ತುಮಕೂರು: ನಗರದಲ್ಲಿನ ರಾಜಕಾಲುವೆಗಳಲ್ಲಿ ತುಂಬಿರುವ ತ್ಯಾಜ್ಯವನ್ನು ಕೂಡಲೇ ತೆರವುಗೊಳಿಸಿ ಸ್ವಚ್ಚಗೊಳಿಸುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತಕ್ಕೆ ಮಾಜಿ ಶಾಸಕ ಡಾ|| ರಫೀಕ್ ಅಹ್ಮದ್ ಒತ್ತಾಯಿಸಿದ್ದಾರೆ.
ರಾಜಕಾಲುವೆಗಳಲ್ಲಿನ ತ್ಯಾಜ್ಯ ಮತ್ತು ಗಿಡಗಂಟೆಗಳು ಹೆಚ್ಚಾಗಿದ್ದ ಪರಿಣಾಮ, ಕಳೆದ ಹಲವು ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ರಾಜಕಾಲುವೆಯಲ್ಲಿ ಹರಿಯಬೇಕಿದ್ದ ನೀರು ರಸ್ತೆ ಮೇಲೆ ಹರಿದು ಸಂಚಾರಕ್ಕೆ ಅಡ್ಡಿಯುಂಟಾಗಿ ಹಲವು ಪ್ರದೇಶಗಳಲ್ಲಿ ಮನೆಗಳಿಗೂ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿ ಅಪಾರ ನಷ್ಟವಾಗಿತ್ತು. ಈ ವೇಳೆ ರಾಜಕಾಲುವೆ ಸ್ವಚ್ಚಗೊಳಿಸುವ ಕಾರ್ಯ ಪ್ರಾರಂಭಿಸಿದರಾದರೂ ಎಲ್ಲಿಯೂ ಪೂರ್ಣಪ್ರಮಾಣದಲ್ಲಿ ಸ್ವಚ್ಚಗೊಳಿಸಿಲ್ಲ, ರಾಜಕಾಲುವೆ ಸ್ವಚ್ಚಗೊಳಿಸುವಂತೆ ತೋರ್ಪಡಿಕೆಯ ಕೆಲಸ ಮಾಡಿ ಸುಮ್ಮನಾಗಿದ್ದಾರೆ. ಮತ್ತೆ ಮಳೆ ಬಂದಾಗ ಮಾತ್ರ ಇವರುಗಳಿಗೆ ರಾಜಕಾಲುವೆಗಳು ನೆನಪಾಗುತ್ತದೆ ಎಂದು ಡಾ||ರಫೀಕ್ ಅಹ್ಮದ್ ತಿಳಿಸಿದ್ದಾರೆ.
ಅಧಿಕಾರಿಗಳ ಅಸಡ್ಡೆತನದಿಂದ ಪ್ರಾಣಹಾನಿಗಳಾದರೆ ಯಾರು ಜವಾಬ್ದಾರಿ, ಅನಾಹುತಗಳಾದಾಗ ಪರದಾಡುವ ಬದಲು ಈಗಲೇ ಆ ಕೆಲಸ ಮಾಡಿ ಮುಗಿಸಿ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುನ್ನೆಚ್ಚರಿಕೆ ವಹಿಸಿ ಕೂಡಲೇ ಅಗತ್ಯ ಕ್ರಮ ತಗೆದುಕೊಂಡು ರಾಜಕಾಲುವೆಗಳನ್ನು ಸ್ವಚ್ಚಗೊಳಿಸಿ ಮುಂದಾಗುವ ಅನಾಹುತಗಳನ್ನು ತಪ್ಪಿಸುವಂತೆ ಮಾಜಿ ಶಾಸಕರು ಆಗ್ರಹಿಸಿದ್ದಾರೆ.