ತುಮಕೂರು- ವಿಕಲಚೇತನ ಮತ್ತು ಬುದ್ಧಿಮಾಂಧ್ಯ ಮಕ್ಕಳನ್ನು ಮನೆಯಿಂದ ಹೊರಗೆ ಬಾರದಂತೆ ಬಂಧಿಸಿ ಕೂಡಿ ಹಾಕುವುದು ಅಪರಾಧ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸ ತಿಳಿಸಿದರು.
ನಗರದ ಬಾಲಭವನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತುಮಕೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ತುಮಕೂರು, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ತುಮಕೂರು, ಮೊಬಿಲಿಟಿ ಇಂಡಿಯಾ, ತುಮಕೂರು, ವಿಕಲಚೇತನ ಮಕ್ಕಳೊಂದಿಗೆ ಕಾರ್ಯನಿರ್ವಹಿಸುವ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ವಿಶೇಷ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಕಲಚೇತನ ಮಕ್ಕಳು ಹಾಗೂ ಆರೈಕೆದಾರರೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅನಿಷ್ಠ ಪದ್ದತಿಗಳ ಸಂಕೋಲೆಯಿಂದ ವಿಕಲಚೇತನ ಮಕ್ಕಳನ್ನು ಕಟ್ಟಿ ಹಾಕುವುದು, ಕೂಡಿ ಹಾಕಬಾರದು. ಇಂತಹ ಪದ್ದತಿಗಳು ಕಂಡು ಬಂದರೆ ಅಂತಹವರಿಗೆ ಕಾನೂನಿನಲ್ಲಿ ದಂಡನೆ ಮತ್ತು ಶಿಕ್ಷೆ ವಿಧಿಸಲು ಅವಕಾಶ ಇದೆ. ಇದು ಕಾನೂನು ಪ್ರಕಾರ ಅಪರಾಧ. ಇಂತಹ ಕಾರ್ಯಕ್ಕೆ ಯಾರೂ ಸಹ ಕೈ ಹಾಕಬಾರದು. ಬದಲಾಗಿ ವಿಕಲಚೇತನ ಮಕ್ಕಳ ಆರೈಕೆಗಾಗಿ ಇರುವ ಡೇ ಕೇರ್ ಸೆಂಟರ್ ಮತ್ತು ವಸತಿ ಶಾಲೆಗಳಿಗೆ ಸೇರಿಸಲು ಪೋಷಕರು ಹೆಚ್ಚು ಜಾಗೃತರಾಗಬೇಕು ಎಂದು ಹೇಳಿದರು.
ಗರ್ಭವಾಸ್ಥೆಯಲ್ಲೇ ಮಗುವಿನ ಸ್ಥಿತಿಯನ್ನು ಕಂಡು ಹಿಡಿಯುವಷ್ಟು ತಂತ್ರಜ್ಞಾನ ಮುಂದುವರೆದಿದ್ದರೂ ಸಹ ವಿಕಲಚೇತನ ಮಕ್ಕಳು ಜನಿಸುವುದು ಕಂಡು ಹಿಡಿಯುವುದು ಕಷ್ಟಕರವಾಗುತ್ತಿದೆ. ವಿಕಲಚೇತನ ಮಕ್ಕಳನ್ನು ಜೀವನಪೂರ್ತಿ ಆರೈಕೆ ಮಾಡುವ ಪೋಷಕರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ವಿಕಲಚೇತನ ಮಕ್ಕಳಿಗೆ ನಿಖರವಾಗಿ ಬೇಕಾಗಿರುವ ಅಗತ್ಯತೆಗಳನ್ನು ಗುರುತಿಸುವುದು ಎಲ್ಲರ ಕರ್ತವ್ಯ ಎಂದ ಅವರು, ಸಮಾಜದಲ್ಲಿ ವಿಕಲಚೇತನ ಮಕ್ಕಳಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ತಿಳಿಸಿದರು.
ವಿಕಲಚೇತನ ಮಕ್ಕಳಿಗಾಗಿ ಸರ್ಕಾರದಿಂದ ಬಹಳಷ್ಟು ಯೋಜನೆಗಳು ಜಾರಿಯಾಗಿದ್ದು, ವಿವಿಧ ಇಲಾಖೆಗಳ ಮೂಲಕ ಸೌಲಭ್ಯಗಳು ಲಭಿಸುತ್ತಿವೆ. ಆದರೆ ಮಾಹಿತಿ ಕೊರತೆಯಿಂದಾಗಿ ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ತಲುಪುದು ಕಷ್ಟ ಸಾಧ್ಯವಾಗುತ್ತಿದೆ. ಹಾಗಾಗಿ ಸರ್ಕಾರದ ಯೋಜನೆಗಳ ಬಗ್ಗೆ ವಿಕಲಚೇತನ ಮಕ್ಕಳಿಗೆ ಮಾಹಿತಿ ಒದಗಿಸುವ ಕಾರ್ಯ ಅಗತ್ಯವಾಗಿ ಆಗಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ಕೆ.ಟಿ. ತಿಪ್ಪೇಸ್ವಾಮಿ ಮಾತನಾಡಿ, ರಾಜ್ಯದಲ್ಲಿ ವಿಕಲಚೇತನ ಮಕ್ಕಳಿಗೆ ಸಿಗಬೇಕಾಗಿರುವ ಸೌಲಭ್ಯಗಳನ್ನು ದೊರಕಿಸುವ ಸಂಬಂಧ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳಬೇಕಾಗಿದೆ. ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಬಸ್ಗಳಲ್ಲಿ ವಿಕಲಚೇತನ ಮಕ್ಕಳಿಗೆ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುವ ಅಗತ್ಯವಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಿಂದಾಗಿ ವಿಕಲಚೇತನ ಮಕ್ಕಳು ಅನುಭವಿಸುತ್ತಿರುವ ಹೆಚ್ಚಿನ ಸಮಸ್ಯೆಗಳು ತಮ್ಮ ಗಮನಕ್ಕೆ ಬಂದಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪವಿತ್ರ ಮಾತನಾಡಿ, ವಿಕಲಚೇತನ ಮಕ್ಕಳಿಗೆ ಸರ್ಕಾರದಿಂದ ನೀಡಲಾಗುತ್ತಿರುವ ಸೌಲಭ್ಯಗಳನ್ನು ಪೆÇೀಷಕರು ಪಡೆದುಕೊಳ್ಳಬೇಕು. ಯುಡಿಐಡಿ ಕಾರ್ಡ್ ಇದ್ದರೆ ಓದುವುದು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆಯೂ ತಿಳಿಸಿದರು.
ವಿಕಲಚೇತನ ಮಕ್ಕಳಿಗೆ ಸರ್ಕಾರದಿಂದ ಸಿಂಪತಿ ಬೇಕಾಗಿಲ್ಲ, ಅಗತ್ಯ ಸಹಕಾರ ಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವು ಸಹ ವಿಕಲಚೇತನ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಅಗತ್ಯ ಸಹಕಾರ ನೀಡುತ್ತಿದೆ ಎಂದರು.
ಮೊಬಿಲಿಟಿ ಇಂಡಿಯಾ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ ಅಲ್ಬಿನಾ ಶಂಕರ್ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆಗೆ ಹೆಚ್ಚಿನ ಆಧ್ಯತೆ ಕೊಡುವಂತೆ ಸಾಮಾಜಿಕ ಭದ್ರತಾ ಸೌಲಭ್ಯಗಳೊಂದಿಗೆ ಮಕ್ಕಳ ಹಕ್ಕುಗಳ ರಕ್ಷಣೆ ಬಹಳ ಮುಖ್ಯವಾಗಿದ್ದು, ಅದರ ಬಗ್ಗೆಯೂ ಕೊಡ ಪೆÇೀಷಕರು ಗಮನ ಹರಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿಕಲಚೇತನ ಮಕ್ಕಳ ಮಕ್ಕಳ ಪೆÇೀಷಕರು ಆಯೋಗದ ಸದಸ್ಯ ಡಾ. ಕೆ.ಟಿ. ತಿಪ್ಪೇಸ್ವಾಮಿ ಅವರೊಂದಿಗೆ ಸಂವಾದ ನಡೆಸಿ ವಿಕಲಚೇತನರು ಶಾಲಾ ದಾಖಲಾತಿ ಹಾಗೂ ಯುಡಿಐಡಿ ಕಾರ್ಡ್ ಮತ್ತು ಇತರೆ ಸವಲತ್ತುಗಳನ್ನೂ ಪಡೆಯುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗುವಂತಹ ವಿಚಾರಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದರು.
ಈ ಸಂವಾದ ಕಾರ್ಯಕ್ರಮಕ್ಕೆ ತುಮಕೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ ಹಾಗೂ ಕೊರಟಗೆರೆಯಿಂದ ವಿಕಲಚೇತನ ಮಕ್ಕಳ ಪೆÇೀಷಕರು ಹಾಗೂ ವಿಕಲಚೇತನ ಮಕ್ಕಳು ಆಗಮಿಸಿದ್ದರು.
ಈ ಸಂದರ್ಭದಲ್ಲಿ ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕರಾದ ಆನಂದ್ ಎಸ್.ಎನ್., ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಬಿ.ಎಸ್. ಚಿದಾನಂದಮೂರ್ತಿ, ಸಬ್ಇನ್ಸ್ಪೆಕ್ಟರ್ ಬಾಬು ಕಿಲಾರಿ, ಹೆಲನ್ ಕೆಲರ್ ನಿರ್ದೇಶಕರಾದ ಎಂ.ಎಸ್. ಗಾಯತ್ರಿ, ಡಾ. ಹಿರೇಮಠ್, ಚೈತನ್ಯ, ಸಂಗಮೇಶ್ವರ್ ಮತ್ತಿತರರು ಉಪಸ್ಥಿತರಿದ್ದರು.