ತುಮಕೂರು : ಇರಾನ್-ಇಸ್ರೇಲ್ ಯುದ್ಧದಿಂದಾಗಿ ದೇಶದಲ್ಲಿ ಪೆಟ್ರೋಲ್ ಮತ್ತು ಗ್ಯಾಸ್ ಕೊರತೆ ಕಾಣಿಸಿಕೊಂಡಿದ್ದು, ತುಮಕೂರಿಗೂ ಅದರ ಬಿಸಿ ಮುಟ್ಟಿದೆ.
ತುಮಕೂರಿನಲ್ಲಿ ಹಲವಾರು ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ ನೋ ಸ್ಟಾಕ್ ಅಂತ ಬೋರ್ಡ್ ಹಾಕಿದ್ದಾರೆ, ಕೆಲ ಬಂಕ್ಗಳಲ್ಲಿ ನಾರ್ಮಲ್ ಪೆಟ್ರೋಲ್ ಇಲ್ಲ ಪವರ್ ಪೆಟ್ರೋಲ್ ಇರುವುದಾಗಿ ಹೇಳುತ್ತಿದ್ದಾರೆ.
ಇದಲ್ಲದೆ ವಾಣಿಜ್ಯ ಮತ್ತು ಗೃಹ ಗ್ಯಾಸ್ ಸಿಲಿಂಡರ್ ಕೊರತೆಯು ಕಾಣಿಸಿಕೊಂಡಿದೆ. ಇಂದು ಗೃಹ ಬಳಕೆಯ ಗ್ಯಾಸ್ ಬುಕ್ ಮಾಡಲು ಅಧಿಕೃತ ಪೋನ್ ಸಂಖ್ಯೆಗೆ ಡಯಲ್ ಮಾಡಿದರೆ ಗ್ಯಾಸ್ ಬುಕ್ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ, ಈ ಸಂಬಂಧ ಗ್ಯಾಸ್ ಏಜೆನ್ಸಿಗಳನ್ನು ಕೇಳಿದರೆ ಲೈನ್ ಬ್ಯುಸಿ ಇದೆ ಸಂಜೆ ಅಥವಾ ಬೆಳಿಗ್ಗೆ ಬುಕ್ ಮಾಡಿ ಎಂದು ಹೇಳುತ್ತಿದ್ದಾರೆ.
ಇದರಿಂದ ಹೋಟೆಲ್ ಮಾಲೀಕರು ಹೋಟೆಲ್ ನಡೆಸುವುದು ಹೇಗೆ ಎಂದು ಆತಂಕಕ್ಕೆ ಒಳಗಾದರೆ, ಗೃಹ ಬಳಕೆಯ ಸಿಲಿಂಡರ್ ಬುಕ್ ಆಗದೆ ಇರುವುದರಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ.
ಇರಾನ್-ಇಸ್ರೇಲ್ ಯುದ್ಧದಿಂದಾಗಿ ಭಾರತದಲ್ಲಿ ಗ್ಯಾಸ್ ಮತ್ತು ಪೆಟ್ರೋಲ್ ಕೊರತೆಯ ಬಗ್ಗೆ ಆತಂಕಗಳು ವ್ಯಕ್ತವಾಗಿವೆ. ಆದರೆ, ಕೇಂದ್ರ ಸರ್ಕಾರವು ಭಾರತದಲ್ಲಿ ಇಂಧನ ಪೂರೈಕೆ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಿದೆ.
ಭಾರತದಲ್ಲಿ ಸುಮಾರು 70 ದಿನಗಳಿಗೆ ಸಾಕಾಗುವಷ್ಟು ತೈಲ ದಾಸ್ತಾನು ಇದೆ ಮತ್ತು 37 ದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಯುದ್ಧ ಸನ್ನಿವೇಶದಿಂದಾಗಿ ಭಾರತದಲ್ಲೂ ಕಚ್ಚಾ ತೈಲ, ಪೆಟ್ರೋಲ್, ಡಿಸೇಲ್ ಖಾಲಿ ಆಗುವ ಆತಂಕ ಶುರುವಾಗಿದೆ. ಆದರೆ, ಕೇಂದ್ರ ಸರ್ಕಾರವು ಸ್ಪಷ್ಟ ಮಾಹಿತಿಯನ್ನು ಹಂಚಿಕೊಂಡಿದೆ. ಪೆಟ್ರೋಲಿಯಂ ಸಚಿವಾಲಯವು ನಿರಂತರವಾಗಿ ಬದಲಾಗುತ್ತಿರುವ ಪರಿಸ್ಥಿತಿಯನ್ನು ಗಮನಿಸುತ್ತಿದೆ.
ಭಾರತವು ತನ್ನ ಕಚ್ಚಾ ತೈಲದ ಅಗತ್ಯದ 88 ಪ್ರತಿಶತವನ್ನು ಆಮದು ಮಾಡಿಕೊಳ್ಳುತ್ತದೆ. ಇದನ್ನು ಸಂಸ್ಕರಣಾಗಾರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ನಂತಹ ಇಂಧನಗಳಾಗಿ ಪರಿವರ್ತಿಸಲಾಗುತ್ತದೆ.