ಜಾನಪದ ತಾಯಿ ಬಯಕೆಯಂತೆ ನಾಯಕರಾಗಲು ಯುವಕರಿಗೆ ಎಸ್.ಜಿ.ಎಸ್. ಕರೆ

ತುಮಕೂರು: ಆಚಾರಕ್ಕರಸಾಗು ನೀತಿಗೆ ಪ್ರಭುವಾಗು, ಮಾತಿನಲಿ ಚೂಡಾಮಣಿಯಾಗು ಕಂದಯ್ಯ, ಜ್ಯೋತಿಯೆ ಆಗು ಜಗಕ್ಕೆಲ್ಲ ಎಂದು ಹಾಡಿದ ಜಾನಪದ ತಾಯಿಯ ಬಯಕೆಯಂತೆ ನೀವೆಲ್ಲರೂ ಅತ್ಯುತ್ತಮ ನಾಯಕರಾಗಿ ರೂಪುಗೊಳ್ಳಿ ಎಂದು ಹಿರಿಯ ಕವಿ ಎಸ್.ಜಿ.ಸಿದ್ಧರಾಮಯ್ಯ ಅವರು ಯುವಕರಿಗೆ ಕರೆ ನೀಡಿದರು.

ನಗರದ ಶ್ರೀದೇವಿ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಕುರುಬರ ಸಂಘ ಹಾಗೂ ಶ್ರೀದೇವಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಾನುವಾರ ಆಯೋಜಿಸಿದ್ದ ನಾಯಕತ್ವ ಕಲೆ ಒಂದು ದಿನದ ಕಾರ್ಯಗಾರದ ಸಮಾರೋಪದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.

ನಾವು ಮಾಡುವ ಪ್ರತಿ ಕಾರ್ಯಗಳು ಆಚಾರವೇ, ಆಚಾರ ಎಂಬುದನ್ನು ಧಾರ್ಮಿಕ ಚೌಕಟ್ಟಿನಲ್ಲಿಯೂ ನೋಡಬಹುದು ಅದೇ ರೀತಿ ನಿಸರ್ಗಕ್ಕೂ ಒಂದು ಧರ್ಮವಿದೆ, ಮನಸ್ಸಿಗೂ ಮನೋಧರ್ಮ ಎಂಬುದಿದೆ. ಜೀವ ಜಗತ್ತಿನಲ್ಲಿ ಮನುಷ್ಯನಂತೆಯೆ ೮೪ ಕೋಟಿ ಜೀವರಾಶಿಗಳಿಗೂ ಪ್ರಕೃತಿಯ ಮೇಲೆ ಹಕ್ಕಿದೆ. ನಿಸರ್ಗ ಧರ್ಮನಿಷ್ಟ ನಡೆಯಲ್ಲಿ ಬದುಕುತ್ತಿದ್ದ ಜನಪದರ ನಡೆ, ಅಭಿಪ್ರಾಯ ಪರ ಧರ್ಮದ ನಡೆಯಾಗಿತ್ತು. ಜನಪದ ಗರತಿ ಹೇಳಿದ ಆಚಾರ ಧರ್ಮದ ನೆಲೆಗಟ್ಟಿನ ಆಚಾರವಲ್ಲ. ಮತ್ತೊಬ್ಬರನ್ನು ತನ್ನ ಆಚಾರ, ಮನೋ ನಿಗ್ರಹದ ಮೂಲಕ ಜಯಿಸುವ ನಾಯಕನಿಗಿರಬೇಕಾದ ಕಾರ್ಯತತ್ಪರತೆಯ ಆಚಾರ.

ನೀತಿಗೆ ಪ್ರಭುವಾಗು ಎಂದರೇ ಹೇಳುವುದೊಂದು ಮಾಡೊದೊಂದಲ್ಲ, ಹೇಳುವುದು ಮಾಡುವುದು ಒಂದೇ ಆಗಿರಬೇಕು ಅದು ನೀತಿ. ಸಮಾಜವೆಂಬ ಕೂಡಲ ಸಂಗಮದೇವ ಮೆಚ್ಚಿ ತಲೆದೂಗುವಂತೆ ಮಾತನಾಡಬೇಕು, ಆಮೂಲಕ ಜನ ಮೆಚ್ಚಿದ, ಜಗಮೆಚ್ಚುವಂತಹ ನಾಯಕರಾಗಿ ಎಂದರಲ್ಲದೆ ತಳ ಸಮುದಾಯಗಳು ಕೀಳರಿಮೆ ಬಿಟ್ಟು ಆತ್ಮ ಪ್ರತ್ಯಯ ರೂಢಿಸಿಕೊಳ್ಳಬೇಕು ಆಗ ಮುಂದುವರಿದ ಜನರು ಕೆಣಕಲು ಹಿಂದೇಟು ಹಾಕುತ್ತಾರೆ, ಈ ನಿಟ್ಟಿನಲ್ಲಿ ಅಂಬಿಗರ ಚೌಡಯ್ಯ ಹೇಳಿದ ಮಿತಿ, ಅಂಬೇಡ್ಕರ್ ಹೇಳಿದ ವ್ಯಾಪ್ತಿಯ ಅರಿವು ಇಂದಿನ ಯುವ ಜನರಿಗೆ ಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಿಬಿರದ ಆಯೋಜಕರಾದ ಡಾ.ಸಿ.ಎನ್.ಎನ್.ರಾಜು, ಕರ್ನಾಟಕ ಪ್ರದೇಶ ಕುರುಬರ ಸಂಘದ ಆಂತರಿಕ ಲೆಕ್ಕ ಪರಿಶೋಧಕ ಸಿ.ಪುಟ್ಟರಾಜು, ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಶ್ರೀದೇವಿ ಚ್ಯಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್, ಜಿಲ್ಲಾ ಕುರುಬರ ಸಂಘದ ಉಪಾಧ್ಯಕ್ಷ ಎಂ.ಪಿ.ಕುಮಾರಸ್ವಾಮಿ, ಕಾರ್ಯಕ್ರಮ ಸಂಘಟಕ ಹಾಗೂ ರಾಜ್ಯ ಪ್ರದೇಶ ಕುರುಬರ ಸಂಘದ ನಿರ್ದೇಶಕ ಟಿ.ಇ.ರಘುರಾಮ್, ಟ್ರೆöÊನರ್ ಮೇಘನಾ, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *