ತುಮಕೂರು : ಎಡಗೈ ಸಮುದಾಯದ ಹಿರಿಯ ರಾಜಕಾರಣಿಯಾಗಿರುವ ಸಚಿವ ಕೆ.ಹೆಚ್. ಮುನಿಯಪ್ಪನವರಿಗೆ ಬಲಗೈ ಸಮುದಾಯಕ್ಕೆ ನೀಡಿರುವಂತೆ ಉಪಮುಖ್ಯಮಂತ್ರಿ ಸ್ಥಾನವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ನೀಡದಿದ್ದರೆ ಇದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಅನುಭವಿಸಬೇಕಾಗುತ್ತದೆ ಎಂದು ರಾಜ್ಯ ಒಳಮೀಸಲಾತಿ ಹೋರಾಟ ಸಮಿತಿ ಕಾಂಗ್ರೆಸ್ ಹೈಕಮಾಂಡ್ ಮತ್ತು ಮುಖ್ಯಮಂತ್ರಿಗೆ ಎಚ್ಚರಿಸಿದರು.
ಅವರಿಂದು ಪತ್ರಿಕಾ ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ರವರು ನೂತನವಾಗಿ ಮುಖ್ಯಮಂತ್ರಿಯಾಗಿದ್ದು, ಸಂವಿಧಾನದ ಆಶಯದಂತೆ ರಾಜಕೀಯ ಪ್ರಜಾಪ್ರಭುತ್ವದಲ್ಲಿ ಎಲ್ಲಾ ಶೋಷಿತ ಸಮುದಾಯಗಳಿಗೆ ಸಮಾನವಾದ ರಾಜಕೀಯ ಪ್ರಾತಿನಿಧ್ಯ ಸಿಗಬೇಕು. ಅದರಂತೆ ಪರಿಶಿಷ್ಟ ಜಾತಿಯಲ್ಲಿ ಬಹುಸಂಖ್ಯಾತ ಮಾದಿಗ -ಸಮುದಾಯಗಳಿದ್ದು, ಮುಖ್ಯಮಂತ್ರಿಗಳ ಸಚಿವ ಸಂಪುಟದಲ್ಲಿ ಈ ಸಮುದಾಯಕ್ಕೆ ಹೆಚ್ಚಿನ ಸ್ಥಾನಗಳನ್ನು ನೀಡಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ಒಳಮೀಸಲಾತಿಯನ್ನು ಬಲಗೈ ಮತ್ತು ಎಡಗೈ ಸಮುದಾಯಗಳಿಗೆ ಸಮನಾವಾಗಿ, ಸಾಮಾಜಿಕ ನ್ಯಾಯ ಕಾಪಾಡಲು ಸಮನಾಗಿ ಹಂಚಿದ್ದು, ಅದೇ ರೀತಿ ಸಚಿವ ಸ್ಥಾನದಲ್ಲಿಯೂ 40ಲಕ್ಷ ಜನ ಸಂಖ್ಯೆ ಇರುವ ಮಾದಿಗ ಸಮುದಾಯಕ್ಕೂ ಉಪಮುಖ್ಯಮಂತ್ರಿ ಸ್ಥಾನ ಮತ್ತು ಎರಡು ಸಚಿವ ಸ್ಥಾನಗಳನ್ನು ನೀಡಬೇಕು, ಇಲ್ಲದಿದ್ದರೆ ಒಳಮೀಸಲಾತಿ ಅನುಷ್ಠಾನವನ್ನು ಬರೀ ಮಾತಿನಲ್ಲಿ ಹೇಳುವ ಬದನೆ ಕಾಯಿಯಂತಾಗುತ್ತದೆ. ಅಲ್ಲದೆ ಹಿರಿಯ ರಾಜಕಾರಣಿಯಾದ ಕೆ.ಹೆಚ್. ಮುನಿಯಪ್ಪನವರಿಗೆ ಆಹಾರ ಖಾತೆ ಸಚಿವ ಸ್ಥಾನದಿಂದ ಬಿಡುಗಡೆ ಮಾಡಿ ಸಮಾಜ ಕಲ್ಯಾಣ ಇಲಾಖೆಯ ಖಾತೆ ನೀಡುವಂತೆ ಒತ್ತಾಯಿಸಿದರು.
