ಪಿ.ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ನಿಧನ

ಬೆಂಗಳೂರು : ಖ್ಯಾತ ಸಾಹಿತಿ ಪಿ. ಲಂಕೇಶ್ ಅವರ ಪತ್ನಿ ಹಾಗೂ ಹಿರಿಯ ಲೇಖಕಿ ಇಂದಿರಾ ಲಂಕೇಶ್ (84) ಬೆಂಗಳೂರಿನಲ್ಲಿ ನಿಧನರಾಗಿದ್ದು, ಕನ್ನಡ ಸಾಹಿತ್ಯ ಲೋಕದಲ್ಲಿ ನೀರವ ಮೌನ ಆವರಿಸಿದೆ.

ಇಂದಿರಾ ಲಂಕೇಶ್ ಅವರು ಕನ್ನಡ ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಅವರು ಕೇವಲ ಲಂಕೇಶ್ ಕುಟುಂಬದ ಪ್ರಮುಖ ಸದಸ್ಯೆಯμÉ್ಟೀ ಅಲ್ಲದೆ, ಹಲವಾರು ಸಾಹಿತ್ಯಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಅವರು ಪುತ್ರಿ ಕವಿತಾ ಲಂಕೇಶ್ , ಪುತ್ರ ಇಂದ್ರಜಿತ್ ಲಂಕೇಶ್ ಸೇರಿದಂತೆ ವಿಶಾಲ ಕುಟುಂಬವನ್ನು ಅಗಲಿದ್ದಾರೆ. ಲಂಕೇಶ್ ಕುಟುಂಬ ಕನ್ನಡ ಸಾಹಿತ್ಯ, ಪತ್ರಿಕೋದ್ಯಮ ಹಾಗೂ ಚಿತ್ರರಂಗದಲ್ಲಿ ಮಹತ್ವದ ಕೊಡುಗೆ ನೀಡಿರುವ ಕುಟುಂಬವೆಂದು ಪರಿಗಣಿಸಲಾಗಿದೆ.

ಇಂದಿರಾ ಲಂಕೇಶ್ ಅವರ ನಿಧನಕ್ಕೆ ಸಾಹಿತ್ಯಿಕರು, ರಾಜಕೀಯ ಮುಖಂಡರು, ಪತ್ರಕರ್ತರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದು, ಕನ್ನಡ ಸಾಂಸ್ಕೃತಿಕ ವಲಯವು ಒಬ್ಬ ಮಹತ್ವದ ವ್ಯಕ್ತಿತ್ವವನ್ನು ಕಳೆದುಕೊಂಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಿಎಂ ಡಿಕೆಶಿ ಸಂತಾಪ

ನಾಡಿನ ಖ್ಯಾತ ಸಾಹಿತಿ ಮತ್ತು ಪತ್ರಕರ್ತರಾಗಿದ್ದ ದಿವಂಗತ ಪಿ.ಲಂಕೇಶ್ ಅವರ ಧರ್ಮಪತ್ನಿ ಇಂದಿರಾ ಲಂಕೇಶ್ ಅವರ ನಿಧನದ ವಿಷಯ ತಿಳಿದು ಅತೀವ ದುಃಖವಾಗಿದೆ. ಪಿ.ಲಂಕೇಶ್ ಅವರ ಸಾಹಿತ್ಯ, ಮಾಧ್ಯಮ ಹಾಗೂ ಚಿತ್ರರಂಗದ ಸಾಧನೆಗೆ ಇಂದಿರಾ ಲಂಕೇಶ್ ಅವರು ಬೆನ್ನೆಲುಬಾಗಿದ್ದರು. ಜೊತೆಗೆ ವ್ಯವಹಾರ, ಬರವಣಿಗೆ ಹಾಗೂ ಪುಸ್ತಕ ಪ್ರಕಟಣೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಛಲ ಬಿಡದ ಗಟ್ಟಿಗಿತ್ತಿಯಂತೆ ಬದುಕಿದ ಇಂದಿರಾ ಲಂಕೇಶ್ ಅವರು ಎಲ್ಲಾ ಹೆಣ್ಣುಮಕ್ಕಳಿಗೂ ಮಾದರಿಯಾಗಿದ್ದರು. ಭಗವಂತ ಮೃತರ ಆತ್ಮಕ್ಕೆ ಚಿರಶಾಂತಿ ದಯಪಾಲಿಸಲಿ ಹಾಗೂ ನೋವಿನಲ್ಲಿರುವ ಕುಟುಂಬಸ್ಥರು, ಆಪ್ತರು, ಅಭಿಮಾನಿಗಳು ಹಾಗೂ ಸಾಹಿತ್ಯಾಸಕ್ತರಿಗೆ ಶಕ್ತಿ, ಧೈರ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಡಿಕೆಶಿ ಟ್ವೀಟ್ ಮಾಡಿದ್ದಾರೆ.

