ತುಮಕೂರು:ಜನಸಂಘದ ಕಾಲದಲ್ಲಿ ಜನರು ನಮ್ಮನ್ನು ಅಪಹಾಸ್ಯದಿಂದ ನೋಡುತ್ತಿದ್ದರು. ಜೈಲಿಗೋದವರೇ ಹೆಚ್ಚು ಜನ ಜನಸಂಘದಲ್ಲಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಹೇಳಿದರು.
ಮಾಜಿ ಲೋಕಸಭಾ ಉಪಸಭಾಪತಿ,ದಿವಂಗತ ಎಸ್.ಮಲ್ಲಿಕಾರ್ಜುನಯ್ಯ ಅವರ 92ನೇ ಹುಟ್ಟು ಹಬ್ಬದ ಅಂಗವಾಗಿ ಇಂದು ಬಾಲಭವನದಲ್ಲಿ ರಾಷ್ಟ್ರಸೇವಕ ಮಲ್ಲಿಕ್ ಎಂಬ ಅಭಿನಂದನಾ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು
ಜನಸಂಘದ ಕಾಲಘಟ್ಟದಲ್ಲಿ ಕೆಲಸ ಮಾಡುವುದಕ್ಕೂ,ಭಾಜಪ ಕಾಲದಲ್ಲಿ ಕೆಲಸ ಮಾಡುವುದಕ್ಕೂ ಅಜಗಜಾಂತರ ವೆತ್ಯಾಸವಿದೆ. ಮಲ್ಲಿಕಾರ್ಜುನಯ್ಯನವರು 1972ರ ಜನಸಂಘದ ಅಧ್ಯಕ್ಷರಾಗಿದ್ದ ಕಾಲದಲ್ಲಿ ನಾನಿನ್ನು ಹಸುಗೂಸು.1992ರಲ್ಲಿ ಅವರು ಉಪಸಭಾಪತಿಯಾಗಿದ್ದಾಗ ಅವರನ್ನು ಭೇಟಿಯಾದಾಗ,ರಾಜಕಾರಣ ಜಾರು ಬಂಡೆ ಇದ್ದಂತೆ,ಎರುವುದು ಕಷ್ಟ,ಆದರೆ ಇಳಿಯುವುದು ಅತಿ ಸುಲಭ ಎಂಬ ಕಿವಿ ಮಾತು ಹೇಳಿದ್ದರು.ಅಂತಹವರ ಕಾರ್ಯಕ್ರಮಕ್ಕೆ ನನ್ನನ್ನು ಕರೆಸಿ,ಉದ್ಘಾಟಿಸಲು ಕರೆಸಿರುವುದು,ಅವರಲ್ಲಿಯ ಕೆಲ ಗುಣಗಳು ನನಗೆ ಬರಲಿ ಎಂಬುದು ಇರಬೇಕು ಎಂದರು.
ಅಧಿಕಾರವೆಂಬ ಪಿತ್ತ, ಹಣ ಪಿತ್ತಕ್ಕಿಂತ ಅತ್ಯಂತ ಕೆಟ್ಟದು,ಆದರೆ ಮಲ್ಲಿಕಾರ್ಜುನಯ್ಯ ಎಂದಿಗೂ ಈ ಎರಡು ಪಿತ್ತಗಳನ್ನು ಹತ್ತಿಸಿಕೊಂಡವರಲ್ಲ.ನಾಲ್ಕು ಬಾರಿ ಎಂ.ಎಲ್.ಸಿ.ಯಾಗಿ,ಎರಡು ಬಾರಿ ಸಂಸದರಾಗಿ, ಲೋಕಸಭೆಯ ಉಪಸಭಾಪತಿಯಾಗಿ ದ್ದಾಗಲೂ ಓರ್ವ ಕಾರ್ಯಕರ್ತನಂತೆಯೇ ಜೀವಿಸಿದವರು.ರಾಜಕಾರಣದಲ್ಲಿ ಇದ್ದವರಿಗೆ ಯಾವಾಗಲು ಅಧಿಕಾರದಲ್ಲಿ ಇರಬೇಕು ಅನ್ನಿಸುತ್ತೇ,ಅದು ತಪ್ಪಲ್ಲ.ಆದರೆ ಅಧಿಕಾರಕ್ಕೆ ಅಂಟಿಕೊಳ್ಳದೆ,ಸಿದ್ದಾಂತಕ್ಕೆ ಅಂಟಿಕೊಂಡವರು,ಹಾಗಾಗಿಯೇ ಪಕ್ಷಾಂತರಿಯಾಗಲಿಲ್ಲ ಎಂದು ಸಿ.ಟಿ.ರವಿ ಮಾರ್ಮಿಕವಾಗಿ ನುಡಿದರು.
.
ಜನಸಂಘದ ಕಾಲದಲ್ಲಿ ಒಂದು ಸಿದ್ದಾಂತಕ್ಕೆ ಕಟ್ಟಿ ಬದ್ದವಾದ ನಂಬಿಕೆ ಹೊಂದಿದ್ದ ಕಾರ್ಯಕರ್ತರೇ ಸಂಪತ್ತು. ಇಂದು ಕಾಲ ಬದಲಾಗಿದೆ. ಬಿಜೆಪಿಗೆ ಅಪಾರವಾದ ಜನಮನ್ನಣೆ ದೊರೆತಿದೆ.ಜಗತ್ತು ಗುರುತಿಸುವಂತಹ ರಾಜಕೀಯ ನೇತೃತ್ವವೂ ಕೂಡ ನಮ್ಮದಾಗಿದೆ.ಇಂದು ಪಕ್ಷಕ್ಕಾಗಿ ಕೆಲಸ ಮಾಡುವುದು ಕಷ್ಟವಲ್ಲ.ವಿರೋಧಪಕ್ಷವಾಗಿ ಕೆಲಸ ಮಾಡುವುದು ಕಷ್ಟವಿದ್ದ ಕಾಲದಲ್ಲಿ ಒಂದು ಪಕ್ಷವನ್ನು ಮುನ್ನಡೆಸಿದ ಮಲ್ಲಿಕಾರ್ಜುನಯ್ಯ ನಮಗೆಲ್ಲಾ ಮಾದರಿ.ಇಂದು ಪಕ್ಷ ಇಷ್ಟು ಬೆಳೆದಿದೆ ಎಂದರೆ ಮಲ್ಲಿಕಾರ್ಜುನಯ್ಯ ಅಂತಹ ಹಲವರ ಶ್ರಮವಿದೆ ಎಂದು ಸಿ.ಟಿ.ರವಿ ಅಭಿಪ್ರಾಯಪಟ್ಟರು.
ಹಿರಿಯ ಮುಖಂಡ ರಾಮಚಂದ್ರಗೌಡ ಮಾತನಾಡಿ,ನನ್ನ ಅವರ ಸಂಬಂಧ ಸುಮಾರು 62 ವರ್ಷದ್ದು,ನಾನು ಶಾಸಕ, ಸಭಾಪತಿ,ಉಪಸಭಾಪತಿ ಎಂಬ ಅಹಂನ್ನು ಹೊಂದಿದವರಲ್ಲ.ಬಸವಣ್ಣನವರ ಕಲ ಬೇಡ,ಕೊಲಬೇಡ,ಹುಸಿಯ ನುಡಿಯ ಬೇಡ ಎಂಬ ನುಡಿಯಂತೆ ಬದುಕಿದವರು ಎಂದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ,ನಾನು ರಾಜಕೀಯ,ವಕೀಲ ವೃತ್ತಿ ಎರಡರಲ್ಲಿಯೂ ಮಲ್ಲಿಕಾರ್ಜುನಯ್ಯ ಅವರ ಶಿಷ್ಯ,ಯಾರ ಮೇಲು ಕೋಪ ಮಾಡಿಕೊಳ್ಳದೆ, ಅವರು ದುಡಿಮೆಗೋಸ್ಕರ ವಕೀಲರ ವೃತ್ತಿ ಮಾಡಿದವರಲ್ಲ.ಅದನ್ನು ಸಹ ಸಮಾಜ ಸೇವೆ ಎಂದೆ ತಿಳಿದಿದ್ದರು.ಕಷ್ಟದಲ್ಲಿದ್ದವರನ್ನು ಕಂಡರೆ ಮರುಗುತಿದ್ದ ಜೀವ. ಅಂತಹವರ ಹೆಸರಿನಲ್ಲಿ ಗ್ರಂಥ ಬಿಡುಗಡೆಯಾಗುತ್ತಿರುವುದು ಸಂತೋದ ವಿಚಾರ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಮಲ್ಲಿಕ್ ಅಭಿನಂದನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ.ಎಸ್.ನಿರಂಜನ್,ಸಜ್ಜನ ರಾಜಕಾರಣಿಯಾಗಿದ್ದ ಮಲ್ಲಿಕಾರ್ಜುನಯ್ಯ ಅವರ ಹೆಸರಿನಲ್ಲಿ ಅಭಿನಂದನಾ ಗ್ರಂಥವೊಂದನ್ನು ತಂದು, ಅವರನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕೆಂಬ ಹಲವರ ಸಲಹೆಯ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿನಿಂದ ಶ್ರಮ ಪಟ್ಟು ರಾಷ್ಟ್ರಸೇವಕ ಮಲ್ಲಿಕ್ ಎಂಬ ಅಭಿನಂದನಾ ಗ್ರಂಥವನ್ನು ಹೊರತರಲಾಗಿದೆ.ರಾಜಕಾರಣಿಗಳು,ಪತ್ರಕರ್ತರು,ಜನಸಾಮಾ ನ್ಯರುಗಳು ತಾವು ಮಲ್ಲಿಕಾರ್ಜುನಯ್ಯ ಅವರನ್ನು ಹೇಗೆ ಕಂಡಿದ್ದರೋ,ಅದೇ ರೀತಿ ತಮ್ಮ ಲೇಖನಗಳಲ್ಲಿ ಚಿತ್ರಿಸಿದ್ದಾರೆ. ಜಿಲ್ಲೆಯ ರಾಜಕಾರಣವನ್ನು ಅಧ್ಯಯನ ಮಾಡಲು ಇದೊಂದು ಉತ್ತಮ ಅಕರ ಗ್ರಂಥವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನಯ್ಯ ಅಭಿನಂದನಾ ಸಮಿತಿಯ ಅಧ್ಯಕ್ಷ ಡಾ.ಹುಲಿನಾಯ್ಕರ್,ಗೌರವಾಧ್ಯಕ್ಷ ಹೆಚ್.ಜಿ.ಚಂದ್ರಶೇಖರ್,ಮಲ್ಲಿಕಾರ್ಜುನಯ್ಯ ಅವರ ಪತ್ನಿ,ಜಯದೇವಮ್ಮ,ಶಾಸಕ ಜೋತಿಗಣೇಶ್, ಅಭಿನಂದನಾ ಸಮಿತಿಯ ಮುರುಳೀಧರ ಹಾಲಪ್ಪ,ಅಯಾಜ್ ಅಹಮದ್,ಎಸ್.ಪಿ.ಚಿದಾನಂದ್,ಮಾಜಿ ಶಾಸಕರಾದ ಸೊಗಡು ಶಿವಣ್ಣ,ಗಂಗಹನುಮಯ್ಯ .ಎಸ್.ಅರ್.ಪಾಟೀಲ್,ಮತ್ತಿತರರು ಉಪಸ್ಥಿತರಿದ್ದರು.