ಮಾದಿಗ ಸಮುದಾಯಕ್ಕೆ ಶಕ್ತಿ ಇರುವಂತಹ ಖಾತೆಗಳನ್ನು ನೀಡಬೇಕು, ಹಾಗೇನಾದರೂ ನೀಡದಿದ್ದರೆ ಈ ಸರ್ಕಾರದ ಮಾದಿಗರ ಬಗ್ಗೆ ಹಿಡನ್ ಅಜೆಂಡ ಏನು ಎಂಬುದನ್ನು ತಿಳಿಸಬೇಕೆಂದು ಒತ್ತಾಯಿಸಿದರು.
ಒಳಮೀಸಲಾತಿ ವರದಿ ನೀಡಿದ್ದ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ, ಮಾಧುಸ್ವಾಮಿ ಒಳಮೀಸಲಾತಿ ವರದಿ, ನ್ಯಾಯಮೂರ್ತಿ ನಾಮೋಹನ್ ದಾಸ್ ಅವರ ವರದಿಯನ್ನು ತಿರಸ್ಕರಿಸಿ ಯಾರೋ ಬಲಾಢ್ಯರ ಒತ್ತಡಕ್ಕೆ ಮಣಿದು ಮೀಸಲಾತಿಯನ್ನು ಮೂರು ಗುಂಪುಗಳಾಗಿ ಮಾಡುವುದಕ್ಕೆ ಯಾಕೆ ಆಯೋಗಗಳನ್ನು ಮಾಡಬೇಕಿತ್ತು ಎಂದು ಪ್ರಶ್ನಿಸಿದರು.
ದಲಿತ ಬಲಾಢ್ಯ ಸಮುದಾಯದ ಸಚಿವರುಗಳೇ ಒಳಮೀಸಲಾತಿಯನ್ನು ಹಂಚಿಕೆ ಮಾಡಿರುವುದರಿಂದ ಎಡಗೈ ಮತ್ತು ಅಲೆಮಾರಿ ಸಮುದಾಯಗಳಿಗೆ ಎಂದೆಂದೂ ಸರಿ ಪಡಿಸಲು ಸಾಧ್ಯವಾಗದಷ್ಟು ಒಳಮೀಸಲಾತಿಯಲ್ಲಿ ಅನ್ಯಾಯವಾಗಿದೆ, ಯಾರು ಒಳಮೀಸಲಾತಿಯ ಸಾಮಾಜಿಕ ನ್ಯಾಯದ ಪರವಾಗಿ ಗಟ್ಟಿಯಾಗಿ ನಿಲ್ಲಬೇಕಿತ್ತೋ ಅವರೇ ಅವರ ಸಮುದಾಯಗಳಿಗೆ ಅನುಕೂಲವಾಗುವಂತೆ ಒಳಮೀಸಲಾತಿಯನ್ನು ಹಂಚಿಕೆ ಮಾಡಿಕೊಂಡಿರುವುದು ಅಂಬೇಡ್ಕರ್ ಆಶಯಕ್ಕೆ ವಿರುದ್ಧವಾದದ್ದು, ಮೊದಲು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ, ರಾಜಕೀಯವಾಗಿ ಮೀಸಲಾತಿಯೇ ಸಿಗದಂತಹ ಸಮುದಾಯಗಳಿಗೆ ಮೊದಲ ಆಧ್ಯತೆ ನೀಡದೆ, ಹೆಚ್ಚು ಮೀಸಲಾತಿ ಪಡೆದವರೇ ಒಳಮೀಸಲಾತಿಯಲ್ಲೂ ಹೆಚ್ಚು ಪಾಲು ಪಡೆದಿರುವುದು ಸಂವಿಧಾನದ ಸಮಾನತೆಯ ಆಶಯವನ್ನು ಕಾಂಗ್ರೆಸ್ ಸರ್ಕಾರ ಗಾಳಿಗೆ ತೂರಿ ದ್ರೋಹವೆಸಗಿದೆ ಎಂದು ಆರೋಪಿಸಿದರು.
ಈಗಲಾದರೂ ಸಚಿವ ಸಂಪುಟದಲ್ಲಿ ಎಡಗೈ ಸಮುದಾಯಕ್ಕೆ ಬಲಗೈ ಸಮುದಾಯದಷ್ಟೇ ಸಮಾನ ಅವಕಾಶ ನೀಡದಿದ್ದರೆ ಇದರ ಪರಿಣಾಮ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಎದುರಿಸಬೇಕಾಗುತ್ತದೆ ಎಂದು ಒಳಮೀಸಲಾತಿ ಹೋರಾಟಗಾರರು ಎಚ್ಚರಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಅತ್ಯಂತ ಹಿರಿಯ ರಾಜಕಾರಣಿ, 7 ಬಾರಿ ಸಂಸದರು ಹಾಗೂ 2 ಬಾರಿ ಕೇಂದ್ರ ಸಚಿವರಾಗಿದ್ದ ಕೆ.ಹೆಚ್. ಮುನಿಯಪ್ಪರವರಿಗೆ ಉಪಮುಖ್ಯಮಂತ್ರಿ ಮಾಡಿ ಸಮಾಜ ಕಲ್ಯಾಣ ಇಲಾಖೆಯ ಖಾತೆಯನ್ನು ನೀಡಬೇಕು, ಪರಿಶಿಷ್ಟರಲ್ಲೇ ಬಹುಸಂಖ್ಯಾತರಾದ ಮಾದಿಗ ಸಮುದಾಯದವರಾದ ಆರ್.ಬಿ.ತಿಮ್ಮಾಪುರರವರನ್ನೊಳಗೊಂಡಂತೆ ಒಟ್ಟು ಮೂವರಿಗೆ ಮಂತ್ರಿಸ್ಥಾನ ಕೊಡಬೇಕು ಎಂದು ಒಳಮೀಸಲಾತಿ ಸಮಿತಿ ಒತ್ತಾಯಿಸಿತು.
ತಾತ್ವಿಕವಾಗಿ ಜಾರಿಯಾದ ಒಳ ಮೀಸಲಾತಿಯನ್ನು ಬರೀ ಶಿಕ್ಷಣ, ಉದ್ಯೋಗಕ್ಕೆ ಸೀಮಿತ ಮಾಡದೆ ಎಲ್ಲೆಲ್ಲಿ ಮೀಸಲಾತಿ ಜಾರಿಯಲ್ಲಿದೆಯೋ ಅಲ್ಲಲ್ಲಿ ಒಳಮೀಸಲಾತಿಯನ್ನು ಕಡ್ಡಾಯವಾಗಿ ಜಾರಿ ಮಾಡಬೇಕು ಅಲ್ಲದೆ 59 ಅಲೆಮಾರಿ ಸಮುದಾಯದವರ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ಮಂಡಳಿಯನ್ನು ಸ್ಥಾಪಿಸಿ. ಈ ಸಮುದಾಯದ ಮುಖಂಡರನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಒತ್ತಾಯಿಸಿದರು.
ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿರುವ ಮಾದಿಗ ಸಮುದಾಯದ ಮುಖಂಡರಿಗೆ ನಿಗಮ ಮಂಡಳಿ ಪ್ರಾದಿಕಾರ ಇನ್ನಿತರೆ ಅಧಿಕಾರ ಅವಕಾಶ ಕೊಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಒಳಮೀಸಲಾತಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ಕಾರ್ಯಾಧ್ಯಕ್ಷರಾದ ಬಸವರಾಜ್ ಕೌತಾಳ್, ಕರಿಯಪ್ಪ ಗುಡಿಮನಿ, ದ.ಸಂ.ಸ.(ಬಿ.ಕೃಷ್ಣಪ್ಪ ಸ್ಥಾಪಿತ) ರಾಜ್ಯಾಧ್ಯಕ್ಷ ಎಂ.ಗುರುಮೂರ್ತಿ ಶಿವಮೊಗ್ಗ, ಮಾದಿಗ ದಂಡೋರದ ರಾಜ್ಯಾಧ್ಯಕ್ಷ ಪಾವಗಡ ಶ್ರೀರಾಮ್, ಒಳಮೀಸಲಾತಿ ಹೋರಾಟ ಸಮಿತಿಯ ಮುಖಂಡರಾದ ನರಸೀಯಪ್ಪ, ವೈ.ಕೆ.ಬಾಲಕೃಷ್ಣಪ್ಪ, ಬಿ.ಹೆಚ್,ಗಂಗಾಧರ್, ಅರೆ ಅಲೆಮಾರಿ ರಾಜ್ಯಾಧ್ಕಕ್ಷ ಚಾವಡಿ ಲೋಕೇಶ್, ದ.ಸಂ.ಸ. ರಾಜ್ಯಾಧ್ಯಕ್ಷ ಜೀವನಹಳ್ಳಿ ನಾರಾಯಣ್ ಮುಂತಾದವರಿದ್ದರು.