ವಿಧಾನ ಪರಿಷತ್ ಸದಸ್ಯ ಸ್ಥಾನ ಮಾದಿಗ ಜನಾಂಗಕ್ಕೆ ನೀಡುವಂತೆ,ಆದಿಜಾಂಭವ ಮಹಾಮೈತ್ರಿ ಅಧ್ಯಕ್ಷ ನರಸೀಯಪ್ಪ ಒತ್ತಾಯ

ತುಮಕೂರು: ಅತಿ ಹೆಚ್ಚು ಮಾದಿಗ ಸಮುದಾಯದ ಮತದಾರರನ್ನು ಹೊಂದಿರುವ ತುಮಕೂರು ಜಿಲ್ಲೆಯ ಮಾದಿಗ ಸಮುದಾಯದಲ್ಲಿ ಪಕ್ಷದ ಪರವಾಗಿ ಹೆಚ್ಚು ಕೆಲಸ ಮಾಡಿದ ವ್ಯಕ್ತಿಗಳಿಗೆ ವಿಧಾನಪರಿಷತ್ ಸದಸ್ಯರನ್ನಾಗಿ ನೇಮಿಸುವುದು, ನಿಗಮ, ಮಂಡಳಿಗಳಲ್ಲಿ ಹೆಚ್ಚು ಅವಕಾಶ ಮಾಡಿಕೊಡುವಂತೆ ಕಾಂಗ್ರೆಸ್ ಪಕ್ಷವನ್ನು ಆದಿಜಾಂಭವ ಮಹಾಮೈತ್ರಿ ಅಧ್ಯಕ್ಷ ನರಸೀಯಪ್ಪ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಿಂದ ಸುಮಾರು 5.50ಲಕ್ಷ ಮತದಾರ ರನ್ನು ಹೊಂದಿದೆ.ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮಾದಿಗ ಸಮುದಾಯದ ಮತಗಳು 30 ಸಾವಿರದಿಂದ 50 ಸಾವಿರದ ವರಗೆ ಇದೆ.ಜಿಲ್ಲೆಯ ಎರಡು ಮೀಸಲು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಇದುವರೆಗೂ ಟಿಕೆಟ್ ನೀಡದೆ ನಿರ್ಲಕ್ಷ ಮಾಡುತ್ತಲೇ ಬಂದಿದೆ.ಜಿಲ್ಲೆಯಲ್ಲಿ ಸಾಮಾಜಿಕ ನ್ಯಾಯವೆಂಬುದು ಮಾದಿಗ ಸಮುದಾಯಕ್ಕೆ ಇಲ್ಲವಾಗಿದೆ.ಹಾಗಾಗಿ ಈ ಬಾರಿಯಾದರೂ ವಿಧಾನಪರಿಷತ್‍ಗೆ ನೇಮಕ ಮಾಡುವುದರ ಜೊತೆಗೆ,ನಿಗಮ,ಮಂಡಳಿ ಹಾಗೂ ಜಿ.ಪಂ,ತಾ.ಪಂ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಾದಿಗ ಸಮುದಾಯಕ್ಕೆ ಹೆಚ್ಚಿನ ಅದ್ಯತೆ ನೀಡಬೇಕು.ಈ ನಿಟ್ಟಿನಲ್ಲಿ ಮಾದಿಗ ಸಮುದಾಯ ಜಿಲ್ಲೆಯ ಇಬ್ಬರು ಸಚಿವರು ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರಿಗೆ ಸನ್ಮಾನ ಸಮಾರಂಭ ಏರ್ಪಡಿಸಿ, ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಯಿಸಿ, ಮನವಿ ಮಾಡಲು ತೀರ್ಮಾನಿಸಲಾಗಿದೆ ಎಂದರು.

ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಮಾಜಿಕ ನ್ಯಾಯ ಎಂದು ಅರಿತಿರುವ ಮಾದಿಗ ಸಮುದಾಯ ಬೇರೆ ಪಕ್ಷದ ಒಳಮೀಸಲಾತಿ ವರ್ಗೀಕರಣದಂತಹ ಅಮೀಷಗಳಿಗೆ ಬಲಿಯಾಗದೆ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಬೆಂಬಲಿಸಿದ ಪರಿಣಾಮ ತುಮಕೂರು ಜಿಲ್ಲೆಯ 7 ಕ್ಷೇತ್ರಗಳಲ್ಲಿ,ರಾಜ್ಯದ 135 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿ, ಸರಕಾರ ರಚಿಸಲು ಸಾಧ್ಯವಾಯಿತು.1999ರಿಂದಲೂ ಇದುವರೆಗೂ ಹಲವಾರು ಆಕಾಂಕ್ಷಿಗಳು ಇದ್ದಾಗಲೂ ಕಾಂಗ್ರೆಸ್ ಪಕ್ಷದಿಂದ ಎರಡು ಮೀಸಲು ಕ್ಷೇತ್ರಗಳಲ್ಲಿ ಮಾದಿಗ ಸಮುದಾಯಕ್ಕೆ ಟಿಕೇಟ್ ನೀಡದೆ ನಿರ್ಲಕ್ಷ ಮಾಡಿವೆ.ಈ ಬಾರಿಯೂ ನಿರ್ಲಕ್ಷ ಮಾಡಿದರೆ ಮುಂಬರುವ ಜಿ.ಪಂ., ತಾ.ಪಂ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜಿಲ್ಲೆಯ ಮಾದಿಗ ಸಮುದಾಯ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ನರಸೀಯಪ್ಪ ಎಚ್ಚರಿಸಿದರು.

ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ,ಜಿಲ್ಲೆಯಲ್ಲಿ,ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮಾದಿಗ ಸಮುದಾಯ ದುಡಿದಿದೆ.ಹಾಗಾಗಿ ಪಕ್ಷಕ್ಕಾಗಿ ದುಡಿದವರಿಗೆ ಮೊದಲ ಅದ್ಯತೆ ನೀಡಬೇಕೆಂಬುದು ನಮ್ಮ ಆಗ್ರಹವಾಗಿದೆ. ಜಿಲ್ಲೆಯ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಒಂದರಲ್ಲಿ ಮಾದಿಗ ಸಮುದಾಯಕ್ಕೆ ಸ್ಪರ್ಧಿಸಲು ಅವಕಾಶ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್‍ಗೆ ಮನವಿ ಮಾಡುವುದಾಗಿ ನುಡಿದರು.

ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಡಾ.ಡಿ.ಅರುಂಧತಿ ಮಾತನಾಡಿ,ಜಿಲ್ಲೆಯಲ್ಲಿ ಮಾದಿಗರಿಗೆ ದ್ವನಿ ಇಲ್ಲದಂತಾಗಿದೆ.ಕಾಂಗ್ರೆಸ್ ಪಕ್ಷದ ಮುಖಂಡರು ಮಾದಿಗ ಸಮುದಾಯದ ಕಡೆ ಗಮನಹರಿಸಬೇಕು. ಈ ನಿಟ್ಟಿನಲ್ಲಿ ಶೀಘ್ರವೇ ನಿಯೋಗ ಹೋಗಿ ಮುಖ್ಯಮಂತ್ರಿ,ಉಪಮುಖ್ಯಮಂತ್ರಿ ಹಾಗೂ ಜಿಲ್ಲೆಯ ಸಚಿವರುಗಳನ್ನು ಭೇಟಿಯಾಗಿ ಮನವಿ ಸಲ್ಲಿಸುವುದಾಗಿ ತಿಳಿಸಿದರು.

ಮಾದಿಗ ದಂಡೋರ ರಾಜ್ಯಾಧ್ಯಕ್ಷ ಪಾವಗಡ ಶ್ರೀರಾಮ್ ಮಾತನಾಡಿ,ಜಿಲ್ಲೆಯಲ್ಲಿ ಕಳೆದ ಮೂವತ್ತು ವರ್ಷಗಳಿಂದ ಮಾದಿಗ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದಿಂದ ಪ್ರಾತಿನಿಧ್ಯ ದೊರೆತ್ತಿಲ್ಲ.ಪಕ್ಷಕ್ಕಾಗಿ ದುಡಿದ ಹಲವರು ಯಾವ ಅಧಿಕಾರವೂ ಇಲ್ಲದೆ ಮೌನಕ್ಕೆ ಶರಣಾಗಿದ್ದಾರೆ. ಪಕ್ಷಕ್ಕಾಗಿ ದುಡಿದವರಿಗೆ ವಿಧಾನಪರಿಷತ್,ನಿಗಮ, ಮಂಡಳಿ,ಜಿ.ಪಂ., ತಾ.ಪಂ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಅವಕಾಶ ಕಲ್ಪಿಸಬೇಕು.ಹಾಗೆಯೇ ರಾಜ್ಯಮಟ್ಟದಲ್ಲಿ ಒಳ್ಳೆಯ ಕೆಲಸ ಮಾಡಿರುವ ಮಾಜಿ ಸಚಿವ ಹೆಚ್.ಆಂಜನೇಯ ಅವರಿಗೂ ವಿಧಾನಪರಿಷತ್ ಸ್ಥಾನ ನೀಡಿ, ಅವರ ಅನುಭವವನ್ನು ಸರಕಾರ ಬಳಕೆ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾದಿಗ ಸಮುದಾಯದ ಮುಖಂಡರಾದ ಮರಿಚನ್ನಮ್ಮ, ಪಿ.ಎನ್.ರಾಮಯ್ಯ,ಶಿವಶಂಕರ್,ರಾಮಚಂದ್ರ, ಕೆ.ರಾಮಯ್ಯ,ಡಾ.ಲಕ್ಷ್ಮಿರಂಗಯ್ಯ, ಜೆ.ಸಿ.ಬಿ.ವೆಂಕಟೇಶ್,ಚಂದ್ರಶೇಖರ್,ಗೂಳರಿವೆ ನಾಗರಾಜು, ತುರುವೇಕೆರೆ ಆದಿಜಾಂಭವ ತಾಲ್ಲೂಕು ಅಧ್ಯಕ್ಷರಾದ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *