ಇಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ದಾಳಿ

ತುಮಕೂರು- ಅಕ್ರಮವಾಗಿ ತಮ್ಮ ಆದಾಯಕ್ಕಿಂತ ಅಧಿಕ ಆಸ್ತಿಪಾಸ್ತಿ ಹೊಂದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಸಹಾಯಕ ಇಂಜಿನಿಯರ್ ರವರ ಮನೆ ಸೇರಿದಂತೆ ಐದು ಕಡೆ ಬೆಳ್ಳಂಬೆಳಿಗ್ಗೆ ತುಮಕೂರು, ಮೈಸೂರು ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದ್ದಾರೆ.

ಸಿರಾ ಗ್ರಾಮೀಣ ಕುಡಿಯುವ ನೀರು ಸರಬರಾಜು ನೈರ್ಮಲ್ಯ ಇಲಾಖೆಯ ಸಹಾಯ ಇಂಜಿನಿಯರ್ ನಾಗೇಂದ್ರಪ್ಪ ಎಂಬುವರು ತಮ್ಮ ಆದಾಯಕ್ಕಿಂತ ಮೀರಿ ಅಕ್ರಮವಾಗಿ ಅಸ್ತಿಪಾಸ್ತಿ ಸಂಪಾದಿಸಿದ್ದಾರೆ ಎಂಬ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಇಂದು ಬೆಳ್ಳಂಬೆಳಿಗ್ಗೆಯೇ ಲೋಕಾಯುಕ್ತ ಪೆÇಲೀಸ್ ಅಧಿಕಾರಿಗಳು ಅವರಿಗೆ ಸಂಬಂಧಿಸಿದ ಕಚೇರಿ, ಮನೆ, ಫಾರಂಹೌಸ್ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದು, ಮಹತ್ವದ ದಾಖಲಾತಿಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ತುಮಕೂರಿನ ಬಟವಾಡಿ ಸಮೀಪದ ಮಹಾಲಕ್ಷ್ಮಿನಗರದ 3ನೇ ಕ್ರಾಸ್‍ನಲ್ಲಿರುವ ಎಂಜಿನಿಯರ್ ನಾಗೇಂದ್ರಪ್ಪನವರ ನಿವಾಸ, ಸಿರಾ ಕಚೇರಿ ಹಾಗೂ ಸಿರಾ ತಾಲೂಕಿನ ಮದ್ದೇನಹಳ್ಳಿಯ ಮನೆ, ರಾಗಲಹಳ್ಳಿ ಮನೆ, ಫಾರಂಹೌಸ್ ಮೇಲೆ ಲೋಕಾ ಅಧಿಕಾರಿಗಳ ತಂಡ ದಾಳಿ ಮಾಡಿ ಮಹತ್ವದ ಮಾಹಿತಿಗಳನ್ನು ಕಲೆ ಹಾಕುತ್ತಿದೆ.

ತುಮಕೂರಿನ ಮನೆಯಲ್ಲಿ ಲಕ್ಷಾಂತರ ರೂ. ಬೆಲೆ ಬಾಳುವ ಎರಡು ಬೈಕ್, ಎರಡು ಕಾರು ಇತರೆ ದಾಖಲೆಗಳು ದೊರೆತಿವೆ ಎನ್ನಲಾಗಿದೆ. ಮನೆಯಲ್ಲಿ ಅಧಿಕಾರಿಗಳ ತಂಡ ತಪಾಸಣೆ ಮುಂದುವರೆಸಿದ್ದು, ತಪಾಸಣೆ ಮುಗಿದ ಬಳಿಕವಷ್ಟೇ ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ತುಮಕೂರು ಲೋಕಾಯುಕ್ತ ಎಸ್ಪಿ ವಲಿಬಾಷಾ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಡಿವೈಎಸ್ಪಿಗಳಾದ ಮಂಜುನಾಥ್, ಹರೀಶ್, ಇನ್ಸ್‍ಪೆಕ್ಟರ್‍ಗಳಾದ ಶಿವರುದ್ರಪ್ಪ ಮೇಟಿ, ಸಲೀಂ, ರಾಮರೆಡ್ಡಿ, ಅನಿಲ್‍ಕುಮಾರ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *