ಚುನಾವಣೆ ಘೋಷಣೆಗೂ ಮುನ್ನವೇ ಕುಕ್ಕರ್ ಹಂಚಿದ ಗುಬ್ಬಿ ಶಾಸಕರು

ಗುಬ್ಬಿ: ಗುಬ್ಬಿ ಕ್ಷೇತ್ರದಲ್ಲಿ ಅವಧಿಗಿಂತ ಮುಂಚೆಯೇ ಚುನಾವಣೆ ಕಾವು ರಂಗೇರುತ್ತಿದ್ದು, 4ಬಾರಿ ಶಾಸಕರಾಗಿ ಆಯ್ಕೆಯಾಗಿರುವ, ಜನಪ್ರಿಯ ಶಾಸಕರೂ ಎಂದೂ ಬಿಂಬಿಸಿಕೊಂಡಿರುವ ಎಸ್.ಆರ್.ಶ್ರೀನಿವಾಸ್ ಅವರು ಕ್ಷೇತ್ರದ ಜನತೆಗೆ ಕುಕ್ಕರ್ ಹಂಚಿದರೆನ್ನಲಾಗಿದ್ದು, ಶಾಸಕರ ಭಾವ ಚಿತ್ರವಿರುವ ಕುಕ್ಕರ್ ಬಾಕ್ಸ್ ತಾಲ್ಲೂಕಿನಾದ್ಯಂತ ವೈರಲ್ ಆಗಿದೆ.

ಕುಕ್ಕರ್ ಪಾಲಿಟಿಕ್ಸ್ ಕ್ಷೇತ್ರದಲ್ಲಿ ನಗೆ ಪಾಟಿಲಿಗೆ ಕಾರಣವಾಗಿದ್ದು, ಕೊರೊನಾ ಸಂದರ್ಭದಲ್ಲಿ ಮನೆಯಿಂದ ಹೊರ ಬರದೆ, ಬೂಟಾಟಿಕೆಗಾಗಿ ಮಾಸ್ಕ್ ಹಂಚಿದ ಶಾಸಕರು,ನಂತರ ಬಂದ ಕಾರ್ಮಿಕ ಇಲಾಖೆಯ ಸಾವಿರಾರು ಕಿಟ್‍ಗಳಿಗೆ ತಮ್ಮ ಪೋಟೋ ಕವರ್ ಹಾಕಿಸಿ ತಮ್ಮದೆಂಬಂತೆ ವಿತರಿಸಿ ಚಪ್ಪಾಳೆ ಗೀಟಿಸಿಕೊಂಡ ಶಾಸಕರು, ಈಗ ಕುಕ್ಕರ್ ಹಂಚುವ ಪ್ರಮೇಯವಾದರೂ ಏನು ಎಂಬುದು ನಗೆ ಪಾಟಿಲಿನ ಅಂಶವಾಗಿದೆ.

ಕೇವಲ ದೇವೇಗೌಡರ ಕುಟುಂಬವನ್ನು ಬೈಯ್ಯುತ್ತಾರೆ ಎಂಬ ಒಂದು ಕಾರಣದಿಂದ ಇಂಪ್ರೆಸ್ ಆಗಿರುವ ಸಿದ್ದರಾಮಯ್ಯನವರ ಮೂಲಕ ಎಸ್.ಆರ್.ಶ್ರೀನಿವಾಸ್‍ರವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆ ತರಲು ವಕಾಲತ್ತು ಮಾಡುತ್ತಿರುವ ಕೆ.ಎನ್.ರಾಜಣ್ಣನವರೇ ಹಾಗೂ ತಮ್ಮ ಸಂಬಂಧಿ ಎಂದು ಕಾಂಗ್ರೆಸ್ ಪಕ್ಷಕ್ಕೆ ಕರೆ ತರಲು ಮುಂದಾಗಿರುವ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರುಗಳು ಶಾಸಕರು ಕುಕ್ಕರ್ ಹಂಚಿ ರಾಜಕೀಯ ಮಾಡುತ್ತಿರುವುದನ್ನು ಒಮ್ಮೆ ನೋಡಿ ಎಂದು ಗುಬ್ಬಿ ಕ್ಷೇತ್ರದ ಜನ ಹೇಳುತ್ತಿದ್ದಾರೆ.
“ವಾಸಣ್ಣ ನೀನು ಈಗ ಸಾಕಣ್ಣ” ಎಂದು ಕ್ಷೇತ್ರದ ಜನರು ಕೂಗುತ್ತಿದ್ದು, ಇಂತಹ ಸಂದರ್ಭದಲ್ಲಿ ಕುಕ್ಕರ್ ಹಂಚುವ ಮೂಲಕ ಮುಖ್ಯ ವಾಹಿನಿಗೆ ಬರಲು ಪ್ರಯತ್ನ ನಡೆಸುತ್ತಿದ್ದಾರೆನ್ನಲಾಗುತ್ತಿದೆ.

ಕಾಂಗ್ರೆಸ್ ಮುಖಂಡರಾದ ಜಿ.ಎಸ್.ಪ್ರಸನ್ನಕುಮಾರ್ ಆರೋಪಿಸಿದಂತೆ ಬಿರಿಯಾನಿ, ಹಣ, ಹೆಂಡ, ಹಂಚಿ ವಾಮ ಮಾರ್ಗದ ಮೂಲಕ ರಾಜಕೀಯ ಮಾಡುತ್ತಿದ್ದಾರೆ ಎಂಬುದಕ್ಕೆ ಈಗ ಕುಕ್ಕರ್ ಹಂಚಲು ಮುಂದಾಗಿರುವುದು ಪುಷ್ಟಿ ನೀಡಿದೆ.

ಇನ್ನು ಮುಂದೆ ಗುಬ್ಬಿ ಮತದಾರ ಚುನಾವಣೆ ಬರುವ ವೇಳೆಗೆ ಏನೇನೂ ಸ್ವೀಕರಿಸಿ ಎಲ್ಲಿ ಆಣೆ ಪ್ರಮಾಣ ಮಾಡ ಬೇಕೋ ಆ ದೇವರೇ ಹೇಳಬೇಕು.

Leave a Reply

Your email address will not be published. Required fields are marked *