ಯುಗಾದಿ-ರಂಜಾನ್: ಬಟ್ಟೆ ಖರೀದಿಗೆ ಮುಗಿ ಬಿದ್ದ ಜನತೆ

ತುಮಕೂರು- ಮಧ್ಯ ಪ್ರಾಚ್ಯ ದೇಶಗಳಲ್ಲಿ ಯುದ್ಧ ನಡೆದು ಜನತೆ ತತ್ತರಿಸಿರುವುದು ಒಂದು ಕಡೆಯಾದರೆ ಹಿಂದೂ ಮತ್ತು ಮುಸ್ಲಿಂ ಬಾಂಧವರ ಪ್ರಮುಖ ಹಬ್ಬಗಳಾದ ಯುಗಾದಿ ಮತ್ತು ರಂಜಾನ್ ಒಟ್ಟೊಟ್ಟಿಗೆ ಬಂದಿರುವ ಹಿನ್ನೆಲೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಬಾಂಧವರು ಹಬ್ಬಕ್ಕೆ ಹೊಸ ಉಡುಪುಗಳನ್ನು ಖರೀದಿಸುವ ಭರಾಟೆಯಲ್ಲಿ ತೊಡಗಿದ್ದು, ಬಟ್ಟೆ ಅಂಗಡಿಗಳಲ್ಲಿ ವ್ಯಾಪಾರ ಬಲು ಜೋರಾಗಿ ನಡೆದಿದೆ.

ಬರುವ ಶನಿವಾರ ರಂಜನ್ ಹಬ್ಬ ಇರುವ ಹಿನ್ನೆಲೆಯಲ್ಲಿ ಕಳೆದ 15-20 ದಿನಗಳಿಂದಲೇ ನೆತ್ತಿ ಸುಡವ ಬಿಸಿಲಿನ ಝಳವನ್ನು ಲೆಕ್ಕಿಸದೆ ಮುಸ್ಲಿಂ ಬಾಂಧವರು ಬಟ್ಟೆ ಅಂಗಡಿಗಳಿಗೆ ಎಡತಾಕಿ ಖರೀದಿಯಲ್ಲಿ ತೊಡಗಿದ್ದಾರೆ.

ನಗರದ ಪ್ರಮುಖ ವ್ಯಾಪಾರ ವಹಿವಾಟು ನಡೆಯುವ ಎಂ.ಜಿ. ರಸ್ತೆ, ಎಸ್‍ಐಟಿ ಮುಖ್ಯ ರಸ್ತೆ, ಮಂಡಿಪೇಟೆ ರಸ್ತೆ, ಬಿ.ಹೆಚ್. ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಇರುವ ಬಟ್ಟೆ ಅಂಗಡಿಗಳು ಜನರಿಂದ ತುಂಬಿ ಕಾಲಿಡಲು ಜಾಗವಿಲ್ಲದಷ್ಟರ ಮಟ್ಟಿಗೆ ಗಿಜಗುಡುತ್ತಿವೆ.

ಕೆಲ ಬಟ್ಟೆ ಅಂಗಡಿಗಳಲ್ಲಿ ಮಾಮೂಲಿ ದಿನಗಳಲ್ಲಿ ನಾಲ್ಕೈದು ಮಂದಿ ವ್ಯಾಪಾರ ಮಾಡುತ್ತಿದ್ದರು. ಆದರೆ ರಂಜಾನ್ -ಯುಗಾದಿ ಹಬ್ಬದ ಭರಾಟೆ ಜೋರಾದ ಬಳಿಕ ಒಂದೊಂದು ಬಟ್ಟೆ ಅಂಗಡಿಯವರು 20 ರಿಂದ 30 ಜನರನ್ನು ಕರೆಸಿಕೊಂಡು ವ್ಯಾಪಾರದಲ್ಲಿ ತೊಡಗಿದ್ದಾರೆ.

ಇದನ್ನು ಗಮನಿಸಿದರೆ ಕಲ್ಪತರುನಾಡು ತುಮಕೂರು ನಗರದಲ್ಲಿ ಎಷ್ಟರ ಮಟ್ಟಿಗೆ ಹಬ್ಬಕ್ಕೆ ಬಟ್ಟೆ ಖರೀದಿ ಭರಾಟೆ ನಡೆದಿದೆ ಎಂಬುದ ಗೊತ್ತಾಗುತ್ತದೆ.

ನಗರದ ಎಂ.ಜಿ. ರಸ್ತೆಯಲ್ಲಿರುವ ಜ್ಯೋತಿಫ್ಯಾಷನ್ ಸೇರಿದಂತೆ ವಿವಿಧ ಬಟ್ಟೆ ಅಂಗಡಿಗಳಿಗೆ ನಗರ, ಗ್ರಾಮೀಣ ಪ್ರದೇಶ ಸೇರಿದಂತೆ ವಿವಿಧೆಡೆಯಿಂದ ಬಂದು ಜನತೆ ಬಟ್ಟೆ ಖರೀದಿಗೆ ಮುಗ್ಗಿ ಬೀಳುತ್ತಿರುವುದು ಸಾಮಾನ್ಯವಾಗಿದೆ.

ಕೆಲ ಬಟ್ಟೆ ಅಂಗಡಿಗಳಲ್ಲಿ ಹಬ್ಬದ ಪ್ರಯುಕ್ತ ವಿಶೇಷ ರಿಯಾಯ್ತಿ, ಕೊಡುಗೆಗಳನ್ನು ನೀಡುತ್ತಿದ್ದರೆ, ಇನ್ನುಳಿದ ಅಂಗಡಿಗಳಲ್ಲಿ ಬೆಲೆ ಎಷ್ಟೇ ದುಪ್ಪಟ್ಟಾದರೂ ಜನ ಅದನ್ನು ಲೆಕ್ಕಿಸದೆ ಹೊಸ ಉಡುಪುಗಳ ಖರೀದಿಯನ್ನು ತೊಡಗಿರುವುದು ನಗರದ ಬಟ್ಟೆ ಅಂಗಡಿಗಳಲ್ಲಿ ಕಂಡು ಬರುತ್ತಿದೆ.

Leave a Reply

Your email address will not be published. Required fields are marked *