿಗೆ ಅನುಕೂಲವಾಗಲಿದೆ. ನಾವೂ ಸಹ ಬಾಡಿಗೆ ಕಟ್ಟುತ್ತೇವೆ ಎಂದು ತಿಳಿಸಿದರು.
ಗುತ್ತಿಗೆದಾರರ ಪರವಾಗಿ ಗುರು ಮಾತನಾಡಿ, ಸ್ಪೋಟ್ರ್ಸ್ ಕಾಂಪ್ಲೆಕ್ಸ್ನ್ನು ಸಂಬಂಧಪಟ್ಟ ಇಲಾಖೆಯವರು ಸುಪರ್ಧಿಗೆ ತೆಗೆದುಕೊಂಡರೆ ಮಾತ್ರ ಇಲ್ಲಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ. ಕ್ರೀಡಾಪಟುಗಳು ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಬಳಕೆಗೆ ಕೇಳುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆ ಸುಪರ್ಧಿಗೆ ತೆಗೆದುಕೊಂಡರೆ ಅವರು ನಿರ್ವಹಣೆ ಮಾಡಿಕೊಳ್ಳುತ್ತಾರೆ. ಅಲ್ಲಿಯವರೆಗೂ ನಾವು ಇಲ್ಲಿ ಸ್ವಚ್ಚತೆಯ ಬಗ್ಗೆ ಗಮನಹರಿಸಬೇಕಾಗಿದೆ ಎಂದು ತಿಳಿಸಿದರು.
ತುಮಕೂರು ಉಪವಿಭಾಗಾಧಿಕಾರಿ ಹೋಟೆಲ್ ಶಿವಪ್ಪ ಮನವಿಗೆ ಸ್ಪಂಧಿಸಿ ಮಾತನಾಡಿ, ಕ್ರೀಡಾಂಗಣದಲ್ಲಿ ಮೂಲಭೂತ ಸೌಲಭ್ಯಗಳ ಬಗ್ಗೆ ಮುರಳೀಧರ ಹಾಲಪ್ಪ ಅವರು, ಕ್ರೀಡಾಪಟುಗಳು, ಅಸೋಸೀಯೇಷನ್ನವರು, ಮನವಿ ಮಾಡಿದ್ದರ ಮೇರೆಗೆ ಕ್ರೀಡಾಂಗಣಕ್ಕೆ ಭೇಟಿ ನೀಡಲಾಗಿದೆ.
ಮುಖ್ಯವಾಗಿ ಮೂಲಭೂತ ಸೌಲಭ್ಯಗಳ ಬಗ್ಗೆ ಮತ್ತು ಕ್ರೀಡಾಂಗಣದ ಸ್ವಚ್ಚತೆಯ ಬಗ್ಗೆ ತರಬೇತುದಾರರ ಬಗ್ಗೆ ಕ್ರೀಡಾ ಕಾಂಪ್ಲೆಕ್ಸ್ಗಳ ಬಗ್ಗೆ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಹಲವು ಅಂಶಗಳನ್ನು ನನ್ನ ಗಮನಕ್ಕೆ ತಂದಿದ್ದಾರೆ. ಮೂಲಭೂತ ಸೌಲಭ್ಯಗಳಿಗೆ ಪ್ರಥಮ ಆಧ್ಯತೆ ನೀಡಿ, ಆನಂತರ ಅವರ ಮನವಿಗಳನ್ನು ಪರಿಶೀಲಿಸಿ ಕ್ರೀಡಾಂಗಣವನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವುದಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಕ್ರೀಡಾಪಟು ಟಿ.ಕೆ.ಆನಂದ್, ರಾಷ್ಟ್ರೀಯ ಕ್ರೀಡಾಪಟು ಅನಿಲ್, ಧನಿಯಾಕುಮಾರ್, ಮುಖಂಡರಾದ ರೇವಣ್ಣ ಸಿದ್ಧಯ್ಯ, ತರುಣೇಶ್, ಸಿದ್ಧಲಿಂಗೇಗೌಡ, ಗೋವಿಂದೇಗೌಡ, ನಟರಾಜು, ಡಾ.ಅರುಂಧತಿ, ರಂಗಸ್ವಾಮಿ, ವಾಲೆಚಂದ್ರು, ಮಂಜುನಾಥ್, ಷಣ್ಮುಖಪ್ಪ ಮುಂತಾದವರು ಭಾಗವಹಿಸಿದ್ದರು.