ತುಮಕೂರಿನ ಕಟ್ಟಿ ನಗರದ ಜೂನಿಯರ್ ಕಾಲೇಜು ಮೈದಾನ ಅನವಶ್ಯಕವಾಗಿ ಕಟ್ಟಡಗಳಿಂದ ಸಂಕೀರ್ಣಗಳನ್ನು ಸ್ಮಾರ್ಟ್ ಸಿಟಿ ಅಧಿಕಾರಿಗಳು ಕಟ್ಟಲು ಹೊರಟಿರುಚುದು ಪ್ರಧಾನಿಯವರ ಆಶಯಕ್ಕೆ ವಿರುದ್ಧವಾಗಿದೆ ಎಂದು ಜನಸಂಗ್ರಾಮ ಪರಿಷತ್ನ ಅಧ್ಯಕ್ಷರಾದ ಎನ್.ಎಸ್. ಪಂಡಿತ್ ಜವಾಹರ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ಕಳೆದ ಎರಡು ಮೂರು ದಿನಗಳಿಂದ ಜೂನಿಯರ್ ಕಾಲೇಜ್ ಮೈದಾನ ಮತ್ತೆ ಸುದ್ದಿಯಲ್ಲಿ ಇರುವುದರಿಂದ ನನ್ನ ಕೆಲವು ಅನುಮಾನಗಳಿಗೆ ಉತ್ತರ ಅಪೇಕ್ಷಿಸಿ ಈ ಹೇಳಿಕೆ ನೀಡುತ್ತಿರುವುದಾಗಿ ತಿಳಿಸಿರುವ ಅವರು,ಮೂರು ವರ್ಷಗಳ ಹಿಂದೆ ಆಗತಾನೆ ಜೂನಿಯರ್ ಕಾಲೇಜು ಮೈದಾನದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಕಟ್ಟಡದ ಚಟುವಟಿಕೆ ಪ್ರಾರಂಭವಾದ ತಕ್ಷಣ ಮೈದಾನವನ್ನು ಇರುವ ಹಾಗೆ ಉಳಿಸಿಕೊಳ್ಳಬೇಕೆಂದು ನಾವು ಶಾಸಕರಿಗೆ ಮನವಿ ಸಲ್ಲಿಸಿ ವಿನಂತಿಸಿದ್ದೆವು.
ನಗರದ ಮಧ್ಯಭಾಗದಲ್ಲಿರುವ ಈ ಮೈದಾನ ಸುಮಾರು 45 ಎಕರೆ ವಿಸ್ತೀರ್ಣ ಹೊಂದಿದ್ದು ಕ್ರೀಡಾ ಚಟುವಟಿಕೆಗಳ ಜೊತೆ ರಾಜಕೀಯ, ಸಾಂಸ್ಕೃತಿಕ ,ವ್ಯಾಪಾರ, ಧಾರ್ಮಿಕ ಚಟುವಟಿಕೆಗಳು, ನಿರಂತರವಾಗಿ ನಡೆಯುತ್ತಿದೆ. ಕನ್ನಡ ಸಾಹಿತ್ಯ ಸಮ್ಮೇಳನ, ಪುಸ್ತಕ ಮಾರಾಟ ರೈತರ ಮೇಳ ಹಿಂದೂ ಸಮಾಜೋತ್ಸವ ದಸರೆ ಹಬ್ಬದ ಚಟುವಟಿಕೆಗಳು, ವಿಶ್ವ ಯೋಗ ದಿನ ಮುಂತಾದವು ನಿರಂತರವಾಗಿ ಈ ಮೈದಾನದಲ್ಲಿ ನಡೆಯುತ್ತಿದ್ದು ,ತುಮಕೂರಿನ ಜನತೆ ಈ ಮೈದಾನದ ಜೊತೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಹಾಗಾಗಿ ಈ ಮೈದಾನದ ವಿಸ್ತೀರ್ಣ ಚಿಕ್ಕದಾದ ಬಾರದು ಹಾಗೆ ಉಳಿಯಬೇಕೆಂದು ಸಾರ್ವಜನಿಕರು ಅಕ್ಷೇಪಿಸಿದ್ದಾರೆ ಎಂದು ತಿಳಿಸಿದ್ದಾರೆ.
ಈಗಾಗಲೇ ಜೂನಿಯರ್ ಕಾಲೇಜು ಮೈದಾನ ಅನವಶ್ಯಕವಾದ ಕಟ್ಟಡಗಳಿಂದ ಚಿಕ್ಕದಾಗುತ್ತ ಬರುತ್ತಿದೆ. ಕೊಕ್ಕೋ ಮತ್ತು ಕಬ್ಬಡ್ಡಿ ದೇಶಿಯ ಕ್ರೀಡೆಗಳಿಗೆ ಈ ಮೈದಾನದಲ್ಲಿ ಜಾಗ ಕೊಡಬೇಕಾಗಿತ್ತು. ಕೊಟ್ಟಿದ್ದಾರೆ ಮತ್ತು ಕನ್ಸ್ಟ್ರಕ್ಷನ್ ಕೆಲಸ ನಡೆಯುತ್ತಿದೆ ಅದಕ್ಕೆ ನಮ್ಮ ಸಹಮತವಿದೆ ಎಂದಿದ್ದಾರೆ.
ಮೈದಾನದ ಒಳಭಾಗದಲ್ಲಿ ಮೂರು ಶೌಚಾಲಯಗಳನ್ನು ಕಟ್ಟಿ ಎಲ್ಲದಕ್ಕೂ ಬೀಗ ಹಾಕಲಾಗಿದೆ. ಸುಮಾರು 2 ಕೋಟಿ ವೆಚ್ಚದಲ್ಲಿ ವಾಕಿಂಗ್ ಪಾತ್ ಮಾಡಲಾಗಿದೆ. ಅದು ಉಪಯೋಗವಿಲ್ಲ ದಂತಾಗಿದೆ. ವೇದಿಕೆ ಪಕ್ಕ ಕ್ರೀಡಾಪಟುಗಳಿಗೆ ಟ್ರೈನಿಂಗ್ ಕೊಡಲು 38 ಲಕ್ಷ ವೆಚ್ಚದಲ್ಲಿ ಕಟ್ಟಡ ಕಟ್ಟಲಾಗಿದೆ ಮತ್ತು ಅದಕ್ಕೆ ಬೀಗ ಹಾಕಲಾಗಿದೆ. ಜೂನಿಯರ್ ಕಾಲೇಜಿಗೆ ಬರಲು ಇದ್ದ ಒಂದು ರಸ್ತೆಯನ್ನು ಮುಚ್ಚಿ ಅಲ್ಲಿ 80 ಲಕ್ಷ ವೆಚ್ಚದಲ್ಲಿ ಬ್ಯಾನಿಯನ್ ಟ್ರೀ ಕಟ್ಟಲಾಗಿದೆ. ಈ ಬ್ಯಾನಿಯನ್ ಟ್ರೀ ಇಂದ ಯಾರಿಗೆ ಏನು ಉಪಯೋಗವಾಗಿದೆ ಎಂದು ಶಾಸಕರು ಸ್ಪಷ್ಟೀಕರಣ ಕೊಡಬೇಕು ಎಂದಿದ್ದಾರೆ.
ಈಗ ವೇದಿಕೆ ಹಿಂದೆ ಇರುವ ಕಾಂಪೌಂಡ್ ಒಡೆಯಲಾಗಿದೆ. ವೇದಿಕೆ ಹಿಂದೆ ಸುಮಾರು 4000 ಅಡಿ ಕಟ್ಟಡ ಕಟ್ಟಲು ಮಾರ್ಕ್ ಮಾಡಲಾಗಿದೆ. ಇದರಿಂದ ಒಳಗಡೆ ಇರುವ ಮೈದಾನದ ವಿಸ್ತೀರ್ಣವು ಚಿಕ್ಕದಾಗುತ್ತದೆ. 4000 ಅಡಿ ಜಾಗದಲ್ಲಿ ಕಟ್ಟುವ ಕಟ್ಟಡ ಈ ಮೈದಾನಕ್ಕೆ ಖಂಡಿತ ಬೇಡ. ಅದರಿಂದ ಯಾರಿಗೆ ಯಾವ ಅನುಕೂಲವೂ ಆಗುವುದಿಲ್ಲ. ಇದು ಸ್ಮಾರ್ಟ್ ಸಿಟಿ ಅಧಿಕಾರಿಗಳು ನಗರದ ಜನತೆಗೆ ಮಾಡುವ ಮೋಸವಾಗಿದೆ. ಎಲ್ಲರನ್ನೂ ಒಳಗೊಂಡು, ನಗರದ ಜನತೆಯ ಜೊತೆ ಮುಕ್ತವಾಗಿ ಚರ್ಚಿಸಿ ಎಲ್ಲರ ಅಭಿಪ್ರಾಯದಂತೆ ಸ್ಮಾರ್ಟ್ ಸಿಟಿ ನಿರ್ಮಾಣವಾಗಬೇಕೆಂಬುದು ಪ್ರಧಾನಿಯವರ ಆಶಯವಾಗಿದೆ. ಆದರೆ ಇಲ್ಲಿ ಜನತೆಯಿಂದ ಕೆಲವು ವಿಷಯಗಳನ್ನ ಮುಚ್ಚಿಟ್ಟು ಈ ಉದ್ದೇಶಿತ ಕಟ್ಟಡವನ್ನು ಕೂಡಲೇ ನಿಲ್ಲಿಸಬೇಕೆಂದು ಸಂಬಂಧಪಟ್ಟವರಲ್ಲಿ ಮನವಿ ಮಾಡಿದ್ದಾರೆ.