ರಿಂಗ್ ರಸ್ತೆ ಯೋಜನೆಯಿಂದ ಸರಕಾರ ಹಿಂದೆ ಸರಿಯಬೇಕೆಂದು ಫೆ.8ರಂದು ಬೃಹತ್ ರೈತ ಸಮಾವೇಶ

ತುಮಕೂರು:ರಾಜ್ಯದಲ್ಲಿ ಭೂ ಬಳಕೆ ಮತ್ತು ಭೂ ಹೊದಿಕೆ ನೀತಿಗೆ ಒತ್ತಾಯಿಸಿ ಹಾಗೂ ರೈತರಿಗೆ,ಕೃಷಿ ಕೂಲಿ ಕಾರ್ಮಿಕರಿಗೆ ಕಂಟಕವಾಗಿರುವ ಪ್ರಸ್ತಾಪಿತ ನಂದಿಹಳ್ಳಿ-ಮಲ್ಲಸಂದ್ರ-ವಸಂತ ನರಸಾಪುರ ಔಟರ್ ರಿಂಗ್ ರಸ್ತೆ ಯೋಜನೆಯಿಂದ ಸರಕಾರ ಹಿಂದೆ ಸರಿಯಬೇಕೆಂದು ಒತ್ತಾಯಿಸಿ ಫೆ.08 ರಂದು ಗೂಳೂರು ಬಳಿಯ ಶೂಲದ ಆಂಜನೇಯಸ್ವಾಮೀ ದೇವಾಲಯದ ಬಳಿ ಬೃಹತ್ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಯುಕ್ತ ಹೋರಾಟ ಕರ್ನಾಟಕದ ಸಂಚಾಲಕರಾದ ಸಿ.ಯತಿರಾಜು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಇರುವ ಅತಿ ಕಡಿಮೆ ಭೂಮಿಯನ್ನು,ಬೇಡಿಕೆ ಇರುವ ಜನರಿಗೆ ಹಂಚಲು ಸರಕಾರಗಳು ಎಲ್ಲಾ ನಿಯಮಗಳನ್ನು ಗಾಳಿಗೆ ತೂರುತ್ತಿರುವ ಪರಿಣಾಮ ಸರಕಾರದ ಯೋಜನೆಗಳಿಗೂ ಭೂಮಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.ಹಾಗಾಗಿ ಭೂ ಬಳಕೆ ಮತ್ತು ಭೂ ಹೊದಿಕೆ ನಿಯಮ ಜಾರಿಗೆ ತಂದು,ಭೂ ಮಾಫಿಯ ಪಾಲಾಗದಂತೆ ರೈತರ ಫಲವತ್ತಾದ ಭೂಮಿಯನ್ನು ತಡೆ ಹಿಡಿಯಬೇಕಿದೆ ಎಂದರು.

ಸರಕಾರದ ಮುಂದೆ ಬಗರ್‍ಹುಕ್ಕುಂ ಸಾಗುವಳಿದಾರರ ಲಕ್ಷಾಂತರ ಅರ್ಜಿಗಳು ಬಾಕಿ ಉಳಿದಿವೆ.ಆದರೆ ಸರಕಾರ ಮಾತ್ರ ರಸ್ತೆ,ಇನ್ನಿತರ ಯೋಜನೆಗಳ ಹೆಸರಿನಲ್ಲಿ ಪಟ್ಟಭದ್ರರಿಗೆ ಭೂಮಿ ನೀಡುತ್ತಾ, ಬಡವರನ್ನು ಕಡೆಗಣಿಸುತ್ತಿದೆ.ಜೊತೆಗೆ ರೈತರ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಂಡು ರೈತರನ್ನು ಬೀದಿಗೆ ತಳ್ಳುತ್ತಿದೆ.ಗ್ರಾಮಸಭೆಗಳನ್ನು ನಡೆಸದೆ, ರೈತರೊಂದಿಗೆ ಚರ್ಚಿಸದೆ ತನ್ನ ಮನಸ್ಸಿಗೆ ಬಂದಂತೆ ಭೂಮಿಯನ್ನು ಹರಾಜು ಹಾಕಲು ಹೊರಟಿದೆ.ಸರಕಾರದ ನೀತಿ ಹೀಗೆಯೇ ಮುಂದುವರೆದರೆ ರೈತರು ಒಗ್ಗೂಡಿ ಅಸಹಕಾರ ಚಳವಳಿ ನಡೆಸುವುದು ಅನಿವಾರ್ಯ ಎಂದರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ,ನಂದಿಹಳ್ಳಿ, ಮಲ್ಲಸಂದ್ರ, ವಸಂತ ನರಸಾಪುರ ಪ್ರಸ್ತಾಪಿತ 44 ಕಿ.ಮಿ.ಗಳ ರಿಂಗ್ ರಸ್ತೆಗೆ ಸುಮಾರು 26 ಹಳ್ಳಿಗಳ 750ಕ್ಕೂ ಹೆಚ್ಚು ರೈತರ 765 ಎಕರೆ ಭೂಮಿ ವಶಪಡಿಸಿಕೊಳ್ಳಲು ಎನ್.ಹೆಚ್.ಎ.ಐ ಮುಂದಾಗಿದೆ. ಪ್ರಸ್ತಾಪಿತ ಭೂಮಿಯಲ್ಲಿ ಶೇ70ರಷ್ಟು ಭೂಮಿಯಲ್ಲಿ ಅಡಿಕೆ, ತೆಂಗು, ಇನ್ನಿತರ ತೋಟಗಾರಿಕಾ ಬೆಳೆಗಳಿವೆ.ಆದರೆ ಪಹಣಿಯಲ್ಲಿ ಋಷ್ಕಿ ಎಂದು ತೋರಿಸಲಾಗಿದೆ.ಈ ಬಗ್ಗೆ ಹಲವು ಬಾರಿ ಜಿಲ್ಲಾಧಿಕಾರಿ,ಜಿಲ್ಲಾ ಉಸ್ತುವಾರಿ ಸಚಿವರು,ಅಧಿಕಾರಿಗಳು, ಶಾಸಕರಿಗೆ ಮನವಿ ಮಾಡಿದರೂ ಎನು ಪ್ರಯೋಜನವಾಗಿಲ್ಲ.ಸರಕಾರ ಹೀಗೆಯೇ ಯೋಜನೆಗಳ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿ ವಶಪಡಿಸಿಕೊಳ್ಳತ್ತಲೇ ಮುಂದುವರೆದರೆ ಶೀಘ್ರದಲ್ಲಿಯೇ ಆಹಾರದ ಕೊರತೆ ಎದುರಾಗುವುದು ಖಂಡಿತ.ಅಲ್ಲದೆ ಜನ. ಜಾನುವಾರುಗಳಿಗೂ ತೀವ್ರ ತೊಂದರೆಯಾಗಲಿದೆ.ಹಾಗಾಗಿ ಇದರ ವಿರುದ್ದ ಮತ್ತೊಂದು ಸುತ್ತಿನ ಹೋರಾಟ ರೂಪಿಸಲು ಫೆ.08 ರಂದು ಶೂಲದ ಆಂಜನೇಯಸ್ವಾಮೀ ದೇವಾಲಯದ ಬಳಿ ರೈತರ ಸಮಾವೇಶ ಆಯೋಜಿಸಲಾಗಿದೆ ಎಂದರು.

ಪ್ರಸ್ತಾಪಿತ ಔಟರ್ ರಿಂಗ್ ರಸ್ತೆಗೆ ಪರಿಯಾಯವಾಗಿ ಹಲವು ವರ್ಷಗಳ ಹಿಂದೆಯೇ ಗುಬ್ಬಿಯಿಂದ ದಾಬಸ್‍ಪೇಟೆಯವರೆ 100 ಅಡಿಗಳ ನಕಾಶೆ ರಸ್ತೆ ಇದೆ. ಅಲ್ಲದೆ ಹಾಲಿ ಇರುವ ರಿಂಗ್ ರಸ್ತೆಯನ್ನೇ ಆಗಲೀಕರಣ ಮಾಡಿ ಅಭಿವೃದ್ದಿ ಪಡಿಸಬಹು ದಾಗಿದೆ.ಅದರ ಬಗ್ಗೆ ಯಾರು ಗಮನಹರಿಸುತ್ತಿಲ್ಲ. ಬದಲಾಗಿ ರಿಯಲ್ ಎಸ್ಟೇಟ್ ಕುಳಗಳಿಗೆ ಅನುಕೂಲವಾಗುವಂತೆ ರಸ್ತೆಯ ಅಲೈನ್ ಬದಲಾಯಿಸಿ,ರೈತರ ಫಲವತ್ತಾದ ಭೂಮಿಯನ್ನು ಗುರಿಯಾಗಿಸಲಾಗಿದೆ.ಹಾಗಾಗಿ ಫೆ.08ರ ರೈತರ ಸಮಾವೇಶದಲ್ಲಿ ಚರ್ಚಿಸಿ,ಹಲವಾರು ನಿರ್ಣಯಗಳನ್ನು ಕೈಗೊಳ್ಳಲಾಗುವುದು.ಏಕತಾ ಪರಿಷತ್ತಿನ ಹಿರಿಯರಾದ ಪಿ.ವಿ.ರಾಜಗೋಪಾಲ್,ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರು, ಶಾಸಕರಾದ ಬಿ.ಆರ್.ಪಾಟೀಲ್,ಸಹಜ ಬೇಸಾಯ ರಾಷ್ಟ್ರೀಯ ಸಮಿತಿ ಸದಸ್ಯರಾದ ಡಾ.ಹೆಚ್.ಮಂಜುನಾಥ್, ಚಿಂತಕ ಕೆ.ದೊರೈರಾಜು,ರÉೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಗೋವಿಂದರಾಜು, ಪ್ರಾಂತ ರೈತ ಸಂಘದ ಯಶವಂತ್, ಎಐಕೆಕೆಎಂ.ಎಸ್‍ನ ಸ್ವಾಮಿ, ಎಐಕೆಎಸ್‍ನ ಕಂಬೇಗೌಡ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷರಾದ ಚಿಕ್ಕಬೋರೇಗೌಡ, ಎಐಕೆಎಸ್‍ನ ಕಂಬೇಗೌಡ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ, ಸಿಐಟಿಯುನ ಎನ್.ಕೆ.ಸುಬ್ರಮಣ್ಯ, ರೈತರಾದ ಉದಯ ನಂದಿಹಳ್ಳಿ, ಸಿದ್ದಗಂಗಯ್ಯ, ಸುರೇಶ್, ರಾಜಶೇಖರ್, ನಿಂಗರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *