ತುಮಕೂರು : ವಿಶ್ವೇಶ್ವರಯ್ಯ ಅವರು ಬದುಕಿದ್ದ ಕೊನೆ ಕ್ಷಣದವರೆಗೆ ದೇಶದ ಪ್ರಗತಿಗೆ ಚಿಂತಿಸಿದರು, ಜೀವನವನ್ನು ಮುಡುಪಾಗಿಟ್ಟವರು, ಮೈಸೂರು ಸರ್ಕಾರ ಶಿಕ್ಷಣ ಮತ್ತು ಕೈಗಾರಿಕೆ ವಿಚಾರದಲ್ಲಿ ಪ್ರಗತಿ ಸಾಧಿಸಲು ವಿಶ್ವೇಶ್ವರಯ್ಯ ಅವರೇ ಕಾರಣ ಎಂದು ಸರ್.ಎಂ.ವಿಶ್ವೇಶ್ವರಯ್ಯ ಅವರ ಮೊಮ್ಮಗ ಶೇಷಾದ್ರಿ ಮೋಕ್ಷಗುಡಂ ತಿಳಿಸಿದರು.
ನಗರದ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ಎಂಜನಿಯರ್ ಅಸೋಸಿಯೇಷನ್ ತುಮಕೂರು, ರಾಮ್ಕೋ ಸಿಮೆಂಟ್ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ಎಂಜನಿಯರ್ ಡೇ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡುವ ಸರ್.ಎಂ.ವಿ ಆರ್ಥಿಕ ತಜ್ಞ, ಉತ್ತಮ ಆಡಳಿತಗಾರನಾಗಿದ್ದರಿಂದಲೇ ಡಿವಿಜಿ, ಕುವೆಂಪು, ಬೇಂದ್ರೆ, ಮಾಸ್ತಿ ಅಂತವರಿಂದ ಪ್ರಶಂಸೆಯನ್ನು ಪಡೆಯುವಂತಾಗಿದ್ದು ಅವರ ಸಾರ್ಥಕ ಜೀವನದಿಂದ ಮಾತ್ರ ಎಂದು ಹೇಳಿದರು.
ಮುಂದಿನ ಜನಾಂಗ ಸರ್.ಎಂ.ವಿಶ್ವೇಶ್ವರಯ್ಯ ಅವರಂತವರು ಬದುಕಿದ್ದರು, ಅವರು ಇಷ್ಟೆಲ್ಲ ಕೆಲಸ ಮಾಡಿದ್ದರು ಎನ್ನುವುದನ್ನು ನಂಬುವುದಿಲ್ಲ, ಅಷ್ಟು ಕೆಲಸವನ್ನು ತಮ್ಮ ಬದುಕಿನ ಅವಧಿಯಲ್ಲಿ ಮಾಡಿದ್ದಾರೆ, ಅವರಷ್ಟು ಕಾರ್ಯಕ್ಷಮತೆಯಿಂದ ಕೆಲಸ ಮಾಡುವುದು ಇಂದಿನ ಆಧುನಿಕ ಜಗತ್ತಿನಲ್ಲಿಯೂ ಅಸಾಧ್ಯವಾಗಿದೆ ಎಂದರು.
ಎಲ್ಲಿಯೂ ಉತ್ತಮ ಎಂಜನಿಯರ್ಗಳ ಅವಶ್ಯಕತೆ ಇರುತ್ತದೆಯೋ ಅಲ್ಲಿಗೆ ಬ್ರಿಟಿಷ್ ಸರ್ಕಾರ ಸರ್ ಎಂವಿ ಅವರನ್ನು ನೇಮಿಸುತ್ತಿತ್ತು, ಅರ್ಹತೆ, ಯೋಗ್ಯತೆ ಇದ್ದರು ಉತ್ತಮ ಸ್ಥಾನಮಾನ ದೊರಕದೇ ಇದ್ದರಿಂದ ರಾಜೀನಾಮೆ ನೀಡಿ ಬ್ರಿಟಿಷ್ ಸರ್ಕಾರದಿಂದ ಹೊರಬಂದರು ಸಹ, ಸರ್ ಎಂವಿ ಅವರಿಗೆ ಬ್ರಿಟಿಷ್ ಸರ್ಕಾರ ಅಜೀವ ಪರ್ಯಂತ ಪಿಂಚಣಿ ನೀಡುತ್ತದೆ ಎಂದು ಸ್ಮರಿಸಿದರು.
ಬ್ಲಾಕ್ ಇರಿಗೇಷನ್ ಮೂಲಕ ಕೃಷಿ ಮಾಡುವ ತಂತ್ರಜ್ಞಾನವನ್ನು ಪರಿಚಯಿಸಿದರು, ಅವರು ಆವಿಷ್ಕರಿಸಿದ ತಂತ್ರಜ್ಞಾನವನ್ನು ಸರ್ಕಾರಕ್ಕೆ ಬರೆದುಕೊಟ್ಟರು, ಫಲಾಪೇಕ್ಷೆಯಿಲ್ಲದೆ ದೇಶಕ್ಕಾಗಿ ದುಡಿದ ಮಹಾನ್ ವ್ಯಕ್ತಿತ್ವ ಸರ್.ಎಂ.ವಿಶ್ವೇಶ್ವರಯ್ಯ ಅವರದ್ದು ಎಂದರು.
ಟೂಡಾ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ ಆಡಳಿತವನ್ನು ಎಂಜನಿಯರ್ ಗಳಿಗೆ ನೀಡಿದರೆ ಎಲ್ಲ ಕೆಲಸವು ಸುಲಭವಾಗುತ್ತದೆ ಎಂದು ನಂಬಿದ್ದವರು ಸರ್.ಎಂ.ವಿಶ್ವೇಶ್ವರಯ್ಯ ಅವರು ಅದನ್ನು ಸಾಧಿಸಿ ತೋರಿಸಿದರು, ಎಲ್ಲ ಹಂತದ ಆಡಳಿತವನ್ನು ಎಂಜನಿಯರ್ ಗಳಿಗೆ ಕೊಡಬೇಕು ಎಂದು ಹೇಳಿದರು, ಅವರು ಹೇಳಿದಂತೆ ನಡೆದುಕೊಂಡರೆ ದೇಶ ಪ್ರಗತಿಯನ್ನು ಸಾಧಿಸಲಿದೆ ಎಂದರು.
ಸರ್ ಎಂವಿ ಜೀವನದಿಂದ ಉತ್ತೇಜನ ದೊರಕಲಿದೆ, ಎಂಜನಿಯರ್ ಗಳಿಗೆ ಮಾತ್ರ ಸರ್ ಎಂವಿ ಆದರ್ಶವಲ್ಲ, ಎಲ್ಲ ರೀತಿಯ ವೃತ್ತಿ ನಿರತರಿಗೆ ಅವರ ಜೀವನ ಆದರ್ಶವಾಗಿದೆ, ವೃತ್ತಿ ಸಂಸಾರಕ್ಕೆ ಸೀಮಿತವಾಗಿ ದೇಶವನ್ನು ಮರೆತಿದ್ದೇವೆ ಆದರೆ ಸರ್ ಎಂವಿ ಜೀವನಶೈಲಿ ಸಂಸಾರದೊಂದಿಗೆ ದೇಶದ ಬಗ್ಗೆ ಚಿಂತಿಸಿದ ಫಲವಾಗಿಯೇ ಇಂದಿಗೂ ಅವರ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ ಎಂದು ಹೇಳಿದರು.
1860ರ ದಶಕದಲ್ಲಿ ಜನಿಸಿದ ವಿವೇಕಾನಂದ, ಸರ್.ಎಂ.ವಿ, ಗಾಂಧೀಜಿ ಅವರು ಮಹಾತ್ಮರಾದರು, ಪ್ರತ್ಯೇಕ ದಾರಿಗಳಲ್ಲಿ ಸಾಧನೆ ಮಾಡಿದರು, ಸರ್ ಎಂವಿ ಮತ್ತು ಮಹಾತ್ಮಗಾಂಧೀಜಿ ಕೈಗಾರೀಕರಣದ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದರು, ವಾಗ್ವಾದ ನಡೆಯಿತು, ಗಾಂಧೀಜಿ ಅವರ ಸ್ವದೇಶಿ ಚಿಂತನೆ ದೇಶದ ಅಭಿವೃದ್ಧಿ ಹಿನ್ನಡೆ ಎಂದು ಸರ್ ಎಂವಿ ಹೇಳಿದ್ದರು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಎಂಜನಿಯರ್ ಅಸೋಸಿಯೇಷನ್ ಅಧ್ಯಕ್ಷ ರಾಮಮೂರ್ತಿ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದು, ಎಂಜನಿಯರ್ ಗಳಿಗೆ ಅಗತ್ಯ ತಾಂತ್ರಿಕ ಕೌಶಲ್ಯವನ್ನು ಹೆಚ್ಚಿಸಲು ಸಂಘ ತಾಂತ್ರಿಕ ಸಂಕಿರಣಗಳನ್ನು ಏರ್ಪಡಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಶಶಾಂಕ್ ಶರ್ಮ, ಟೂಡಾ ಅಧ್ಯಕ್ಷ ಚಂದ್ರಶೇಖರ್, ಸದಸ್ಯ ಎಲ್.ಪಿ.ಸುರೇಂದ್ರ, ಕೆ.ಎನ್.ನಾಗರಾಜು, ನಿವೃತ್ತ ಎಂಜನಿಯರ್ ಗಂಗಾಧರ್ ಕೊಡ್ಲಿಯವರ, ನಿರ್ಮಿತಿ ಕೇಂದ್ರ ರಾಜಶೇಖರ್, ಜಂಟಿ ಕಾರ್ಯದರ್ಶಿ ಹೆಚ್.ಎನ್.ಮಂಗಳಕುಮಾರ್, ನಿರ್ದೇಶಕರು ಎ.ಸತೀಶ್, ರಮ್ಯ ಕಲ್ಲೂರು ಸೇರಿದಂತೆ ಇತರರು ಇದ್ದರು.