ತುಮಕೂರು: ಬಳ್ಳಾರಿಯಲ್ಲಿ ನಡೆಯಲಿರುವ ಎಸ್ಟಿ ಸಮಾವೇಶದ ಪೂರ್ವಭಾವಿ ಸಭೆ ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರವೀಶ್ ಹೆಬ್ಬಾಕ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ನಿರ್ಧಾರದಿಂದ ನಿರ್ಲಕ್ಷ್ಯ ಕ್ಕೆ ಒಳಗಾಗಿದ್ದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ದೊರಕಿದಂತೆ ಆಗಿದೆ ಎಂದರು.
ಮೀಸಲಾತಿ ಹೆಚ್ಚಳ ಮಾಡಿರುವ ಬಿಜೆಪಿ ಸರ್ಕಾರದ ಋಣ ತೀರಿಸಲು ವಾಲ್ಮೀಕಿ ಸಮಾಜದ ನಿರ್ಧಾರ ಮಾಡಿದ್ದು, ಸಚಿವ ಶ್ರೀರಾಮುಲು , ರಮೇಶ ಜಾರಕಿಹೊಳಿ, ರಾಜೂಗೌಡ, ಶಿವನಗೌಡ ನಾಯಕ, ತಿಪ್ಪರಾಜು ಹವಾಲ್ದಾರ್ ಅವರ ತಂಡ ಜಿಲ್ಲೆಯಲ್ಲಿ ಪೂರ್ವಭಾವಿ ಸಭೆ ನಡೆಸಲಿದೆ ಎಂದರು.
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಹೆಚ್ಚಳ ಮಾಡುವ ಮೂಲಕ ಬಿಜೆಪಿ ಇತಿಹಾಸ ನಿರ್ಮಿಸಿದೆ ಎಂದರು.
ಮೀಸಲಾತಿ ಹೆಚ್ಚಳದಂತಹ ದಿಟ್ಡ ನಿರ್ಧಾರವನ್ನು ಕೈಗೊಂಡ ಸಿ.ಎಂ.ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ಸರ್ಕಾರವನ್ನು ಅಭಿನಂದಿಸುವ ನಿಟ್ಟಿ ಎಸ್ಟಿ ಸಮಾವೇಶವನ್ನು ನ.20ರಂದು ಬಳ್ಳಾರಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಬಿ.ಜಿ.ಕೃಷ್ಣಪ್ಪ ಮಾತನಾಡಿ ಪರಿಶಿಷ್ಟರ ಬಹುದಿನದ ಬೇಡಿಕೆಯಾದ ಮೀಸಲಾತಿ ಹೆಚ್ಚಿಸುವ ಸರ್ಕಾರದ ದಿಟ್ಟ ನಿರ್ಧಾರಕ್ಕೆ ಕಾರಣವಾಗಿರುವ ಬೊಮ್ಮಾಯಿ ಅವರನ್ನು ಅಭಿನಂದಿಸುವ ನಿಟ್ಟಿನಲ್ಲಿ ಜಿಲ್ಲೆಗೆ ಆಗಮಿಸುತ್ತಿರುವ ನಾಯಕ ಸಮುದಾಯದ ಅಗ್ರ ನಾಯಕ ಸಚಿವ ಶ್ರೀರಾಮುಲು ಅವರನ್ನು ಜಿಲ್ಲಾ ಎಸ್ಟಿ ಮೋರ್ಚಾ ಅದ್ಧೂರಿಯಾಗಿ ಸ್ವಾಗತಿಸಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪಿಗೆ ಶ್ರೀಮಂತ ಶ್ರೀಧರ್, ಟಿ.ಆರ್.ಸದಾಶಿವಯ್ಯ, ಕೆ.ಪಿ.ಮಹೇಶ್ ಸೇರಿದಂತೆ ಇತರರಿದ್ದರು.