ಕೆಪಿಟಿಸಿಎಲ್ ಗೆ ಬೇಕಾದ ಭೂಮಿ ಖರೀದಿಗೆ ಕ್ರಮ

ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ನಾಗಲಮಡಿಕೆ ಹೋಬಳಿಯ ಹುಸೇನ್‌ಪುರ ಗ್ರಾಮದಲ್ಲಿ 400/220 ಕೆ.ವಿ. ವಿದ್ಯುತ್ ಸ್ಥಾವರ ನಿರ್ಮಾಣ ಯೋಜನೆಗೆ ಅಗತ್ಯವಿರುವ ಭೂಮಿಯನ್ನು ನೇರ ಖರೀದಿ ಮೂಲಕ ಸ್ವಾಧೀನಪಡಿಸಿಕೊಳ್ಳುವ ಸಂಬಂಧ ಧರ ನಿರ್ಧರಣಾ ಸಲಹಾ ಸಮಿತಿಯ ಸಭೆಯು ಇಂದು ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಧರ ನಿರ್ಧರಣಾ ಸಲಹಾ ಸಮಿತಿಯ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯಿತು.

ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯೋಚಿತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್‌ವ್ಯವಸ್ಥೆ ಹಕ್ಕು ಅಧಿನಿಯಮ-2013ರ ಕಲಂ 46ರ ಅನ್ವಯ, ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಭೂಮಾಲೀಕರಿಂದ ನೇರವಾಗಿ ಖರೀದಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಸರ್ಕಾರದ ಮಾರ್ಗಸೂಚಿಯಂತೆ 100 ಎಕರೆ ವಿಸ್ತೀರ್ಣ ಮೀರದ ಭೂಮಿಯನ್ನು ನೇರ ಖರೀದಿ ಮೂಲಕ ಪಡೆಯಲು ಅವಕಾಶವಿದ್ದು, ಈ ಸಂಬಂಧ ಭೂಕೋರಿಕೆ ಇಲಾಖೆಯಾದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್), ತುಮಕೂರು ವತಿಯಿಂದ ಸಲ್ಲಿಸಲಾದ ಪ್ರಸ್ತಾವನೆಯ ಮೇರೆಗೆ ಕ್ರಮ ಕೈಗೊಳ್ಳಲಾಗಿರುತ್ತದೆ.

ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಸದಸ್ಯ ಕಾರ್ಯದರ್ಶಿಗಳು ಹಾಗೂ ಮಧುಗಿರಿ ಉಪವಿಭಾಗಾಧಿಕಾರಿಗಳು ಸಂಬಂಧಿತ ಭೂಮಿಗಳ ಮೌಲ್ಯ ನಿರ್ಣಯ ಮಾಡಿ ಸಮಿತಿಯ ಅನುಮೋದನೆಗಾಗಿ ಸಭೆಗೆ ಮಂಡಿಸಿ ಸಭೆಯಲ್ಲಿ ಯೋಜನೆಗೆ ಅಗತ್ಯವಿರುವ ಭೂಮಿಯನ್ನು ನೇರ ಖರೀದಿ ಮೂಲಕ ಪಡೆಯುವ ಕುರಿತು ಸವಿಸ್ತಾರವಾಗಿ ಚರ್ಚಿಸಲಾಯಿತು.

ಯೋಜನೆಗಾಗಿ ಖರೀದಿಸಲಾಗುತ್ತಿರುವ ಭೂಮಿಗೆ ಸಂಬಂಧಿಸಿದಂತೆ ಒಟ್ಟು 13 ಮಂದಿ ಭೂಮಾಲೀಕರು/ಫಲಾನುಭವಿಗಳು ಇದ್ದು, ರೈತರಿಗೆ ನ್ಯಾಯೋಚಿತ ಪರಿಹಾರ ಒದಗಿಸುವ ಉದ್ದೇಶದಿಂದ ಸಮಿತಿಯು ವಿಷಯವನ್ನು ಕೂಲಂಕುಷವಾಗಿ ಪರಿಶೀಲಿಸಿತು. ಬಳಿಕ ನೇರ ಖರೀದಿ ಆಧಾರದ ಮೇಲೆ ಪ್ರತಿ ಎಕರೆಗೆ ರೂ.22 ಲಕ್ಷಗಳ ದರವನ್ನು ನಿಗದಿಪಡಿಸಿ ಅನುಮೋದಿಸಲಾಯಿತು.

ಈ ಯೋಜನೆಯ ಅನುಷ್ಠಾನದಿಂದ ಪ್ರದೇಶದಲ್ಲಿ ವಿದ್ಯುತ್ ಮೂಲಸೌಕರ್ಯ ಮತ್ತಷ್ಟು ಬಲಗೊಳ್ಳಲಿದ್ದು, ವಿದ್ಯುತ್ ಸರಬರಾಜಿನ ಗುಣಮಟ್ಟ ಹಾಗೂ ವಿಶ್ವಾಸಾರ್ಹತೆ ಹೆಚ್ಚಳವಾಗಲಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಸಭೆಯಲ್ಲಿ ಮಾನ ಜಿಲ್ಲಾಧಿಕಾರಿಗಳು, ಕೆಪಿಟಿಸಿಎಲ್ ನ ಅಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು
ಭಾಗವಹಿಸಿದ್ದರು.

Leave a Reply

Your email address will not be published. Required fields are marked *