40% ಸರ್ಕಾರದ ಪ್ರತಿಬಿಂಬ ನಗರದ ರಸ್ತೆಗಳ ಮೇಲಿದೆ : ಮಾಜಿ ಶಾಸಕ ಡಾ.ರಫೀಕ್ ಅಹ್ಮದ್

ತುಮಕೂರು: ನಗರದ ಜಯನಗರದ ಪೂರ್ವದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಡಾಂಬರೀಕರಣ ಮಾಡಲಾಗಿದ್ದು ಅತ್ಯಂತ ಕಳಪೆ ಮಟ್ಟದ ಕಾಮಗಾರಿ ಇದಾಗಿದೆ. ಕೇವಲ ನಾಲ್ಕೇ ದಿನಗಳಲ್ಲಿ ರಸ್ತೆ ಹಾಳಾಗಿದ್ದು, ಜಲ್ಲಿ ಕಲ್ಲು ಮತ್ತು ಡಾಂಬರು ಕಿತ್ತುಬರುತ್ತಿದೆ. ಕಳಪೆ ಕಾಮಗಾರಿಗೆ ಬಹುಮಾನ ಕೊಡುವುದಾದರೆ ಈ ರಸ್ತೆಯ ಕಾಮಗಾರಿ ಮಾಡುವವರಿಗೆ ಮೊದಲ ಸ್ಥಾನದ ಬಹುಮಾನ ಕೊಡಬಹುದು ಎಂದು ಡಾ.ರಫೀಕ್ ಅಹ್ಮದ್ ವಿಡಂಬನೆ ಮಾಡಿದ್ದಾರೆ. ಸ್ಮಾರ್ಟ್ ಸಿಟಿಯಲ್ಲಿ ಈ ರೀತಿಯ ರಸ್ತೆ ಕಾಮಗಾರಿಗಳು ನಡೆಯುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಮಾಜಿ ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ.

ಗುಡಿಸಿದರೆ ಕಸವಿರಬಾರದು – ಬಡಿಸಿದರೆ ಹಸಿವಿರಬಾರದು ಎಂಬ ಗಾದೆ ಮಾತು ಕೇಳಿದ್ದೇವೆ. ಆದರೆ ಗುಡಿಸಿದರೆ ರಸ್ತೆಯೇ ಇರಬಾರದು ಎಂಬಂತೆ ಇವರು ಕೆಲಸ ಮಾಡಿದ್ದಾರೆ. ನೂತನವಾಗಿ ಮಾಡಿರುವ ರಸ್ತೆಯ ಡಾಂಬರೀಕರಣವು ಗುಡಿಸಿದರೆ ಈ ರೀತಿಯಲ್ಲಿ ಎದ್ದು ಬರುತ್ತಿರುವುದನ್ನು ನೋಡುವ ಭಾಗ್ಯ ತುಮಕೂರು ನಗರದ ಜನತೆಗೆ ಲಭಿಸಿದೆ. 40% ಸರ್ಕಾರದ ಪ್ರತಿಬಿಂಬ ನಗರದ ರಸ್ತೆಗಳ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಕಾಮಗಾರಿ ಆರಂಭವಾದ ದಿನವೇ ನಾನು ಪತ್ರಿಕಾ ಪ್ರಕಟಣೆ ನೀಡಿ ಈ ಕಾಮಗಾರಿಯು ಕಳಪೆ ಗುಣಮಟ್ಟದ್ದಾಗಿದೆ ಎಂದು ತಿಳಿಸಿದ್ದೇನೆ. ಆದರೂ ಇದನ್ನು ಲೆಕ್ಕಿಸದೆ ಈ ಕಾಮಗಾರಿ ಪೂರ್ಣಗೊಳಿಸಿ ಬಂಡತನ ತೋರಿದ್ದಾರೆ. ಕೂಡಲೇ ಕಾಮಗಾರಿ ಮಾಡಿರುವ ಗುತ್ತಿಗೆದಾರನ ವಿರುದ್ದ ಕಠಿಣ ಕ್ರಮ ಜರುಗಿಸಿ ದಂಡ ವಿಧಿಸಬೇಕು. ಇಲ್ಲವಾದಲ್ಲಿ ಇದೇ ಅನುದಾನದ ಹಣದಲ್ಲಿ ಮರು ಡಾಂಬರೀಕರಣ ಮಾಡಿಸಬೇಕೆಂದು ಡಾ.ರಫೀಕ್ ಅಹ್ಮದ್ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *