ಹೇಮಾವತಿ ಎಕ್ಸ್‍ಪ್ರೆಸ್ ಕೆನಾಲ್ ಕಾಮಗಾರಿಗೆ ವಿರೋಧ-ಶಾಸಕ ಎಂ.ಟಿ.ಕೃಷ್ಣಪ್ಪ

ತುಮಕೂರು:ಕುಣಿಗಲ್ ಮೂಲಕ ಮಾಗಡಿ ಮತ್ತು ರಾಮನಗರಕ್ಕೆ ಹೇಮಾವತಿ ಎಕ್ಸ್‍ಪ್ರೆಸ್ ಕೆನಾಲ್ ಮೂಲಕ ಹೇಮಾವತಿ ನೀರು ತೆಗೆದುಕೊಂಡು ಹೋಗುವ ಕಾಮಗಾರಿಗೆ ನಮ್ಮ ವಿರೋಧವಿದ್ದು,ಇರುವ ನಾಲೆಯಲ್ಲಿ ನೀರು ತೆಗೆದುಕೊಂಡು ಹೋಗಲು ನಮ್ಮ ಅಭ್ಯಂತರವಿಲ್ಲ ಎಂದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಡಿ.ಸಿ.ಎಂ. ಹಾಗೂ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅವರು ತರಾತುರಿಯಲ್ಲಿ ಕಾಮಗಾರಿ ನಡೆಸಲು ಬಂದಾಗ,ಎಕ್ಸ್‍ಪ್ರೆಸ್ ಕೆನಾಲ್‍ನಿಂದ ಜಿಲ್ಲೆಯ ಗುಬ್ಬಿ, ಮಧುಗಿರಿ, ಕೊರಟಗೆರೆ, ತುಮಕೂರು ನಗರ, ಗ್ರಾಮಾಂತರ ತಾಲೂಕುಗಳಿಗೆ ಆಗುವ ನೀರಿನ ತೊಂದರೆಯನ್ನು ಮನಗಂಡು ಸಾರ್ವಜನಿಕರು, ರೈತರು, ಸ್ವಾಮೀಜಿಗಳು ಒಗ್ಗೂಡಿ ಬೃಹತ್ ಹೋರಾಟ ನಡೆಸಿದ್ದರ ಫಲವಾಗಿ, ಕಾಮಗಾರಿ ಸ್ಥಗೀತಗೊಂಡಿತ್ತು. ಡಿಸಿಎಂ ಆಗಿದ್ದ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ತಕ್ಷಣವೇ ಮತ್ತೆ ಕಾಮಗಾರಿ ಕೈಗೊಳ್ಳುವ ಮಾತುಗಳನ್ನು ಈಗಿನ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳುತಿದ್ದಾರೆ.ಇದು ಸರಿಯಲ್ಲ.ಜಿಲ್ಲೆಯ ಜನರ ವಿರೋಧವಿದೆ ಎಂದರು.

ಉಪಮುಖ್ಯಮಂತ್ರಿಗಳಾಗಿರುವ ಡಾ.ಜಿ.ಪರಮೇಶ್ವರ್ ತುಮಕೂರು ಜಿಲ್ಲೆಯಿಂದ ಗೆಲುವು ಸಾಧಿಸಿ,ಸಚಿವರಾಗಿದ್ದಾರೆ.ಜಿಲ್ಲೆಯ ಹಿತ ಕಾಯುವುದನ್ನು ಬಿಟ್ಟು,ಪೈಪ್ ಲಾಭಿಗೆ ಮಣಿದು ಎಕ್ಸ್‍ಪ್ರೆಸ್ ಕೆನಾಲ್‍ಗೆ ವಿರೋಧ ವ್ಯಕ್ತಪಡಿಸುತ್ತಿರುವ ರೈತರ ಮನವೊಲಿಸುವ ಮಾತನಾಡುತಿದ್ದಾರೆ.ಮೊದಲು ನಮ್ಮ ಜಿಲ್ಲೆಗೆ ನಿಗಧಿಪಡಿಸಿರುವ ನೀರನ್ನು ಹರಿಸಲಿ.ಅಂಕಿ ಅಂಶಗಳ ಪ್ರಕಾರ ಕುಣಿಗಲ್‍ಗೆ ನಿಗಧಿಪಡಿಸಿರುವ 3.03 ಮತ್ತು ಮಾಗಡಿಯ 0.650 ಎಂ.ಸಿ.ಎಫ್.ಟಿ ನೀರಿಗೆ ಬದಲಾಗಿ,ಮಾರ್ಕೋನಹಳ್ಳಿ, ಮಂಗಳ ಜಲಾಶಯ, ಕುಣಿಗಲ್ ದೊಡ್ಡ ಕೆರೆ ಸೇರಿದಂತೆ ಒಟ್ಟು 7.50 ಟಿ.ಎಂ.ಸಿ ನೀರು ಹರಿದಿದೆ.ಇದನ್ನು ಮುಚ್ಚಿಟ್ಟು ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಎಂ.ಟಿ.ಕೃಷ್ಣಪ್ಪ ಆರೋಪಿಸಿದರು.

ಸರಕಾರ ಮತ್ತು ಜಿಲ್ಲಾಡಳಿತ ಪೊಲೀಸರ ಬಲ ಬಳಸಿ ನಾವು ಪ್ರತಿಭಟನೆಯನ್ನು ಹತ್ತಿಕ್ಕುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ. ಈಲ್ಲೆಯಲ್ಲಿ 24 ಲಕ್ಷ ರೈತರಿದ್ದು,ಅವರಿಗೆ ನೀರಿನ ಸಮಸ್ಯೆಯ ಅರಿವಿದೆ.ಸ್ವಯಂ ಪ್ರೇರಿತರಾಗಿ ಹೋರಾಟಕ್ಕೆ ಬರಲಿದ್ದಾರೆ. ಒಂದು ವೇಳೆ ಅವರು ಲಾಠಿ ಚಾರ್ಜ್ ಮಾಡಿದರೆ, ನಾವು ಎಡೆಮಟ್ಟೆ ಎತ್ತದೆ ವಿಧಿಯಿಲ್ಲ.ಅಂತಹ ದುಸ್ಥಿತಿಗೆ ಸರಕಾರ ನಮನ್ನು ತಳ್ಳಬಾರದು.ಗೋಲಿಬಾರಿಗೆ ಎದೆಕೊಡಲು ಸಿದ್ದರಿದ್ದೇವೆ.ಜಿಲ್ಲೆಯ ಎಲ್ಲಾ ಪಕ್ಷಗಳ ಶಾಸಕರು, ಸಂಸದರು, ಮುಖಂಡರು ಒಗ್ಗೂಡಿ ಜಿಲ್ಲೆಯ ಹಿತಕಾಯೋಣ. ಯಾರ ಬರಲಿ, ಬಿಡಲಿ, ಕಾಮಗಾರಿ ಆರಂಭವಾದರೆ ಹೋರಾಟ ಖಚಿತ ಎಂದು ಎಂ.ಟಿ.ಕೃಷ್ಣಪ್ಪ ನುಡಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ ಮಾತನಾಡಿ,ಒಂದೆರಡು ತಿಂಗಳು ಮಳೆ ವೆತ್ಯಾಸ ಆಗಿರುವುದಕ್ಕೆ ರೈತರ ಕೊಳವೆ ಬಾವಿಗಳಲ್ಲಿ ನೀರಿಲ್ಲದ ತೋಟ, ತುಡಿಕೆಗಳನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಏಕ್ಸ್‍ಪ್ರೆಸ್ ನಾಲೆಯ ಮೂಲಕ ನೀರು ತೆಗೆದುಕೊಂಡು ಹೋದರೆ ಉಳಿದವರ ಪಾಡೇನು ? ಹಾಗಾಗಿ ಎಕ್ಸ್‍ಪ್ರೆಸ್ ಕೆನಾಲ್ ವಿರುದ್ದದ್ದ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದರು.

ತಿಪಟೂರು ಮುಖಂಡ ಕೆ.ಟಿ.ಶಾಂತಕುಮಾರ್ ಮಾತನಾಡಿ,ಹೇಮಾವತಿ ಲಿಂಕ್ ಕೆನಾಲ್ ಮೂಲಕ ಡಾ.ಜಿ.ಪರಮೇಶ್ವರ್ ಜಿಲ್ಲೆಯ ಜನರಿಗೆ ದ್ರೋಹ ಬಗೆಯಲು ಹೊರಟಿದ್ದಾರೆ.ಈಗಾಗಲೇ ಕುಣಿಗಲ್‍ಗೆ ನಾಲೆಯ ಮೂಲಕ ಸಾಕಷ್ಟು ನೀರು ಹರಿಯುತ್ತಿದೆ.ನಮಗೆ ನಿಗಧಿಪಡಿಸಿರುವ ನೀರನ್ನು ನೀಡಿ ಎಲ್ಲಿಗಾದರೂ ತೆಗೆದುಕೊಂಡು ಹೋಗಲಿ, ಆದರೆ ರೈತರ ಹಿತ ಬಲಿಕೊಟ್ಟು ಮಾಗಡಿ, ರಾಮನಗರಕ್ಕೆ ಹೇಮಾವತಿ ನೀರು ತೆಗೆದುಕೊಂಡು ಹೊಗಲು ಅವಕಾಶ ನೀಡುವುದಿಲ್ಲ್ಲ. ಎಂತಹ ಹೋರಾಟಕ್ಕು ಸಿದ್ದರಿರುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಶಿರಾ ಉಗ್ರೇಶ್,ಜೆಡಿಎಸ್ ಜಿಲ್ಲಾ ವಕ್ತಾರ ಮೆಡಿಕಲ್ ಮಧು ಸೇರಿದಂತೆ ಹಲವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *