
ತುಮಕೂರು: ಅಂಬೇಡ್ಕರ್ ಅವರ ಬದುಕು, ಆದರ್ಶ, ಚಿಂತನೆಗಳು, ಬರಹಗಳು ಮತ್ತು ಭಾಷಣಗಳು ನಮಗೆ ಆತ್ಮಸ್ಥೈರ್ಯ, ಸ್ವಾಭಿಮಾನವನ್ನು ಬೆಳೆಸುತ್ತವೆ ಎಂದು ಹಿರಿಯ ರಂಗಭೂಮಿ ಕಲಾವಿದ ಡಾ. ಲಕ್ಷ್ಮಣದಾಸ್ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ವತಿಯಿಂದ ಗುರುವಾರ ಆಯೋಜಿಸಿದ್ದ ‘ಡಾ. ಬಿ. ಆರ್. ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳು ಹಾಗೂ ಸಂವಿಧಾನ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣ, ಸಂಘಟನೆ, ಹೋರಾಟ ಅಂಬೇಡ್ಕರ್ ಅವರ ತತ್ವಗಳಾಗಿದ್ದವು. ಅಂಬೇಡ್ಕರ್ ಅವರು ದೇಶದ ಏಳ್ಗೆಗಾಗಿ ಮತ್ತು ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಹಗಲು ರಾತ್ರಿ ಹೋರಾಡಿದರು. ಅಂಬೇಡ್ಕರ್ ಅವರ ತ್ಯಾಗ, ಸಾಧನೆ, ತತ್ವಗಳನ್ನು ಅಳವಡಿಸಿಕೊಂಡು ನಮ್ಮ ಬದುಕು ಕಟ್ಟಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವಿ ಸ್ನಾತಕೋತ್ತರ ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಪ್ರೊ. ಬಸವರಾಜ ಜಿ., ಅಂಬೇಡ್ಕರ್ ಅವರು ಅಸಮಾನತೆ, ಜಾತಿ, ಆರ್ಥಿಕ ಚಿಂತನೆ, ಸಂವಿಧಾನ, ಸಾಮಾಜಿಕ ನ್ಯಾಯದ ಬಗ್ಗೆ ಚಿಂತನೆ ನಡೆಸುತಿದ್ದರು. ಜಾತಿ ದೇವರ ಸೃಷ್ಟಿಯಲ್ಲ. ಅದು ಮನುಷ್ಯನ ಸೃಷ್ಟಿ. ವಿಶ್ವವಿದ್ಯಾನಿಲಯ ಮಟ್ಟದಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಶೋಷಣೆಗಳ ಬಗ್ಗೆ ಸಂಶೋಧನೆ ಮಾಡಬೇಕು. ಸಮಾಜದಲ್ಲಿ ನಡೆಯುವ ಶೋಷಣೆಗಳ ಬಗ್ಗೆ ಮಾನವೀಯ ನೆಲೆಯಲ್ಲಿ ಚಿಂತನೆ ಮಾಡಬೇಕು. ದ್ವೇಷದ ಬದಲು ಪ್ರೀತಿಯನ್ನು ಜನರಲ್ಲಿ ಬಿತ್ತಬೇಕು ಎಂದರು.
ತುಮಕೂರು ವಿವಿ ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಮುನಿರಾಜು ಎಂ. ಮಾತನಾಡಿ, ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ಸಾಧನೆಗಳ ಬಗ್ಗೆ ಅವರ ಬರಹಗಳನ್ನು ಮತ್ತು ಭಾಷಣಗಳನ್ನು ಓದಿ ತಿಳಿದುಕೊಳ್ಳಬೇಕು. ರಾಜಕೀಯ, ಸಾಮಾಜಿಕ, ಆರ್ಥಿಕ ಕ್ಷೇತ್ರದ ಬೆಳವಣಿಗೆಗಳನ್ನು ತಿಳಿಯಲು ಅಂಬೇಡ್ಕರ್ ಅವರ ಬರಹಗಳು ಸ್ಫೂರ್ತಿದಾಯಕವಾಗಿರುತ್ತದೆ ಎಂದರು.
ತುಮಕೂರು ವಿವಿ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಚಿಕ್ಕಣ್ಣ ಭಾಗವಹಿಸಿದ್ದರು.