2018ರಲ್ಲಿ ಕೆ.ಎನ್.ರಾಜಣ್ಣನವರು ಏಕೆ ಸೋತರು

ಬೇಸಿಗೆಯ ಬಿಸಿಲಬಿಸಿ, ಚುನಾವಣಾ ಬಿಸಿಗೆ ಮಳೆ ತಂಪೆರಿದಿದೆ, ಚುನಾವಣೆ ಯಲ್ಲಿ ಘಟಾನುಘಟಿಗಳೆನಿಸಿಕೊಂಡವರಿಗೆ ಮತದಾರ ಪ್ರಭು ಅಭಿವೃದ್ಧಿ ಮಾಡಿದ್ದೇವೆ ನಮ್ಮನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಹಮ್ಮಿನಿಂದ ಮಾತನಾಡುತ್ತಿದ್ದವರಿಗೆ ನಿಮ್ಮ ಮಾತಿನ ‘ಛೂ’ಬಾಣ, ಧಮಕಿ, ಬೆದರಿಕೆ, ಸ್ಥಳೀಯ ಕಾರ್ಯಕರ್ತರ ನಿರ್ಲಕ್ಷಕ್ಕೆ ಇದೋ ನಿಮಗೆ ತಕ್ಕ ಪಾಠ ಎಂದು ಸೋಲಿನ ಮೂಲಕ ತೋರಿಸಿದ್ದಾನೆ.

ಇಡೀ ಏಷ್ಯಾಖಂಡದಲ್ಲಿ ಏಕ ಶಿಲಾ ಬೆಟ್ಟ ಹೊಂದಿರುವ ಪಟ್ಟಣ ಎಂದು ಹೆಸರು ಪಡೆದಿರುವ ಮಧುಗಿರಿಯಲ್ಲಿ ಈಗ ಬೆಟ್ಟವು ಒಂದು ರಾಜಕೀಯ ವಸ್ತುವಾಗಿ ಇಡೀ ರಾಜ್ಯದ ಗಮನ ಸೆಳೆದಿತ್ತು, ಈ ಬಾರಿ ನನನ್ನು ಸೋಲಿಸುವವರೆ ಇಲ್ಲ, ಸೋತರೆ ಗೆದ್ದ ಅಭ್ಯರ್ಥಿ ಮನೆಯಲ್ಲಿ ಜೀತಕ್ಕಿರುತ್ತೇನೆ, ಅವರು ಸೋತರೆ ನಮ್ಮ ಮನೆಯಲ್ಲಿ ಜೀತಕ್ಕಿರುವರೆ ಎಂಬ ಮಾತೆ ಇಂದು ಅಭಿವೃದ್ಧಿ ಹರಿಕಾರ, ರಾಜಕೀಯ ಧುರೀಣ, ಸಹಕಾರ ರತ್ನ ಎಂದು ಕರೆಸಿಕೊಳ್ಳುತ್ತಿದ್ದ ಕೆ.ಎನ್.ರಾಜಣ್ಣ ಬೆಲೆ ತೆರಬೇಕಾಯಿತು ಎಂದು ಮಧುಗಿರಿ ಕ್ಷೇತ್ರದಲ್ಲಿ ಈಗ ಚರ್ಚೆಯಾ ಗುತ್ತಿರುವ ವಿಷಯ.

ಒಕ್ಕಲಿಗರೆ ಹೆಚ್ಚಿರುವ ಕ್ಷೇತ್ರದಲ್ಲಿ ಹೊರಗಿನಿಂದ ಬಂದ ನಾಯಕ ಜನಾಂಗದ ಕೆ.ಎನ್.ರಾಜಣ್ಣನವರು ಕಳೆದ ಚುನಾವಣೆಯಲ್ಲಿ 14ಸಾವಿರ ಮತಗಳ ಅಂತರದಿಂದ ಆಯ್ಕೆಯಾಗಿದ್ದರು. ಆಯ್ಕೆಯಾದ ನಂತರ ಇಡೀ ಕ್ಷೇತ್ರವನ್ನು ಗುಡಿಸಲು ಮುಕ್ತ ಮತ್ತು ಹಸಿವು ಮುಕ್ತ ಕ್ಷೇತ್ರವನ್ನಾಗಿ ಮಾಡಿದ್ದರೂ, ಅವರು ತಮ್ಮ ಬೆಂಬಲಿಗರನ್ನು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳನ್ನು ನಡೆಸಿಕೊಂಡ ರೀತಿ, ತಮ್ಮದೇ ಪಕ್ಷದ ಸಚಿವರನ್ನು, ಶಾಸಕರನ್ನು, ಅಲ್ಲದೆ ಪಕ್ಷವನ್ನು ಕೆ.ಎನ್.ಆರ್ ಚುಚ್ಚು ಮಾತಗಳಿಂದ ಹೀಗೆಳೆಯುತ್ತಾ ಬಂದಿದ್ದು ಕ್ಷೇತ್ರದ ಮತದಾರರಲ್ಲಿ ಒಂದು ರೀತಿಯ ಸರ್ವಾಧಿಕಾರಿಯಂತೆ ವರ್ತಿಸುತ್ತಿದದ್ದು ಮತದಾರನೇ ಬೇಸರಗೊಂಡಿದ್ದ ಎಂಬ ಮಾತುಗಳು ಕೇಳಿ ಬರುತ್ತಿವೆ.

ಆದರೆ ಕೆ.ಎನ್.ರಾಜಣ್ಣನವರು ಮತ್ತೊಂದು ಕಡೆ ಕ್ಷೇತ್ರದಲ್ಲಿ ಒಕ್ಕಲಿಗರನ್ನು, ಮತ್ತು ದಲಿತ ಸಮುದಾಯವನ್ನು ಕಡೆಗಣಿಸಿದ್ದಲ್ಲದೆ ಈ ಸಮುದಾಯದ ನಾಯಕರುಗಳಿಗೆ ಇರಿಸು-ಮುರಿಸು ಆಗುವಂತೆ ನಡೆದುಕೊಂಡರು, ಆ ಹಿನ್ನಲೆಯಲ್ಲಿಯೆ ಒಕ್ಕಲಿಗರು-ದಲಿತರು ರಾಜಣ್ಣನವರ ಪರ ನಿಲ್ಲಲಿಲ್ಲ, ಈ ಸಮುದಾಯಗಳನ್ನು ಹಣ ಮತ್ತು ಅಧಿಕಾರದಿಂದ ಸೆಳೆಯಬಹುದು, ಮತ ಕೊಂಡುಕೊಳ್ಳಬಹುದು ಎಂಬುದನ್ನು ಸುಳ್ಳು ಮಾಡಿ ತೋರಿಸಿದ್ದಾರೆ.

ಮಧುಗಿರಿ ಕ್ಷೇತ್ರದಲ್ಲಿ ದಲಿತ ಸಮುದಾಯ 2013ರಲ್ಲಿ ಒಗ್ಗಟ್ಟಾಗಿ ಕೆ.ಎನ್.ರಾಜಣ್ಣನವರನ್ನು ಬೆಂಬಲಿಸಿದ್ದವು, ಈ ಬೆಂಬಲಕ್ಕೆ ಸ್ಥಳೀಯ ಸಂಸ್ಥೆಗಳ ದಲಿತ ಚುನಾಯಿತ ಪ್ರತಿನಿಧಿಗಳು ಹೆಗಲು ಕೊಟ್ಟು ನಿಂತಿದ್ದರು, ಆದರೆ ರಾಜಣ್ಣನವರು ಚುನಾವಣೆಯಲ್ಲಿ ಗೆದ್ದ ನಂತರ ಕ್ಷೇತ್ರದ ಚುನಾಯಿತ ಪ್ರತಿನಿಧಿಗಳನ್ನು ನಿರ್ಲಕ್ಷಿಸಿದ್ದಲ್ಲದೆ, ಆ ಪ್ರತಿನಿಧಿಗಳಿಗೆ ಸಿಗಬೇಕಾದ ಪ್ರಾತಿನಿಧ್ಯಕ್ಕೆ ಅಡ್ಡಗಾಲು ಹಾಕಿದ್ದಲ್ಲದೆ, ಆ ನಾಯಕರುಗಳಿಗೂ ಇರಿಸು-ಮುರಿಸು ಆಗುವಂತೆ ಮಾತಿನ ಚಾಟಿ ಬೀಸಿದರು. ರಾಜಣ್ಣನವರು ಚುನಾವಣೆ ಕಾಲದಲ್ಲೂ ಅದನ್ನು ತಿದ್ದಿಕೊಳ್ಳುವಂತಹ ಮತ್ತು ವಿಶ್ವಾಸ ಪಡೆಯುವ ಯತ್ನ ಮಾಡಲಿಲ್ಲ ಎನ್ನುತ್ತಾರೆ ದಲಿತ ಸ್ಥಳೀಯ ನಾಯಕರುಗಳು.

ಕಾರ್ಯಕರ್ತರ ನಿರ್ಲಕ್ಷ್ಯ:-2013ರಲ್ಲಿ ರಾಜಣ್ಣನವರು ಶಾಸಕರಾಗಿ ಆಯ್ಕೆಯಾದ ಮೇಲೆ ಕ್ಷೇತ್ರದ ಸ್ಥಳೀಯ ಕಾರ್ಯಕರ್ತರನ್ನು ನಿರ್ಲಕ್ಷಿಸಲಾಯಿತು,ತುಮಕೂರಿನ ಕೆಎನ್‍ಆರ್ ಅನುಯಾಯಿಗಳು ಅಲಿಯಾಸ್ ಅಭಿಮಾನಿಗಳು ಯಾವುದೇ ಕೆಲಸವಾಗಬೇಕಿದ್ದರು ಅವರ ಮೂಲಕವೆ ಆಗುವಂತೆ ನೋಡಿಕೊಂಡರು, ಇವರ ಮೂಲಕ ಹೋದ ಕೆಲಸಗಳಿಗೆÀ ಮಾತ್ರ ಶಾಸಕರು ಅನುಮೋದನೆ ನೀಡುತ್ತಿದ್ದರು.
ಸ್ಥಳೀಯ ಕಾರ್ಯಕರ್ತರಿಗೆ ಯಾವುದೇ ಕೆಲಸ ಮಾಡಲು ಮತ್ತು ಮಾಡಿಸಲು ಇವರುಗಳು ಅವಕಾಶವನ್ನೇ ಕೊಡುತ್ತಿರಲಿಲ್ಲ, ಮಧುಗಿರಿ ಕ್ಷೇತ್ರದಲ್ಲಿ ಹುಲ್ಲು ಕಡ್ಡಿಯು ಅಲ್ಲಾಡಬೇಕು ಎಂದರು ಇವರ ಅನುಮತಿ ಇರಬೇಕು ಅನ್ನುವಂತಹ ಉಸಿರುಗಟ್ಟಿಸುವ ವಾತವರಣ ನಿರ್ಮಾಣ ವಾಯಿತು ಎಂದು ಕಾರ್ಯಕರ್ತರು ಅಭಿಪ್ರಾಯ ಪಡುತ್ತಾರೆ.

ಯಾವ ಕಾರ್ಯಕರ್ತನಿಗೆ ನಮ್ಮ ಊರಿನಲ್ಲಿ ನಾನು ನಾಯಕ ನಾಗಬೇಕು, ಬೆಳೆಯ ಬೇಕು ಎಂಬ ಆಸೆ ಇರುವುದಿಲ್ಲ, ತನ್ನ ಊರಿನ ಜನರ ಕೆಲಸ ಮಾಡಿಸಲು ಪರ ಊರಿನವರ ಅಕ್ಷೇಪಣೆ, ಅಲ್ಲದೆ ಇವರ ಮಾತಿಗೆ ಮಣೆ ಹಾಕದಿದ್ದರೆ ಒಂದಲ್ಲ ಒಂದು ಮಾರ್ಗದಲ್ಲಿ ಕಿರುಕುಳಗಳು ನಡೆಯುತ್ತಿದ್ದವು ಎಂಬ ಮಾತುಗಳು ಈಗ ಚರ್ಚೆಯಾಗುತ್ತಿವೆ.

ಮತ್ತೊಂದು ಕಡೆ ಯಾವುದೇ ಕಾಮಗಾರಿಗಳಿರಲಿ ಒಂದೇ ಜಾತಿಯ ಮುಖಂಡರಿಗೆ ಆಧ್ಯತೆ ನೀಡುತ್ತಿದದ್ದು ಸಹ ಸ್ಥಳೀಯ ಕಾರ್ಯಕರ್ತರಿಗೆ ಅಸಮಧಾನ ತರಲು ಮೂಲ ಕಾರಣ ಎಂದು ಹೇಳಲಾಗುತ್ತಿದೆ,ಅಧಿಕಾರಿಗಳಿಗೆ ಎಡೆಮುರಿ ಕಟ್ಟಿ ಕೆಲಸ ಮಾಡಿಸುವುದರಲ್ಲಿ ಕೆ.ಎನ್.ರಾಜಣ್ಣನವರು ಮೊದಲಿಗರು, ಕಾನೂನಿನಲ್ಲಿದೆಯೋ ಬಿಟ್ಟಿದೆಯೋ ಜನರ ಕೆಲಸ ಅದು ಆಗಲೇ ಬೇಕು ಎಂದು ತಾಕೀತು ಮಾಡಿ ಕೆಲಸ ಮಾಡಿಸುತ್ತಿದ್ದರು, ಅಧಿಕಾರಿಗಳು ಸಹ ಇವರ ಮಾತಿನ ಧಾಟಿಗೆ ಬೆದರಿ ಬೇಸತ್ತು ಹೋಗಿದ್ದರು, ಎಲ್ಲೋ ಒಂದುಕಡೆ ರಾಜಣ್ಣನವರ ಸೋಲಿಗೆ ಪರೋಕ್ಷವಾಗಿ ಅಧಿಕಾರಿ ವರ್ಗವು ಕಾರಣವಿರಬಹುದು ಎಂದು ಮಧುಗಿರಿಯ ಹಿರಿಯ ನಾಗರೀಕರ ಅಭಿಪ್ರಾಯವಾಗಿದೆ.

ಕೆ.ಎನ್.ರಾಜಣ್ಣನವರು ಡಿಸಿಸಿ ಬ್ಯಾಂಕಿನಿಂದ ಸಾಲ ಕೊಡಿಸಿರಬಹುದು, ಮೃತ ರೈತರ ಕುಟುಂಬ ಸಾಲ ಮನ್ನಾ ಮಾಡಿರಬಹುದು, ಆದರೆ ಇದೇ ಅದನ್ನು ಕೈ ಹಿಡಿಯುತ್ತದೆ ಎಂದು ಹೇಳಲಾಗುವುದಿಲ್ಲ, ಈಗ ಯಾರು ತಗ್ಗಿ-ಬಗ್ಗಿ ನಡೆಯುತ್ತಾರೋ ಅಂತಹವರಿಗೆ ಎದುರಾಳಿಗಳಿರುತ್ತಾರೆ, ಇನ್ನ ನಮಗೆ ಯಾರು ಎದುರುಂಟು ಎಂದು ನಡೆಯುವವರಿಗೆ ಕಾಲವೆ ಬುದ್ಧಿ ಕಲಿಸುತ್ತದೆ ಎಂದು ಮಿಡಿಗೇಶಿ ನಾರಾಯಣಪ್ಪ ಹೇಳುತ್ತಾರೆ.

ರಾಜಣ್ಣನವರು ಗೆದ್ದಿದ್ದರೆ ಈ ಬಾರಿ ಸಚಿವರು ಆಗುತ್ತಿದ್ದರು, ಮಧುಗಿರಿ ಅಭಿವೃದ್ಧಿಯು ಆಗುತ್ತಿತ್ತು. -ನಾಗೇಂದ್ರ.

Leave a Reply

Your email address will not be published. Required fields are marked *