ಬೆಂಗಳೂರು : ನಿರ್ಮಲಾ ಎಲಿಗಾರ್ ಅವರ ಸದಸ್ಯತ್ವವನ್ನು ರದ್ದು ಮಾಡಿ ಅವರಿಗೆ ಹಿಂದೆ ನೀಡಿದ್ದ ಪ್ರಶಸ್ತಿಯನ್ನು ಹಿಂದಕ್ಕೆ ಪಡೆದಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಕ್ರಮವನ್ನು ನಾಡೋಜ ಬರಗೂರು ರಾಮಚಂದ್ರಪ್ಪ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಪ್ರಜಾಪ್ರಭುತ್ವ ದಲ್ಲಿ ಎಂಥ ಸ್ಥಾನದಲ್ಲಿ ಇರುವವರನ್ನೂ ಪ್ರಶ್ನಿಸುವ ಹಕ್ಕು ನಮ್ಮ ನಾಗರಿಕರಿಗೆ ಇದೆ. ಈ ಸಾಮಾನ್ಯ ಜ್ಞಾನವನ್ನೂ ಅಳವಡಿಸಿಕೊಳ್ಳದ ಮನೋವೃತ್ತಿಯನ್ನು ಮೆರೆದು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಸಾಂಸ್ಕøತಿಕ ಮೌಲ್ಯಕ್ಕೆ ಧಕ್ಕೆ ತಂದಿದ್ದಾರೆ ಎಂದು ತಮ್ಮ ಖಂಡನೀಯ ನಿರ್ಣಯದಲ್ಲಿ ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.
ಸಾಹಿತ್ಯ ಪರಿಷತ್ತಿನ ಪರಂಪರೆಗೆ ಅವಮಾನ ಮಾಡಿದ್ದಾರೆ. ಪ್ರಶ್ನೆ ಮಾಡಿದವರನ್ನು ಅಮಾನತ್ತಿನಲ್ಲಿ ಇಡಲು ರಾಜಕೀಯ ಪಕ್ಷದವರೂ ಸಾಕಷ್ಟು ಯೋಚಿಸಿ ನಿರ್ಧರಿಸುತ್ತಾರೆ. ಕನ್ನಡದ ಪ್ರಾತಿನಿಧಿಕ ಸಂಸ್ಥೆಎಂದು ಸಾರ್ವಜನಿಕ ಮನ್ನಣೆಗೆ ಪಾತ್ರವಾದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ರಾಜಕೀಯ ಪಕ್ಷಗಳನ್ನೂ ಮೀರಿಸಿ ದಾಖಲೆ ನಿರ್ಮಿಸಲು ಹೊರಟಿದ್ದಾರೆ. ಇದು ನಿರ್ಮಲಾ ಎಲ್ಲಿಗಾರ್ ಅವರೊಬ್ಬರ ಪ್ರಶ್ನೆಯಲ್ಲ. ಸಾಂಸ್ಕೃತಿಕ ಹಾಗೂ ಪ್ರಜಾಸತ್ತಾತ್ಮಕ ಸಮಾಜದ ಪ್ರಶ್ನೆ. ಆದ್ದರಿಂದ ಸಾಂಸ್ಕೃತಿಕ ಕ್ಷೇತ್ರವು ಪ್ರತಿರೋಧ ಒಡ್ದುವುದು ಅಗತ್ಯವಿರುವುದಾಗಿ ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.