ತುಮಕೂರು:ಅದಾಯ ತೆರಿಗೆ ಇಲಾಖೆಯ ಟ್ರಿಬ್ಯುನಲ್,ಚುನಾವಣಾ ಆಯೋಗದಲ್ಲಿ ಯಾವುದೇ ಅಕ್ರಮ ವ್ಯವಹಾರ ನಡೆದಿಲ್ಲ ಎಂದು ತೀರ್ಪು ಬಂದು ಸತ್ತು ಹೋಗಿರುವ ನ್ಯಾಷನಲ್ ಹೆರಾಡ್ಲ್ ಕೇಸಿಗೆ ಇಡಿ ಮೂಲಕ ಜೀವ ತುಂಬಿ ಕಾಂಗ್ರೆಸ್ ಮುಖಂಡರಿಗೆ ಅನಗತ್ಯ ಕಿರುಕುಳ ನೀಡುವ ಮೂಲಕ ಪಕ್ಷದ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸವನ್ನು ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪಮೊಯಿಲಿ ಆಕ್ರೋಶವ್ಯಕ್ತಪಡಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಅವರ ನೇತೃತ್ವದಲ್ಲಿ ನಡೆದ ನ್ಯಾಷನಲ್ ಹೆರಾಡ್ಲ್ ಕೇಸಿನಲ್ಲಿನ ಇಡಿ ಸೋನಿಯಾ ಗಾಂಧಿ ಅವರಿಗೆ ಸಮನ್ಸ್ ನೀಡಿರುವುದನ್ನು ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆ ಯಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು,ಕಾಂಗ್ರೆಸ್ ಮುಖಂಡರನ್ನು ಪದೇ ಪದೇ ಇಡೀ ಹೆಸರಿನಲ್ಲಿ ವಿಚಾರಣೆಗೆ ಕರೆದು ಹೆದರಿಸುವ ಮೂಲಕ ಪಕ್ಷದ ಬಗ್ಗೆ ಜನಸಾಮಾನ್ಯರ ಬಗ್ಗೆ ತಪ್ಪು ಕಲ್ಪನೆ ಬರುವಂತೆ ಮಾಡುತ್ತಿದ್ದಾರೆ.ಇದು ದ್ವೇಷದ ರಾಜಕಾರಣವಲ್ಲದೆ ಮತ್ತೇನು ಅಲ್ಲ ಎಂದರು.
2002ರಲ್ಲಿ ನಡೆದ ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಇಂದಿನ ಪ್ರಧಾನಿ ನರೇಂದ್ರಮೋದಿ, ಕೇಂದ್ರದ ಗೃಹಮಂತ್ರಿ ಅಂದಿನ ಗುಜರಾತ್ ಗೃಹ ಸಚಿವರು,2000ಕ್ಕೂ ಹೆಚ್ಚು ಜನರು ಈ ಘಟನೆಯಲ್ಲಿ ಕೊಲೆಯಾದರೂ, ಸ್ವತಹಃ ಅಂದಿನ ಪ್ರಧಾನಿ ವಾಜಪೇಯಿ ನಿಮ್ಮ ಆಡಳಿತ ರಾಜಧರ್ಮದಿಂದ ಕೂಡಿಲ್ಲ ಎಂಬ ಮಾತುಗಳನ್ನಾಡಿದ್ದರು.ಅಲ್ಲದೆ ರಾಜಿನಾಮೆಯನ್ನು ಬಯಸಿದ್ದರು.ಆದರೆ ಆಡ್ವಾನಿಯವರ ಮಧ್ಯಸ್ತಿಕೆಯಿಂದ ಅದು ತಪ್ಪಿ ಹೋಯಿತು.ಆದರೆ ಇಂದು ಅದೇ ಅಡ್ವಾಣಿಯವರನ್ನು ತಾವು ಯಾವ ರೀತಿ ನಡೆಸಿಕೊಂಡಿದ್ದೀರಿ ಎಂಬುದನ್ನು ಒಮ್ಮೆ ಅವಲೋಕಿಸಿ,ಪ್ರಧಾನಿ,ರಾಷ್ಟ್ರಪತಿ ಹುದ್ದೆಯಿಂದ ತಪ್ಪಿಸಿ,ಮೂಲೆಗುಂಪು ಮಾಡಿದ್ದೀರಿ.ಇದಕ್ಕಿಂತ ದ್ವೇಷ ರಾಜಕಾರಣದ ಉದಾಹರಣೆ ಬೇಕೇ ಎಂದು ವೀರಪ್ಪ ಮೊಯಿಲಿ ಪ್ರಶ್ನಿಸಿದರು.
ನ್ಯಾಷನಲ್ ಹೆರಾಡ್ಲ್ ಪತ್ರಿಕೆಯಿಂದ ಸೋನಿಯಾಗಾಂಧಿ ಅವರಾಗಲಿ, ರಾಜೀವ್ಗಾಂಧಿ ಅವರಾಗಲಿ ಒಂದು ನೈಯಾಪೈಸೆ ಹಣ ತೆಗೆದುಕೊಂಡಿಲ್ಲ.ಮನಿ ಲ್ಯಾಂಡರಿಂಗ್ ಕಾಯ್ದೆಯ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದೇ, ಪದೇ ಪದೇ ವಿಚಾರಣೆಗೆ ನೊಟೀಷ್ ನೀಡಿ ಕಿರುಕುಳ ನೀಡಲಾಗುತ್ತಿದೆ. ನ್ಯಾಷನಲ್ ಹೆರಾಡ್ಲ್ ಈ ದೇಶದ ಸ್ವಾತಂತ್ರ ಹೋರಾಟದ ದ್ವನಿ, ಬ್ರಿಟಿಷರೇ ಇದರ ದ್ವನಿ ಅಡಗಿಸಲು ಆಗಲಿಲ್ಲ.ಅವರ ಪಳಿಯುಳಿಕೆಗಳಾಗಿರುವ ಬಿಜೆಪಿ ಪಕ್ಷದವರು ನ್ಯಾಷನಲ್ ಹೆರ್ಲಾಡ್ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷದ ಕತ್ತು ಹಿಸುಕಲು ಮುಂದಾಗಿದೆ. ಇದಕ್ಕೆ ಎಂದಿಗೂ ಕಾಂಗ್ರೆಸ್ ಕಾರ್ಯಕರ್ತರು ಅವಕಾಶ ಮಾಡಿಕೊಡುವುದಿಲ್ಲ ಎಂದು ವೀರಪ್ಪ ಮೊಯಿಲಿ ತಿಳಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಹಾಗೂ ಪಾವಗಡ ಶಾಸಕ ವೆಂಕಟರವಣಪ್ಪ,ದೇಶದಲ್ಲಿ ಇರುವುದು ಹಿಟ್ಲರ್ ಆಡಳಿತ.ಇಡಿ, ಐಟಿ ಗಳ ಮೂಲಕ ಈ ದೇಶದ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಹೊರಟಿದೆ.ಮೋದಿಯಂತಹ ನೂರಾರು ಹಿಟ್ಲರ್ಗಳು ಬಂದರೂ ಅದು ಸಾಧ್ಯವಿಲ್ಲ.ತಪ್ಪು ಮಾಡದ ವ್ಯಕ್ತಿಗಳ ಮೇಲೆ ವಿಚಾರಣೆಗೆ ಹಾಜರಾಗುವಂತೆ ಪದೇ ಪದೇ ನೊಟೀಷ್ ಜಾರಿ ಮಾಡಿ, ಅವರ ಮಾನಸಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿರುವ ಹಿಟ್ಲರ್ ಆಡಳಿತವನ್ನು ಕೊನೆಗಾಣಿಸದೇ ಬಿಡುವುದಿಲ್ಲ ಎಂದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಸ್.ಷಪಿ ಅಹಮದ್,ಮಾಜಿ ಶಾಸಕರಾದ ಡಾ.ರಫೀಕ್ ಅಹಮದ್,ಮುಖಂಡರಾದ ರೆಡ್ಡಿ ಚಿನ್ನಯಲ್ಲಪ್ಪ,ಇಕ್ಬಾಲ್ ಅಹಮದ್,ಇಂತ್ತಿಯಾಜ್ ಅಹಮದ್,ಚಂದ್ರಶೇಖರಗೌಡ,ಹೊನ್ನಗಿರಿಗೌಡ,ಪ್ರಸನ್ನಕುಮಾರ್, ಎಂ.ವಿ.ರಾಘ ವೇಂದ್ರ ಸ್ವಾಮಿ,ಪುಟ್ಟರಾಜು, ಬಿ.ಜಿ.ನಿಂಗರಾಜು, ಗೀತಾರುದ್ರೇಶ್, ಗೀತಮ್ಮ, ಸುಜಾತ,ಮರಿಚನ್ನಮ್ಮ,ಸಿ.ಎಲ್.ಗೌಡ, ಸಂಜೀವ ಕುಮಾರ್,ಪಾಲಿಕೆ ಸದಸ್ಯರಾದ ದೀಪಶ್ರೀ,ಪ್ರಭಾವತಿ, ಮಹೇಶ್,ಜಿಲ್ಲಾ ಉಸ್ತುವಾರಿ ಕೇಶವಮೂರ್ತಿ,ಮೆಹಬೂಬ್ ಪಾಷ,ಜಿಲ್ಲೆಯ ಎಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಡಿದ್ದರು.