ಟಿ.ಆರ್. ರೇವಣ್ಣ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ತಮ್ಮನ್ನು ತಾವು ತೇಯ್ದುಕೊಂಡ ತುಮಕೂರಿನ ಹೆಮ್ಮೆಯ ಪುತ್ರ. 1928ರಲ್ಲಿ ಜಿ.ಎಂ. ರಾಜಪ್ಪ ಮತ್ತು ಹನುಮಕ್ಕನವರ ಮಗನಾಗಿ ಜನಿಸಿದ ಇವರು ವಿದ್ಯಾರ್ಥಿ ದೆಸೆಯಲ್ಲೇ ಭಾರತದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಜೈಲುವಾಸವನ್ನು ಅನುಭವಿಸಿದರು. 1947 ರ ಮೈಸೂರು ಚಲೋ ಚಳವಳಿ, ಸ್ವಾತಂತ್ರ್ಯಾನAತರದ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಸಹ ಸಕ್ರಿಯವಾಗಿ ಭಾಗವಹಿಸಿದವರು.
ಶ್ರೀಯುತರು ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ್ತಿ ಶ್ರೀಮತಿ ಅರುಣಾ ಅಸಫ್ ಅಲಿ ಅವರನ್ನು 1964ರಲ್ಲಿ ತುಮಕೂರಿಗೆ ಕರೆಸಿ ರಾಜ್ಯದ ಶಾಂತಿ ಹಾಗೂ ಸೌಹಾರ್ದತಾ ಸಂಘಟನೆಯ ಸಮ್ಮೇಳನವನ್ನು ಏರ್ಪಡಿಸಿರುತ್ತಾರೆ. 1973ರಲ್ಲಿ ಮಾಸ್ಕೋದಲ್ಲಿ ನಡೆದ ವಿಶ್ವಶಾಂತಿ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿ, ಈ ನೆಲದ ಗರಿಮೆಯನ್ನು ಎತ್ತರಕ್ಕೆ ಏರಿಸಿದ್ದಾರೆ. ಯುದ್ಧವಿರೋಧಿ ನಿಶ್ಶಸ್ತ್ರೀಕರಣ, ಕೋಮುಸೌಹಾರ್ದತೆ, ರಾಷ್ಟ್ರೀಯ ಐಕ್ಯತೆಗೆ ಸಂಬAಧಿಸಿದ ಜಾಗೃತಿ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಕ್ರಿಯಾಶೀಲರಾಗಿದ್ದಾರೆ.
ಗಾಂಧೀಜಿಯ ಆದರ್ಶಗಳ ದಾರಿಯಲ್ಲಿ ನಡೆದಿರುವ ರೇವಣ್ಣನವರು ಸಮುದಾಯದ ಶ್ರೇಯೋಭಿವೃದ್ಧಿಯ ಕಾರ್ಯಕ್ರಮಗಳಾದ ಆರೋಗ್ಯ ಶಿಬಿರ, ನೇತ್ರ ತಪಾಸಣಾ ಶಿಬಿರ, ಕೊಳಚೆ ಪ್ರದೇಶಗಳ ನೈರ್ಮಲ್ಯ, ಅಣುಬಾಂಬ್ ದುರಂತದ ಖಂಡನಾ ಸಮಾರಂಭ, ವರದಕ್ಷಿಣೆ ವಿರೋಧಿ ಚಳುವಳಿ, ಅಂತರ್ಜಾತೀಯ ವಿವಾಹಕ್ಕೆ ಪ್ರೋತ್ಸಾಹ, ಮೊದಲಾದವುಗಳ ಮೂಲಕ ಉತ್ಕೃಷ್ಟ ಸಮಾಜ ನಿರ್ಮಾಣದ ಕನಸನ್ನು ಸಾಕಾರಗೊಳಿಸಲು ಶ್ರಮಿಸಿರುತ್ತಾರೆ.
2002ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ, 2017ರಲ್ಲಿ ಭಾರತದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರಿಂದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕೆ ಅಭಿನಂದನೆ, 2011 ರಲ್ಲಿ ಕರ್ನಾಟಕ ಗಾಂಧಿ ಸ್ಮಾರಕನಿಧಿ, ಗಾಂಧಿಭವನ, ಬೆಂಗಳೂರು ಇಲ್ಲಿ ರಾಜ್ಯಪಾಲರಿಂದ ಗೌರವ ಸಮರ್ಪಣೆ ಹೀಗೆ ಇವರಿಗೆ ಸಂದ ಪ್ರಶಸ್ತಿ ಗೌರವಗಳು ಹತ್ತು-ಹಲವು.
ಚಾರ್ಟರ್ಡ್ ಅಕೌಂಟೆAಟ್ ಮತ್ತು ಪ್ರಸಿದ್ಧ ವಕೀಲರು – ಕೆ. ಆರ್. ಪ್ರದೀಪ್ :

ಕೆ. ಆರ್. ಪ್ರದೀಪ್ ಇವರು ಕಾನೂನು ತಜ್ಞರಾಗಿ, ಹಣಕಾಸು ತಜ್ಞರಾಗಿ, ಹಸಿರು ಇಂಧನ ಉದ್ಯಮಿಯಾಗಿ ಹಾಗೂ ಸಮಾಜ ಸೇವಕರಾಗಿ ಭಾರತ ಮತ್ತು ವಿದೇಶಗಳಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿದ ಬಹುಮುಖ ಪ್ರತಿಭೆಯಾಗಿದ್ದಾರೆ. ಇವರು ಫೈನಲ್ ಸಿ.ಎ. ಪರೀಕ್ಷೆಯ ‘ಅಡ್ವಾನ್ಸ್ಡ್ ಅಕೌಂಟೆನ್ಸಿ’ ವಿಷಯದಲ್ಲಿ ಶೇಕಡಾ 100 ಕ್ಕೆ 100 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಗಳಿಸಿದ್ದಕ್ಕಾಗಿ ರಾಷ್ಟ್ರಪತಿಗಳ ಸನ್ಮಾನಕ್ಕೆ ಪಾತ್ರರಾಗಿದ್ದಾರೆ. 1949 ರಲ್ಲಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆAಟ್ಸ್ ಆಫ್ ಇಂಡಿಯಾ ಸ್ಥಾಪನೆಯಾದಾಗಿನಿಂದ ಈವರೆಗೂ ಯಾರೂ ಮಾಡದ ಐತಿಹಾಸಿಕ ಸಾಧನೆ ಇದಾಗಿದೆ. ಇವರು ಕರ್ನಾಟಕದ ಅತ್ಯುನ್ನತ ವೃತ್ತಿಪರ ತೆರಿಗೆದಾರರಲ್ಲಿ ಒಬ್ಬರಾಗಿದ್ದು, ಸರ್ಕಾರದ ಬೊಕ್ಕಸಕ್ಕೆ 250 ಕೋಟಿ ರೂಪಾಯಿಗಳಿಗೂ ಹೆಚ್ಚು ಕೊಡುಗೆ ನೀಡಿದ್ದಾರೆ.
ಪ್ರದೀಪ್ ಅವರು ಕರ್ನಾಟಕದಲ್ಲಿ ಮೂರು ಪ್ರಮುಖ ಜಲವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಿದ್ದು, ಇವು 5 ಲಕ್ಷ ಮನೆಗಳಿಗೆ ವಾರ್ಷಿಕವಾಗಿ 120 ಮಿಲಿಯನ್ ಯೂನಿಟ್ಗಳಿಗಿಂತ ಹೆಚ್ಚು ನವೀಕರಿಸಬಹುದಾದ ವಿದ್ಯುತ್ತನ್ನು ಉತ್ಪಾದಿಸುತ್ತವೆ. ಪ್ರದೀಪ್ ಅವರು ಪ್ರತಿಷ್ಠಿತ ʼವಾಸವಿ ರತ್ನʼ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ವಾಸವಿ ಆಸ್ಪತ್ರೆ, ಲಯನ್ಸ್ ಕಣ್ಣಿನ ಆಸ್ಪತ್ರೆ ಮತ್ತು ಅರಣ್ಯವಾಸಿ ಸಿದ್ದಿ ಸಮುದಾಯದ ಅಭಿವೃದ್ಧಿಗಾಗಿ ಅವರು ಪ್ರಾಯೋಜಕತ್ವವನ್ನು ನೀಡಿದ್ದಾರೆ. ರೂ. 9 ಕೋಟಿಗೂ ಹೆಚ್ಚು ಮೊತ್ತದ ವಿದ್ಯಾರ್ಥಿವೇತನವನ್ನು ನೀಡಿದ ಹೆಗ್ಗಳಿಕೆ ಹೊಂದಿದ್ದಾರೆ.
ಕವಿ ಮತ್ತು ಚಿಂತಕರು ದ್ವಾರನಕುಂಟೆ ಪಾತಣ್ಣ :

ಕಳೆದ ನಲವತ್ತು ವರ್ಷಗಳಿಂದ ಕನ್ನಡ ಪರ ಚಿಂತನೆ ಮತ್ತು ಹೋರಾಟದ ವಲಯದಲ್ಲಿ ಶ್ರೀ ದ್ವಾರನಕುಂಟೆ ಪಾತಣ್ಣನವರ ಹೆಸರು ಪ್ರಸಿದ್ಧವಾಗಿದೆ. 1951ರಲ್ಲಿ ಸಿರಾ ತಾಲೂಕಿನ ದ್ವಾರನಕುಂಟೆ ಗ್ರಾಮದಲ್ಲಿ ಜನಿಸಿ ಪರಿಶ್ರಮದ ಓದಿನ ಮೂಲಕ ಎಚ್.ಎಂ.ಟಿ. ಕಾರ್ಖಾನೆಯಲ್ಲಿ ಉದ್ಯೋಗ ಪಡೆದು, ಕನ್ನಡದ ಸೇವೆಗಾಗಿ ತಮ್ಮ ಬಾಳನ್ನು ಅರ್ಪಿಸಿಕೊಂಡವರು ಪಾತಣ್ಣ.
ಶ್ರೀಯುತರ ಲೇಖನಿಯಿಂದ ಹೊಮ್ಮಿದ ಬರವಣಿಗೆ ಸತ್ವಯುತ ಮತ್ತು ವೈವಿಧ್ಯಮಯ. ಸಾಮಾಜಿಕ, ಐತಿಹಾಸಿಕ ಕಾದಂಬರಿಗಳು, ಸಣ್ಣಕಥೆ, ಕವನಗಳು, ನಾಟಕ, ಆತ್ಮಕಥೆ ಹೀಗೆ ಅವರ ಸಾಹಿತ್ಯಕೃಷಿ ವಿವಿಧ ಶಾಖೆಗಳಲ್ಲಿ ಸಮೃದ್ಧವಾಗಿ ಬೆಳೆದುಬಂದಿದೆ. ಇದುವರೆಗೆ ಪ್ರಕಟವಾದ ಅವರ ಕೃತಿಗಳ ಸಂಖ್ಯೆ ಇಪ್ಪತ್ತಕ್ಕೂ ಹೆಚ್ಚು.
ಬರವಣಿಗೆಯಲ್ಲಿ ಮಾತ್ರವಲ್ಲದೆ ಕನ್ನಡ ಪರ ಚಳವಳಿಗಳಲ್ಲಿ, ಗಡಿ-ಜಲ ವಿವಾದಗಳ ಸಂದರ್ಭದಲ್ಲಿ ಶ್ರೀಯುತರು ಈ ನೆಲದ ಹಕ್ಕು ಮತ್ತು ಅಭಿಮಾನಕ್ಕಾಗಿ ನಿರಂತರವಾಗಿ ಧ್ವನಿ ಎತ್ತಿದ್ದಾರೆ. ಗೋಕಾಕ್ ಚಳವಳಿಯಿಂದ ಆರಂಭಿಸಿ, ಮಹಾಜನ್ ವರದಿ ಜಾರಿಗಾಗಿ ಹೋರಾಟ, ಕಾವೇರಿ ನೀರಿನ ಹಕ್ಕಿಗಾಗಿ ನಡೆದ ಹೋರಾಟಗಳಲ್ಲಿ ಸ್ಮರಣೀಯವಾದ ಪಾತ್ರ ವಹಿಸಿರುತ್ತಾರೆ. ಕನ್ನಡ ಭಾಷೆಯ ಕುರಿತು ಅರಿವು ಮೂಡಿಸುವ ಸಲುವಾಗಿ ಸ್ವಾಭಿಮಾನಿ ಕರ್ನಾಟಕ ವೇದಿಕೆಯನ್ನು ಸ್ಥಾಪಿಸಿ ಜನಪರ, ನುಡಿಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಲ್ಲಿ ಮಾದರಿಯಾಗಿ ಹೊರಹೊಮ್ಮಿದ್ದಾರೆ.
ಶ್ರೀಯುತರ ನಾಡು-ನುಡಿಯ ಸೇವೆಯನ್ನು ಗುರುತಿಸಿ ನಾಡೋಜ ಬರಗೂರು ಪ್ರತಿಷ್ಠಾನದ ‘ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿ’, ತುಮಕೂರು ಜಿಲ್ಲಾ ಕ.ಸಾ.ಪ. ದಿಂದ ಕೊಡಮಾಡುವ ‘ಸಾಹಿತ್ಯ ಶ್ರೀ ಪ್ರಶಸ್ತಿ’, ‘ರಾಮ್ ಜಾದವ್ ಪ್ರಶಸ್ತಿ’ ಮೊದಲಾದ ಹತ್ತಕ್ಕೂ ಹೆಚ್ಚು ಪ್ರಶಸ್ತಿ-ಗೌರವಗಳು ಅವರನ್ನು ಅರಸಿಕೊಂಡು ಬಂದಿವೆ.