ಕಾಂಗ್ರೆಸ್‍ನ ಔಟ್‍ಡೇಟ್ ಮುಖಗಳು ಹೊಸ ತಲೆಮಾರಿಗೆ ನಾಯಕತ್ವ ನೀಡದಿದ್ದರೆ ಕರ್ನಾಟದಲ್ಲೂ ಗುಜರಾತಿನ ಫಲಿತಾಂಶ ಮಗ್ಗುಲ ಮುಳ್ಳಾಗಲಿರುವ ಎಎಪಿ

ರಾಜಕೀಯ ವಿಶ್ಲೇಷಣೆ : ವೆಂಕಟಾಚಲ ಹೆಚ್.ವಿ.
ತುಮಕೂರು : ಗುಜರಾತಿನ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯು 156 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಕ್ಲೀನ್ ಚಿಟ್ ನೀಡಿದೆ.

ಗುಜರಾತಿನಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಬಾವಿಯನ್ನು ತಾನೇ ತೋಡಿಕೊಂಡು ಮಣ್ಣು ಮುಚ್ಚಿಕೊಂಡಿದೆ. 2019ರಲ್ಲಿ ಲೋಕಸಭಾ ಚುನಾವಣೆಯಲ್ಲಿ 40ಸೀಟುಗಳನ್ನು ಗೆದ್ದಾಗಲೇ ಎಚ್ಚತ್ತುಕೊಂಡು ಪಕ್ಷವನ್ನು ಕಟ್ಟುವ ಕಾರ್ಯಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳಬೇಕಿತ್ತು.

ಪಟ್ಟಭದ್ರ ಹಿತಾಸಕ್ತಿ, ಕುಟುಂಬ ರಾಜಕಾರಣ, ಯುವಕರ ಕಡೆಗಣನೆಗೆ ಕಾಂಗ್ರೆಸ್ ಪಕ್ಷವು ಮುಟ್ಟಿ ನೋಡಿಕೊಳ್ಳುವಂತಹ ಬೆಲೆಯನ್ನು ಗುಜರಾತಿನಲ್ಲಿ ತೆತ್ತಿದ್ದು, ಒಂದು ರಾಷ್ಟ್ರದ ಪ್ರತಿಷ್ಠಿತ ರಾಜ್ಯ ಮತ್ತು ಕಾಂಗ್ರೆಸ್ ಕಟ್ಟಿದ ಗಾಂಧಿ ಹುಟ್ಟಿದ ರಾಜ್ಯದ ಚುನಾವಣೆಯನ್ನು ಉಡಾಫೆಯಾಗಿ ತೆಗೆದುಕೊಂಡ ಕಾಂಗ್ರೆಸ್‍ಗೆ ಇನ್ನೂ ಹಳೆ ತಲೆಗಳ ಮೇಲಿನ ಮೋಹ, ಕುಟುಂಬ ರಾಜಕಾರಣದ ವ್ಯಾಮೋಹ ಹೋಗಿಲ್ಲ.

ರಾಷ್ಟ್ರ ರಾಜಧಾನಿ ಪಕ್ಕದ ರಾಜ್ಯವಾದ ಪಂಜಾಬಿನಲ್ಲಿ ಸೋತ ಮೇಲಾದರೂ ಎಲ್ಲಿ ತಪ್ಪುಗಳು ನಡೆಯುತ್ತಿವೆ ಎಂಬುದನ್ನು ವಿಶ್ಲೇಷಣೆಗೆ ಒಳ ಪಡಿಸಿಕೊಳ್ಳದೆ ಉದಾಸೀನ, ತಾತ್ಸರ ಮತ್ತು ಪಕ್ಷವನ್ನು ಹೊಸ ತಲೆಮಾರಿಗೆ ಧಾಟಿಸದೇ ಅಪ್ಪ ಹಾಕಿದ ಆಲದಮರಕ್ಕೆ ಜೋತು ಬಿದ್ದಂತೆ ಹಳೆ-ಹಳಸಲು ಮುಖಗಳಿಗೆ ಪಕ್ಷವನ್ನು ಕೊಟ್ಟು ಬಡಿಗೆ ಕೊಟ್ಟು ಹೊಡೆಸಿಕೊಂಡಂತಾಗಿದೆ.

ಪಂಜಾಬಿನ ಚುನಾವಣೆಯನ್ನು ನೋಡಿದರೆ ಈ ಹಿಂದಿನ ಚುನಾವಣೆಯಲ್ಲಿ ಎಎಪಿಯವರು ಪ್ರಯೋಗಿಕವಾಗಿ ತಮ್ಮ ಅಭ್ಯರ್ಥಿಗಳನ್ನು ಹಾಕಿದರು, ಒಂದಷ್ಟು ಸೀಟುಗಳನ್ನು ಗೆದ್ದ ನಂತರ ಪಕ್ಷವನ್ನು ಹೇಗೆ ಕಟ್ಟಬೇಕು ಎಂಬ ರಾಜಕೀಯವನ್ನು ತಳಮಟ್ಟದಿಂದ ಕಟ್ಟಿಕೊಂಡು ಬಂದರು, ಹೊಸ ಮುಖಗಳಿಗೆ ಅವಕಾಶಗಳನ್ನು ಕೊಟ್ಟು, ಪಂಜಾಬಿನಲ್ಲಿ ಅಧಿಕಾರ ಹಿಡಿದರು.

ಎಎಪಿಯವರು ಈಗ ಪಂಜಾಬಿನ ಪ್ರಯೋಗವನ್ನು ಗುಜರಾತಿನಲ್ಲಿ ಮಾಡಲು ಹೊರಟಿದ್ದಾರೆ. ಈಗ ಎಎಪಿಯು ಮೊದಲ ಚುನಾವಣೆಯಲ್ಲಿಯೇ ಶೇಕಡ13% ಮತದಾನ ಪಡೆದಿದ್ದಾರೆ, 2017ರಲ್ಲಿ 77 ಸ್ಥಾನಗಳಲ್ಲಿ ಗೆದ್ದಿದ್ದ ಕಾಂಗ್ರೆಸ್ ಪಕ್ಷವು ಈಗ 17 ಸ್ಥಾನಗಳಲ್ಲಿ ಗೆದ್ದು, ಶೇಕಡ 53% ಮತದಾನ ಗಳಿಸಿದ್ದ ಕಾಂಗ್ರೆಸ ಈಗ 60 ಸ್ಥಾನಗಳನ್ನು ಕಳೆದುಕೊಂಡು ಮತಗಳಿಕೆಯಲ್ಲಿ ಶೇಕಡ26%ಕ್ಕೆ ಕುಸಿದಿದೆ. ಬಿಜೆಪಿಯು 2017ರಲ್ಲಿ 99 ಸ್ಥಾನಗಳಿಂದ 156 ಸ್ಥಾನಗಳನ್ನು ಪಡೆದು 57 ಸ್ಥಾನಗಳನ್ನು ಹೆಚ್ಚುವರಿಯಾಗಿ ಗೆದ್ದು ಶೇಕಡವಾರು ಮತದಾನವನ್ನು 52%ಕ್ಕೆ ಹೆಚ್ಚಿಸಿಕೊಂಡಿದೆ.

ಕಾಂಗ್ರೆಸ್ ಗುಜರಾತ್‍ನಲ್ಲಿ ಹೀನಾಯ ಸೋಲಿಗೆ ಕಾರಣಗಳೇನು ಎಂದು ಹುಡುಕುತ್ತಾ ಹೋದಲ್ಲಿ ಯುವಕರಾದ ಅಲ್ಪೇಶ್ ಟಾಕೂರ್, ಹಾರ್ದಿಕ್ ಪಟೇಲ್ ಮತ್ತು ಜಿಗ್ನೇಶ್‍ಮೇವಾನಿಯಂತಹ ಯುವಕರ ಕೈಗೆ ಪಕ್ಷದ ಜವಾಬ್ದಾರಿಯನ್ನು ವಹಿಸಿದ್ದರೆ ಇಂದು ಟಾಕೂರ್, ಪಟೇಲರ ಮತ್ತು ದಲಿತರ ಮತಗಳ ಜೊತೆಗೆ ಯುವಕರ ಮತಗಳು ಕಾಂಗ್ರೆಸ್‍ನತ್ತ ವಾಲುತ್ತಿದ್ದವು.

ಗುಜರಾತಿನಲ್ಲಿ ಅಹಮ್ಮದ್ ಪಟೇಲ್ ನಿಧನ ನಂತರ ಕಾಂಗ್ರೆಸ್ ಪಕ್ಷವು ಒಬ್ಬ ಪ್ರಬಲ ನಾಯಕನನ್ನು ್ಲ ಗುರುತಿಸುವಲ್ಲಿ ವಿಫಲವಾಗಿದ್ದಲ್ಲದೆ, ತಮ್ಮ ಎದುರಾಳಿ ಪಕ್ಷ ಏನು ಮಾಡುತ್ತಾ ಇದೆ ಎಂಬುದನ್ನು ಸಮರ್ಥವಾಗಿ ತಿಳಿದು ಪ್ರತಿತಂತ್ರ ರೂಪಿಸುವ ನಾಯಕನೇ ಇಲ್ಲದಂತಾಯಿತು.
ಈಗ 5ಸ್ಥಾನಗಳನ್ನು ಗೆದ್ದಿರುವ ಎಎಪಿಯು ಶೇಕಡ13% ಮತದಾನ ಗಳಿಸಿದೆ ಎಂದರೆ ಅದು ಮುಂದಿನ 2027 ಚುನಾವಣೆಗೆ ಬೇಕಾದ ತಂತ್ರ, ವೇದಿಕೆಯನ್ನು ಸಿದ್ದ ಮಾಡಿಕೊಂಡು ಪಂಜಾಬಿನಂತೆ ಅಧಿಕಾರ ಹಿಡಿದದರು ಹಿಡಿಯ ಬಹುದು.

ಈಗ ಗುಜರಾತ್ ಚುನಾವಣೆ ಮುಗಿದಿರುವುದರಿಂದ ಎಎಪಿಯವರು ಈಗ ಕರ್ನಾಟಕದ ಚುನಾವಣೆಯತ್ತ ತಮ್ಮ ಗಮನವನ್ನು ಕೇಂದ್ರಿಕರಿಸಲಿದ್ದಾರೆ. ಈ ಎಎಪಿ ಪಡೆಯುವ ಮತಗಳು ಯಾವ ಪಕ್ಷದ ಮತಗಳು ಎಂದು ನೋಡಿದರೆ ಅದು ಕಾಂಗ್ರೆಸ್ ಪಕ್ಷದ ಮತಗಳಾಗಿರುತ್ತವೆ.

ಈಗ ಗುಜರಾತಿನಲ್ಲಿ ಸೋಲಲು ಎಎಪಿ ಕಾಂಗ್ರಸ್ ಮತ ಬ್ಯಾಂಕ್‍ಗೆ ಕೈ ಹಾಕಿದ್ದರಿಂದಲೇ, ಅದೇ ಪ್ರಯೋಗವನ್ನು ಕರ್ನಾಟಕದಲ್ಲಿ ಎಎಪಿಯು ಪ್ರಯೋಗಿಸಿದರೆ ಕೇವಲ ಶೇಕಡ 2%ರಷ್ಟು ಮತಗಳನ್ನು ಪಡೆದರೆ ಕಾಂಗ್ರೆಸ್ ಪಕ್ಷವು ಸೋಲನನುಭವಿಸುವುದರಲ್ಲಿ ಅನುಮಾನವಿಲ್ಲ.

ಉದಾಹರಣೆಗೆ ಬೆಂಗಳೂರಿನ 28 ಕ್ಷೇತ್ರಗಳಲ್ಲೂ ಎಎಪಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ನಿಲ್ಲಿಸಿದರೆ ಬಹುತೇಕ ಸ್ಥಾನಗಳು ಬಿಜೆಪಿಯಂತಹ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ.

ಯುವಕರಿಗೆ ಅವಕಾಶ ನೀಡದಿದ್ದರೆ ಹೆಸರಿಲ್ಲದಂತೆ ಸೋಲುವ ಕಾಂಗ್ರೆಸ್ : ಈಗ ಜಾಲತಾಣದಲ್ಲಿ ಯುವ ಪೀಳಿಗೆಯೇ ಮೇಲುಗೈ ಸಾಧಿಸಿರುವಂತೆ ರಾಜಕೀಯ ಭವಿಷ್ಯವನ್ನೂ ಯುವ ಪೀಳಿಗೆಯೇ ಬರೆಯುತ್ತಿದ್ದು, ಗುಜರಾತಿನ ಫಲಿತಾಂಶ ಬಂದಿರುವ ಈ ಒತ್ತಿನಲ್ಲಾದರೂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರುಗಳು ತಮ್ಮ ಪ್ರತಿಷ್ಠೆ, ಒಬ್ಬರನೊಬ್ಬರ ಕಾಲೆಳೆಯುವಿಕೆಯನ್ನು ಬಿಟ್ಟು ರಾಜ್ಯದ ಕಾಂಗ್ರೆಸ್‍ನಲ್ಲಿ ಬದಲಾವಣೆಯನ್ನು ತರಬೇಕಿದೆ.

ಮತದಾರನೇ ಆಗಲಿ, ಜನರೇ ಆಗಲಿ ಈಗ ಔಟ್ ಡೇಟ್‍ನಲ್ಲಿರುವ ಮುಖಗಳನ್ನೇ ಎಷ್ಟು ಸಲ ನೋಡಲು ಯುವ ಜನತೆ ಇಷ್ಟ ಪಡುತ್ತಾರೆ, ಈ ಔಟ್‍ಡೇಟ್ ಮುಖಗಳು ಅಪ್‍ಡೇಟ್ ಎಲ್ಲಿ ಆಗಿದ್ದಾರೆ, ಯುವ ಜನತೆ ಬಯಸುವ ತುಡಿತಗಳಿಗೆ ಸ್ಪಂಧಿಸುವ ಮನೋಭಾವ ಈ ಹಳೆ ತಲೆಗಳಿಗೆ ಎಲ್ಲಿದೆ, ತಮ್ಮ ಸುತ್ತ ಜೈಕಾರ ಹಾಕುವ ಪಟಾಲಂಗಳನ್ನು ಇಟ್ಟುಕೊಂಡು ಯುವಕರನ್ನು ಬೆಳಸದೆ, ಅವರ ಅಲೋಚನೆಗೆ ತಕ್ಕ ರಾಜಕೀಯ ಬದಲಾವಣೆಗಳನ್ನು ಮಾಡದೆ ಓಬಿರಾಯನ ಕಾಲದ ತತ್ವ-ಸಿದ್ಧಾಂತ ಯಾರಿಗೆ ಬೇಕಿದೆ.

100ಕಿ.ಮೀ ವೇಗದಲ್ಲಿ ಓಡುತ್ತಿರುವ ಯುವಕರು 20 ಕಿ.ಮೀ.ನಲ್ಲಿ ಓಡುವ ಹಳೆತಲೆಮಾರುಗಳು ಈಗಲಾದರೂ ತಮ್ಮ ಪಕ್ಷದಲ್ಲಿ ಯುವಕರಿಗೆ, ಹೊಸಮುಖಗಳಿಗೆ ಅವಕಾಶವನ್ನು ಮಾಡಿ ಕೊಡದೆ ನಾವು ಯಾರಿಗೂ ಬಿಟ್ಟು ಕೊಡುವುದಿಲ್ಲ ಗೂಟ ಹೊಡೆದುಕೊಂಡು ಇಲ್ಲೇ ಕೂತಿರುತ್ತೇವೆ ಎಂಬ ಮನೋಭಾವ ಬಿಡದಿದ್ದರೆ ಕರ್ನಾಟಕದಲ್ಲಿಯೂ ಕಾಂಗ್ರೆಸ್‍ಗೆ ಗುಜರಾತಿನ ಸ್ಥಿತಿಯೇ ಬರಲಿದೆ.

ಮೊದಲು ಕರ್ನಾಟಕದಲ್ಲಿ ಕುಟುಂಬ ರಾಜಕಾರಣಕ್ಕೆ ಇತಿಶ್ರೀ ಹಾಡಬೇಕು, ಅಪ್ಪ ಆದ ಮೇಲೆ ಮಗ, ಮಗಳು, ಅಳಿಯ, ಸೊಸೆ ಎಂಬುದನ್ನು ಬಿಟ್ಟು ಯಾರು ಪಕ್ಷಕ್ಕಾಗಿ ಹೆಗಲು ಕೊಡುವ ಯುವಕರನ್ನು ಪಕ್ಷಕಟ್ಟುವ ಮತ್ತು ಯುವಕರಿಗೆ ಟಿಕೆಟ್ ಕೊಡುವುದನ್ನು ಮತ್ತು ಗೆಲ್ಲಿಸುವ ಕೆಲಸ ಮಾಡಬೇಕಿದೆ.

ರಾಜ್ಯ ಕಾಂಗ್ರೆಸ್‍ನಲ್ಲಿ ಪಕ್ಷ ಗೆಲ್ಲಿಸುವುದಕ್ಕಿಂತ ಮುಖ್ಯಮಂತ್ರಿ ಸ್ಥಾನದ ರೇಸಿನಲ್ಲಿದ್ದಾರೆಂದು ಸಿದ್ದರಾಮಯ್ಯನನ್ನು ಸೋಲಿಸುವುದು ಹೇಗೆ, ಡಾ.ಜಿ. ಪರಮೇಶ್ವರ್‍ರವರನ್ನು ಸೋಲಿಸುವುದು ಹೇಗೆ, ಡಿ.ಕೆ.ಶಿವಕುಮಾರ್ ಅವರನ್ನು ಸೋಲಿಸುವುದು ಹೇಗೆ ಎಂಬ ಜಪವನ್ನು ಬಿಟ್ಟು ಈಗಲಾದರೂ ತಮ್ಮ ಪ್ರತಿಷ್ಠೆ, ಕುಟುಂಬ ರಾಜಕಾರಣ, ಪಟ್ಟಾಭದ್ರಹಿತಾಶಕ್ತಿಗಳನ್ನು ಬದಿಗಿಡಬೇಕಿದೆ.

ಈಗಿನ ಕಾಂಗ್ರೆಸ್ ನಾಯಕರನ್ನು ನೋಡಿದರೆ ಪಕ್ಷವನ್ನು ಗೆಲ್ಲಿಸಿಕೊಂಡು ಬರುತ್ತೇವೆಂಬ ಹೋರಾಟದ ಮನೋಭಾವ ಯಾರಿಗೂ ಇದ್ದಂತಿಲ್ಲ, ಪಕ್ಷದ ನಾಯಕತ್ವವನ್ನು ಕಾಂಗ್ರೆಸ್ ಕಛೇರಿಯ ಗೋಡೆಗೆ ತಗುಲಾಕಿ ಝೂ ಹಜೂರ್ ಎನ್ನುವವರಿಗೆ ಮಾತ್ರ ಒಳಪ್ರವೇಶ, ಈ ಹಿನ್ನಲೆಯಲ್ಲಿಯೇ ಕಾಂಗ್ರೆಸ್ ಪಕ್ಷದಲ್ಲಿ ಹೊಸನಾಯಕತ್ವ ಹುಟ್ಟದಿರುವುದಿರುವುದಕ್ಕೆ ಮತದಾರನು ಕಾಂಗ್ರೆಸ್ ಪಕ್ಷದಿಂದ ದೂರ ಸರಿಯುತ್ತಿದ್ದಾನೆ.

ಓಡುವ ಕುದರೆಯನ್ನು ನೋಡುತ್ತಾರೆಯೇ ವಿನಃ ಕುಂಟುವ ಕುದರೆಯನ್ನು ಯಾರು ನೋಡಲಾರರು ಇದನ್ನು ಕಾಂಗ್ರೆಸ್‍ನವರು ಅರ್ಥ ಮಾಡಿಕೊಳ್ಳದಿದ್ದರೆ, ಎಎಪಿ ಪಕ್ಷ ನಿಮಗೆ ಮಗ್ಗುಲ ಮುಳ್ಳು ಎಂಬುದನ್ನು ಅರಿತು, ನೆಲಕಚ್ಚಿರುವ ಕಾಂಗ್ರೆಸ್ ಪಕ್ಷವನ್ನು ಕಟ್ಟಲು ಗಂಭೀರವಾಗಿ ಆಲೋಚಿಸಿ ಹೊಸ ತಲೆಮಾರಿಗೆ ಪಕ್ಷವನ್ನು ದಾಟಿಸದಿದ್ದರೆ ನಿಮಗೆ ಕರ್ನಾಟಕದಲ್ಲಿ ಉಳಿಗಾಲವಿಲ್ಲ ಎಂಬುದೇ ಗುರಾತಿನ ಇಂದಿನ ಫಲತಾಂಶ.

Leave a Reply

Your email address will not be published. Required fields are marked *