ಅಧಿಕಾರ ಜನಸೇವೆ ಮಾಡಲು ಕೊಟ್ಟ ವರ-ನ್ಯಾಯಾಧೀಶೆ ನೂರುನ್ನೀಸಾ

ತುಮಕೂರು :ಅಧಿಕಾರ ಎಲ್ಲರಿಗೂ ಸಿಗುವಂತಹುದಲ್ಲ, ಆದರೆ ಸಿಕ್ಕ ಅಧಿಕಾರವನ್ನು ಸದುಪಯೋಗಪಡಿಸಿಕೊಳ್ಳುವುದರ ಜೊತೆಗೆ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇದು ನನಗೆ ದೇವರು ಕೊಟ್ಟ ವರ ಎಂದು ಭಾವಿಸಬೇಕು. ಆಗ ಮಾತ್ರ ಅಧಿಕಾರದಲ್ಲಿರುವವರು ಸದಾ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲೆಯಿಂದ ವರ್ಗಾವಣೆಗೊಂಡಿರುವ ತುಮಕೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು, ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸಾ ತಿಳಿಸಿದರು.

ತುಮಕೂರಿನ ವರದಕ್ಷಿಣೆ ವಿರೋಧಿ ವೇದಿಕೆ- ಸಾಂತ್ವನ ಕೇಂದ್ರದ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸರಳ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯಾರೇ ಆಗಲಿ ತಮಗೆ ಸಿಕ್ಕ ಅಪರೂಪದ ಅಧಿಕಾರವನ್ನು ಸಮಾಜದ ಒಳಿತಿಗೆ ಬಳಸಿಕೊಳ್ಳಬೇಕು. ಈ ಸಮಾಜಕ್ಕೆ ನನ್ನ ಕೊಡುಗೆ ಏನು ಎಂದು ಚಿಂತಿಸಬೇಕು. ಏಕೆಂದರೆ ಲಕ್ಷಾಂತರ ಜನ ಉದ್ಯೋಗವಿಲ್ಲದೆ, ಅವಕಾಶಗಳಿಲ್ಲದೆ ಇರುವಾಗ ಅವಕಾಶವಂಚಿತರ ಬಗ್ಗೆ, ನೊಂದವರ ಬಗ್ಗೆ, ಅನ್ಯಾಯಕ್ಕೆ ಒಳಗಾದವರ ಬಗ್ಗೆ ನಾವು ಸ್ಪಂದಿಸಿದಾಗ ಅವರ ಸಮಸ್ಯೆಗಳೂ ನಿವಾರಣೆಯಾಗುತ್ತವೆ. ಸಮಾಜವೂ ಸುಸ್ಥಿತಿಯಲ್ಲಿರುತ್ತದೆ ಎಂದರು.

ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿ ತುಮಕೂರಿಗೆ ಬರುವುದಕ್ಕೂ ಮುನ್ನ ತಿಪಟೂರಿನಲ್ಲಿ ನ್ಯಾಯಾಧೀಶಳಾಗಿ ಕಾರ್ಯ ನಿರ್ವಹಿಸಿದ್ದೆ. ಕಾನೂನು ಸೇವೆಗಳ ಪ್ರಾಧಿಕಾರದ ಜವಾಬ್ದಾರಿ ವಹಿಸಿಕೊಂಡಾಗ ಜನರ ನೋವು ನಲಿವುಗಳನ್ನು ಇನ್ನಷ್ಟು ತಿಳಿಯಲು ಸಹಕಾರಿಯಾಯಿತು. ಮಹಿಳೆಯರು, ಮಕ್ಕಳು, ಅಶಕ್ತರು, ಭಿಕ್ಷಾಟನೆಯಲ್ಲಿ ತೊಡಗಿರುವವರು, ಹೊಟ್ಟೆಪಾಡಿಗೆ ರಸ್ತೆ ಬದಿ ಕೆಲಸ ಮಾಡುವವರು, ಬಾಲ ಕಾರ್ಮಿಕರು, ಅಪರಾಧಕ್ಕೊಳಗಾಗಿ ಜೈಲಿನಲ್ಲಿ ಇರುವವರು ಇವರೆಲ್ಲರ ಸಮಸ್ಯೆ ಆಲಿಸುವ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮಗಳು ಹೆಚ್ಚು ತೃಪ್ತಿ ತಂದಿವೆ. ಈ ಜಿಲ್ಲೆಯ ಜನ ಶಾಂತ ಸ್ವಭಾವದವರು ಒಳ್ಳೆಯ ವಾತಾವರಣ ಇಲ್ಲಿದೆ. ಇಲ್ಲಿನ ಸಂಘ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಸಿದ್ದಗಂಗಾ ಸ್ವಾಮೀಜಿಗಳಂತಹ ಪುಣ್ಯ ಪುರುಷರು ಈ ಕಲ್ಪತರು ನಾಡಿನ ಹೆಸರನ್ನು ಮೇಲೆತ್ತರಕ್ಕೆ ಕೊಂಡು ಹೋಗಿದ್ದಾರೆ. ಅಂತಹ ಹಿರಿಯರ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ ಎಂದರು.

ಅಧಿಕಾರದಲ್ಲಿ ಇದ್ದಾಗ ನಮ್ಮ ಕೆಲಸ ಮಾಡಿ ಮುಗಿಸುವುದಷ್ಟೇ ಮುಖ್ಯವಲ್ಲ. ನಾನು ಸರಿಯಾದ ಕೆಲಸ ಮಾಡಿದ್ದೇನೆಯೇ ಎಂದು ಪ್ರತಿದಿನ ರಾತ್ರಿ ಒಮ್ಮೆ ಅವಲೋಕನ ಮಾಡಬೇಕು. ನಮಗೆ ಒಂದು ಸಂವಿಧಾನ ಇದೆ, ಕಾನೂನುಗಳಿವೆ. ಅವುಗಳ ರಕ್ಷಣೆಯಾಗುತ್ತಿದೆಯೇ ಎಂದು ನೋಡಬೇಕು. ಎಲ್ಲರೂ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುವ ರೀತಿಯಲ್ಲಿ ನೋಡಿಕೊಳ್ಳಬೇಕು. ಇದರ ಜೊತೆಗೆ ಒಂದಷ್ಟು ಮಾನವೀಯತೆಯೂ ಇರಬೇಕು. ಅಂತಹ ಸ್ವಭಾವ ನನ್ನದಾಗಿತ್ತು. ನಾನು ಅದೇ ಹಾದಿಯಲ್ಲಿ ನಡೆದಿದ್ದೇನೆ ಎಂಬ ತೃಪ್ತಿ ಇದೆ ಎಂದರು.

ಲೇಖಕಿ, ವರದಕ್ಷಿಣೆ ವಿರೋಧಿ ವೇದಿಕೆ ಉಪಾಧ್ಯಕ್ಷೆ ಬಾ.ಹ. ರಮಾಕುಮಾರಿ ಮಾತನಾಡಿ ಕಾನೂನು ಅರಿವು ಕಾರ್ಯಕ್ರಮಗಳ ಜೊತೆ ಜೊತೆಗೆ ಸಾಮಾಜಿಕ ಸಮಸ್ಯೆಗಳ ಕಡೆಗೆ ಸ್ಪಂದಿಸುವ ಕಾರ್ಯವನ್ನೂ ಪ್ರಾಧಿಕಾರದ ಕಾರ್ಯದರ್ಶಿಗಳಾಗಿ ನಿಭಾಯಿಸಿದ್ದು ಹೆಚ್ಚು ಗಮನಸೆಳೆದಿದೆ. ಮಹಿಳೆಯರ ಅನೇಕ ಕಷ್ಟದ ಸಮಸ್ಯೆಗಳಿಗೆ ಸ್ಪಂದಿಸಿ ಅವರಿಗೆ ಮಾರ್ಗದರ್ಶನ ನೀಡಿದ್ದಾರೆ. ವಿವಾಹ ವಿಚ್ಚೇದನದ ಪ್ರಕರಣಗಳಲ್ಲಿ ಅವರಿಗೆ ತಿಳುವಳಿಕೆ ನೀಡಿ ದಂಪತಿಗಳನ್ನು ಒಂದುಗೂಡಿಸಿದ್ದಾರೆ. ಶಾಲೆ ಬಿಟ್ಟು ಹೊರಗುಳಿದ ಮಕ್ಕಳ ಬಗ್ಗೆಯೂ ಗಮನ ಹರಿಸಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿ ಮತ್ತು ಅವರ ಕುಟುಂಬದವರ ಜೊತೆ ಮಾತನಾಡಿ ಅವರ ಸಂಕಷ್ಟÀ್ಟಗಳಿಗೆ ಸ್ಪಂದಿಸಿದ್ದಾರೆ. ಇಂತಹ ಹಲವಾರು ಸ್ಪಂದನೆಯ ಮನಸ್ಸಿನಿಂದಲೇ ಜಿಲ್ಲೆಯಲ್ಲಿ ಒಂದು ಉತ್ತಮ ಹೆಸರು ಸಂಪಾದಿಸಿದ್ದಾರೆ. ನೊಂದವರ ಬಗ್ಗೆ ತೋರಿಸುವ ಕಾಳಜಿ ಮತ್ತು ಅಂತಹ ಮನೋಗುಣ ಎಲ್ಲರಿಗೂ ಇರುವುದಿಲ್ಲ. ಇಂತಹ ಮನಸ್ಥಿತಿ ಇರುವವರು ಇನ್ನೂ ಎತ್ತರದ ಹುದ್ದೆಗೆ ಹೋಗಿ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸುವಂತಾಗಲಿ ಎಂದು ಆಶಿಸಿದರು.

ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ ಮಾತನಾಡಿ ಈ ವೇದಿಕೆ ಪ್ರಾರಂಭವಾಗಿದ್ದೇ 1992 ರಲ್ಲಿ ಇಲ್ಲಿನ ಕಾನೂನು ಕಾಲೇಜಿನ ಕಾನೂನು ವಿದ್ಯಾರ್ಥಿಗಳಿಂದ, ವೇದಿಕೆಯ ಅರಂಭದ ದಿನಗಳಲ್ಲಿ ಮಹಿಳೆಯರ ಸಾವು ನೋವಿನ ವಿರುದ್ದ ಹೋರಾಟ ಮಾಡುತ್ತಿದ್ದ ವೇದಿಕೆ ಬೃಹತ್ ಪ್ರತಿಭಟನೆ ನಡೆಸುತ್ತಿತ್ತು. ಸಮಾವೇಶಗಳನ್ನು ನಡೆಸುತ್ತಿತ್ತು. ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳನ್ನು ವಿಚಾರ ಘೋಷ್ಟಿಗಳಿಗೆ ಕರೆಯಿಸಿ ಉಪನ್ಯಾಸ ಕೊಡಿಸಲಾಗುತ್ತಿತ್ತು. ವೇದಿಕೆಯ ಈ ಕಾರ್ಯಚಟುವಟಿಕೆಗಳನ್ನು ಗಮನಿಸಿ ಕಾನೂನು ಸೇವೆಗಳ ಪ್ರಾಧಿಕಾರದ ಅರಿವು ಕಾರ್ಯಕ್ರಮಗಳಿಗೆ ಈ ವೇದಿಕೆಯನ್ನು ಆಯ್ಕೆ ಮಾಡಿಕೊಂಡಿತ್ತು. ಇದರಿಂದಾಗಿ ವರದಕ್ಷಿಣೆ ವಿರೋಧಿ ವೇದಿಕೆಗೂ ಪ್ರಾಧಿಕಾರಕ್ಕೂ ಹೆಚ್ಚು ಸಂಬಂಧ ಬೆಳೆಯಿತು. ಸಾಂತ್ವನ ಕೇಂದ್ರ ಆರಂಭವಾದ ನಂತರ ಹಲವು ಮಹಿಳಾ ಸಮಸ್ಯೆಗಳಿಗೆ ನ್ಯಾಯ ದೊರಕಿಸಿಕೊಡಲು ಸಾಧ್ಯವಾಯಿತು. ಅದೆಷ್ಟೋ ಮಹಿಳೆಯರು ಮತ್ತು ಬಾಲಕಿಯರ ಪ್ರಕರಣಗಳಿಗೆ ಸ್ಪಂದಿಸಿ ಮಾರ್ಗದರ್ಶನ ಮಾಡಿದ್ದಾರೆ ಎಂದರು.

ಮಿತ್ರ ಫೌಂಡೇಷನ್ ಆಪ್ತ ¸ಮಾಲೋಚಕ ಸಿಸಿ ಪಾವಟೆ ಇತರರು ಮಾತನಾಡಿದರು. ವೇದಿಕೆ ಪದಾಧಿಕಾರಿಗಳಾದ ಸಿ.ಎಲ್. ಸುನಂದಮ್ಮ, ಬಿ.ಗಂಗಲಕ್ಷ್ಮಿ, ಟಿ.ಆರ್.ಅನಸೂಯ, ಗೀತಾ ನಾಗೇಶ್, ವಿಜ್ನಾನ ಕೇಂದ್ರದ ಅಧ್ಯಕ್ಷೆ ಎನ್. ಅಕ್ಕಮ್ಮ, ರಂಗನಾಥ್, ಸುಮಂತ್, ಸಾಂತ್ವನ ಕೇಂದ್ರದ ಸಮಾಲೋಚಕಿ ಪಾರ್ವತಮ್ಮ, ಮಾಣಿಕ್ಯ ಇತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *