ನೇಮಕಾತಿ ಪ್ರಕ್ರಿಯೆಯಲ್ಲಿ ವಿಶ್ವವಿದ್ಯಾನಿಲಯವನ್ನೇ ಒಂದು ಘಟಕವಾಗಿ ಪರಿಗಣಿಸಿ ರೋಸ್ಟರ್ (ಮೀಸಲಾತಿ) ರೂಪಿಸಲು ರಾಜ್ಯ ಸಚಿವ ಸಂಪುಟದ ಉಪಸಮಿತಿಯು ನೀಡಿರುವ ತಾತ್ವಿಕ ಒಪ್ಪಿಗೆಯು ಅಸಂವಿಧಾನಿಕ ಹಾಗೂ ಮೀಸಲಾತಿ ವ್ಯವಸ್ಥೆಯನ್ನು ಬುಡಮೇಲು ಮಾಡುವ ಹುನ್ನಾರವಾಗಿದೆ ಎಂದು ‘ತುಮಕೂರು ವಿಶ್ವವಿದ್ಯಾನಿಲಯದ ಸಾಮಾಜಿಕ ನ್ಯಾಯ ಪರ ವಿದ್ಯಾರ್ಥಿಗಳ ಒಕ್ಕೂಟ’ ತೀವ್ರವಾಗಿ ಖಂಡಿಸಿದೆ.
ಸರ್ಕಾರ ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ರಾಜ್ಯಾದ್ಯಂತ ಕ್ರಾಂತಿಕಾರಿ ಪ್ರತಿಭಟನೆ ರೂಪಿಸಲಾಗುವುದು ಎಂದು ಒಕ್ಕೂಟ ಎಚ್ಚರಿಸಿದೆ.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ‘ದುಂಡುಮೇಜಿನ ತುರ್ತು ಸಭೆ’ಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಸಭೆಯಲ್ಲಿ ವಿಷಯ ಮಂಡಿಸಿ ಮಾತನಾಡಿದ ವಕೀಲ ರಂಗಧಾಮಯ್ಯ, ನೇಮಕಾತಿಯಲ್ಲಿ ವಿಶ್ವವಿದ್ಯಾನಿಲಯವನ್ನು ಘಟಕವನ್ನಾಗಿ ಮಾಡುವುದು ಸಂವಿಧಾನದ ವಿಧಿ 14(1) ಮತ್ತು 16 (4)ರ ಸ್ಪಷ್ಟ ಉಲ್ಲಂಘನೆಯಾಗಿದೆ. 2016ರಲ್ಲಿ ಅಲಹಾಬಾದ್ ಹೈಕೋರ್ಟ್ ಹಾಗೂ ತದನಂತರ ಸುಪ್ರೀಂಕೋರ್ಟ್ ಕೂಡ ವಿಶ್ವವಿದ್ಯಾನಿಲಯಗಳನ್ನು ಘಟಕವಾಗಿ ಪರಿಗಣಿಸಬಾರದು, ಇದು ಅಸಂವಿಧಾನಿಕ ಎಂದು ತೀರ್ಪು ನೀಡಿವೆ. ಸುಪ್ರೀಂಕೋರ್ಟ್ ಆದೇಶಕ್ಕೂ ಬೆಲೆಕೊಡದೆ ಇಂತಹ ನಿರ್ಧಾರ ಕೈಗೊಳ್ಳುವುದು ಸಾಮಾಜಿಕ ನ್ಯಾಯಕ್ಕೆ ಬಗೆಯುವ ದ್ರೋಹವಾಗಿದೆ ಎಂದು ಸ್ಪಷ್ಟಪಡಿಸಿದರು.
ಒಳ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ವೈ.ಕೆ. ಬಾಲಕೃಷ್ಣ ಮಾತನಾಡಿ, ಸಂವಿಧಾನದ ಆಶಯಗಳಿಗೆ ಬದ್ಧವಾಗಿರಬೇಕಾದ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರೇ ಇಂತಹ ಮೀಸಲಾತಿ ವಿರೋಧಿ ಕಾನೂನು ರೂಪಿಸಲು ಉತ್ಸುಕರಾಗಿರುವುದು ದುರಂತ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮಾನತೆ ಕಾಪಾಡುವುದು ಸರ್ಕಾರದ ಜವಾಬ್ದಾರಿ. ಸರ್ಕಾರದ ಈ ನಿರ್ಧಾರದ ವಿರುದ್ಧ ಶೋಷಿತ ಹಾಗೂ ಹಿಂದುಳಿದ ವರ್ಗಗಳು ಎಚ್ಚೆತ್ತುಕೊಳ್ಳಬೇಕಿದೆ ಎಂದು ಹೇಳಿದರು.
ವಿದ್ಯಾರ್ಥಿ ಒಕ್ಕೂಟದ ಮುಖಂಡರಾದ ಗಂಗಾಧರ್ ಬಾಣಸಂದ್ರ, ನವೀನ್ ಕುಮಾರ್ ಪಿ.ಆರ್., ಧರ್ಮಣ್ಣ ಎಂ.ರಂಗನಾಥ್,ಭೀಮ್ ಶಿ ರಮೇಶ್ ಎಂ.ಟಿ., ಮಾರುತೇಶ್ ಹಾಗೂ ಸುರೇಶ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ, ಸರ್ಕಾರ ಸಾಮಾಜಿಕ ನ್ಯಾಯದ ವಿರುದ್ಧ ಯಾವುದೇ ತೀರ್ಮಾನ ಕೈಗೊಳ್ಳಬಾರದು ಎಂದು ಆಗ್ರಹಿಸಲಾಯಿತು.
ಸಭೆಯಲ್ಲಿ ಹಿರಿಯ ಹೋರಾಟಗಾರರಾದ ಪ್ರೊ. ದೊರೈರಾಜು, ಡಾ. ಬಸವರಾಜು, ಕೊಟ್ಟ ಶಂಕರ್, ವೈ.ಹೆಚ್. ಹುಚ್ಚಯ್ಯ ಹಾಗೂ ಚಿಂತಕ ಡಾ. ರವಿಕುಮಾರ್ ನೀಹ, ಪಿ ರಾಮಯ್ಯ, ಹೆತ್ತೇನಹಳ್ಳಿ ಮಂಜುನಾಥ್, ಪವನ್ , ಶಿವಣ್ಣ ತಿಮ್ಮಲಾಪುರ, ಜಯರಾಮ್, ನಟರಾಜ್, ಶ್ರೀನಿವಾಸ್ ಇದ್ದರು.