ತುಮಕೂರು : ಹಿರೇಹಳ್ಳಿಯ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ) ವತಿಯಿಂದ ಹಲಸಿನ ಹಣ್ಣಿನ ನೇರ ಮಾರಾಟದ ವಿಶೇಷ ಕಾರ್ಯಕ್ರಮವನ್ನು ಕ್ಯಾತಸಂದ್ರ ಜೆಎಎಸ್ ಟೋಲ್ ಪ್ಲಾಜಾದಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತೋಟಗಾರಿಕೆ ಉಪನಿರ್ದೇಶಕಿ ಶಾರದಮ್ಮ ಅವರು, ಹಲಸಿನ ಹಣ್ಣುಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಜಿಲ್ಲೆಯ ರೈತರಿಗೆ ವೇದಿಕೆಯನ್ನು ಒದಗಿಸಲಾಗಿದೆ. ಮಧ್ಯವರ್ತಿಗಳನ್ನು ತಪ್ಪಿಸಿ ಮತ್ತು ರೈತರ ಆದಾಯವನ್ನು ಹೆಚ್ಚಿಸಲು ಈ ಕಾರ್ಯಕ್ರಮ ಪ್ರಯೋಜನಕಾರಿಯಾಗಿದೆ. ಹಲಸಿನ ಉತ್ಪನ್ನಗಳನ್ನು ತ್ವರಿತವಾಗಿ ಮತ್ತು ನ್ಯಾಯಯುತ ಬೆಲೆಯಲ್ಲಿ ಮಾರಾಟ ಮಾಡಲು ಹಾಗೂ ಸ್ಥಳೀಯ ರೈತರನ್ನು ಸಬಲಗೊಳಿಸುವಲ್ಲಿ ಇಂತಹ ಕಾರ್ಯಕ್ರಮಗಳಿಂದ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕೆವಿಕೆ ಹಿರೇಹಳ್ಳಿಯ ಮುಖ್ಯಸ್ಥ ಡಾ.ಎನ್.ಲೋಗಾನಂದನ್ ಮಾತನಾಡಿ, ಈ ಕಾರ್ಯಕ್ರಮವು ICAR-KVK ಹಿರೇಹಳ್ಳಿ ಮತ್ತು IIHR ಪ್ರಾಯೋಗಿಕ ಫಾರ್ಮ್, ಹಿರೇಹಳ್ಳಿಯ ಪ್ರಯತ್ನದ ಭಾಗವಾಗಿದೆ. ಇದು ರೈತರ ಲಾಭದಾಯಕತೆಯನ್ನು ಹೆಚ್ಚಿಸಲು ಮತ್ತು ಅವರ ಜೀವನೋಪಾಯದ ಸುಸ್ಥಿರತೆಯನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. ಹಲಸು ಉತ್ಪಾದಕರಿಗೆ ಪ್ರಯೋಜನವನ್ನು ನೀಡುವುದಲ್ಲದೆ ಸ್ಥಳೀಯವಾಗಿ ಬೆಳೆದ ಹಲಸಿನ ಹಣ್ಣಿನ ಸೇವನೆಯನ್ನು ಉತ್ತೇಜಿಸಲಾಯಿತು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಳ್ಳಿ ಸಿರಿ ಸ್ತ್ರೀಶಕ್ತಿ ಗುಂಪಿಗೆ ಸೇರಿದ ತಂಡದ ಮಂಜಮ್ಮ ಹಾಗೂ ತಂಡದವರು ಮೌಲ್ಯವರ್ಧನೆ ಪದಾರ್ಥಗಳಾದ ಜಾಕ್ ಫ್ರೂಟ್ ಕಬಾಬ್, ಜಾಕ್ ಫ್ರೂಟ್ ರೋಟಿ, ಜಾಕ್ ಫ್ರೂಟ್ ಹಲ್ವಾ ಮತ್ತು ಜಾಕ್ ಫ್ರೂಟ್ ಬಜ್ಜಿ ತಯಾರಿಸಿ ಮಾರಾಟ ಮಾಡಿದರು.
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ (ಐಐಎಚ್ಆರ್) ಪ್ರಧಾನ ವಿಜ್ಞಾನಿ ಡಾ.ಜಿ.ಕರುಣಾಕರನ್, ನರಸಿಂಹಮೂರ್ತಿ, ಸುರೇಶ್, ಮಧು, ಲೋಕೇಶ್, ಕುಮಾರಯ್ಯ ಸೇರಿದಂತೆ ಸ್ಥಳೀಯ ರೈತರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಫಲಿತಾಂಶದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಎಲ್ಲಾ ವಿಜ್ಞಾನಿಗಳು ಭಾಗವಹಿಸಿದ್ದರು