
ತುಮಕೂರು:ಅಖಿಲ ಕರ್ನಾಟಕ ಕುಳುವ ಮಹಾಸಂಘ(ರಿ)ನ ತುಮಕೂರು ಜಿಲ್ಲಾ ಶಾಖೆಗೆ ಜಿಲ್ಲಾಡಳಿತ ನಿಜ ಶರಣ ನುಲಿ ಚಂದಯ್ಯ ಅವರ ಭವನ ನಿರ್ಮಾಣ ಸಿ.ಎ.ನಿವೇಶನ ಒದಗಿಸಬೇಕೆಂದು ಅಖಿಲ ಕರ್ನಾಟಕ ಕುಳುವ ಮಹಾಸಭಾ ತುಮಕೂರು ಜಿಲ್ಲಾಧ್ಯಕ್ಷ ಲೋಕೇಶ್ಸ್ವಾಮಿ ಒತ್ತಾಯಿಸಿದ್ದಾರೆ.
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಅಖಿಲ ಕರ್ನಾಟಕ ಕುಳುವ ಮಹಾಸಭಾದ ಸಭೆಯಲ್ಲಿ ಭಾಗವಹಿಸಿ ಮಾತನಾಡುತಿದ್ದ ಅವರು,ಕೊರಮ, ಕೊರಚ,ಕೊರವ ಹೆಸರಿನಲ್ಲಿ ಕರೆಯುವ ಸಾವಿರಾರು ಜನರು ತುಮಕೂರು ಜಿಲ್ಲೆಯಲ್ಲಿ ವಾಸ ಮಾಡುತ್ತಿದ್ದು,ಸಮುದಾಯದ ಶುಭ ಕಾರ್ಯಗಳಿಗೆ,ಸಮುದಾಯದ ಗುರುಗಳು ಆದ ಶರಣ ನುಲಿ ಚಂದಯ್ಯ ಅವರ ಜಯಂತಿ ಆಚರಿಸಲು ಅನುಕೂಲವಾಗುವಂತೆ ಜಿಲ್ಲಾಡಳಿತ ನಗರದಲ್ಲಿ ಸಿ.ಎ ಸೈಟ್ ಒದಗಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಜಿಲ್ಲೆಯ ಎಲ್ಲಾ ಶಾಸಕರು, ಸಂಸದರಿಗೆ ಸಂಘದವತಿಯಿಂದ ಮನವಿ ಸಲ್ಲಿಸಲು ತೀರ್ಮಾನಿಸ ಲಾಗಿದೆ.ಸಮುದಾಯದ ಜನರು ಒಂದೆಡೆ ಸೇರಿ, ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಸಮುದಾಯಭವನ ನಿರ್ಮಾಣವಾದರೆ ಹೆಚ್ಚಿನ ಅನುಕೂಲ ಜನಾಂಗಕ್ಕೆ ಆಗಲಿದೆ. ಹಾಗಾಗಿ ಜಿಲ್ಲಾಡಳಿತ ಮತ್ತು ಜಿಲ್ಲೆಯ ಎಲ್ಲಾ ಶಾಸಕರು ಅಖಿಲ ಕರ್ನಾಟಕ ಕುಳುವ ಮಹಾಸಭಾ(ರಿ)ದ ಬೇಡಿಕೆಯನ್ನು ಈಡೇರಿಸಬೇಕೆಂಬುದು ನಮ್ಮೆಲ್ಲರ ಒತ್ತಾಯವಾಗಿದೆ ಎಂದರು.
ಸಭೆಯಲ್ಲಿ ಅಖಿಲ ಭಾರತ ಕುಳುವ ಮಹಾಸಭಾ(ರಿ), ತುಮಕೂರು ಜಿಲ್ಲಾ ಶಾಖೆಯ ಪದಾಧಿಕಾರಿಗಳ ಪರಿಷ್ಕರಣೆ ನಡೆಯಿತು, ಜಿಲ್ಲಾಧ್ಯಕ್ಷ ಲೋಕೇಶ್ ಸ್ವಾಮಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳು ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.