ಕೆರೆಗಳ ಗೋಡು ಮಣ್ಣು ರೈತರದ್ದು-ಆನಂದ ಪಟೇಲ್

ತುಮಕೂರು: ಕೆರೆಗಳ ಗೋಡು ಮಣ್ಣನ್ನು ತಮ್ಮ ತೋಟಗಳಿಗೆ ಹಾಕಿಕೊಳ್ಳಲು ರೈತರಿಗೆ ಅನುಮತಿ ನೀಡಬೇಕು.ಕೈಗಾರಿಕೆ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಳ್ಳುವುದನ್ನು ಕೈಬಿಡಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಒಳಗೊಂಡಂತೆ ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರುಸೇನೆಯ ರಾಜ್ಯ ಸಂಚಾಲಕ ಆನಂದ ಪಟೇಲ್ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನಗರದ ಟೌನ್‍ಹಾಲ್ ವೃತ್ತದಲ್ಲಿ ಸಮಾವೇಶಗೊಂಡ ಕುಣಿಗಲ್,ಗುಬ್ಬಿ, ಕೊರಟಗೆರೆ,ಚಿಕ್ಕನಾಯಕನಹಳ್ಳಿ ಹಾಗೂ ಇನ್ನಿತರ ತಾಲೂಕುಗಳ ರೈತರು,ಸರಕಾರಗಳ ರೈತ ವಿರೋಧಿ ನೀತಿಯನ್ನು ಖಂಡಿಸಿ ಟೌನ್‍ಹಾಲ್ ವತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ,ಜಿಲ್ಲಾಧಿಕಾರಿಗಳ ಕಚೇರಿ ಬಳಿ ಕೆಲ ಕಾಲ ಧರಣಿ ನಡೆಸಿ, ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಮಾವೇಶಗೊಂಡ ರೈತರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಚಾಲಕ ಆನಂದ ಪಟೇಲ್,ರಾಜ್ಯ ಸರಕಾರ ಕೈಗಾರಿಕೆಗಳ ಅಭಿವೃದ್ದಿ ಹೆಸರಿನಲ್ಲಿ ಕೆಐಎಡಿಬಿ ಎಂಬ ಸಂಸ್ಥೆಯ ಮೂಲಕ ರೈತರ ಫಲವತ್ತಾದ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಗೆ ಸ್ವಾಧೀನ ಪಡಿಸಿಕೊಂಡು ಕೆಲವು ವರ್ಷಗಳ ನಂತರ ಉದ್ದಿಮೆದಾರರಿಗೆ ಮಾರಾಟ ಮಾಡುವ ಮೂಲಕ ರಿಯೆಲ್ ಎಸ್ಟೇಟ್ ದಂಧೆಗೆ ಕುಮ್ಮಕ್ಕು ನೀಡುತ್ತಿದೆ.ಅನ್ನ ಬೆಳೆಯುವ ರೈತನ ಬಳಿ ಭೂಮಿ ಇರಬೇಕೇ ಹೊರತು, ಉದ್ದಿಮೆದಾರರ ಬಳಿ ಅಲ್ಲ.ಸರಕಾರ ಕೆಐಎಡಿಬಿ ಮೂಲಕ ಇದುವರೆಗೂ ರೈತರಿಂದ ಕೈಗಾರಿಕೆಗಳಿಗೆ ವಶಪಡಿಸಿಕೊಳ್ಳಲಾದ ಭೂಮಿ, ಸ್ಥಾಪನೆಯಾದ ಕೈಗಾರಿಕೆಗಳು, ಕೆಲಸ ಮಾಡುತ್ತಿರುವ ಉದ್ಯೋಗಿಗಳ ವಿವರ ನೀಡಿಲ್ಲ. ಸರಕಾರ ಈ ವಿಚಾರವಾಗಿ ಮೊದಲು ಶ್ವೇತ ಪತ್ರ ಒದಗಿಸಬೇಕು ಎಂದು ಆಗ್ರಹಿಸಿದರು.

ನೀರಿನ ಮೂಲಗಳಾದ ಕೆರೆ ಕಟ್ಟೆಗಳಲ್ಲಿ ಇಂದು ಹೂಳು ತುಂಬಿದೆ.ರೈತರ ಜಮೀನಿನಲ್ಲಿದ್ದ ಮಣ್ಣು ಮಳೆಗಾಲದಲ್ಲಿ ನೀರಿನೊಂದಿಗೆ ಕೆರೆ ಸೇರುತ್ತಿದೆ. ಕೆರೆಯ ಹೂಳು ಮಣ್ಣಿನ ಮೇಲೆ ರೈತರಿಗೆ ಹಕ್ಕಿದೆ.ಆದರೆ ಸರಕಾರ ಕ್ಯೂ ಮೀಟರ್ ಲೆಕ್ಕದಲ್ಲಿ ಕೆರೆಯ ಗೋಡು ಮಣ್ಣನ್ನು ಮಾರಿಕೊಳ್ಳಲು ಹೊರಟಿದೆ.ಇಟ್ಟಿಗೆ ಪ್ಯಾಕ್ಟರಿಗಳ ಮಾಲೀಕರಿಗೆ ಕೆರೆಯ ಮಣ್ಣು ಮಾರಿ, ಸಂಪನ್ಮೂಲ ಕ್ರೂಢೀಕರಣಕ್ಕೆ ಮುಂದಾಗಿರುವುದು ನಾಚಿಕೇಗೇಡಿನ ಸಂಗತಿ. ಸರಕಾರ ಕೂಡಲೇ ಕೆರೆಯ ಕೆನೆ ಮಣ್ಣನ್ನು ರೈತರು ತಮ್ಮ ಹೊಲ, ಗದ್ದೆಗಳಿಗೆ ಟ್ರಾಕ್ಟರ್‍ಗಳು, ಎತ್ತಿನ ಗಾಡಿಗಳಲ್ಲಿ ತೆಗೆದುಕೊಂಡು ಹೋಗಲು ಅನುಮತಿ ನೀಡಬೇಕು.ರಾಗಿ ಖರೀದಿಗಳಲ್ಲಿ ಆಗುತ್ತಿರುವ ತೊಂದರೆಯನ್ನು ಸರಿಪಡಿಸಬೇಕೆಂದು ಎಂದು ಆನಂದ ಪಟೇಲ್ ಒತ್ತಾಯಿಸಿದರು.