ಸದ್ಯ ಇಂದಿರಾ ಲಂಕೇಶ್ ಅವರ ಪಾರ್ಥಿವ ಶರೀರವನ್ನು ಕವಿತಾ ಲಂಕೇಶ್ ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಗಿದ್ದು, ನಾಳೆ (ಮಂಗಳವಾರ) ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ. ಇಂದಿರಾ ಲಂಕೇಶ್ ಅವರ ನಿಧನಕ್ಕೆ ಸಾಹಿತ್ಯ, ಪತ್ರಿಕೋದ್ಯಮ ಹಾಗೂ ಚಿತ್ರರಂಗದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ

ಇಂದಿರಾ ಲಂಕೇಶ್ ನಿಧನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದು, ಪ್ರಸಿದ್ಧ ಸಾಹಿತಿ ಮತ್ತು ಪತ್ರಕರ್ತರಾಗಿದ್ದ ದಿವಂಗತ ಪಿ.ಲಂಕೇಶ್ ಅವರ ಪತ್ನಿ ಇಂದಿರಾ ಲಂಕೇಶ್ ಅವರ ನಿಧನದ ಸುದ್ದಿ ಕೇಳಿ ದು:ಖವಾಯಿತು. ಸಾಹಿತ್ಯ, ಮಾಧ್ಯಮ ಮತ್ತು ಸಿನೆಮಾ ಕ್ಷೇತ್ರಗಳಲ್ಲಿ ಲಂಕೇಶ್ ಅವರು ಮಾಡಿರುವ ಸಾಧನೆಯಲ್ಲಿ ಅವರಿಗೆ ಬೆಂಬಲವಾಗಿ ನಿಂತಿದ್ದ ಇಂದಿರಾ ಲಂಕೇಶ್ ಅವರ ಬಹುದೊಡ್ಡ ಕೊಡುಗೆ ಇದೆ ಎನ್ನುವುದು ನಿಸ್ಸಂಶಯ.

ಪ್ರಾರಂಭದ ದಿನಗಳಿಂದಲೂ ಲಂಕೇಶ್ ಅವರ ಕುಟುಂಬದ ಸ್ನೇಹವಲಯದಲ್ಲಿದ್ದ ನನಗೆ ಇಂದಿರಾ ಲಂಕೇಶ್ ಮತ್ತು ಅವರ ಮಕ್ಕಳು ಆತ್ಮೀಯರು. ಸ್ವತ: ಬರವಣಿಗೆಯನ್ನೂ ಮಾಡುತ್ತಿದ್ದ ಇಂದಿರಾ ಲಂಕೇಶ್, ಪುಸ್ತಕ ಪ್ರಕಟಣೆಯ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದರು. ಕೆಲವು ವರ್ಷಗಳ ಹಿಂದೆಯμÉ್ಟ ನಡೆದ ಗೌರಿ ಲಂಕೇಶ್ ಹತ್ಯೆಯ ನಂತರ ಆಘಾತಕ್ಕೀಡಾಗಿದ್ದ ಇಂದಿರಾ ಅವರು ಪೂರ್ಣವಾಗಿ ಚೇತರಿಸಿಕೊಂಡಿರಲಿಲ್ಲ.ಇಂದಿರಾ ಲಂಕೇಶ್ ಕುಟುಂಬದ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸುತ್ತೇನೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಲಂಕೇಶ್ ಅವರು ಲಂಕೇಶ್ ಪತ್ರಿಕೆಯನ್ನು ನಡೆಸುತ್ತಿದ್ದರೆ, ಇಂದಿರಾ ಲಂಕೇಶ್ ಅವರು ಬಸವನಗುಡಿಯಲ್ಲಿ ಬಟ್ಟೆ ಅಂಗಡಿಯನ್ನು ನಡೆಸುತ್ತಿದ್ದರು, ಲಂಕೇಶ್ ನಿಧನ ಹೊಂದಿದ ಮೇಲೆ ಲಂಕೇಶರ ಮೇಲೆ ‘ಹುಳಿಮಾವು’ ಎಂಬ ಪುಸ್ತಕವನ್ನು ಹೊರ ತಂದಿದ್ದರು.

ಮೈತ್ರಿನ್ಯೂಸ್ ಪತ್ರಿಕಾ ಬಳಗ ಸಂತಾಪ:

ಇಂದಿರಾ ಲಂಕೇಶ್ ಅವರ ನಿಧನಕ್ಕೆ ಮೈತ್ರಿನ್ಯೂಸ್ ಬಳಗದ ಕಾಡಶೆಟ್ಟಿಹಳ್ಳಿ ಸತೀಶ್, ಉಮಾಪತಿ.ಸಿ.ಕೆ., ಡಾ|| ಬಸವರಾಜು, ವೈ.ಕೆ.ಬಾಲಕೃಷ್ಣಪ್ಪ, ಕೆ.ದೊರೈರಾಜ್, ಸಂಪಾದಕರಾದ ವೆಂಕಟಾಚಲ.ಹೆಚ್.ವಿ., ಕೈಗಾರಿಕೋದ್ಯಮಿ ಡಿ.ಟಿ.ವೆಂಕಟೇಶ್. ಕಲೇಸಂ ನ ಮಾಜಿ ಅಧಯಕ್ಷರಾದ ಮಲ್ಲಿಕಾ ಬಸವರಾಜು, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ಹೆಚ್.ಕೆಂಚಮಾರಯ್ಯ, ಪಿ.ಎನ್.ರವೀಂದ್ರ ಪಂಚನಹಳ್ಳಿ, ಸುನಂದಮ್ಮ, ಸುಗುಣದೇವಿ, ಬಾ.ಹ.ರಮಾಕುಮಾರಿ, ಶೈಲಾ ನಾಗರಾಜು, ರಾಘವೇಂದ್ರ.ಕೆ.ಎಸ್., ಮೋಹನಕುಮಾರ್ ಲಕ್ಕೇನಹಳ್ಳಿ, ಸಲೀಂಪಾಷ, ಡ್ಯಾಗೇರಹಳ್ಳಿ ವಿರೂಪಾಕ್ಷ, ಚನ್ನಂಜಪ್ಪ ಕಲ್ಮನೆ, ಪಲ್ಲವಿ.ಟಿ.ಎಸ್. ಸೇರಿದಂತೆ ಅನೇಕ ಸಾಹಿತಿಗಳು, ಪ್ರಗತಿಪರರು, ತೀವ್ರ ಸಂತಾಪ ಸೂಚಿಸಿ, ಇಂದಿರಾ ಲಂಕೇಶ್ ಅವರ ನಿಧನದಿಂದ ಒಂದು ಸಾಂಸ್ಕøತಿಕ ಕೊಂಡಿ ಕಳಚಿದಂತಾಗಿದೆ ಎಂದು ದುಃಖ ವ್ಯಕ್ತ ಪಡಿಸಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸಿದ್ದಾರೆ.

Leave a Reply

Your email address will not be published. Required fields are marked *