ತುಮಕೂರು : ದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ, ದಿನದ 24 ಗಂಟೆಯು ದೇಶಕ್ಕಾಗಿ ದುಡಿಯುವ ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ರಾಹುಲ್ ಗಾಂಧಿ ಯಾವ ಲೆಕ್ಕ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುಡುಗಿದರು.
ಅವರಿಂದು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬೆಳಾವಿಯಲ್ಲಿ ಹಮ್ಮಿಲೊಳ್ಳಲಾಗಿದ್ದ ವಿಜಯ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ನರೇಂದ್ರ ಮೋದಿಯವರ ಕೆಲಸವನ್ನು ಇಡೀ ಪ್ರಪಂಚವೆ ನೋಡುತ್ತಾ ಇದ್ದು, ವರ್ಷದ 12ತಿಂಗಳೂ ಅವಿರತವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಇಡೀ ರಾಜ್ಯದಲ್ಲೇ ಉತ್ತಮ ಅಭಿವೃದ್ಧಿ ಕೆಲಸ ಮಾಡಿರುವ ಬಿ.ಸುರೇಶ್ಗೌಡರನ್ನು ಸೋಲಿಸಿರುವುದು ದು:ಖದ ಸಂಗತಿ, ಅವರನ್ನು ಯಾಕೆ ಸೋಲಿಸಿದ್ದೀರಿ ಎಂಬುದೇ ಅರ್ಥವಾಗುತ್ತಿಲ್ಲ, ಈ ಬಾರಿ ನಮ್ಮದೇ ಸರ್ಕಾರ ಇತ್ತು ಸುರೇಶ್ಗೌಡರು ಶಾಸಕರಾಗಿದ್ದರೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತಿದ್ದರು, ಈ ಕ್ಷೇತ್ರಕ್ಕೆ ನೀರಾವರಿ ಯೋಜನೆಗಳನ್ನು ತರಲು ನನ್ನ ಮತ್ತು ಬೊಮ್ಮಾಯಿಯವರ ಬಳಿ ಅವರು ಎಷ್ಟೊಂದು ದುಂಬಾಲು ಬೀಳುತ್ತಿದ್ದರು ಎಂಬುದು ಗೊತ್ತಿದೆ ಎಂದರು.
ಈ ಬಾರಿ ಸುರೇಶ್ಗೌಡರನ್ನು ಹೆಚ್ಚು ಬಹುಮತದಿಂದ ಗೆಲ್ಲಿಸುವುದರ ಮೂಲಕ 2018 ಸೋಲಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದರು.

ಲಾಟರಿ ಮುಖ್ಯಮಂತ್ರಿ:
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ ಈ ರಾಜ್ಯದ ಲಾಟರಿಯ ಮೂಲಕ ಮುಖ್ಯಮಂತ್ರಿಯಾದವರು ತಮ್ಮ ಗೃಹ ಕಚೇರಿ ಕೃಷ್ಣವನ್ನು ಬಿಟ್ಟು ಪೈವ್ ಸ್ಟಾರ್ ಹೋಟಲ್ನ್ನು ಗೃಹಕಛೇರಿ ಮಾಡಿಕೊಂಡಿದ್ದರು, ಮತ್ತೊಮ್ಮೆ ಲಾಟರಿ ಹೊಡೆಯ ಬಹುದು ಎಂದು ಕಾಯುತ್ತಿದ್ದಾರೆ, ಅದಕ್ಕೆ ಅವಕಾಶ ಕೊಡಬೇಡಿ ಎಂದರು.
ಕಾಂಗ್ರೆಸ್ ಸರ್ಕಾರವು ರೈತರಿಗೆ 10ಸಾವಿರ ರೂ. ಸಾಲ ನೀಡಿ ಬಡ್ಡಿ ಕಟ್ಟಲಿಲ್ಲ ಎಂದು ಮನೆ ಹರಾಜು ಹಾಕುತ್ತಿದ್ದರು, ಆದರೆ ನಮ್ಮ ಬಿಜೆಪಿ ಸರ್ಕಾರ 5 ಲಕ್ಷ ರೂ.ಗಳವರೆಗೆ ಬಡ್ಡಿ ರಹಿತ ಸಾಲ ನೀಡುತ್ತಿದೆ ಎಂದ ಅವರು, ಕಾಂಗ್ರೆಸ್ ಎಟಿಎಂ ದೋಚುವ ಪಕ್ಷವಾಗಿದ್ದು ಅದಕ್ಕೆ ಯಾರೂ ಮತ ಹಾಕ ಬಾರದು, ಡಬಲ್ ಇಂಜಿನ್ ಸರ್ಕಾರದಲ್ಲಿ ಆಗಿರುವ ಅಭಿವೃದ್ಧಿ ನೋಡಿ ಬಿಜೆಪಿಗೆ ಮತ ಹಾಕಿ ಎಂದು ತಿಳಿಸಿದರು.
ಮಾಜಿ ಶಾಸಕ ಬಿ.ಸುರೇಶ್ಗೌಡ ಅವರು ಒರಟರಾದರು ಹೃದಯವಂತರು ಅವರು ತಮ್ಮ ಕ್ಷೇತ್ರಕ್ಕಾಗಿ ಹಗಲಿರುಳು ದುಡಿದಂತಹವರು, ಅಂತಹ ವ್ಯಕ್ತಿಯನ್ನು ಕಳೆದ ಸಲದ ಸೋಲನ್ನು ಗೆಲುವಾಗಿ ಮಾಡಿ ಬಡ್ಡಿ ಸಮೇತ ತೀರಿಸುವ ಋಣ ನಿಮ್ಮ ಮೇಲಿದೆ ಎಂದರು.
ಮಾಜಿ ಶಾಸಕ ಬಿ.ಸುರೇಶಗೌಡ ಮಾತನಾಡಿ ನಾನು ಇಡೀ ಕ್ಷೇತ್ರವನ್ನು ದೇಶದಲ್ಲೇ ಕಂಡರಿಯದಂತೆ ಅಭಿವೃದ್ಧಿ ಮಾಡಿದ್ದು, ನನ್ನಿಂದ ತಪ್ಪಾಗಿದ್ದರೆ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತೇನೆ ನನಗೆ ಮತ್ತೊಮ್ಮೆ ಅವಕಾಶ ಕೊಡಿ ಇಡೀ ಪ್ರಪಂಚವೇ ತಿರುಗಿ ನೋಡುವಂತೆ ಅಭಿವೃದ್ಧಿ ಮಾಡುತ್ತೇನೆ ಎಂದು ಮನವಿ ಮಾಡಿದರು.