ತುಮಕೂರು- ಕಲ್ಪತರುನಾಡು ತುಮಕೂರಿನಲ್ಲಿ ಈ ಬಾರಿ ದಸರಾ ಸಂಭ್ರಮ ಮನೆ ಮಾಡಿದೆ. ಇದೇ ಮೊದಲ ಬಾರಿಗೆ ಜಿಲ್ಲಾಡಳಿತದ ವತಿಯಿಂದ ಚಿತ್ತಾಕರ್ಷಕ ದಸರಾ ಉತ್ಸವವನ್ನು ಆಚರಿಸಲಾಗುತ್ತಿದ್ದು, ಅ. 12 ರಂದು ಅದ್ದೂರಿಯಾಗಿ ಜಂಬೂಸವಾರಿ ನಡೆಸುವ ಸಲುವಾಗಿ ನಗರದಲ್ಲಿಂದು ಎರಡು ಲಕ್ಷ್ಮಿ ಆನೆಗಳ ತಾಲೀಮು ನಡೆಸಲಾಯಿತು.
ತುಮಕೂರು ದಸರಾ ಉತ್ಸವಕ್ಕೆ ತುಮಕೂರಿನ ಕರಿಬಸವೇಶ್ವರ ಮಠದ ಲಕ್ಷ್ಮಿ ಹಾಗೂ ತಿಪಟೂರು ತಾಲ್ಲೂಕು ಕಾಡು ಸಿದ್ದೇಶ್ವರ ಮಠದ ಲಕ್ಷ್ಮಿ ಆನೆಗಳನ್ನು ತೊಡಗಿಸಿಕೊಂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಜಂಬೂಸವಾರಿ ಮೆರವಣಿಗೆಯ ತಾಲೀಮು ನಡೆಸಲಾಯಿತು.
ಡಿಎಫ್ಐ ಹೆಚ್. ಅನುಪಮಾ ನೇತೃತ್ವದಲ್ಲಿ ಜಂಬೂಸವಾರಿ ನಡೆಯಲಿರುವ ಮಾರ್ಗದಲ್ಲಿ ಎರಡು ಲಕ್ಷ್ಮಿ ಆನೆಗಳ ತಾಲೀಮು ನಡೆಸಿದ್ದು, ರಸ್ತೆಯಲ್ಲಿ ಯಾವುದೇ ಗಲಾಟೆ ಇಲ್ಲದೆ ಎರಡು ಆನೆಗಳು ಗಜ ಗಾಂಭೀರ್ಯದಿಂದ ಹೆಜ್ಜೆ ಹಾಕಿದವು.
ನಗರದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ವೃತ್ತದಿಂದ ಆರಂಭವಾದ ಆನೆಗಳ ಜಂಬೂಸವಾರಿ ತಾಲೀಮು ಅಶೋಕ ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ರಸ್ತೆಯಿಂದ ಅಮಾನಿಕೆರೆ ಮಾರ್ಗವಾಗಿ ಹನುಮಂತಪುರ, ಮಹಾತ್ಮಗಾಂಧಿ ಕ್ರೀಡಾಂಗಣ ರಸ್ತೆ ಬಳಸಿಕೊಂಡು ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತ ಮೂಲಕ ಬಿ.ಎಚ್.ರಸ್ತೆ ಮಾರ್ಗವಾಗಿ ಹೆಜ್ಜೆ ಹಾಕಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ ತಲುಪಲಿದವು.
ಈ ಸಂದರ್ಭದಲ್ಲಿ ಮಾತನಾಡಿದ ಡಿಎಫ್ಐ ಹೆಚ್. ಅನುಮಪ ಅವರು, ತುಮಕೂರಿನ ಕರಿಬಸವೇಶ್ವರ ಮಠದ ಲಕ್ಷ್ಮಿ ಆನೆ 6300 ಕೆ.ಜಿ. ಇದ್ದು, ಈ ಆನೆ ಅಂಬಾರಿ ಹೊರಲಿದೆ. ತಿಪಟೂರು ಕಾಡುಸಿದ್ದೇಶ್ವರ ಮಠದ ಲಕ್ಷ್ಮಿ ಆನೆ 3400 ಕೆ.ಜಿ. ಇದ್ದು, ಈ ಆನೆಯು ಸಹ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿದೆ. ಈ ಎರಡು ಆನೆಗಳು ಯಾವುದೇ ಗಲಾಟೆ ಇಲ್ಲದೆ ರಸ್ತೆಯಲ್ಲಿ ಜನಸಂದಣಿ ಮಧ್ಯೆ ಹೆಜ್ಜೆ ಹಾಕಿವೆ ಎಂದರು.
ಈ ಆನೆಗಳು ಈಗಾಗಲೇ ಜನಸಂದಣಿಗೆ ಹೊಂದಿಕೊಂಡಿರುವುದರಿಂದ ನಮಗೂ ತಾಲೀಮು ನಡೆಸಲು ಸುಲಭವಾಗಿದೆ.ಈ ಎರಡು ಆನೆಗಳು ಸ್ನೇಹಿತರಾಗಿರುವುದರಿಂದ ಯಾವುದೇ ರೀತಿಯ ಗಲಾಟೆ ಸಹ ಮಾಡುತ್ತಿಲ್ಲ ಎಂದು ಅವರು ಹೇಳಿದರು.
ಪಶು ವೈದ್ಯರಾದ ಡಾ. ಶ್ರೀಧರ್ ಅವರು ಮಾತನಾಡಿ, ತುಮಕೂರು ದಸರಾ ಜಂಬೂಸವಾರಿಗೆ ಎರಡು ಆನೆಗಳನ್ನು ಬಳಸಿಕೊಳ್ಳುತ್ತಿದ್ದು, ಈ ಎರಡು ಆನೆಗಳ ಆರೋಗ್ಯವಾಗಿವೆ. ಯಾವುದೇ ರೀತಿಯ ತೊಂದರೆಯಿಲ್ಲ. ಈ ಆನೆಗಳು ಮೊದಲಿನಿಂದಲೂ ಮಠಗಳಲ್ಲಿ ಹಾಗೂ ಜನರೊಂದಿಗೆ ಬೆರೆತಿರುವುದರಿಂದ ತಾಲೀಮು ಸಲೀಸಾಗಿ ನಡೆದಿದೆ ಎಂದರು.
ತಾಲೀಮು ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.