ಸ್ಕ್ಯಾನಿಂಗ್ ವೈದ್ಯರು 2 ಸೆಂಟರ್‍ಗಳಿಗೆ ಮಾತ್ರ ಭೇಟಿ ನೀಡಲು ಅವಕಾಶ –ಡಿಹೆಚ್‍ಓ

ತುಮಕೂರು : ಉಚ್ಛ ನ್ಯಾಯಾಲಯದ ತೀರ್ಪಿನನ್ವಯ ಸ್ಕ್ಯಾನಿಂಗ್ ಸೆಂಟರ್‍ಗಳಲ್ಲಿ ಸ್ಕ್ಯಾನಿಂಗ್ ಕಾರ್ಯ ನಿರ್ವಹಿಸುವ ವೈದ್ಯರು ಆಯಾ ಜಿಲ್ಲೆಯ 2 ಸ್ಕ್ಯಾನಿಂಗ್ ಸೆಂಟರ್‍ಗಳಿಗೆ ಮಾತ್ರ ಭೇಟಿ ನೀಡಲು ಅವಕಾಶವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಡಿ.ಎನ್. ಮಂಜುನಾಥ ಅವರು ಎಚ್ಚರಿಕೆ ನೀಡಿದರು.

ಜಿಲ್ಲಾ  ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಸಂಜೆ ಜರುಗಿದ ಗರ್ಭಧಾರಣಾ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗಪತ್ತೆ ಹಚ್ಚುವ ತಂತ್ರ(ಪಿಸಿ ಮತ್ತು ಪಿಎನ್‍ಡಿಟಿ)ಗಳ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು,  ರೇಡಿಯೋಲಜಿಸ್ಟ್/ ಸೋನೋಲಜಿಸ್ಟ್/ಸ್ಕ್ಯಾನಿಂಗ್ ವೈದ್ಯರು ತಾವು ಭೇಟಿ ನೀಡುವ ಸ್ಕ್ಯಾನಿಂಗ್ ಸೆಂಟರ್ ಹಾಗೂ ಭೇಟಿ ಸಮಯವನ್ನು ಕಡ್ಡಾಯವಾಗಿ ಎಂಪ್ಯಾನಲ್ ಮಾಡಿಸಬೇಕು.  ಎಂಪ್ಯಾನಲ್ ಮಾಡದಿರುವ ಹಾಗೂ ಪಿಸಿ ಮತ್ತು ಪಿಎನ್‍ಡಿಟಿ ಕಾಯ್ದೆಯನ್ನು ಉಲ್ಲಂಘಿಸುವ ವೈದ್ಯರ ಮೇಲೆ ಕಾನೂನು ರೀತ್ಯಾ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಅವರು ನಿರ್ದೇಶನ ನೀಡಿದರು. 

ಪಿಸಿ ಮತ್ತು ಪಿಎನ್‍ಡಿಟಿ ಕಾಯ್ದೆಯನ್ವಯ ಗರ್ಭಾವಸ್ಥೆಯಲ್ಲಿರುವ ಲಿಂಗಪತ್ತೆ ಮಾಡುವುದು ಶಿಕ್ಷಾರ್ಹ ಅಪರಾಧ.  ಸ್ಕ್ಯಾನಿಂಗ್ ಸೆಂಟರ್‍ಗಳಲ್ಲಿ ನೋಂದಣಿ ಪ್ರಮಾಣಪತ್ರವನ್ನು ವ್ಯವಹಾರ ಸ್ಥಳದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು ಹಾಗೂ ಫಾರಂ-ಎಫ್, ಎ.ಎನ್.ಸಿ ನೋಂದಣಿ ಪುಸ್ತಕ, ಸ್ಕ್ಯಾನಿಂಗ್ ಇಮೇಜ್‍ಗಳು, ನಗದು ಪುಸ್ತಕ, ಸ್ಕ್ಯಾನಿಂಗ್ ವರದಿ, ರೆಫರಲ್ ಸ್ಲಿಪ್ ಸೇರಿದಂತೆ ಮತ್ತಿತರ ಅಗತ್ಯ ದಾಖಲಾತಿಗಳನ್ನು ನಿರ್ವಹಣೆ ಮಾಡಬೇಕು. ಎಲ್ಲಾ ಸ್ಕ್ಯಾನಿಂಗ್ ಸೆಂಟರ್‍ಗಳು ತಪ್ಪದೇ ಕಾಲಕಾಲಕ್ಕೆ ನೋಂದಣಿ ಮಾಡಿಸತಕ್ಕದ್ದು ಎಂದು ಅವರು ಸೂಚನೆ ನೀಡಿದರು.

ಸ್ಕ್ಯಾನಿಂಗ್ ಸೆಂಟರ್‍ನಲ್ಲಿ ಕಾರ್ಯನಿರ್ವಹಿಸುವ ವೈದ್ಯರು, ನೌಕರರು, ಸ್ಥಳ ಅಥವಾ ಸಾಧನೆ-ಸಲಕರಣೆಗಳನ್ನು ಬದಲಾಯಿಸಿದಲ್ಲಿ ಜಿಲ್ಲಾ ಸಕ್ಷಮ ಪ್ರಾಧಿಕಾರಕ್ಕೆ ಮಾಹಿತಿ ಒದಗಿಸಬೇಕು. ಕಾರ್ಯ ನಿರ್ವಹಿಸುವ ನೌಕರರ ಮತ್ತು ಹುದ್ದೆಯ ಹೆಸರು ಅವರು ಧರಿಸಿದ ಉಡುಪಿನ ಮೇಲೆ ಎದ್ದು ಕಾಣುವಂತಿರಬೇಕು. ಎಂಪ್ಯಾನಲ್ ಮಾಡಿಕೊಂಡಿರದ ವೈದ್ಯರಿಂದ ಸ್ಕ್ಯಾನಿಂಗ್ ಮಾಡಿಸುವಂತಿಲ್ಲ.  ಸ್ಕ್ಯಾನಿಂಗ್ ಸೆಂಟರ್‍ಗಳು ನೀಡುವ ಸೌಲಭ್ಯ ಹಾಗೂ ತಗಲುವ ಶುಲ್ಕದ ಪಟ್ಟಿಯನ್ನು ಪ್ರದರ್ಶಿಸಬೇಕು. ಅಲ್ಲದೆ ಸೆಂಟರ್‍ನಲ್ಲಿ ಸೂಕ್ತ ಕಟ್ಟಡ, ಉತ್ತಮ ಗಾಳಿ-ಬೆಳಕು, ಶೌಚಾಲಯ ವ್ಯವಸ್ಥೆ ಹೊಂದಿರಬೇಕು. ಪಿಸಿ ಮತ್ತು ಪಿಎನ್‍ಡಿಟಿ ಕಾಯ್ದೆಯನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಸೂಚಿಸಿದರು.

ಸಭೆಯಲ್ಲಿ ಸ್ಕ್ಯಾನಿಂಗ್ ಸೆಂಟರ್‍ಗಳ ಹೆಸರು ಬದಲಾವಣೆ, ಹೊಸ ಸ್ಕ್ಯಾನಿಂಗ್ ಯಂತ್ರ, ಡೆಮೋನ್ಸ್ಟ್ರೇಷನ್, ಸ್ಕ್ಯಾನಿಂಗ್ ಯಂತ್ರ ಖರೀದಿಗೆ ಎನ್‍ಓಸಿ ನೀಡುವ ಸಂಬಂಧ ಸ್ವೀಕೃತ ಅರ್ಜಿಗಳ ಬಗ್ಗೆ ಚರ್ಚಿಸಲಾಯಿತು. 

ಈ ಸಂದರ್ಭದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ: ಕೆ.ಬಿ. ರೇಖಾ, ಜಿಲ್ಲಾ ಆಸ್ಪತ್ರೆ ಸ್ತ್ರೀರೋಗ ತಜ್ಞ ಡಾ: ಲೋಕೇಶ್ ರೆಡ್ಡಿ, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲೆ ಡಾ: ಮುಕ್ತಾಂಭ, ವಕೀಲ ಎಂ.ಎನ್. ಕುಮಾರಸ್ವಾಮಿ, ವಾರ್ತಾ ಇಲಾಖೆಯ ಸ್ವಾಗತಕಾರರು ಹಾಗೂ ಗ್ರಂಥಪಾಲಕರಾದ ಆರ್. ರೂಪಕಲಾ, ಸಮಾಜ ಸೇವಕರಾದ ರಾಣಿ ಚಂದ್ರಶೇಖರ್ ಹಾಗೂ ಬಿ.ಮಲ್ಲಿಕಾ ಸೇರಿದಂತೆ ಮತ್ತಿತರ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದರು. 

Leave a Reply

Your email address will not be published. Required fields are marked *