ತುಮಕೂರು: ಈ ದೇಶದ ಅಭಿವೃದ್ದಿಗೆ ಶ್ರಮಿಸಿದ ಅಗ್ರಗಣ್ಯ ನಾಯಕರಲ್ಲಿ ದಿವಂಗತ ರಾಜೀವಗಾಂಧಿ ಅವರು ಒಬ್ಬರು. ಅತ್ಯಂತ ಕಿರಿಯ ವಯಸ್ಸಿನಲ್ಲಿ ದೇಶದ ಪ್ರಧಾನಿಯಾಗಿ, ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ದೇಶಕ್ಕೆ ಭದ್ರ ಬುನಾದಿ ಹಾಕಿದವರು.ದೇಶದ ಯುವಜನರು ಚುನಾವಣೆಯಂತಹ ಪ್ರಮುಖ ವಿಚಾರಗಳಲ್ಲಿ ಭಾಗಿಯಾಗಬೇಕು ಎಂಬ ಆಶಯದಿಂದ ಮತದಾನದ ವಯಸ್ಸನ್ನು 21ರಿಂದ 18ಕ್ಕೆ ಇಳಿಸಿದರು.ಸಂವಿಧಾನದ 73 ಮತ್ತು 74ನೇ ತಿದ್ದುಪಡಿಯ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತಂದು, ದಲಿತರು, ಹಿಂದುಳಿದವರು,ಅಲ್ಪಸಂಖ್ಯಾತರು ಮತ್ತು ಮಹಿಳೆಯರಿಗೆ ರಾಜಕೀಯ ಅಧಿಕಾರ ದೊರೆಯಬೇಕೆಂಬ ಮಹಾದಾಸೆ ಹೊಂದಿದ್ದರು.ರಾಜೀವ್ಗಾಂಧಿ ಅವರಂತಹ ನಾಯಕರ ಅವಶ್ಯಕತೆ ಈ ದೇಶಕ್ಕೆ ಇದೆ ಎಂದು ಮಾಜಿ ಶಾಸಕರು ಹಾಗೂ ಎಐಸಿಸಿ ಅಲ್ಪಸಂಖ್ಯಾತರ ಘಟಕದ ಸಂಚಾಲಕರಾದ ಡಾ.ರಫೀಕ್ ಅಹಮದ್ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿ.ರಾಜೀವ್ಗಾಂಧಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಜಿಲ್ಲಾಧ್ಯಕ್ಷ ಜಿ.ಚಂದ್ರಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಮಾತನಾಡಿದ ಅವರು, ರಾಜ್ಯ ಸರಕಾರದ ಮೂರು ವರ್ಷದ ಸಾಧನೆಯ ಸೇವೆಗಳ ಸಮರ್ಪಣಾ ಸಂಭ್ರಮ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದ್ದು, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರಿಗೆ ಮತ್ತು ಸಹಕರಿಸಿದ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ ಡಾ.ರಫೀಕ್ ಅಹಮದ್, ಸರಕಾರ ಈ ವರ್ಷದ ಅಂತ್ಯದೊಳಗೆ ಗ್ರೆಟರ್ ಬೆಂಗಳೂರು ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುವ ಸಾಧ್ಯತೆ ದಟ್ಟವಾಗಿದೆ.ಹಾಗಾಗಿ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು ಕಾರ್ಯಕರ್ತರು, ಮುಖಂಡರು ಸಿದ್ದರಾಗುವಂತೆ ಕರೆ ನೀಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ರಾಮಕೃಷ್ಣ ಮಾತನಾಡಿ, ಐಟಿ, ಬಿಟಿಯನ್ನು ದೇಶಕ್ಕೆ ಪರಿಚಯಿಸುವ ಮೂಲಕ ಎಲ್ಲರೂ ಟಿ.ವಿ., ಮೊಬೈಲ್ ಹೊಂದುವಂತೆ ತಂತ್ರಜ್ಞಾನದ ಅಭಿವೃದ್ದಿಗೆ ಮುನ್ನುಡಿ ಬರೆದವರು ರಾಜೀವ್ಗಾಂಧಿ ಅವರು,ನೂತನ ಶಿಕ್ಷಣ ನೀತಿಯ ಮೂಲಕ ಗ್ರಾಮೀಣ ಭಾಗದಲ್ಲಿ ನವೋದಯ ಶಾಲೆಗಳನ್ನು ತೆರದು ಬಡವರ ಮಕ್ಕಳು ಸ್ಪರ್ಧಾತ್ಮಕ ಜಗತ್ತನ್ನು ಸಮರ್ಥವಾಗಿ ಎದುರಿಸಲು ವೇದಿಕೆ ಕಲ್ಪಿಸಿದವರು ದಿ.ರಾಜೀವ್ಗಾಂಧಿ ಅವರು,ಇಂತಹ ನಾಯಕರ ಅಗತ್ಯ ದೇಶಕ್ಕೆ ಇದೆ ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಅಹಮದ್ ಮಾತನಾಡಿ,ಸಂಪ್ರದಾಯಕ ರೀತಿಯಲ್ಲಿ ನಡೆಯುತ್ತಿದ್ದ ದೇಶದ ಆಡಳಿತಕ್ಕೆ ತಂತ್ರಜ್ಞಾನದ ಮೂಲಕ ಅಧುನಿಕತೆಯ ವೇಗ ನೀಡಿದವರು ದಿ.ರಾಜೀವ್ಗಾಂಧಿ ಅವರು,ಫೈಲೆಟ್ ವೃತ್ತಿಯಿಂದ ಅನಿವಾರ್ಯ ಪರಿಸ್ಥಿತಿಯಲ್ಲಿ ದೇಶದ ಚುಕ್ಕಾಣಿ ಹಿಡಿದು ಇಡೀ ಪ್ರಪಂಚವೇ ಭಾರತದ ಕಡೆಗೆ ತಿರುಗಿ ನೋಡುವಂತೆ ಮಾಡಿದರು ಸ್ಯಾಮ್ ಪಿತ್ರೋಡ್ ಅವರ ಮೂಲಕ ಕಂಪಟ್ಯೂರ್ ಪರಿಚಯಿಸಿ ಅಭಿವೃದ್ದಿಯ ವೇಗವನ್ನು ಮತ್ತಷ್ಟು ಚುರುಕುಗೊಳಿಸಿದರು.ಎಷ್ಯಾ ಖಂಡದಲ್ಲಿಯೇ ಶಾಂತಿ ನೆಲಸಬೇಕು ಎಂಬ ಉದ್ದೇಶದಿಂದ ನ್ಯಾಷನಲ್ ಶಾಂತಿಪಾಲನಾ ಪಡೆಯನ್ನು ಸ್ಥಾಪಿಸಿ,ನೆರೆಯ ಶ್ರೀಲಂಕಾ ದೇಶಕ್ಕೆ ಕಂಟಕ ಪ್ರಾಯರಾಗಿದ್ದ ಎಲ್.ಟಿ.ಟಿ.ಇ ಯನ್ನು ಉಪಟಳಕ್ಕೆ ಕಡಿವಾಣ ಹಾಕಿದರು.ಆದರೆ ಇದೇ ಅವರಿಗೆ ಮುಳುವಾಗಿ, ಮಾನವ ಬಾಂಬ್ಗೆ ಬಲಿಯಾಗಿ ಹುತಾತ್ಮರಾದರು.ಈ ವಿಚಾರವನ್ನು ನಾವು ಜನತೆ ತಿಳಿಸಿ, ಬಿಜೆಪಿಯ ಜನವಿರೋಧಿ ನೀತಿಗಳನ್ನು ಖಂಡಿಸುವ ಕೆಲಸವನ್ನು ಮಾಡಬೇಕೆಂದರು.
ಗ್ರಾಮಾಂತರ ಮುಖಂಡರಾದ ಹೆಚ್.ಸಿ.ಷಣ್ಮುಗಪ್ಪ ಮಾತನಾಡಿ,ಮಾಜಿ ಪ್ರಧಾನಿ ದಿ.ರಾಜೀವ್ಗಾಂಧಿ ಅವರು ತಮ್ಮ ತಾಯಿಯಂತೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರು.ಅವರ ಕಾಲದಲ್ಲಿ ಐಟಿ,ಬಿಟಿ, ಕೃಷಿ, ನೀರಾವರಿ, ಕೈಗಾರಿಕೆ ಎಲ್ಲಾ ಕ್ಷೇತ್ರಗಳ ಬೆಳವಣಿಗೆಗೆ ಯೋಜನೆ ರೂಪಿಸಿದ್ದರು.ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದು,ಅವಕಾಶ ವಂಚಿತ, ದ್ವನಿ ಇಲ್ಲದ ಸಮುದಾಯಗಳಿಗೆ ಎಂ.ಎಲ್.ಸಿ., ರಾಜ್ಯಸಭಾ ಸ್ಥಾನಗಳಿಗೆ ಆಯ್ಕೆ ಮಾಡಿ,ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಪಕ್ಷ ಮಾಡಬೇಕಿದೆ.ಕಳೆದ ಮೂರು ವರ್ಷಗಳಿಂದ ಪಕ್ಷದ ಗೆಲುವಿಗಾಗಿ ದುಡಿದ ಹಲವರಿಗೆ ಅಧಿಕಾರ ದೊರೆತ್ತಿಲ್ಲ.ಸರಕಾರ ಈಗಲಾದರೂ ಅವಕಾಶ ವಂಚಿತರನ್ನು ಗುರುತಿಸಿ, ಅವರಿಗೆ ನಿಗಮ ಮಂಡಳಿಗಳಲ್ಲಿ ನೇಮಕ ಮಾಡುವ ಮೂಲಕ ಕಾರ್ಯಕರ್ತರಿಗೆ ಬಲ ತುಂಬುವ ಕೆಲಸ ಮಾಡಬೇಕೆಂದರು.
ಮಹಿಳಾ ಮುಖಂಡರಾದ ಸೌಭಾಗ್ಯ ಮಾತನಾಡಿ, ನಮ್ಮ ನೆಚ್ಚಿನ ನಾಯಕರಾಗಿದ್ದ ಮಾಜಿ ಪ್ರಧಾನಿ ರಾಜೀವ್ಗಾಂಧಿ ಅವರು ಶ್ರೀಪರೆಂಬದೂರಿನಲ್ಲಿ ಮಾನವ ಬಾಂಬ್ಗೆ ಬಲಿಯಾಗಿ 36 ವರ್ಷ ಕಳೆದಿದೆ.ಅಂತಹ ದೂರದೃಷ್ಟಿ ಉಳ್ಳ ನಾಯಕನನ್ನು ನಾವೆಲ್ಲರೂ ಆದರ್ಶವಾಗಿ ತೆಗೆದುಕೊಳ್ಳಬೇಕಿದೆ.ಕಾಂಗ್ರೆಸ್ ಪಕ್ಷ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಶೇ33ರ ಮಹಿಳಾ ಮೀಸಲಾತಿಗೆ ಒತ್ತಾಯಿಸುತ್ತಿದೆ.ಮೊದಲು ಪಕ್ಷದ ಹುದ್ದೆಗಳಲ್ಲಿ ಈ ಮೀಸಲಾತಿಯನ್ನು ಜಾರಿಗೆ ತಂದರೆ,ಕಳೆದ ಮೂರು ವರ್ಷಗಳಿಂದ ಅಧಿಕಾರಕ್ಕಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿರುವ ಕಾರ್ಯಕರ್ತರಿಗೆ ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ,ಪಂಡಿತ ಜವಹರ್ ನೆಹರು, ಇಂದಿರಾಗಾಂಧಿ, ರಾಜೀವ್ಗಾಂಧಿ ಅವರುಗಳು ಈ ದೇಶಕ್ಕೆ ಭದ್ರ ಬುನಾದಿ ಹಾಕಿದವರು.ತಮ್ಮ ಜೀವದ ಹಂಗು ತೊರೆದು ಅಪರೇಷನ್ ಬ್ಲೂಸ್ಟಾರ್ ಹಾಗು ಶ್ರೀಲಂಕಕ್ಕೆ ಭಾರತದ ಶಾಂತಿ ಪಾಲನ ಪಡೆ ಕಳುಹಿಸಿ,ದೇಶದ ಜಲ್ವಂತ ಸಮಸ್ಯೆಗಳಿಗೆ ಪರಿಹಾರ ಹುಡುಕಿದ್ದರು.ಆದರೆ ಕಳೆದ ಎರಡು ವರ್ಷಗಳಿಂದ ಮಣಿಪುರ ಹೊತ್ತಿ ಉರಿದರೂ ಪ್ರಧಾನಿ ಭೇಟಿ ನೀಡಿಲ್ಲ.ತಿಂಗಳಿಗೊಂದು ವಿದೇಶಿ ಪ್ರವಾಸ ಮಾಡುವ ಪ್ರಧಾನಿಗೆ ಮಣಿಪುರಕ್ಕೆ ಹೋಗಲು ಸಮಯ ಇಲ್ಲ.ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಯುವಜನರಿಗೆ ಭವಿಷ್ಯ ಹಾಳಾಗಿದೆ. ಇದುವರೆಗೂ ಸೌಜನ್ಯಕ್ಕೂ ಬಾಯಿ ಬಿಟ್ಟಿಲ್ಲ. ಇಂತಹ ಪ್ರಧಾನಿಯಿಂದ ಜನರು ಎನನ್ನು ನಿರೀಕ್ಷಿಸಲು ಸಾಧ್ಯ.ಬಿಜೆಪಿಯ ಅಪಪ್ರಚಾರಗಳಿಗೆ ತಕ್ಕ ಉತ್ತರವಾಗಿ ಕಾರ್ಯಕರ್ತರು, ಮುಖಂಡರು ನೀಡಬೇಕಾಗಿದೆ.ಸರಕಾರದ ಮೂರು ವರ್ಷಗಳ ಸಾಧನೆಯ ಸಮಾವೇಶ ಯಶಸ್ವಿಗೊಳಿಸಿದ ಕಾರ್ಯಕರ್ತರಿಗೆ ಅಭಿನಂದನೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರಸ್ ಅಧ್ಯಕ್ಷರಾದ ಮಹೇಶ್, ಫಯಾಜ್,ಮುಖಂಡರಾದ ಪಂಚಾಕ್ಷರಯ್ಯ, ಷಣ್ಮುಗಪ್ಪ, ಸೈಯದ್ ದಾದಾಪೀರ್,ಅನಿಲ್ಕುಮಾರ್,ಸಂಜೀವಕುಮಾರ್,ಹಾಲೇನೂರು ವಿರೇಶಕುಮಾರ್,ಕೈದಾಳ ರಮೇಶ್,ಸುಜಾತ,ಸುಮ, ಕೆಂಪರಾಜು, ಇರ್ಫಾನ್, ಶಿವಾಜಿ, ಕುಮಾರಸ್ವಾಮಿ, ಶಿವರಾಜು, ನ್ಯಾತೇಗೌಡ ಮತ್ತಿತರರು ಉಪಸ್ಥಿತರಿದ್ದರು.