ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಜಿ.ಎಂ.ಸಣ್ಣಮುದ್ದಯ್ಯ ನಿಧನ

ತುಮಕೂರು : ನಿವೃತ್ತ ತಹಶೀಲ್ದಾರ್ ಹಾಗೂ ತುಮಕೂರು ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ಜಿ.ಎಂ.ಸಣ್ಣಮುದ್ದಯ್ಯನವರು(72) ನಿಧನ ಹೊಂದಿದ್ದಾರೆ.

ಇಂದು ಬೆಳಗಿನ ಜಾವ ಅವರ ಮನೆಯಲ್ಲಿಯೇ ಹೃದಯಾಘಾತದಿಂದ ಮಲಗಿದಲ್ಲಿಯೇ ನಿಧನ ಹೊಂದಿದ್ದು, ಇವರು ತುಮಕೂರು ಜಿಲ್ಲೆಯ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿದ್ದ ಕಾಲದಲ್ಲಿ ಸಂಘಕ್ಕೆ ಭದ್ರ ಬುನಾದಿ ಹಾಕಿದ್ದಲ್ಲದೆ ಒಂದು ಘನತೆ, ಶಿಸ್ತನ್ನು ತಂದು ಕೊಟ್ಟರು.

ಸಣ್ಣಮುದ್ದಯ್ಯನವರು ಸಂಘದ ಅಧ್ಯಕ್ಷರಾಗುವ ತನಕ ಸರ್ಕಾರಿ ನೌಕರರಿಗೆ ಒಂದು ಸಂಘವಿದೆ ಎಂಬುದೂ ಸಹ ಸಾರ್ವಜನಿಕರಿಗೆ ತಿಳಿದಿರಲಿಲ್ಲ, ಜಿ.ಎಂ.ಸಣ್ಣಮುದ್ದಯ್ಯನವರು ಅಧ್ಯಕ್ಷರಾದ ಮೇಲೆ ನೌಕರರ ಹಲವಾರು ಬೇಡಿಕೆಗೆ ಯಾವುದೇ ಮುಲಾಜಿಲ್ಲದೆ ಪ್ರತಿಭಟನೆ, ಧರಣಿಗಳನ್ನು ಮಾಡುವ ಮೂಲಕ ನೌಕರರ ಬೇಡಿಕೆಗಳಿಗೆ ಸ್ಪಂದಿಸಿದವರು.

ಸತತ ಐದು ಬಾರಿ ಸರ್ಕಾರಿ ನೌಕರರ ತುಮಕೂರು ಜಿಲ್ಲಾಧ್ಯಕ್ಷರಾಗಿ ಹಾಗೂ ಒಂದು ಬಾರಿ ರಾಜ್ಯ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಇವರು ತಹಶೀಲ್ದಾರ್ ಗ್ರೇಡ್-2 ಆಗಿದ್ದ ಕಾಲದಲ್ಲಿ ಜಾತಿ ಪ್ರಮಾಣಪತ್ರ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ನೀಡುವಲ್ಲಿ ಇದ್ದ ತೊಡಕುಗಳನ್ನು ನೀವಾರಿಸಿ ಸುಧಾರಣೆಯನ್ನು ತಂದು ಬಡ ಜನರಿಗೆ ಒತ್ತಾಸೆಯಾಗಿ ಕಾರ್ಯನಿರ್ವಹಿಸಿದರು.

2004ರಲ್ಲಿ ತುಮಕೂರಿನಲ್ಲಿ ನಡೆದ 69 ನೇ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರಿ ನೌಕರರಿಂದ ಸಂಗ್ರಹಿಸಿದ್ದ ಹಣದಲ್ಲಿ 25 ಲಕ್ಷ ರೂ.ಗಳನ್ನು ಉಳಿಸಿ ಕನ್ನಡ ಭವನ ನಿರ್ಮಾಣಕ್ಕೆ ಸಹಾಯ ನೀಡಿ, ಕಸಾಪಕ್ಕೆ ಒಂದು ಕಟ್ಟಡ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇವರು ಅಧ್ಯಕ್ಷರಾಗಿದ್ದ ಕಾಲದಲ್ಲಿ ರಾಜಕಾರಣಿಗಳು ಸಹ ಸಣ್ಣಮುದ್ದಯ್ಯನವರ ಸಹಕಾರ ಕೋರರುತ್ತಿದ್ದನ್ನು ಸ್ಮರಿಸಬಹುದು.

