ಅಂಬೇಡ್ಕರ್ ಅವರು ತಮ್ಮ ತಂದೆ ಓದಲು ಕೊಡುತ್ತಿದ್ದ ರಾಮಾಯಣ ಮಹಾಭಾರತದ ಪಾತ್ರಗಳಿಗಿಂತ ಬಾಲ್ಯದಲ್ಲಿ ದಾದಾ ಕೆಲೂಸ್ಕರ್ ಅವರು ಕೊಟ್ಟ ಬುದ್ಧನ ಬಗೆಗಿನ ಪುಸ್ತಕ ಓದಿ ಹೆಚ್ಚು ಬುದ್ಧ ಮತ್ತು ದಮ್ಮ ದಿoದ ಪ್ರಭಾವಿತರಾದರು.. ಇದನ್ನು ಅವರ “My Story,My Voice” ನಲ್ಲಿ ಉಲ್ಲೇಖಿಸಿ ದ್ದಾರೆ.
1951 ರಲ್ಲಿ ಕಲ್ಕತ್ತಾದ ” ಮಹಾಬೋಧಿ ಸೊಸೈಟಿ” ಯ ಜರ್ನಲ್ ಗೆ ಬರೆದ ಲೇಖನದಲ್ಲಿ
“ಆಧುನಿಕ ಮತ್ತು ವೈಜ್ಞಾನಿಕವಾಗಿ ಜಾಗೃತಗೊಂಡ ಸಮಾಜವು ಸ್ವೀಕರಿಸಬಹುದಾದ ಏಕೈಕ ಧರ್ಮವೆಂದರೆ ಬೌದ್ಧಧರ್ಮ, ಅದು ಇಲ್ಲವಾದಲ್ಲಿ ಸಮಾಜವು ನಾಶವಾಗುತ್ತದೆ. ಆಧುನಿಕ ಜಗತ್ತಿನಲ್ಲಿ ಮಾನವೀಯತೆಯನ್ನು ರಕ್ಷಿಸುವ ಸಾಮರ್ಥ್ಯ ವಿರುವ ಏಕೈಕ ಧರ್ಮ ಬೌದ್ಧಧರ್ಮ ” ಎಂದು ಬರೆಯುತ್ತಾರೆ
ಇಂದಿನ ಕೃತಕ ಬುದ್ಧಿಮತ್ತೆಯ ಲೋಕದಲಿ ಜರುಗುತ್ತಿರುವ ರಾಜಕೀಯ , ಆರ್ಥಿಕ ಅಸ್ಥಿರತೆಗಳು, ಯುದ್ದ ಭೀತಿ,ಹವಾಮಾನ ಬದಲಾವಣೆ ಇತ್ಯಾದಿಗಳು ಮಾನವನ ದಿನನಿತ್ಯದ ಜೀವನದ ಮೇಲೆ ನೇರ ಮತ್ತು ಪರೋಕ್ಷ ಪರಿಣಾಮ ಬೀರುತ್ತಿವೆ.
ಇಂತಹ ದುರ್ಗಮ ಸಂದರ್ಭದಲ್ಲಿ ಗೌತಮ ಬುದ್ಧನ ಬೋಧನೆಯು ಮಾನವ ಕುಲದ ದುಃಖವನ್ನು ಅರ್ಥ ಮಾಡಿಕೊಂಡು ಆ ದುಃಖದಿಂದ ಬಿಡುಗಡೆ ಹೊಂದಲು ಸರಿಯಾದ ಮಾರ್ಗವನ್ನು ತೋರುತ್ತದೆ.
ಅಂಬೇಡ್ಕರ್ರವರು ಈ ಸತ್ಯವನ್ನು ಕಂಡುಕೊಂಡ ಕಾರಣದಿಂದಲೇ “ಬುದ್ಧ ಮತ್ತು ಧಮ್ಮ” ವನ್ನು ಹೆಚ್ಚು ಇಷ್ಟ ಪಟ್ಟು ಅರ್ಥ ಮಾಡಿಕೊಳ್ಳಲು ಶುರುಮಾಡಿದರು, ಜೊತೆಗೆ “ಬೌದ್ಧಧರ್ಮದಲ್ಲಿ ಯಾವುದೇ ತಾರತಮ್ಯವಿಲ್ಲ , ಎಲ್ಲೆಡೆ ಸಮಾನತೆಯನ್ನು ಕಾಣಬಹುದು…ಅದಕ್ಕಾಗಿಯೇ ಅದು ಶ್ರೇಷ್ಠ ಧರ್ಮ ” ಎಂದು ನಂಬಿದ್ದರು.
ಅದೇ ನಂಬಿಕೆಯ ಅನುಸಾರ “The Buddha and His Dhamma ” ಪುಸ್ತಕದ ಮೂರನೇ ಭಾಗದಲ್ಲಿ ಬುದ್ಧನ “ಧಮ್ಮ” ಎಂದರೇನು ಎಂದು ವಿವರಿಸುತ್ತಾರೆ…
ಧಮ್ಮ ಎಂದರೆ ಜೀವನದ ಶುದ್ಧತೆಯನ್ನು ಕಾಪಾಡಿಕೊಳ್ಳುವುದು ಮತ್ತು ಮೂರು ವಿಧದ ಶುದ್ಧತೆಯನ್ನು “ಧಮ್ಮ” ಬೋಧಿಸುತ್ತದೆ
1. ದೇಹದ ಶುದ್ಧತೆ,
2. ಮಾತಿನ ಶುದ್ಧತೆ
3. ಮನಸ್ಸಿನ ಶುದ್ಧತೆ
ದೇಹದ ಶುದ್ಧತೆ ಎಂದರೆ ಏನು?
ಇಲ್ಲಿ ಒಬ್ಬ ವ್ಯಕ್ತಿಯು ಹಿಂಸೆಯನ್ನು ತ್ಯಜಿಸುವುದು ಯಾವುದೇ ಜೀವಿಗೆ ಹಾನಿ ಮಾಡದೆ ಇರುವುದು , ಕದಿಯುವುದರಿಂದ ಮತ್ತು ಇಂದ್ರಿಯ ಕಾಮಗಳಲ್ಲಿ ತಪ್ಪು ಅಭ್ಯಾಸದಿಂದ ದೂರವಿರುದು. ಇದನ್ನು ‘ದೇಹದ ಶುದ್ಧತೆ’ ಎಂದು ಕರೆಯಲಾಗುತ್ತದೆ.”
“ಮಾತಿನ ಶುದ್ಧತೆ” ಎಂದರೆ ಸುಳ್ಳು ಹೇಳಬಾರದು
ಇತರರನ್ನು ಬೇರ್ಪಡಿಸುವ ಮಾತುಗಳನ್ನಾಡಬಾರದು
ಕಟುವಾಗಿ/ಹಿಂಸಾತ್ಮಕವಾಗಿ ಮಾತನಾಡಬಾರದು
ವ್ಯರ್ಥ/ಅರ್ಥವಿಲ್ಲದ ಮಾತು ಆಡಬಾರದು.
“ಮನಸ್ಸಿನ ಶುದ್ಧತೆ” ಎಂದರೆ ಇಲ್ಲಿ ಒಬ್ಬ ವ್ಯಕ್ತಿಯು ದುರಾಸೆ ಅಥವಾ ದುರುದ್ದೇಶಪೂರಿತನಲ್ಲ ಏಕೆಂದರೆ ಅವನಿಗೆ ಸರಿಯಾದ ದೃಷ್ಟಿಕೋನವಿದೆ. ಇದನ್ನು ‘ಮನಸ್ಸಿನ ಶುದ್ಧತೆ’ ಎಂದು ಕರೆಯಲಾಗುತ್ತದೆ.
ಇವು ಅಂಬೇಡ್ಕರ್ ಅವರು ಅರ್ಥ ಮಾಡಿಕೊಂಡಂತೆ ಬುದ್ಧನ “ಧಮ್ಮ” ದಲ್ಲಿರುವ ಶುದ್ಧತೆಯ ರೂಪಗಳಾಗಿವೆ.
ವಚನಕಾರ ಬಸವಣ್ಣ ನವರ ವಚನ
“ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ,
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ”
ಸಹ ಬುದ್ಧನ ಧಮ್ಮ ದ ಸತ್ಯಗಳನ್ನೇ ಪ್ರತಿಪಾದಿಸುತ್ತದೆ ಅಲ್ಲವೇ…
ಪ್ರಸ್ತುತದಲ್ಲಿ ಯುದ್ಧಗಳು, ಹಿಂಸೆ, ಅಪರಾಧಗಳು ಹೆಚ್ಚಾಗಿ , ದುರ್ಬಲರ ಮೇಲೆ ತಡೆಯಿಲ್ಲದಂತೆ ಶೋಷಣೆ ನಡೆಯುತ್ತಿರುವ ಈ ಲೋಕದಲ್ಲಿ ಒತ್ತಡ (stress), ಆತಂಕ (anxiety), ಅಸೂಯೆಗಳು ಮನಸ್ಸಿನ ಶಾಂತಿಯನ್ನು ಕದಡಿ ಮತ್ತು ಬದುಕಿನ ಸಮತೋಲನ ಕಾಪಾಡಿಕೊಳ್ಳಲು ಕಾದಾಡುವ ಸಂಧರ್ಭ ಬಂದೊದಗಿದೆ…ಇವೆಲ್ಲದರಿಂದ ಹೇಗೆ ಹೊರಬರುವುದು ಎಂಬುದೇ ಯಕ್ಷ ಪ್ರಶ್ನೆಯಾಗಿದೆ
ಹಾಗೆ ಹೊರಬರಲು …
“ಬುದ್ಧನೋರ್ವನೆ ಮಾರ್ಗ
ಧಮ್ಮವೊಂದೇ ದಾರಿ
ನಾಲ್ಕು ಶ್ರೇಷ್ಠ ಸತ್ಯಗಳು
ಜೀವನಕ್ಕೆ ದರ್ಶನ
ಅಷ್ಟಾಂಗ ಮಾರ್ಗವೇ
ಬದುಕಿನ ಬೆಳಕು
ಸಂವಿಧಾನವೇ ಶಕ್ತಿ,
ಅಂಬೇಡ್ಕರೇ ಮಾರ್ಗದರ್ಶಕ.”
ಎಂದು ಅರ್ಥ ಮಾಡಿಕೊಂಡು ತಾವೂ ಬದುಕಿ ಸಮಾಜದ ಇತರರಿಗೂ ಸುಗಮವಾದ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು ಆಗಲೇ ಒಂದು ಆರೋಗ್ಯಕರ ಸಾಮಾಜಿಕ ವಾತಾವರಣದಲ್ಲಿ ಮುಂದಿನ ಪೀಳಿಗೆ ಬದುಕಲು ಸಾಧ್ಯ….
–ಪಲ್ಲವಿ.ಟಿ.ಎಸ್.
ಮುಖ್ಯಸ್ಥರು, ಇಂಗ್ಲಿಷ್ ವಿಭಾಗ, ಸಪ್ತಗಿರಿ ಎನ್ ಪಿ ಎಸ್ ವಿಶ್ವವಿದ್ಯಾಲಯ, ಬೆಂಗಳೂರು.