ತುಮಕೂರು:ಹನ್ನೇರಡನೇ ಶತಮಾನದಲ್ಲಿ ಸಮ ಸಮಾಜದ ಕನಸು ಕಂಡು, ಅದನ್ನು ಸಕಾರಗೊಳಿಸಲು ಶ್ರಮಿಸಿದ ಶಿವಶರಣರಲ್ಲಿ ಹಡಪದ ಅಪ್ಪಣ್ಣ ಅವರು ಒಬ್ಬರು. ಬಸವಣ್ಣನವರ ಸಮಕಾಲಿನರಾಗಿ, ಕಾಯಕಯೋಗಿ, ಕರ್ಮಯೋಗಿಯಾಗಿ ಬದುಕಿದ್ದ ಅಪ್ಪಣ್ಣ ಅವರ ನಡೆ, ನುಡಿಗಳು ಇಂದಿಗೂ ಪ್ರಸ್ತುತ ಎಂದು ಕಸಾಪ ಜಿಲ್ಲಾಧ್ಯಕ್ಷರಾದ ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದ್ದಾರೆ.
ನಗರದ ಡಾ.ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕøತಿಇಲಾಖೆ,ಕನ್ನಡ ಸಾಹಿತ್ಯ ಪರಿಷತ್ ಮತ್ತು ತುಮಕೂರು ಜಿಲ್ಲಾ ಮತ್ತು ತಾಲೂಕು ಸವಿತಾ ಸಮಾಜ ವತಿಯಿಂದ ಆಯೋಜಿಸಿದ್ದ ಶ್ರೀಹಡಪದ ಅಪ್ಪಣ್ಣ ಅವರ ಜನ್ಮ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,12 ಶತಮಾನದಲ್ಲಿ ಇದ್ದ ಯಾವ ಕಾಯಕವೂ ಮೇಲು, ಕೀಳು ಎಂಬ ಭಾವನೆ ಹೊಂದಿರಲಿಲ್ಲ.ಎಲ್ಲವೂ ಪರಸ್ವರ ಪೂರಕವಾಗಿ ಸಮಾಜದ ಅಭಿವೃದ್ದಿಗೆ ಅತ್ಯಂತ ಅವಶ್ಯಕ ಎಂದು ಭಾವಿಸಲಾಗಿತ್ತು. ಎಲ್ಲಾ ವೃತ್ತಿಗಳಿಗೂ ಅದರದ್ದೇ ಆದ ಘನತೆ, ಗೌರವಗಳಿದ್ದವೂ. ಆದರೆ ಅಂತಹ ವೃತ್ತಿಗಳೇ ಜಾತಿಗಳಾಗಿರುವುದು ವಿಪರ್ಯಾಸ ಎಂದರು.
ಸ್ವದೇಶಿ ವಿಶ್ವನಾಥ್ ಮಾತನಾಡಿ,ಬಸವ ಕಲ್ಯಾಣದಲ್ಲಿ ಎಲ್ಲಾ ಶಿವ ಶರಣರನ್ನು ಒಂದು ಗೂಡಿಸಿ,ಶೂನ್ಯ ಸಿಂಹಾಸನಕ್ಕೆ ಅಲ್ಲಮಪ್ರಭುವನ್ನು ಅಧಿಪತಿಯನ್ನಾಗಿಸುವ ಮೂಲಕ ಶಿವಶರಣರೆಲ್ಲಾ ಒಂದೇ ಎಂಬ ಭಾವನೆಯನ್ನು ಅಂದೇ ಮೂಡಿಸಿದ್ದರು. ಅಂತಹ ಮಹನೀಯರ ಆದರ್ಶಗಳು ನಮಗೆ ದಾರಿದೀಪವಾಗಬೇಕು ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿರುವ ಉಗಮ ಶ್ರೀನಿವಾಸ್ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿಯೂ ಪ್ರೇಮಿಗಳ ಮದುವೆ ವಿರೋಧಿಸಿ ಮರ್ಯಾದೆ ಹತ್ಯೆಗಳು ನಡೆಯುತ್ತಿವೆ.ಆದರೆ 12ನೇ ಶತಮಾನದಲ್ಲಿಯೇ ಅಂತರಜಾತಿ ವಿವಾಹ ಮಾಡಿಜಾತಿ ವಿನಾಶಕ್ಕೆ ಮುನ್ನುಡಿ ಬರೆದು ಸಮಾನತೆಯ ಹಾದಿ ತುಳಿದವರು ಶಿವಶರಣರು.ಮಾನವ ಬಂಧುತ್ವ ಪರಿಕಲ್ಪನೆಯಲ್ಲಿ ಎಲ್ಲಾ ಸಮಾಜಗಳ ಆಸ್ಮಿತೆಯನ್ನು ಎತ್ತಿ ಹಿಡಿದ ಕಾಲವದು ಎಂದರು.
ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ಮಲ್ಲಿಕಾರ್ಜುನ ಕೆಂಕೆರೆ ಮಾತನಾಡಿ, ಬಸವಣ್ಣನವರಿಗೆ ಸರಿಸಮವಾಗಿ ಹಡಪದಅಪ್ಪಣ್ಣ ಮತ್ತು ಅವರ ಪತ್ನಿ ಲಿಂಗಮ್ಮ ಕಲ್ಯಾಣದ ಕ್ರಾಂತಿಗೆ ದುಡಿದವರು, ಅವರ 250ಕ್ಕೂ ಹೆಚ್ಚು ವಚನಗಳು ನಮಗೆ ಲಭ್ಯವಿದ್ದು, ಅವುಗಳನ್ನು ಇತರೆ ಜನಪ್ರಿಯ ವಚನಗಳೊಂದಿಗೆ ಹಾಡುವ ಮೂಲಕ ಜನರ ಮನಸ್ಸಿಗೆ ಹಡಪದ ಅಪ್ಪಣ್ಣ ಅವರನ್ನು ತಲುಪಿಸವ ಕಾರ್ಯಆಗಬೇಕೆಂದರು.
ತುಮಕೂರು ತಾಲೂಕು ಸವಿತಾ ಸಮಾಜ(ರಿ)ದ ಅಧ್ಯಕ್ಷ ಕಟ್ವೆಲ್ ರಂಗನಾಥ್ ಮಾತನಾಡಿ,ಹಡಪದ ಅಪ್ಪಣ್ಣ ಅವರದ್ದು ಸ್ಪೂರ್ತಿದಾಯಕ ಬದುಕು. ಭಕ್ತಿ ಬಂಡಾರಿ ಬಸವಣ್ಣನವರಿಗೆ ಅಪ್ತ ಸಹಾಯಕರಾಗಿತಮ್ಮ ಬೌಧ್ದಿಕ ಸಂಪತ್ತನ್ನುಒರೆಗೆ ಹಚ್ಚುವ ಕೆಲಸ ಮಾಡಿದ್ದರು. ಇಂದಿಗೂ ನಮ್ಮ ಸಮುದಾಯದ ಅನೇಕರು ಐಎಎಸ್ ಅಧಿಕಾರಿಗಳು, ಮಂತ್ರಿಗಳು, ಶಾಸಕರ ಆಪ್ತ ಸಹಾಯಕರಾಗಿ ಕೆಲಸ ಮಾಡುತ್ತಿದ್ದು, ಅಪ್ಪಣ್ಣ ಅವರ ಪರಂಪರೆಯನ್ನು ಮುಂದುವರೆಸುವ ಮೂಲಕ ಸವಿತಾ ಸಮಾಜ ಬುದ್ದಿವಂತ ಸಮಾಜ ಎಂಬುದನ್ನು ಸಾಭೀತು ಪಡಿಸಿದ್ದಾರೆ.ಇದು ಹೆಮ್ಮೆಯ ವಿಷಯ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ ಕು.ಮಿರ್ಜಿ, ತುಮಕೂರು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ಮಂಜೇಶ್, ಕನ್ನಡ ಮತ್ತು ಸಂಸ್ಕøತಿಇಲಾಖೆಯ ಸುರೇಶಕುಮಾರ್,ಚಿಕ್ಕಬೆಳ್ಳಾವಿ ಶಿವಕುಮಾರ್,ರಾಕೇಶ್, ಜಿಲ್ಲಾ ಮತ್ತು ತಾಲೂಕು ಸವಿತಾ ಸಮಾಜದ ಪದಾಧಿಕಾರಿಗಳು ಉಪಸ್ಥಿತರಿದ್ದರು.