ಇವರು ನಿವೃತ್ತಿ ಹೊಂದಿದಾಗ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸರ್ಕಾರಿ ನೌಕರರ ಅಂದಿನ ಅಧ್ಯಕ್ಷರನ್ನು ಕರೆಸಿ ಅದ್ಧೂರಿ ಸಮಾರಂಭದ ಮೂಲಕ ಸಣ್ಣಮುದ್ದಯ್ಯನವರಿಗೆ ಬೀಳ್ಕೊಡಿಗೆ ನೀಡಿ ಗೌರವಿಸಿದ್ದರು.

ಹಲವಾರು ವರ್ಷಗಳ ಹಿಂದೆಯೇ ಬೈಪಾಸ್ ಸರ್ಜರಿಗೆ ಒಳಗಾಗಿದ್ದ ಜಿ.ಎಂ.ಸಣ್ಣಮುದ್ದಯ್ಯನವರು ನಿವೃತ್ತಿಯ ನಂತರ ತುಮಕೂರಿನಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿದ್ದರು, ಇಂದು ಬೆಳಿಗ್ಗೆ ಇದ್ದಕ್ಕಿದಂತೆ ನಿಧನ ಹೊಂದಿರುವುದು ಸರ್ಕಾರಿ ನೌಕರರಿಗೆ, ಅವರ ಅಭಿಮಾನಿಗಳಿಗೆ ಅಘಾತವನ್ನುಂಟು ಮಾಡಿದೆ.

ಮೃತರು ಪತ್ನಿ ಇಂದಿರಮ್ಮ ಮತ್ತು ಮಗ ಹಾಗೂ ಅಪಾರ ಬಂಧು-ಬಳಗ, ಸ್ನೇಹಿತರು, ಹಿತೈಶಿಗಳನ್ನು ಅಗಲಿದ್ದಾರೆ.

ಅಂತಿಮ ಸಂಸ್ಕಾರ ಮಾರ್ಚ್ 17ರ ಸೋಮವಾರ ಬಿಟ್ಟನಕುರಿಕೆಯ ಗೊಲ್ಲರ ಹಟ್ಟಿಯ ಆದಿಶಕ್ತಿ ದೇವಸ್ಥಾನದ ಹಿಂಭಾಗದ ಅವರ ತೋಟದಲ್ಲಿ ನಡೆಯಲಿದೆ ಎಂದು ಕುಂಟುಂಬದ ಮೂಲಗಳು ತಿಳಿಸಿವೆ.

ಸೈಯದ್ ಮುಜೀಬ್ ಸಂತಾಪ : ಜಿಲ್ಲೆಯ ಸರ್ಕಾರಿ ನೌಕರರ ಸಂಘಕ್ಕೊಂದು ಭದ್ರ ಬುನಾದಿ ಹಾಕಿದವರು ಅವರು. ತಮ್ಮ ಶಿಸ್ತು ಮತ್ತು ನೇರ ಮಾತಿಗೆ ಸದಾ ಚಿರಪರಿಚಿತರಾಗಿದ್ದರು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಸಣ್ಣಮುದ್ದಯ್ಯನವರು ಇನ್ನಿಲ್ಲವೆಂಬ ಸುದ್ದಿ ತೀವ್ರ ಬೇಸರ ತಂದಿದೆ. ಯಾವುದೇ ಚಳವಳಿಗೆ ಬೆನ್ನೆಲುಬಾಗಿ ನಿಲ್ಲುತ್ತಿದ್ದ ಅವರು, ಕಿವಿಮಾತಿನ ಮೂಲಕವೇ ಸ್ಫೂರ್ತಿ ನೀಡುತ್ತಿದ್ದ ಚೇತನ ಅವರದು. ಅವರು ಅದ್ಭುತ ಹಾಡುಗಾರರು ಕೂಡ ಆಗಿದ್ದರು. ಸಾಕ್ಷರತಾ ಆಂದೋಲನದ ಕೆಲಸಗಳಲ್ಲಿ ತೊಡಗಿದ್ದ ಸಮಯದಲ್ಲಿ, ಎಲ್ಲೋ ಒಂದು ಮೂಲೆಯಲ್ಲಿ “ಜೋಗಪ್ಪ ನಿನ್ನರಾಮಾನೆ…” ಹಾಡು ಕೇಳಿ ಮನಸ್ಸು ಹಗುರವಾಗಿತ್ತು. ಅವರ ಇನ್ನಿಲ್ಲವೆಂಬ ಸುದ್ದಿದುಃಖಕರವಾಗಿದೆ. ಅವರಿಗೆ ನಮ್ಮ ಅಂತಿಮ ನಮನಗಳು ಎಂದು ಕಾರ್ಮಿಕ ಮುಖಂಡ ಸೈಯದ್ ಮುಜೀಬ್ ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *