4ರಂದು ಪ್ರಣವಾನಂದ ಸ್ವಾಮೀಜಿ ಪಾದಯಾತ್ರೆ ಆಗಮನ

ತುಮಕೂರು: ಈಡಿಗ, ಬಿಲ್ಲವ, ನಾಮಧಾರಿ, ದೀವರು ಮುಂತಾದ 26 ಸಹಜಾತಿಗಳ ವಿವಿಧ 18 ಬೇಡಿಕೆಗಳನ್ನು ಈಡೇರಿಸಲು ಸರ್ಕಾರವನ್ನು ಒತ್ತಾಯಿಸಿ ಕಲಬುರ್ಗಿ ಜಿಲ್ಲೆ ಕರದಾಳ್ ಶಕ್ತಿಪೀಠ ಅಧ್ಯಕ್ಷರಾದ ಪ್ರಣಾವಾನಂದ ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿಗೆ ಹೊರಟಿರುವ ಪಾದಯಾತ್ರೆ ಈ ತಿಂಗಳ 4ರಂದು ತುಮಕೂರು ಜಿಲ್ಲೆ ಪ್ರವೇಶಿಸಲಿದೆ. ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರೆಯನ್ನು ಸ್ವಾಗತಿಸಿ ಭಾಗವಹಿಸಬೇಕು ಎಂದು ರಾಷ್ಟ್ರೀಯ ಈಡಿಗ ಮಹಾಮಂಡಲಿಯ ಜಿಲ್ಲಾಧ್ಯಕ್ಷ ಸುರೇಶ್(ಅಪ್ಪಿ) ಹಾಗೂ ಕಾರ್ಯದರ್ಶಿ ಡಿ.ಆರ್.ಹನುಮಂತರಾಜು ಕೋರಿದ್ದಾರೆ.

ಕರದಾಳ್ ಶಕ್ತಿಪೀಠದಿಂದ ಜನವರಿ 6ರಂದು ಪಾದಯಾತ್ರೆ ಆರಂಭಿಸಿರುವ ಸ್ವಾಮೀಜಿಗಳ ನೇತೃತ್ವದ ತಂಡ ಈ ತಿಂಗಳ 4ರಂದು ಶಿರಾಗೆ ಆಗಮಿಸಲಿದೆ. 5ರಂದು ಬೆಳಿಗ್ಗೆ ಶಿರಾದಲ್ಲಿ ಸಾರ್ವಜನಿಕ ಸಭೆ ಹಮ್ಮಿಕೊಳ್ಳಲಾಗಿದೆ. ನಂತರ ತಾಲ್ಲೂಕಿನ ದೊಡ್ಡಆಲದಮರ ಗ್ರಾಮದವರೆಗೆ ನಡೆಯುವ ಪಾದಯಾತ್ರೆಯಲ್ಲಿ ಶಿರಾ, ಚಿಕ್ಕನಾಯಕನಹಳ್ಳಿ ಸುತ್ತಮುತ್ತಲ ಗ್ರಾಮಗಳ ಸಮಾಜದವರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

6ರಂದು ದೊಡ್ಡಾಲದಮರದಿಂದ ಹೊರಟು ಕೋರಾ ತಲುಪಲಿದೆ. ನಂತರ 7ರಂದು ಪಾದಯಾತ್ರೆ ತುಮಕೂರು ತಲುಪಿ ಇಲ್ಲಿ ವಾಸ್ತವ್ಯ ಮಾಡಲಿದೆ. 7ರಂದು ಇಲ್ಲಿಂದ ಹೊರಟು ದಾಬಸ್‍ಪೇಟೆ ತಲುಪಿ ಅಲ್ಲಿ ರಾತ್ರಿ ತಂಗಲಿದೆ. ಸುತ್ತಮುತ್ತಲ ತಾಲ್ಲೂಕುಗಳ ಸಮಾಜದ ಭಕ್ತರು ಭಾಗವಹಿಸಿ ಪಾದಯಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ವಿನಂತಿಸಿದ್ದಾರೆ.

ದಾಬಸ್‍ಪೇಟೆಯಿಂದ ಹೊರಟ ಪಾದಯಾತ್ರೆ ಈ ತಿಂಗಳ 12ರಂದು ಬೆಂಗಳೂರು ತಲುಪಿ ಫ್ರೀಡಂ ಪಾರ್ಕ್‍ನಲ್ಲಿ ಸ್ವಾಮೀಜಿಗಳ ನೇತೃತ್ವದ ತಂಡದವರು ಅಮರಣಾಂತರ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಈಡಿಗ, ಬಿಲ್ಲವ, ನಾಮಧಾರಿ, ದೀವರು ಮುಂತಾದ 26 ಸಹಜಾತಿಗಳಿ ಸಾಂವಿಧಾನಿಕ ಸೌಲಭ್ಯಗಳನ್ನು ಒದಗಿಸುವುದೂ ಸೇರಿದಂತೆ ವಿವಿಧ 18 ಬೇಡಿಕೆಗಳನ್ನು ಈಡೇರಿಸಲು ಸರ್ಕಾರವನ್ನು ಒತ್ತಾಯಿಸಿ ಪ್ರಣಾವಾನಂದ ಸ್ವಾಮೀಜಿ ಆರಂಭಿಸಿರುವ ಈ ಹೋರಾಟದಲ್ಲಿ ಹೆಚ್ಚು ಜನ ಭಾಗವಹಿಸಿ ಹೋರಾಟಕ್ಕೆ ಶಕ್ತಿ ತುಂಬಬೇಕು ಎಂದು ಕೋರಿದ್ದಾರೆ.

Leave a Reply

Your email address will not be published. Required fields are marked *