ಇದು ಮಾಜಿ ಶಾಸಕ ಷಡಕ್ಷರಿಯವರ ಪೆಟ್ರೋಲ್ ಬಂಕ್ : ನಾವು ಹೇಳಿದಷ್ಟಕ್ಕೆ ಪೆಟ್ರೋಲ್ ಹಣ ನೀಡಿ-ಗ್ರಾಹಕರ ಮೇಲೆ ದೌರ್ಜನ್ಯ-ಬೆದರಿಕೆ: ಹೆಚ್ಚುವರಿ ಹಣ ವಸೂಲಿ


ತುಮಕೂರು : ತುಮಕೂರಿನ ಗೆದ್ದಲಹಳ್ಳಿ-ಉಪ್ಪಾರಹಳ್ಳಿ ಮುಖ್ಯರಸ್ತೆಯಲ್ಲಿರುವ ಕೌಸ್ತುಭ ಪ್ಯೂಯಲ್ಸ್ ಪೆಟ್ರೋಲ್ ಬಂಕ್‍ನಲ್ಲಿ ಪೆಟ್ರೋಲ್ ಹಾಕುವವರು ಗ್ರಾಹಕರ ಮೇಲೆ ದೌರ್ಜನ್ಯವೆಸಗಿ ಹೆಚ್ಚುವರಿ ಹಣ ವಸೂಲಿಗೆ ಇಳಿದಿದ್ದಾರೆ.

ಪ್ರಶ್ನಿಸುವ ಗ್ರಾಹಕರನ್ನು ಬೆದರಿಸಿ ಹಲ್ಲೆಗೆ ಮುಂದಾಗುವ ಪೆಟ್ರೋಲ್ ಹಾಕುವ ಬಂಕ್‍ನ ಹುಡುಗರು, ಇದು ಯಾರದು ಗೊತ್ತಾ ಬಂಕ್ ಮಾಜಿ ಶಾಸಕ ಷಡಕ್ಷರಿಯವರ ಬಂಕ್, ನೀವೇನಾದರೂ ಜಾಸ್ತಿ ಮಾತನಾಡಿದರೆ ನಿಮ್ಮ ಗ್ರಹಚಾರ ಬಿಡಿಸಬೇಕಾಗುತ್ತದೆ ಎಂದು ಗ್ರಹಕರನ್ನು ಏಕ ವಚನದಲ್ಲಿ ನಿಂದಿಸುವ ಈ ಹುಡುಗರು, ಪ್ರಶ್ನೆ ಮಾಡುವ ಗ್ರಾಹಕರ ವಾಹನದ ಕೀಗಳನ್ನು ಕಿತ್ತುಕೊಂಡು ಮೊದಲು ನಾವು ಕೇಳಿದಷ್ಟು ದುಡ್ಡು ಕೊಡ್ರಿ ಎಂದು ಬೆದರಿಸುತ್ತಾರೆ.

19ರೂಪಾಯಿ 40 ಎಂ.ಎಲ್.ಆಯಿಲ್‍ಗೆ 25ರೂಪಾಯಿ, 60 ಎಂ.ಎಲ್.ಆಯಿಲ್‍ಗೆ 30 ರೂಪಾಯಿಗಳನ್ನು ತೆಗೆದುಕೊಳ್ಳಲು ಹೇಳಿದ್ದಾರೆ. 102.40ರೂಪಾಯಿಯ ಪೆಟ್ರೋಲ್‍ಗೆ 105 ರೂಪಾಯಿಗಳನ್ನು ತೆಗೆದುಕೊಳ್ಳಲು ಹೇಳಿದ್ದಾರೆ ಕೊಡಲೆಬೇಕೆಂದು ಬೆದರಿಸುವ ಬಂಕ್‍ನ ಹುಡುಗರು, ಮಾಜಿ ಶಾಸಕರ ಹೆಸರಿನಲ್ಲಿ ಪೆಟ್ರೋಲ್ ಬಂಕ್‍ನಲ್ಲೇ ಇಷ್ಟೊಂದು ಸುಲಿಗೆ ಮಾಡುವವರು ಶಾಸಕರಾಗಿದ್ದಾಗ ಎಷ್ಟು ಸುಲಿಗೆ, ದೌರ್ಜನ್ಯವೆಸಗಿರಬೇಕೆಂದು ಗ್ರಾಹಕರು ಮಾತನಾಡಿಕೊಂಡು ಹಣ ಕೊಟ್ಟು ತೆರಳುತ್ತಿದ್ದಾರೆ.

ಈ ಕೂಡಲೇ ಸಂಬಂಧಪಟ್ಟ ಇಲಾಖೆಯು ಈ ಬಂಕ್‍ನ ಲೈಸೆನ್ಸ್ ರದ್ದು ಪಡಿಸಬೇಕು ಅಥವಾ ಮಾಲೀಕರು ಪೆಟ್ರೋಲ್ ಬಂಕ್‍ನಲ್ಲಿರುವ ಪೆಟ್ರೋಲ್ ಹಾಕುವ ಹುಡುಗರಿಗೆ ತಿಳುವಳಿಕೆ ಹೇಳಿ ಗ್ರಾಹಕರ ಮೇಲಿನ ದೌರ್ಜನ್ಯ ತಪ್ಪಿಸುವಂತೆ ಗ್ರಾಹಕರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *