ತುಮಕೂರು:ಎಐ ಹೆಸರಿನಲ್ಲಿ ಇಡೀ ಯುವಜನರ ಬದುಕಿಗೆ ಕೊಳ್ಳಿ ಇಡಲು ಹೊರಟಿರುವ ಎಐ ಡೆಟಾಸೆಂಟರ್ ನಿರ್ಮಾಣ ವಿರೋಧಿ,ಅದರಿಂದ ಸಾರ್ವಜನಿಕರ ಮೇಲಾಗುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಗಾಂಧಿ ಸಹಜ ಬೇಸಾಯ ಆಶ್ರಮದ ನೇತೃತ್ವದಲ್ಲಿ ವಿವಿಧ ರೈತ ಪರ ಸಂಘಟನೆಗಳು ಸೇರಿ ಆಗಸ್ಟ್ 6,7 ಮತ್ತು 8 ರಂದು ಮೂರು ದಿನಗಳ ಕಾಲ ದೊಡ್ಡ ಹೊಸೂರಿನಲ್ಲಿ ಸತ್ಯಾಗ್ರಹ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ರಾಜ್ಯ ಸರಕಾರ ಬಿಡದಿ ಬಳಿ ಸುಮಾರು 9470 ಎಕರೆ ಜಾಗದದಲ್ಲಿ ಬಿಡದಿ ಟೌನ್ಶಿಫ್ ಯೋಜನೆ ಜಾರಿಗೆ ತರುತ್ತಿದ್ದು, ಇದರಲ್ಲಿ ಆಟೋಮೇಷನ್ ರೋಬೋಟ್ ಡೇಟಾ ಸೆಂಟರ್ ತರುವ ಉದ್ದೇಶ ಹೊಂದಿದ್ದು,ಈ ಸೆಂಟರ್ಗೆ ಹೇಮಾವತಿ ನಾಲಾವಲಯದ 70 ಕಿ.ಮಿ. ಎಕ್ಸ್ಪ್ರೆಸ್ ಕೆನಾಲ್ ಮೂಲಕ ನೀರು ತೆಗೆದುಕೊಂಡು ಹೊಗಲು ಮುಂದಾಗಿದೆ.ಇದರಿಂದ ಜಿಲ್ಲೆಯ ನೀರಾವರಿ ಯೋಜನೆಗಳ ಮೇಲೆ ದುಷ್ಪರಿಣಾಮ ಉಂಟು ಮಾಡಲಿದೆ.ಹಾಗಾಗಿ ಇದರ ಬಗ್ಗೆ ನಾವು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆ ಭೂಮಿ, ಕುಡಿಯುವ ನೀರು ಇಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಲಿದೆ.ಹಾಗಾಗಿ ನಾವು ಈ ಎಐ ಡೆಟಾ ಸೆಂಟರ್ ವಿರೋಧಿಸಿ,ದೊಡ್ಡ ಹೊಸೂರಿನ ಗಾಂಧಿ ಸಹಜ ಬೇಸಾಯ ಆಶ್ರಮದಲ್ಲಿ ಆಗಸ್ಟ್ 6-7 ಮತ್ತು 8 ರಂದು ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಗಾಂಧಿ ಸಹಜ ಬೇಸಾಯ ಆಶ್ರಯದಲ್ಲಿ ಆಗಸ್ಟ್ 06 ರಂದು ಎಐ ಡೆಟಾ ಸೆಂಟರ್ ಕುರಿತು ಈಗಾಗಲೇ ಎಐ ಡೆಟಾ ಸೆಂಟರ್ನಿಂದ ತೊಂದರೆ ಒಳಗಾದ ಜನರ ಕುರಿತು ಸಂಶೋಧನೆ ನಡೆಸಿರುವ ಅಮೇರಿಕಾದ ತಜ್ಞರು ಸೇರಿದಂತೆ ಇದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಹಿರಿಯರು ವಿಷಯ ಮಂಡಿಸಿ ಮಾತನಾಡುವರು.
ಆಗಸ್ಟ್ 07 ರಂದು ಸರಕಾರ ಸ್ಥಾಪಿಸಲು ಹೊರಟಿರುವ ಎಐ.ಡೇಟಾ ಸೆಂಟರ್ ನಿಂದ ಜನಜೀವನದ ಮೇಲಾಗುವ ದುಷ್ಪರಿಣಾಮಗಳ ಕುರಿತು ಸರಕಾರಕ್ಕೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ದೊಡ್ಡ ಹೊಸೂರು ಸಮೀಪದ ಹೊನ್ನುಡಿಕೆ ಹ್ಯಾಂಡ್ಪೋಸ್ಟ್ನಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.ಪಾದಯಾತ್ರೆ ಮೂಲಕ ಆಗಮಿಸಿ, ಜಿಲ್ಲಾಧಿಕಾರಿಗಳಿಗೆ ಎಐ ಡೇಟಾ ಸಂಟರ್ನ ಸಾಧಕ, ಭಾದಕಗಳ ಕುರಿತು ಮನವರಿಕೆ ಮಾಡಿಕೊಡಲಾಗುವುದು. ಆಗಸ್ಟ್ 08 ರಂದು ಗಾಂಧಿ ಸಹಜ ಬೇಸಾಯ ಆಶ್ರಯದಲ್ಲಿ ಮುಂದಿನ ಹೋರಾಟಗಳ ಕುರಿತು ರೈತನಾಯಕರು, ಹೋರಾಟಗಾರರು, ವಿದ್ಯಾರ್ಥಿ ಯುವಜನರೊಂದಿಗೆ ಚರ್ಚೆ ನಡೆಯಲಿದೆ.ಇದರ ಜೊತೆಗೆ ಆಗಸ್ಟ್ 10 ರಂದು ಕ್ವಿಟ್ ಇಂಡಿಯಾ ಹೋರಾಟದ ಭಾಗವಾಗಿ ಕಿಸಾನ್ ಸಂಯುಕ್ತ ಹೋರಾಟ, ಜೆಸಿಟಿಯು ಹಾಗೂ ಇನ್ನಿತರ ಸಂಸ್ಥೆಗಳ ಸಹಕಾರದಲ್ಲಿ ಭಾರತ ದೇಶದ ಅಭಿವೃದ್ದಿಗೆ ಮಾರಕವಾಗಿರುವ ಬಹುರಾಷ್ಟ್ರೀಯ ಕಂಪನಿಗಳೇ ಭಾರತ ಬಿಟ್ಟು ತೊಲಗಿ ಎಂಬ ಜೈಲ್ ಭರೋ ಚಳವಳಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಎ.ಗೋವಿಂದರಾಜು ತಿಳಿಸಿದರು.
ಕೃಷಿ ವಿಜ್ಞಾನಿ ಹಾಗೂ ಗಾಂಧಿ ಸಹಜ ಬೇಸಾಯ ಆಶ್ರಮದ ಮುಖ್ಯಸ್ಥರಾದ ಡಾ.ಮಂಜುನಾಥ್ ಮಾತನಾಡಿ,ಎಐಯನ್ನು ಇಂದು ನಾವೆಲ್ಲರೂ ಬಹಳ ಉತ್ಸುಕತೆಯಿಂದ ಅಪ್ಪಿಕೊಳ್ಳುತಿದ್ದೇವೆ.ಆಟೋಮೆಷನ್ ರೋಬೋಟ್ಗಳ ದಸೆಯಿಂದ ಯುವಜನತೆ ಉದ್ಯೋಗ ಕಳೆದುಕೊಳ್ಳಲಿದ್ದಾರೆ.ಈಗಾಗಲೇ ಟೆಕ್ಸ್ಟೈಲ್ ಕಂಪನಿಯಲ್ಲಿ ಈ ಪ್ರಯೋಗ ನಡೆಯುತ್ತಿದೆ.ಆದು ಜಾರಿಗೆ ಬಂದರೆ ಲಕ್ಷಾಂತರ ಹೆಣ್ಣು ಮಕ್ಕಳು ಉದ್ಯೋಗವಿಲ್ಲದ ಬೀದಿಗೆ ಬರಲಿದ್ದಾರೆ. ಉದ್ಯೋಗವಿಲ್ಲವೆಂದ ಮೇಲೆ ಹಣವಿಲ್ಲ. ಹಣವಿಲ್ಲದೆ ಕೊಳ್ಳುವ ಶಕ್ತಿಯಿಲ್ಲದೆ,ಮಾರುಕಟ್ಟೆಯ ಮೇಲೆ ಒಡೆತ ನೀಡಲಿದೆ.ಇದರಿಂದ ದೇಶದ ಜಿಡಿಪಿಗೆ ಬಹಳ ಹಾನಿಯಾಗಲಿದೆ. ಇದರ ಬಗ್ಗೆ ಯಾರೊಬ್ಬರು ಯೋಚಿಸುತ್ತಿಲ್ಲ.ಎಐ ಮೂಲಕ ಕ್ಲೌಡ್ ಅಕ್ಸಸ್ನಿಂದ ಬಡತನ ನಿಮೂರ್ಲನೆ ಬದಲು ಬಡವರ ನಿಮೂರ್ಲನೆಯಾಗಲಿದೆ.ಅಲ್ಲದೆ ಒಂದು ಗೀಗಾ ಬೈಟ್ ಎಐ ಡೆಟಾ ಸೆಂಟರ್ಗೆ ವರ್ಷಕ್ಕೆ 4 ಟಿ.ಎಂ.ಸಿ ನೀರು ಬೇಕಾಗುತ್ತದೆ.ಇದರಿಂದ ನೀರಿನ ತೊಂದರೆ,ಇದರಲ್ಲಿ ಕೆಲಸ ಮಾಡುವ ಜನರ ಸಂಚಾರಕ್ಕೆ ವಿಮಾನ ನಿಲ್ದಾಣ, ರಸ್ತೆ, ನಿರ್ಮಾಣಕ್ಕೆ ಭೂಮಿ ಹೀಗೆ ಎಲ್ಲವನ್ನು ಜನಸಮಾನ್ಯರು ಕಳೆದುಕೊಳ್ಳಲಿದ್ದಾರೆ.ಈಗಲೇ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂಬರುವ ಅಪಾಯದಿಂದ ಪಾರಾಗಲು ಸಾಧ್ಯವಿಲ್ಲ.ಹಾಗಾಗಿ ಆಗಸ್ಟ್ 6-7 ಮತ್ತು 8 ರಂದು ಮೂರು ದಿನಗಳ ಕಾಲ ತಜ್ಞರೊಂದಿಗೆ ಚರ್ಚೆ, ಸಂವಾದ, ಪಾದಯಾತ್ರೆ ಎಲ್ಲವೂ ಈ ಮೂರು ದಿನಗಳ ಕಾಲದ ಸತ್ಯಾಗ್ರಹದಲ್ಲಿ ಇರಲಿದೆ.ಸುಮಾರು 2500 ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಎಐ ಡೆಟಾ ಸೆಂಟರ್ನಿಂದಾಗುವ ತೊಂದರೆಗಳ ಕುರಿತು ಅಮೇರಿಕಾದ ಸಂಶೋಧಕ ರೇಮೋಲ್, ದೇವಜೈನ್ ಹಾಗೂ ಶಾಸಕ ದರ್ಶನ ಪುಟ್ಟಣ್ಣಯ್ಯ ವಿಚಾರ ಮಂಡಿಸಿ ಮಾತನಾಡಲಿದ್ದಾರೆ.ಪರಿಸರ ವಾದಿ ಸುರೇಶ್ ಹೆಬ್ಳಿಕರ್,ಬಡಗಲಪುರ ನಾಗೇಂದ್ರಪ್ಪ, ಮಹಿಮಾ ಜೆ ಪಟೇಲ್ ಸೇರಿದಂತೆ ಹಲವು ತಜ್ಞರು ಸಂವಾಧದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಡಾ.ಮಂಜುನಾಥ್ ತಿಳಿಸಿದರು.
ಸಂಯುಕ್ತ ಹೋರಾಟದ ಸಿ.ಯತಿರಾಜು ಮಾತನಾಡಿದರು.ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಮುಖಂಡರಾದ ಜಿ.ಎಸ್ ಶಂಕರಪ್ಪ,ನಾಗರತ್ನಮ್ಮ,ಚಿಕ್ಕಬೋರೇಗೌಡ,ವೆಂಕಟಪ್ಪಗೌಡ,ಚಿಕ್ಕಬೋರೇಗೌಡ, ಕೆಂಚಪ್ಪ, ಲಕ್ಷ್ಮಣಗೌಡ,ಅರೇಹಳ್ಳಿ ಮಂಜುನಾಥ್, ಮೋಹನ್. ರಂಗಮುದ್ದಯ್ಯ,ಜಿ.ಜೆ.ಲೋಕೇಶ್, ಲಿಂಗರಾಜು ಮತ್ತಿತರರು ಪಾಲ್ಗೊಂಡಿದ್ದರು.