
ತುಮಕೂರು: ತುಮಕೂರು ನಗರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಅವರು ಪಕ್ಷೇತರನಾಗಿ ಕಣಕ್ಕೆ ಇಳಿಯಲು ನಿರ್ಧರಿಸಿದ್ದು ಏ.20ರಂದು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇವತ್ತಿಂದ ಹೊಸ ಅಧ್ಯಾಯ ಪ್ರಾರಂಭವಾಗುತ್ತಿದೆ ನಾನು ಸ್ವಾಭಿಮಾನಿ ಜೊತೆಯಲ್ಲಿರುವವರು ಕೂಡ ಸ್ವಾಭಿಮಾನಿಗಳು ಎಲ್ಲರೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವಂತೆ ಹೇಳಿದ್ದಾರೆ. ಹಾಗಾಗಿ ನಾನು ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತೇನೆ ಎಂದರು.
ನಾನು ಶಾಂತಿ ಮಂತ್ರ ಸಮಾನತೆ ಮಂತ್ರ ಜಪಿಸುತ್ತೇನೆ. ವ್ಯವಸ್ಥೆ ಭ್ರಷ್ಟಚಾರ ಮುಕ್ತವಾಗಿರಬೇಕು ಎನ್ನುವುದು ನನ್ನ ಬಯಕೆ ಎಂದು ಹೇಳಿದ ಅವರು, ನಾನು ಇನ್ಮೇಲೆ ಮನೆಮನೆಗೆ ತೆರಳಿ ಮತ ಕೇಳುತ್ತೇನೆ ಎರಡು ಜೋಳಿಗೆ ಹಿಡಿದು ಹೋಗ್ತಿನಿ. ಹಿಂದೆ ಋಷಿ ಮುನಿಗಳು ಜೋಳಿಗೆ ಹಿಡಿದು ಮಠಮಾನ್ಯಗಳ ಅಭಿವೃದ್ಧಿಗೆ ಹೋಗುತ್ತಿದ್ದರು. ನಾನು ಹಾಗೆಯೇ ಜೋಳಿಗೆ ಹಿಡಿದು ಹೋಗುತ್ತೇನೆ ಒಂದು ಓಟು, ಇನ್ನೊಂದು ನೋಟಿಗಾಗಿ ಜೋಳಿಗೆ ಹಾಕಿದ್ದೇನೆ. ನಾನು ಯಾವತ್ತೂ ಸ್ವಜನ ಪಕ್ಷಪಾತ ಮಾಡೋದಿಲ್ಲ ಎಂದು ಹೇಳಿದರು.
ಕ್ಷೇತ್ರದ ಬಲಿದಗೆ ತನಗೆ ಟಿಕೆಟ್ ನೀಡಬೇಕೆಂದು ಸೊಗಡು ಶಿವಣ್ಣ ಒತ್ತಡ ಹಾಕಿದ್ದರು. ಆದರೆ ಪಕ್ಷ ಅದಕ್ಕೆ ಸೊಪ್ಪು ಹಾಕಿರಲಿಲ್ಲ. ಈ ಸಿಟ್ಟಿನಿಂದ ಅವರು ಬಿಜೆಪಿ ತೊರೆದು ಬಳಿಕ ಜೆಡಿಎಸ್ ಸೇರುವ ಪ್ರಯತ್ನ ನಡೆಸಿದ್ದರು. ಎಚ್.ಡಿ.ಕುಮಾರಸ್ವಾಮಿಯನ್ನು ಭೇಟಿ ಮಾಡಿದ್ದ ಸೊಗಡು ಶಿವಣ್ಣ ಅವರು ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು. ಆದರೆ ಈ ಮನವಿ ಫಲಪ್ರದವಾದ ಹಿನ್ನೆಲೆಯಲ್ಲಿ ಅವರು ಏ.20ರಂದು ಪಕ್ಷೇತರನಾಗಿ ನಾಮಪತ್ರಸಲ್ಲಿಸಲು ಮುಂದಾಗಿದ್ದಾರೆ.