
ತುಮಕೂರು: ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್ಗಳಲ್ಲಿ 11 ಫೆಬ್ರುವರಿ 2023 ರೊಳಗೆ ದಾಖಲಾದ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ ಇ-ಚಲನ್ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಮತ್ತೊಂದು ಬಾರಿಗೆ ಶೇಕಡಾ 50ರಷ್ಟು ರಿಯಾಯಿತಿ ನೀಡಿ ಆದೇಶಿಸಲಾಗಿದೆ ಎಂದು ತುಮಕೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ನೂರುನ್ನೀಸರವರು ತಿಳಿಸಿದರು.
ಅವರು ಇಂದು ಜಿಲ್ಲಾ ನ್ಯಾಯಾಲಯದ ಕಚೇರಿಯಲ್ಲಿ ನಡೆದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ,ಈ ವರ್ಷದ ಮೊದಲ ಲೋಕ್ ಅದಾಲತ್ 11 ಫೆಬ್ರವರಿಯಂದು ನಡೆದಿತ್ತು ಅಂದು ತುಮಕೂರಿನಲ್ಲಿ 750 ಪ್ರಕರಣಗಳನ್ನು ಮುಕ್ತಾಯಗೊಳಿಸಿ ಸರ್ಕಾರಕ್ಕೆ 3,75,000/- ರೂಗಳನ್ನು ದಂಡದ ಹಣವನ್ನು ಪಾವತಿ ಮಾಡಿ ಸಾರ್ವಜನಿಕರು ತಮ್ಮ ಮೇಲಿದ್ದ ಪ್ರಕರಣಗಳನ್ನು ಬಗೆಹರಿಸಿಕೊಂಡಿದ್ದರು,ಅಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಮತ್ತು ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಜಸ್ಟೀಸ್ ಬಿ.ವೀರಪ್ಪನವರ ಮುತುವರ್ಜಿಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಲಕ್ಷಾಂತರ ಪ್ರಕರಣಗಳನ್ನು ಸಾರ್ವಜನಿಕರು ಶೇ.50ರಷ್ಟು ದಂಡವನ್ನು ಪಾವತಿಸಿ ತಮ್ಮ ಮೇಲಿದ್ದ ಕೇಸನ್ನು ಮುಕ್ತಾಯಗೊಳಿಸಿದ್ದರು,ಅದರಂತೆ ಈಗಿನ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಮತ್ತು ಹೈಕೋರ್ಟ್ ನ್ಯಾಯಾಧೀಶರಾದ ಜಸ್ಟೀಸ್ ಜಿ.ನರೇಂದರ್ ಸಾಹೇಬರ ಮನವಿಯ ಮೇರೆಗೆ ಇಂದು ರಾಜ್ಯ ಸರ್ಕಾರ ಆದೇಶ ಸಂಖ್ಯೆ ಟಿಡಿ27ಟಿಡಿಓ2023,ಬೆಂಗಳೂರು ದಿನಾಂಕ:05-07-2023ರಂತೆ ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿ ವಿ.ಎಸ್.ಪುಷ್ಪರವರ ಸಹಿಯೊಂದಿಗೆ ಅಧಿಸೂಚನೆ ಹೊರಡಿಸಿದ್ದು ಸ್ವಾಗತಾರ್ಹ, ಈ ರಿಯಾಯಿತಿಯು 9ನೇ ಸೆಪ್ಟೆಂಬರ್ 2023ರವರೆಗೆ ಇತ್ಯರ್ಥವಾಗುವ ಪ್ರಕರಣಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದು ತಿಳಿಸಿದ್ದಾರೆ.
ದಿನಾಂಕ:08-07-2023ರಂದು ನಡೆಯುವ 2ನೇ ಲೋಕ್ ಅದಾಲತ್ ನಲ್ಲಿ ತಮ್ಮ ಮೇಲಿರುವ ಪ್ರಕರಣಗಳಲ್ಲಿ ಪೋಲೀಸ್ ಇಲಾಖೆಯವರು ಹಾಕಿರುವ ಸಂಚಾರಿ ಇ-ಚಲನ್ ಮೂಲಕ ದಂಡವನ್ನು ಶೇ 50% ರಷ್ಟು ಪಾವತಿಸಿ ಪ್ರಕರಣಗಳನ್ನು ಮುಕ್ತಾಯಗೊಳಿಸಿಕೊಳ್ಳಬೇಕು ಇದೊಂದು ಸಾರ್ವಜನಿಕರಿಗೆ ಸುವರ್ಣಾವಕಾಶ ಎಂದು ಸಾರ್ವಜನಿಕರು ಮತ್ತು ಕಕ್ಷಿದಾರರಲ್ಲಿ ಮನವಿ ಮಾಡಿದರು.
ದಿನಾಂಕ:08-07-2023ರ ಎರಡನೇ ಶನಿವಾರ ತುಮಕೂರು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ನಡೆಯುವ 2ನೇ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಉಚಿತವಾಗಿ ರಾಜಿ ಪಂಚಾಯ್ತಿ ಮೂಲಕ ತಮ್ಮ ಕೇಸುಗಳನ್ನು ಇತ್ಯರ್ಥಗೊಳಿಸಿಕೊಳ್ಳಿ, ತ್ವರಿತ ಮತ್ತು ವೆಚ್ಚವಿಲ್ಲದೆ ತಮ್ಮ ಕೇಸುಗಳನ್ನು ಇತ್ಯರ್ಥಪಡಿಸಿಕೊಳ್ಳಿ ಎಂದು ಸಾರ್ವಜನಿಕರು ಮತ್ತು ಕಕ್ಷಿದಾರರಲ್ಲಿ ಮನವಿ ಮಾಡಿದರು.