ತುಮಕೂರು : ಡಾ.ಬರಗೂರು ರಾಮಚಂದ್ರಪ್ಪ ಪ್ರತಿಷ್ಠಾನ ಕೊಡಮಾಡುವ ರಾಜಲಕ್ಷ್ಮಿ ಬರಗೂರು ಪ್ರಶಸ್ತಿಗೆ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಮತ್ತು ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ದೊಡ್ಡಬಾಣಗೆರೆ ಕಾಡುಗೊಲ್ಲರ ಹಟ್ಟಿಯ ಜನಪದ ಹಾಡುಗಾರ್ತಿ ಮಾರಕ್ಕ ಸಣ್ಣಚಿತ್ತಯ್ಯ ಅವರು ಆಯ್ಕೆಯಾಗಿದ್ದಾರೆ.
ಬಾ.ಹ,ರಮಾಕುಮಾರಿಯವರ ಪರಿಚಯ :

ಲೇಖಕಿಯಾಗಿ ಹಲವು ಕೃತಿಗಳನ್ನು ಬರೆದಿರುವ ಬಾ.ಹ.ರಮಾಕುಮಾರಿ ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಜಿಲ್ಲಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.
ತುಮಕೂರಿನಲ್ಲಿ ಜಿಲ್ಲಾ ಕನ್ನಡ ಭವನ ನಿರ್ಮಾಣಕ್ಕೆ ಸಾಕಷ್ಟು ಶ್ರಮಿಸಿದ್ದಾರೆ. ಪ್ರಸ್ತುತ ಜಿಲ್ಲಾ ನಿವೃತ್ತ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಬಾ.ಹ.ರಮಾಕುಮಾರಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅನಾವರಣ, ಕಳೆದು ಹೋಗಿದ್ದಾನೆ, ಅನಾಮಿಕ ಹಕ್ಕಿಯ ಸ್ವಗತ, ನಕ್ಕಾವು ಚುಕ್ಕಿ ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಧಗಧಗಿಸುವ ಆತ್ಮಗಳು, ಕನಸಿನಾಳದ ಕಣ್ಣು, ಮಹಿಳೆಯರ ಸ್ಥಾನಮಾನ ಮತ್ತು ಸಂಘಟನೆ ಲೇಖನ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ.
ಅಕ್ಕಮಹಾದೇವಿ, ಅಮ್ಮುಗೆ ರಾಯಮ್ಮ-ದೇವಯ್ಯ, ರಾಯಸದ ಮಂಚಣ್ಣ-ರಾಯಮ್ಮ ವ್ಯಕ್ತಿ ಚಿತ್ರಣಗಳು, ಹೀಗೊಂದು ಪ್ರೇಮ ಕಥೆ ಕಥಾ ಸಂಕಲವನ್ನು ಬರೆದಿದ್ದಾರೆ.
ಓದುವ ವಯಸ್ಸಿನಲ್ಲಿ ದುಡಿಮೆ ಯಾಕೆ, ದತ್ತು ತೆಗೆದುಕೊಳ್ಳುವುದು ಹೇಗೆ, ವೈದ್ಯಕೀಯ ಗರ್ಭಪಾತ, ರಂಗಾಪುರದ ಹುಡುಗರು, ಕೆಲಸ ಮಾಡುವ ಸ್ಥಳದಲ್ಲಿ ಲೈಂಗಿಕ ಕಿರುಕುಳ, ಜನಸಾಮಾನ್ಯರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ನವಸಾಕ್ಷರ ಸಾಹಿತ್ಯವನ್ನು ರಚಿಸಿದ್ದಾರೆ.
ಬಾಣಸಂದ್ರದ ಬೆಳ್ಳಿಕಿರಣ, ಸುವರ್ಣಸಿರಿ, ತುಮಕೂರು ಜಿಲ್ಲೆಯ ಸಾಹಿತಿಗಳ ಮಾಹಿತಿ ಕೋಶ ಸೇರಿದಂತೆ ಒಟ್ಟು 22 ಕೃತಿಗಳನ್ನು ಬರೆದಿದ್ದಾರೆ.
ಮಾರಕ್ಕ ಸಣ್ಣಚಿತ್ತಯ್ಯ ಪರಿಚಯ :

ಕುಂಟ ಈರಪ್ಪ ಮತ್ತು ದಂಪತಿ ಪುತ್ರಿಯಾದ ಮಾರಕ್ಕ ಅವರ ಹುಟ್ಟೂರು ಹೆಂಜೇರು. ಹೊಲ, ಗದ್ದೆ, ಕುಟ್ಟುವ, ಬೀಸುವ ಕೆಲಸಗಳಲ್ಲದೆ, ಮದುವೆ ಉತ್ಸವಗಳಲ್ಲಿ ಹಿರಿಯರು ಹಾಡುತ್ತಿದ್ದ ಹಾಡುಗಳಿಂದ ಪ್ರೇರೇಪಿತಗೊಂಡ ಮಾರಕ್ಕ ತಮ್ಮ ತಂಗಿಯರೊಂದಿಗೆ ಹೋಗಿ ಊರವರ ಮದುವೆಗಳಲ್ಲಿಯೂ ಸೋಬಾನೆ ಹಾಡುಗಳನ್ನು ಹಾಡಿದ್ದಾರೆ.
ಹೆಂಜೇರಪ್ಪ, ಕಾಟಯ್ಯ, ಜುಂಜಪ್ಪ, ಚಿತ್ತರಲಿಂಗ, ಗೌರಸಂದ್ರ ಮಾರಮ್ಮ ಮೊದಲಾದ ಕುಲದೇವತೆಗಳ ಮೇಲಿನ ಪದಗಳಲ್ಲದೆ ಇತರೆ ಬಿಡಿ ಹಾಡುಗಳು, ಗಾದೆ, ಒಗಟು ಮತ್ತು ಹಾಸ್ಯಕ್ಕೆ ಸಂಬಂಧಿಸಿದ ಹಾಡುಗಳನ್ನು ಹಾಡಬಲ್ಲವರಾಗಿದ್ದಾರೆ
72 ವರ್ಷ ವಯಸ್ಸಿನ ಮಾರಕ್ಕ ಅವರ ಹಾಡುಗಾರ್ತಿಯನ್ನು ಗುರುತಿಸಿ ಹಲವು ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವ ನೀಡಿವೆ.
ಕರ್ನಾಟಕ ಜಾನಪದ ಅಕಾಡೆಮಿಯು 2008ರ ಸಾಲಿನ ಕಲಾವಿದ ಪ್ರಶಸ್ತಿಯನ್ನು ನೀಡಿ ಮಾರಕ್ಕ ಅವರನ್ನು ಪುರಸ್ಕರಿಸಿದೆ.
ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಪ್ರತಿಷ್ಠಾನ ಮಾರ್ಚ್ 12ರಂದು ಬೆಂಗಳೂರಿನ ಸೆಂಟ್ರಲ್ ಕಾಲೇಜು ಎದುರಿನ ಸರ್ಕಾರಿ ಕಲಾ ಕಾಲೇಜು ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಾರಕ್ಕ ಅವರಿಗೆ ರಾಜಲಕ್ಷ್ಮಿ ಬರಗೂರು ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ, ಗೌರವಿಸಲಿದೆ ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ.ಎ.ವಿ.ಲಕ್ಷ್ಮೀನಾರಾಯಣ ತಿಳಿಸಿದ್ದಾರೆ.