ಈ ಸರಕಾರ ಬಂದು ಮೂರು ವರ್ಷ ಕಳೆದರೂ ಒಂದೇ ಒಂದು ಬಗರ್‍ಹುಕ್ಕುಂ ಕಮಿಟಿ ಸಭೆ ನಡೆಸಿಲ್ಲ. ಮೂರು ತಲೆಮಾರಿನಿಂದಲೂ ಸರಕಾರಿ ಭೂಮಿ ಉಳುಮೆ ಮಾಡುತ್ತಾ ಫಾರಂ. ನಂಬರ್ 50,53 ಅರ್ಜಿ ಸಲ್ಲಿಸಿದ್ದರೂ ಇದುವರೆಗೂ ಮಂಜುರಾತಿ ನೀಡಿಲ್ಲ.ಬದಲಾಗಿ ಅರಣ್ಯ ಇಲಾಖೆಯ ಮೂಲಕ ಬಗರ್ ಹುಕ್ಕಂ ರೈತರಿಗೆ ಕಿರುಕುಳ ನೀಡಿ ಒಕ್ಕಲೆಬಿಸಲು ಹೊರಟಿದೆ.ಜಿಲ್ಲಾಡಳಿತ ಇದಕ್ಕೆ ಅವಕಾಶ ನೀಡದೆ, ಆರ್ಹರಿಗೆ ಸಾಗುವಳಿ ಚೀಟಿ ನೀಡಿ, ತಲೆಮಾರುಗಳಿಂದ ಉಳುಮೆ ಮಾಡುತ್ತಿರುವ ಜನರಿಗೆ ನ್ಯಾಯ ಒದಗಿಸಬೇಕು. ಹಾಗೆಯೇ ಎತ್ತಿನ ಹೊಳೆ, ಭದ್ರ ಮೇಲ್ದಂಡೆ ಬೇಗ ಪೂರ್ಣಗೊಳಿಸುವುದು ಮತ್ತು ಹೇಮಾವತಿ ಯೋಜನೆಯಿಂದ ನಿಗಧಿತ 24.08 ಟಿ.ಎಂ.ಸಿ ನೀರು ತರಲು ಅಗತ್ಯ ಕ್ರಮವನ್ನು ಜಿಲ್ಲಾಡಳಿತ ಕೈಗೊಳ್ಳಬೇಕೆಂದು ಆನಂದಪಟೇಲ್ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ರೈತರ ದೂರುಗಳ ಹಿನ್ನೆಲೆಯಲ್ಲಿ ಚಿಕ್ಕನಾಯಕನಹಳ್ಳಿ, ಗುಬ್ಬಿ ಮತ್ತು ತಿಪಟೂರು ಎಪಿಎಂಸಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಾವು ಭೇಟಿ ನೀಡಿದ ವೇಳೆ 50 ಕೆ.ಜಿ. 900 ಗ್ರಾಂ ಮಾತ್ರ ತೆಗೆದುಕೊಳ್ಳಲಾಗುತ್ತಿದೆ. ನಿಮ್ಮ ದೂರಿನ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪರಿಶೀಲನೆ ನಡೆಸುತ್ತೇನೆ. ಹಾಗೆಯೇ ಬೆಸ್ಕಾಂಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದರೆ ದೂ.7304975519 ಅಥವಾ 0816-2213400 ಕೆರೆ ಮಾಡಿದರೆ ತಕ್ಷಣ ಸ್ಪಂದಿಸುವ ಕೆಲಸ ಮಾಡುತ್ತೇವೆ.ನಾನು ಕೂಡ ಇದನ್ನು ಪ್ರತಿದಿನ ಮೇಲುಸ್ತುವಾರಿ ನಡೆಸುತ್ತಿದ್ದು, ರೈತರಿಗೆ ಯಾವುದೇ ತೊಂದರೆಯಾಗದ ರೀತಿ ಅಗತ್ಯ ಕ್ರಮ ವಹಿಸಲಾಗುವುದು.ರಾಗಿ ಹಣವನ್ನು ತಕ್ಷಣ ರೈತರ ಖಾತೆಗೆ ಹಾಕಲಾಗುತ್ತಿದೆ. ಇಕೆವೈಸಿ ಸಮಸ್ಯೆ ಇದ್ದವರಿಗೆ ಮಾತ್ರ ಹಣ ತಕ್ಷಣಕ್ಕೆ ದೊರೆಯುತ್ತಿಲ್ಲ. ಅವರು ತಮ್ಮ ಖಾತೆ ಇರುವ ಬ್ಯಾಂಕಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿದರೆ ತಕ್ಷಣವೇ ಹಣ ನಿಮ್ಮ ಖಾತೆಗೆ ಸೇರಲಿದೆ ಎಂದರು

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷರಾಧ ಧನಂಜಯ್ ಆರಾಧ್ಯ, ಸಣ್ಣರಾಮೇಗೌಡ,ಚಿರತೆ ಚಿಕ್ಕಣ್ಣ, ಪಂಡಿತಣ್ಣ, ಅನಿಲ್‍ಕುಮಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *