ಪಂಜಾಬ್ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಕೂಡಲೆ ಸಚಿವ ಸ್ಥಾನದಿಂದ ವಜಾಗೊಳಿಸಲಾಗಿದ್ದು, ಅದೇ ರೀತಿ ಕರ್ನಾಟಕದ 40% ತೆಗೆದುಕೊಳ್ಳುತ್ತಿರುವ ಭ್ರಷ್ಟ ಸಚಿವರನ್ನು ವಜಾಗೊಳಿಸುವಂತೆ ವಿಧಾನ ಪರಿಷತ್ ಸದಸ್ಯರಾದ ಆರ್.ರಾಜೇಂದ್ರ ಆಗ್ರಹಿಸಿದರು.
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಂಜಾಬಿನ ಎಎಪಿ ಸರ್ಕಾರದ ಮುಖ್ಯಮಂತ್ರಿ ಭಗವಂತ ಮಾನ್ ಅವರು ಭ್ರಷ್ಟ ಸಚಿವರನ್ನು ವಜಾಗೊಳಿಸಿ ಎಫ್ಐಆರ್ ಹಾಕುವುದಾದರೆ ಕರ್ನಾಟಕದ ಮುಖ್ಯಮಂತ್ರಿಗೇಕೆ ಅದು ಸಾಧ್ಯವಾಗುತ್ತಿಲ್ಲ, ಕೆ.ಎಸ್.ಈಶ್ವರಪ್ಪನವರ ಮೇಲೆ ಆರೋಪವಿದ್ದರು ಇದುವರೆವಿಗೂ ಕೇಸು ಏಕೆ ದಾಖಲಿಸಿಲ್ಲ, ಮುಖ್ಯಮಂತ್ರಿಯು ಭಷ್ಟಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಹರಿಹಾಯ್ದ ರಾಜೇಂದ್ರರವರು, ಪಿಎಸ್ಐ ಹಗರಣದಲ್ಲಿ ಗೃಹ ಸಚಿವರೆ ಯಾವ ಹಗರಣ ನಡೆದಿಲ್ಲ ಎಂದು ಹೇಳಿದ ನಂತರ ಅದೇಗೆ ಹಗರಣ ಬಯಲಿಗೆ ಬಂತು, ಕೆಲ ಅಭ್ಯರ್ಥಿಗಳು ಮನೆ-ಮಠ ಮಾರಿ ಹಣ ನೀಡಿದ್ದಾರೆ, ಅವರು ಹಣ ವಾಪಸ್ಸು ಕೇಳಿದರೆ ಬೆದರಿಕೆ ಹಾಕುತ್ತಿರುವುದು ಈ ಸರ್ಕಾರವು ಭ್ರಷ್ಟಚಾರದಲ್ಲಿ ಮುಳುಗಿದೆ ಎಂದರ್ಥ ಎಂದರು.
ಕುವೆಂಪುರವರ ನಾಡ ಗೀತೆಯನ್ನು ತಿರುಚಿ ಬರೆದಂತಹವರನ್ನು ಪಠ್ಯ ಪುಸ್ತಕ ರಚನಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರಾಜೇಂದ್ರ ಅವರು, ಅವರನ್ನು ಪಠ್ಯಪುಸ್ತಕ ಸಮಿತಿಯಿಂದ ಕೂಡಲೆ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
ಎತ್ತಿನ ಹೊಳೆ ಯೋಜನೆಗೆ ಹಣ ಬಿಡುಗಡೆಗೆ ಆಗ್ರಹಿಸಿದ ಅವರು, ಬೆಲೆ ಏರಿಕೆಯನ್ನು ತಡೆಗಟ್ಟುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಬಯಲು ಸೀಮೆ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷರಾದ ದೇವರಾಜು, ಎಂ.ಗಂಗಣ್ಣ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಶಿಹುಲಿಕುಂಟೆ ಮುಂತಾದವರಿದ್ದರು.