ತುಮಕೂರು : 2023ರ ವಿಧಾನಸಭಾ ಚುನಾವಣೆಯ ತುಮಕೂರು ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾನೇ ಎಂದು ಘಂಟಾಘೋಷವಾಗಿ ಸೊಗಡು ಶಿವಣ್ಣ ಹೇಳಿದರು.
ಅವರಿಂದು ಪತ್ರಿಕಾಗೋóಷ್ಠಿಯಲ್ಲಿ ಮಾತನಾಡಿ, ನಾನು 1975ರಿಂದ ಪಕ್ಷ ಕಟ್ಟಿಕೊಂಡು ಬಂದವನು, ನಾಲ್ಕು ಬಾರಿ ಗೆದ್ದು ಶಾಸಕ, ಸಚಿವನಾಗಿ ಕೆಲಸ ಮಾಡಿದ್ದೇನೆ, ನಾನು ಮಾಡಿದ ಅಭಿವೃದ್ಧಿ ಕೆಲಸಗಳೇ ನನಗೆ ಶ್ರೀರಕ್ಷೆ, ಪಕ್ಷದ ನಾಯಕರು, ತುಮಕೂರು ಜನತೆ ನನ್ನ ಪರವಾಗಿದ್ದಾರೆ, ಎಲ್ಲವನ್ನೂ ಪಕ್ಷ ಮತ್ತು ಜನತೆಯ ಮುಂದೆ ಇಡುತ್ತೇನೆ ಎಂದರು.
ಈ ಬಾರಿ ಯಾರು ಏನೇ ಹೇಳಿಕೊಂಡರೂ ನಾನು ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ, ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದ ಶಿವಣ್ಣನವರು, ನನ್ನ ಅಭಿಮಾನಿಗಳು, ಹಿತೈಶಿಗಳೇ ನನ್ನನ್ನು ಚುನಾವಣೆಗೆ ನಿಲ್ಲುವಂತೆ ಒತ್ತಾಯಿಸಿದ್ದು, ಈ ಹಿಂದಿನ ನಾಲ್ಕು ಬಾರಿಯ ಅವಧಿಯಲ್ಲಿನ ಶಾಂತಿ ಮಂತ್ರ ಮತ್ತು ಕಾಯಕ ಮಂತ್ರವೇ ನನಗೆ ಶ್ರೀರಕ್ಷೆ ಎಂದರು.
ಸಧ್ಯದಲ್ಲೇ ಎನ್.ಆರ್.ಕಾಲೋನಿಯಿಂದ ಜೋಳಿಗೆ ಹಿಡಿದು ಮತ ಭಿಕ್ಷೆಯನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದ ಅವರು, ನನ್ನ ಚುನಾವಣೆಯ ಎಲ್ಲಾ ಖರ್ಚು-ವೆಚ್ಚವನ್ನು ನನ್ನ ಬೆಂಬಲಿಗರೆ ಭರಿಸಲಿದ್ದಾರೆ, ಹಾಗೆಯೇ ಮತವನ್ನು ನೀಡಲಿದ್ದಾರೆ ಎಂದು ಹೇಳಿದರು.
ಚಿಕ್ಕನಾಯಕನಹಳ್ಳಿಯ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಕಾಂಗ್ರೆಸ್ ಸೇರ್ಪಡೆಗೊಂಡಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಕೆಲವರು ರಾಜಕೀಯ ಆಸೆ-ಅಕಾಂಕ್ಷೆಗಳನ್ನಿಟ್ಟುಕೊಂಡು ಪಕ್ಷಾಂತರಿಗಳಾಗುತ್ತಾರೆ, ಅವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ, ನನ್ನದು ಜನಸಂಘದ ರಕ್ತ, ಆದ್ದರಿಂದ ಯಾವ ಆಮಿಷಗಳಿಗೆ ಒಳಗಾಗಿ ಪಕ್ಷಾಂತರ ಮಾಡುವುದಿಲ್ಲ, ನಾನು ಕೊನೆಯವರಿಗೂ ಬಿಜೆಪಿಯಲ್ಲೇ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಂತಕುಮಾರ್, ಜಯಸಿಂಹ, ನವೀನ್ ಮುಂತಾದವರಿದ್ದರು.