ಬುಗುಡನಹಳ್ಳಿ ಕೆರೆಗೆ ಮುರಳೀಧರ ಹಾಲಪ್ಪ ಭೇಟಿ-ನೀರು ಸರಬರಾಜುಗೆ ಮನವಿ

ತುಮಕೂರು: ಬುಗುಡನಹಳ್ಳಿ ಕೆರೆಯಲ್ಲಿ ತುಮಕೂರು ಮಹಾನಗರ ಪಾಲಿಕೆಯ ವಾರ್ಡ್ ಗಳಿಗೆ ಕುಡಿಯುವ ನೀರು  ಸರಬರಾಜು ಮಾಡಲಾಗುತ್ತಿದ್ದು, ಸದ್ಯಕ್ಕೆ ನೀರು ಸರಬರಾಜು ಮಾಡುವ ಪಂಪ್ ಸೆಟ್ ದುರಸ್ತಿಯಾಗಿದೆ. ಕೂಡಲೇ ಅಧಿಕಾರಿಗಳು ದುರಸ್ತಿಯಾಗಿರುವ ಪಂಪ್ ಸೆಟ್ ಸರಿಪಡಿಸಿ ಮಹಾನಗರ ಪಾಲಿಕೆಯ ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜು ಮಾಡುವಂತೆ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಮನವಿ ಮಾಡಿದ್ದಾರೆ.

ಇಂದು ತುಮಕೂರು ಗ್ರಾಮಾಂತರದ ಬುಗುಡನಹಳ್ಳಿ ಜಲ ಸಂಗ್ರಹ ( ಕೆರೆ)ಗೆ ಭೇಟಿ ನೀಡಿ‌, ಅಲ್ಲಿನ ಸಮಸ್ಯೆ ಹಾಗೂ ದುರಸ್ತಿಯಾಗಿರುವ ಪಂಪ್ ಸೆಟ್ ಗಳ ಬಗ್ಗೆ ಮಾಹಿತಿ ಪಡೆದು  ನಂತರ ಮಾತನಾಡಿದರು.

ತುಮಕೂರು ಮಹಾನಗರ ಪಾಲಿಯ ಎಲ್ಲಾ ವಾರ್ಡ್ ಗಳಿಗೆ ಬುಗುಡನಹಳ್ಳಿ ಕೆರೆಯಿಂದ ಹೇಮಾವತಿ ನೀರನ್ನು ಶುದ್ಧಿಕರಿಸಿ ಕುಡಿಯುವ ನೀರನ್ನಾಗಿ ಪರಿವರ್ತಿಸಿ ಸಾರ್ವಜನಿಕರು ಕುಡಿಯಲು ಸರಬರಾಜು ಮಾಡಲಾಗುತ್ತದೆ. ಆದರೆ ಇಲ್ಲಿನ ತಾಂತ್ರಿಕ ಸಮಸ್ಯೆ ಮತ್ತು ಎರಡು ಪಂಪ್ ಸೆಟ್ ದುರಸ್ತಿಯಾದ ಕಾರಣ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜಾಗುತ್ತಿಲ್ಲ. ಇಲ್ಲಿನ ಸಮಸ್ಯೆಯನ್ನು ಅಧಿಕಾರಿಗಳು ಪರಿಶೀಲಿಸದಿದ್ದರೆ ಮುಂದಿನ ಎರಡು ದಿನದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವುದು ಎಂದು ಹೇಳಿದರು.

ಇಲ್ಲಿನ ಸಮಸ್ಯೆ ತಿಳಿದ ತಕ್ಷಣ ಕಾರ್ಯಕರ್ತರೊಂದಿಗೆ ಭೇಟಿ ನೀಡಿ, ಇಲ್ಲಿನ‌ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಬಳಿಕ ಅಧಿಕಾರಿಗಳು ಇಲ್ಲಿನ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಕೂಡಲೇ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಸದ್ಯದಲ್ಲೇ ಸಮಸ್ಯೆ ಸರಿಪಡಿಸಿ ದುರಸ್ತಿಯಾಗಿರುವ ಪಂಪ್ ಸೆಟ್ ಸರಿಪಡಿಸಿ ನೀರು ಸರಬರಾಜು ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ತುಮಕೂರು ವ್ಯಾಪ್ತಿಯಲ್ಲಿರುವ 26 ಕೆರೆಗಳಿಗೆ ಇಂಟರ್ ಲಿಂಕಿಂಗ್ ಆಗಬೇಕಿದೆ. ಹೇಮಾವತಿಯಿಂದ ಜಾರಿಯಾಗಿರುವ 1.32 ಟಿಎಂಸಿ ನೀರನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಂಡು ದಿನದ 24 ಗಂಟೆಯೂ ಪರಿಶುದ್ಧವಾದ ನೀರು ಸರಬರಾಜು ಮಾಡದರೇ 3 ಲಕ್ಷ ಜನಸಂಖ್ಯೆವುಳ್ಳ ತುಮಕೂರು ನಗರ ಸ್ಮಾರ್ಟ್ ಸಿಟಿ ಆಗುವುದಕ್ಕೆ ಧಾಪುಗಾಲಿಡುತ್ತಿದೆ. ಹಾಗೆಯೇ ಕೈಗಾರಿಕಾ ಪ್ರದೇಶಗಳಾದ ವಸಂತನರಸಾಪುರ, ಅಂತರಸನಹಳ್ಳಿ, ಸತ್ಯಮಂಗಲ,ಹಿರೇಹಳ್ಳಿ ಕೈಗಾರಿಕಾ ಪ್ರದೇಶಗಳಿಗೆ ವ್ಯವಸ್ಥಿತವಾದ ನೀರಿನ ಅನುಕೂಲತೆ ಮಾಡಿಕೊಡಬೇಕು, ಇಲ್ಲಿನ ಕೈಗಾರಿಕಾ ಪ್ರದೇಶಗಳು ಅಭಿವೃದ್ಧಿಯಾದರೆ ಅಂತರಾಷ್ಟ್ರೀಯ ಮಟ್ಟದ ಕೈಗಾರಿಕೆಗಳು ಬಂದು, ಇಲ್ಲಿನ ಕಾರ್ಮಿಕರಿಗೆ ಕೆಲಸ ಸಿಗುತ್ತದೆ ಎಂದರು.

ರಾಜ್ಯದಲ್ಲಿರುವ ಕಾಂಗ್ರೆಸ್ ಪಕ್ಷ ಜನರ ಪರವಾಗಿ ಕೆಲಸ ಮಾಡುತ್ತಿದೆ. ಹಾಗಾಗಿ ತುಮಕೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಸರಕಾರ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದು ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದರು.

ಟೂಡಾ ಮಾಜಿ ಅಧ್ಯಕ್ಷ ಸಿದ್ದಲಿಂಗೇಗೌಡ ಮಾತನಾಡಿ, ತುಮಕೂರು ಮಹಾನಗರ ಪಾಲಿಕೆಯ ಜನರು ಕುಡಿಯುವ ನೀರು ಸರಬರಾಜು ಮಾಡುತ್ತಿರುವ ಬುಗುಡನಹಳ್ಳಿ ಕೆರೆಯ ಶುದ್ಧೀಕರಣ ಘಟಕದಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಇಲ್ಲಿ ಸ್ವಚ್ಛತೆ ಇಲ್ಲದಿರುವುದನ್ನು ಪಾಲಿಕೆಯ ಜನರು ನೋಡಿದರೆ ಖಂಡಿತವಾಗಿಯೂ ನೀರು ಸೇವನೆ ಮಾಡುವುದಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಶುದ್ಧಿಕರಣದಲ್ಲಿ ಸ್ವಚ್ಛತೆ ಕೈಗೊಂಡು ಶುದ್ಧವಾದ ನೀರನ್ನು ನಾಗರೀಕರಿಗೆ ನೀಡಬೇಕು ಎಂದು ತಿಳಿಸಿದರು.

ಕೆಪಿಸಿಸಿ ಒಬಿಸಿ ಘಟಕದ ರಾಜ್ಯ ಉಪಾಧ್ಯಕ್ಷ ರೇವಣಸಿದ್ದಯ್ಯ ಮಾತನಾಡಿ, ರಾಜಧಾನಿಗೆ ತುಂಬಾ ಹತ್ತಿರವಿರುವ ತುಮಕೂರು ಮಹಾನಗರ ಪಾಲಿಕೆ ವೇಗವಾಗಿ ಬೆಳೆಯುತ್ತಿದೆ, ಜನಸಂಖ್ಯೆಯು ವೇಗಮಿತಿಯಲ್ಲಿ ಬೆಳೆಯುತ್ತಿದೆ. ಅದ್ದರಿಂದ ಮಹಾನಗರ ಪಾಲಿಕೆಯ ಆಡಳಿತ ನಗರದ ಜನರಿಗೆ ಎದುರಾಗಿರುವ ನೀರಿನ‌ ಭವಣೆಯನ್ನು ನಿವಾರಿಸಬೇಕಿದೆ. ಜೊತೆಗೆ ಇಲ್ಲಿ ಕೆಟ್ಟು ನಿಂತಿರುವ ಪಂಪ್ ಸೆಟ್ ಗಳನ್ನು ದುರಸ್ತಿ ಮಾಡಿ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಬೇಕಿದೆ. ನಗರದ ಜನತೆಗೆ ನೀರಿನ‌ಸಮಸ್ಯೆ ಎದುರಾಗುವುದಕ್ಕಿಂತ ಮುಂಚಿತವಾಗಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ವಾಲೆ ಚಂದ್ರಯ್ಯ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹನುಮಂತಯ್ಯ, ಪಾಲಿಕೆ ಸದಸ್ಯ ಮಹಮದ್ ಪೀರ್, ಮಹೇಶ್, ಸಂಜೀವ್ ಕುಮಾರ್, ತರುಣೇಶ್, ಆಧೀಲ್ ಖಾನ್, ಜೈನ್ ಖಾನ್, ಗಿರೀಶ್, ಜೈನ್ ಷರೀಪ್, ಸುಕನ್ಯ, ಪ್ರೇಮಾ ಮುಂತಾದವರು ಇದ್ದರು.

ಬಾಕ್ಸ್: ಪಂಪ್ ಸೆಟ್ ಕೈ ಕೊಟ್ಟ ಪರಿಣಾಮ ಒಂದು ವಾರದಿಂದ ಮಹಾನಗರ ಪಾಲಿಕೆಯ ವ್ಯಾಪ್ತಿಯ ಸಾರ್ವಜನಿಕರಿಗೆ ಕುಡಿಯಲು ಸರಬರಾಜು ಆಗಿಲ್ಲದ ಕಾರಣ, ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಕಾರ್ಯಕರ್ತರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *