
ತುಮಕೂರು : ಗೊರೂರು ಹೇಮಾವತಿ ಜಲಸಂಗ್ರಹಾಗಾರದಿಂದ ತಮಿಳುನಾಡಿಗೆ ನೀರು ಹರಿಸುವುದರ ಬದಲು, ತುಮಕೂರು ಜಿಲ್ಲೆಗೆ ಹರಿಸುವಂತೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್.ರಾಜಣ್ಣ ಅವರುಗಳನ್ನು ಮಾಜಿ ಸಚಿವ ಸೊಗಡು ಶಿವಣ್ಣ ಆಗ್ರಹಿಸಿದರು.
ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತ ನಾಡಿ ಜಿಲ್ಲೆಗೆ ಉಚ್ಛ ನ್ಯಾಯಾಲಯದ ಆದೇಶ ಮತ್ತು ಸರ್ಕಾರದ ನಡಾವಳಿಯಂತೆ ಗೊರೂರಿನ ಹೇಮಾವತಿ ಜಲಾಶಯದಿಂದ 2023-24ನೇ ಸಾಲಿಗೆ ಹರಿಸಬೇಕಾದ ನಮ್ಮ ಪಾಲಿನ 25 ಟಿ.ಎಂ.ಸಿ ನೀರನ್ನು ನಾಗರೀಕರಿಗೆ ಕುಡಿಯಲು, ರೈತರಿಗೆ ಕೃಷಿ ಮತ್ತು ಜನ ಜಾನುವಾರುಗಳು, ಅಂತರ್ಜಲ ವೃದ್ಧಿಯ ಸಂಬಂಧಿಸಿದ ಚಟುವಟಿಕೆಗಳಿಗೆ ತತ್ಕ್ಷಣವೇ ಹರಿಸಬೇಕೆಂದು ಸರ್ಕಾರಕ್ಕೆ ಶಿವಣ್ಣ ಒತ್ತಾಯಿಸಿದ್ದಾರೆ.
.
ಗೊರೂರು ಹೇಮಾವತಿ ಜಲಾಶಯದಲ್ಲಿ ಕಳೆದ 2-3 ತಿಂಗಳುಗಳ ಹಿಂದೆ 26 ಟಿ.ಎಂ.ಸಿ ನೀರು ಸಂಗ್ರಹವಿತ್ತು. ಸದ್ಯ ಇದೀಗ 18 ಟಿ.ಎಂ.ಸಿ.ನೀರು ಗೊರೂರು ಜಲಸಂಗ್ರಹಾಗಾರದಲ್ಲಿದ್ದು, 4 ಟಿ.ಎಂ.ಸಿ. ಡೆಡ್ಸ್ಟೋರೇಜ್ ಕಳೆದು 14. ಟಿ.ಎಂ.ಸಿ ನೀರು ಲಭ್ಯವಿರುತ್ತದೆ. ತುಮಕೂರು ಜಿಲ್ಲೆಗೆ ಕಳೆದ ಬೇಸಿಗೆಯ ಅವಧಿಯೂ ಸೇರಿದಂತೆ 9.08.2003 ರಿಂದ 18.09.2023 ರವರೆಗಿನ ಒಂದು ತಿಂಗಳು ಮಾತ್ರ ಸುಮಾರು 5.70 ಟಿ.ಎಂ.ಸಿ. ಹೇಮಾವತಿ ನೀರನ್ನು ಗೊರೂರು ಜಲಾಶಯದಿಂದ ಹರಿಸಲಾಗಿದೆ ಎಂಬುದನ್ನು ದಾಖಲೆಗಳು ಸ್ಟಪ್ಟಪಡಿಸಿವೆ ಎಂಬ ಮಾಹಿತಿಯನ್ನು ತಿಳಿಸಿದರು.
ಸದ್ಯದ ಪರಿಸ್ಥಿತಿಯಲ್ಲಿ ತುಮಕೂರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಬರಪೀಡಿತ ತಾಲ್ಲೂಕುಗಳೆಂದು ಸರ್ಕಾರವೇ ಘೋಷಿಸಿದೆ ಎಂದರು. ತುಮಕೂರು ಜಿಲ್ಲೆಯ ತಿಪಟೂರು, ತುರುವೇಕೆರೆ, ಗುಬ್ಬಿ, ಚಿಕ್ಕನಾಯಕನಹಳ್ಳಿ, ಶಿರಾ, ಮಧುಗಿರಿ, ಕೊರಟಗೆರೆ, ಕುಣಿಗಲ್ ಹಾಗೂ ತುಮಕೂರು ಗ್ರಾಮಾಂತರದ 158 ಕೆರೆಗಳ ಒಟ್ಟು ಸಾಮಥ್ರ್ಯ 5467.65 ಎಂ.ಸಿ.ಎಫ್.ಟಿ ಸಾಮಥ್ರ್ಯ ಇದ್ದು, ಈ ಸಾಲಿನಲ್ಲಿ ಅಂದರೆ 18.09.2023 ರವರೆಗೆ 1490.16 ಎಂ.ಸಿ.ಎಫ್.ಟಿ ರಷ್ಟು ಪ್ರಮಾಣದ ನೀರನ್ನು ಹೇಮಾವತಿ ನಾಲೆಯ ಮೂಲಕ ಹರಿಸಲಾಗಿರುತ್ತದೆ ಎಂದು ಮಾಹಿತಿ ನೀಡಿ, ಈ ಬಾರಿ ಜಿಲ್ಲೆಯಲ್ಲಿ ಮಳೆ ಕೈಕೊಟ್ಟಿದೆ. ಆದ್ದರಿಂದ ಉಳಿಕೆ ನಮ್ಮ ಜಿಲ್ಲೆಗೆ ಹಂಚಿಕೆಯಾಗಿರುವ ನೀರಿನ ಪ್ರಮಾಣವನ್ನು ಹರಿಸಿದರೆ ಮುಂದಿನ ಮಳೆಗಾಲದವರೆಗೂ ಕೆರೆಗಳಲ್ಲಿ ನೀರು ಸಂಗ್ರಹವಾದರೆ ಕುಡಿಯುವ ನೀರು, ಅಂತರ್ಜಲ ವೃದ್ಧಿ, ಪ್ರಾಣಿ-ಪಕ್ಷಿಗಳು-ಜಾನುವಾರುಗಳಿಗೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ಮುಂದಿನ ವರ್ಷ ಭಾರೀ ಬೆಲೆಯನ್ನು ತುಮಕೂರು ಜಿಲ್ಲೆ ತೆರಬೇಕಾಗುತ್ತದೆ ಎಂದರು. ಜಿಲ್ಲೆಯ ಪ್ರಜ್ಞಾವಂತರು, ರೈತರು, ನಾಗರೀಕರು ಈ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕೆಂದು ವಿನಂತಿಸಿದರು.
ಈ ಮೇಲ್ಕಂಡ ಎಲ್ಲಾ ಮಾಹಿತಿಯನ್ನು ಗಮ ಹಾಲಿ ಇರುವ 14 ಟಿ.ಎಂ.ಸಿ ನೀರನ್ನು ಆದ್ಯತೆ ಮೇಲೆ ತತ್ಕ್ಷಣವೇ ಹರಿಸಿ ಕುಡಿಯುವ ನೀರಿನ ಬವಣೆ ನೀಗಿಸಬೇಕೆಂದು ಸಾರ್ವಜನಿಕ ಹಿತದೃಷ್ಠಿಯಿಂದ ಆಗ್ರಹಪೂರ್ವಕವಾಗಿ ಸರ್ಕಾರ, ತುಮಕೂರು ಹಾಗೂ ಹಾಸನ ಉಸ್ತುವಾರಿ ಸಚಿವರು ಮತ್ತು ತುಮಕೂರು ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಹಾನಗರಪಾಲಿಕೆ ಮಾಜಿ ಸದಸ್ಯ ಕೆ.ಪಿ.ಮಹೇಶ, ಸಾಮಾಜಿಕ ಹೋರಾಟಗಾರರಾದ ಆಟೋ ನವೀನ್ ಮತ್ತು ಪಂಚಾಕ್ಷರಯ್ಯ ಉಪಸ್ಥಿತರಿದ್ದರು.