ತುಮಕೂರು : ಯಾವುದೇ ಸಿನಿಮಾವು ಇಂದು ಹಾಕಿದ ಬಂಡವಾಳವನ್ನು ಹಿಂತೆಗೆವುದೇ ಆಗಿದೆ, ಆದರ್ಶಗಳನ್ನಲ್ಲ, ಹುಸಿ ಆದರ್ಶಗಳನ್ನು ಬಾಯಿ ತುಂಬಾ ಮಾತನಾಡುತ್ತಿರುತ್ತೇವೆ ವಾಸ್ತವದಲ್ಲಿ ಬೇರೇನೋ ಆಗಿರುತ್ತೇವೆ, ಇಲ್ಲವೆ ಬಹುತೇಕ ಮುಖವಾಡವಾಗಿರುತ್ತೇವೆ ಎಂದು ಬೂವನಹಳ್ಳಿ ನಾಗರಾಜು ಹೇಳಿದರು.

ಬರಗೂರರು ಸಂಪಾದನೆಯ ಬೆನ್ನನ್ನು ಹತ್ತದೆ, ಬಹುಶಃ ಅವರ ಒಂದು ಊರಿನ ಕಥೆ ಚಿತ್ರದಿಂದ ಹಿಡಿದು ಇಂದಿನ ಅಮೃತಮತಿ ಚಿತ್ರದವರೆಗೆ ಎಲ್ಲಾ ಚಿತ್ರಗಳು ಕೂಡ,ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಭಾವುಟವನ್ನು, ಕನ್ನಡದ ನೆಲವನ್ನು ಖ್ಯಾತಿಗೊಳಿಸಿದ್ದಾರೆ, ಅವರೆಂದೂ ಬಂಡವಾಳದ ಹಿಂದೆ ಬೆನ್ನು ಬಿದ್ದವರಲ್ಲ
ಅವರು ಮಾರ್ಚ್ 28ರ ಸಂಜೆ ತುಮಕೂರಿನ ಕನ್ನಡ ಭವನದಲ್ಲಿ ನಾಡೋಜ ಬರಗೂರು ರಾಮಚಂದ್ರಪ್ಪನವರ “ಅಮೃತಮತಿ” ಚಲನ ಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಹಾಗೇಯೇ ಬಂಡವಾಳಿಗರ ಬೆನ್ನು ಬಿದ್ದವರಲ್ಲ, ಅವರು ಮುಲಾಜುಗಳಿಗೆ ಒಳಗಾದವರಲ್ಲ, ಮುಲಾಜಿಗೆ ಆದ್ಯತೆ ಕೊಡದೆ ಬೆವರಿನ ಜನರ ಭಾಷೆ, ಪ್ರಯೋಗಗಳನ್ನು ಮಾಡುತ್ತಾ ಬಂದರು, ಸಂಸ್ಕೃತ ಭಾಷೆಯ ಕಾವ್ಯವನ್ನು ಚಲನಚಿತ್ರ ಮಾಡಿದ್ದಾರೆ ಎಂದರೆ, ಅದು ಬರಗೂರು ರಾಮಚಂದ್ರಪ್ಪನವರಂತಹವರಿಂದ ಮಾತ್ರ ಸಾಧ್ಯ ಎಂದರು.
ಬರಗೂರು ರಾಮಚಂದ್ರಪ್ಪನವರು ಅಮೃತಮತಿ ಚಲನ ಚಿತ್ರದಲ್ಲಿ ಅಷ್ಟವಕ್ರನನ್ನು ರಾಣಿಯೊಬ್ಬರು ಪ್ರೀತಿಸುವುದರ ಮೂಲಕ ಮನುಷ್ಯ, ಮನುಷ್ಯ ಸಂಬಂಧಗಳನ್ನು ಕಟ್ಟಿಕೊಟ್ಟಿದ್ದಾರೆ. ಈ ಚಿತ್ರವನ್ನು ನೋಡ್ತಾ, ನೋಡ್ತಾ ಆಶಯಗಳು ಮೂಡುತ್ತವೆ, ಯಾವುದೇ ಪಾತ್ರಗಳನ್ನು, ವ್ಯಕ್ತಿಗಳನ್ನು ಉನ್ನತ ಸ್ಥಾನದಲ್ಲಿ ಕೂರಿಸಿಲ್ಲ,
ಬರಗೂರರಿಗೆ ಅವರದೇ ಆದ ಆಶಯಗಳು ಮತ್ತು ಘನತೆ ಇದೆ, ಎಲ್ಲಾ ವ್ಯಕ್ತಿಗಳ, ಜನರ ಆಶಯಗಳ ಘನತೆಯನ್ನು ಎತ್ತಿ ಹಿಡಿಯುವ ನೈಜ ಪ್ರಜಾಪ್ರಭುತ್ವವನ್ನು ಬರಗೂರರು ತೋರಿಸಿದ್ದಾರೆ, ಅಮೃತಮತಿ ಎಂಬ ಕಾವ್ಯವನ್ನು ಇಟ್ಟುಕೊಂಡು, ಮರುಸೃಷ್ಠಿ ಮಾಡಿದ್ದಾರೆ, ಬಂಡವಾಳ ಹಾಕಿದವರು ಮಾರುಕಟ್ಟೆಯನ್ನು ಅದ್ವಾನಗೊಳಿಸಿ, ಪ್ರಜಾಪ್ರಭುತ್ವ ಆಶಯಗಳನ್ನು ಗಾಳಿಗೆ ತೂರಿ, ಸಮುದಾಯ ನೋಡುವಂತಹ ಅಭಿರುಚಿ ಚಿತ್ರಗಳು ಬರದಂತೆ ಮಾಡಿದ್ದಾರೆ, ಯಾವುದೇ ಸಿನಿಮಾಗಳು ಮಾರುಕಟ್ಟೆಯ ಬಂಡವಾಳವನ್ನು ಲೆಕ್ಕ ಹಾಕುತ್ತಿವೆಯೇ ಹೊರತು ಮಾನವೀಯ ಮೌಲ್ಯಗಳನ್ನು ಕಡೆಗಾಣಿಸಲಾಗಿದೆ, ಡಾ.ರಾಜಕುಮಾರ ಅವರ ಎಲ್ಲಾ ಸಿನಿಮಾಗಳು ಮನೆಮಂದಿಯೆಲ್ಲಾ ಕೂತು ನೋಡಬಹುದಿತ್ತು, ಅಲ್ಲಿ ಒಂದು ಮೌಲ್ಯವಿರುತ್ತಿತ್ತು, ಆದರೆ ಇಂದಿನ ಸಿನಿಮಾಗಳನ್ನು ನೋಡಿ ಆಚೆ ಬಂದಾಗ ಆ ಸಿನಿಮಾದ ಮೌಲ್ಯವೇನು ಎಂಬುದೇ ನೆನಪಿಗೆ ಬಾರದು ಎಂದರು.
ಅರ್ಥವನ್ನೇ ಕೊಡದ ಸಿನಿಮಾಗಳು ಸಮಾಜಕ್ಕೆ ಯಾವ ಮೌಲ್ಯಗಳನ್ನು ಜನರಿಗೆ ತೋರಿಸಲು ಹೊರಟಿವೆ, ಮೌಲ್ಯಗಳ ಆಂತರಿಕ ಪ್ರಜಾಪ್ರಭುತ್ವವನ್ನು ಸಮುದಾಯಗಳು ಕಳೆದುಕೊಳ್ಳುತ್ತಿವೆ, ಮನುಷ್ಯತ್ವ ತುಂಬಿದ ಮನುಸ್ಸುಗಳನ್ನು ಬರಗೂರರು ತಮ್ಮ ಚಿತ್ರಗಳ ಮೂಲಕ ಕಟ್ಟಿ ಕೊಟ್ಟದ್ದಾರೆ, ಅಂದರೆ ಮನುಷ್ಯತ್ವ ಬಿತ್ತುವಂತಹ ಸಿನಿಮಾಗಳು ಬಾಯಿಂದ ಬಾಯಿಗೆ ಪ್ರಚಾರ ಪಡೆಯಬೇಕು, ಆಗ ಗೆಲ್ಲುವ ಪ್ರಯತ್ನ ಮಾಡುತ್ತದೆ, ಎಷ್ಟು ಗೆಲ್ಲುತ್ತೆ ಅನ್ನುವುದು ಮುಖ್ಯವಲ್ಲ, ಎಷ್ಟು ಜನರನ್ನು ತಲುಪಿತು ಅನ್ನುವುದು ಮುಖ್ಯ ಎಂದರು.
ಕನ್ನಡ ಸಾಕ್ಷಿಪ್ರಜ್ಞೆಗಳಂತಿರುವ ಬರಗೂರು ರಾಮಚಂದ್ರಪ್ಪನವರ ಸಿನಿಮಾಗಳನ್ನು ಮಾತಿಗಷ್ಟೆ ಸೀಮಿತಗೊಳಿಸದೇ ಸಮುದಾಯದತ್ತ ಕೊಂಡಯ್ಯಬೇಕಿದೆ ಎಂದರು.
ಚಿಂತಕ ಕೆ.ದೊರೈರಾಜ್ ಮಾತನಾಡಿ ಅಮೃತಮತಿ ಚಲನ ಚಿತ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಗಳಿಸಲು ಸನಿಮಾದಲ್ಲಿರುವ ಮೌಲ್ಯಗಳೇ ಕಾರಣವಾಗಿವೆ, ಇತ್ತೀಚಿನ ದಿನಗಳಲ್ಲಿ ಮನುಷ್ಯನ ಮೌಲ್ಯಗಳನ್ನು ಅಳೆಯುವಂತಹವುದು, ಸಂಬಂಧಗಳನ್ನು ನೋಡುವಂತಹವುದು, ಮುಂದಿನ ದಿನಗಳಲ್ಲಿ ಮನುಷ್ಯನನ್ನು ಹೇಗೆ ಹಿಡಿದಿಡಬಲ್ಲವು ಎಂಬುದನ್ನು ಚಿಂತಿಸಬೇಕಿದೆ ಎಂದರು.
ಬರಗೂರು ರಾಮಚಂದ್ರಪ್ಪನವರು ನಾಡಿನ ಅನನ್ಯ ದೊಡ್ಡಪ್ರತಿಭೆ, ಈ ಜಿಲ್ಲೆಯವರೇ ಆದ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದಿರುವುದು ಹೆಚ್ಚು ಸಂತೋಷದ ವಿಷಯ, ಅವರ ಆಶಯವೇನೆಂದರೆ ಜ್ಞಾನ ಆಗಲಿ, ಕಾವ್ಯ, ಕಲೆ ಇವೆಲ್ಲಾ ಬೌದ್ಧಿಕ ವಲಯದ ಒಂದೇ ವಲಯದ ಜನರ ನಡುವೆ ಸುಳಿಯುವಂತಹವುದಾಗಬಾರದು, ಜನರ ಹತ್ತಿರಕ್ಕೆ ಹೋಗಬೇಕು ಅನ್ನುವಂತಹವುದು ಬರಗೂರರ ಆಸೆ, ಅದು ಸಿನಿಮಾ ಮೂಲಕವಾಗಲಿ, ಕಾವ್ಯವಾಗಲಿ, ನಾಟಕವಾಗಲಿ ಸಾಮಾನ್ಯ ಜನರನ್ನು ತಲುಪಬೇಕು ಅನ್ನುವುದು ಅವರ ಆಶಯ ಎಂದರು.
ಬರಗೂರರ ಸಿನಿಮಾಗಳಲ್ಲಿ ಮನುಷ್ಯ ಸಂಬಂಧಗಳನ್ನು ಬೆಸೆಯುವುದು, ಜಾಗೃತಿ ಮೂಡಿಸುವುದಾಗಿದೆ, ಆದರೆ ಸಿನಿಮಾವನ್ನು ವಾಣಿಜ್ಯ ನೆಲೆಯಲ್ಲಿ ನೋಡಿ ಮನುಷ್ಯನನ್ನು ಭೌದ್ಧಿಕವಾಗಿ ಮತ್ತು ಸಾಂಸ್ಕೃತಿಕ ವಾಗಿ ಮನಸ್ಸುಗಳನ್ನು ಕೊಲ್ಲಲಾಗಿದೆ ಹೇಗೆಂದರೆ ಮಳೆಗಾಲದಲ್ಲಿ ಬೆಟ್ಟಗುಡ್ಡಗಳನ್ನು ಸಹಜ ಸ್ಥಿತಿಯಲ್ಲಿ ನೋಡಿದರೆ, ಗಿಡ, ಮರ, ಹಸಿರು, ತುಂಬಾ ರಮಣೀಯವಾಗಿರುತ್ತವೆ, ,ಅದೇ ರೀತಿ ಕಲೆ-ಸಾಹಿತ್ಯದ ಅಸಕ್ತಿ ಇರುವವರ ಮನಸ್ಸು ಹಚ್ಚ ಹಸಿರಾಗಿರುತ್ತವೆ, ಆದರೆ ಬೇಸಿಗೆಯಲ್ಲಿ ಹಸಿರೆಲ್ಲಾ ಒಣಗಿ ಸುಟ್ಟು ಸುಟ್ಟು ಹೋದಂತೆ ಮನುಷ್ಯನ ಮನಸ್ಸು ಕೂಡ ಈಗ ಸಾಹಿತ್ಯ, ಕಲೆ, ಮನುಷ್ಯ ಸಂಬಂಧಗಳು ಬೆಂಕಿಯಲ್ಲಿ ಸುಟ್ಟು ಹೋಗಿ, ಮನುಷ್ಯತ್ವ ಕಳೆದುಕೊಂಡು ಬರೀ ದುಡ್ಡು ದುಡ್ಡು ಎನ್ನುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಿನಿಮಾ ಪ್ರದರ್ಶಶನದ ನಂತರ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಬಾ.ಹ.ರಮಾಕುಮಾರಿಯವರು ಮನುಷ್ಯನನ್ನು ಬಂಧನಕೊಳ್ಳ ಪಡಿಸದೆ ಬಯಲಿಗೆ ಬಿಟ್ಟಾಗ ಮನಸ್ಸು, ದೇಹ ಎಲ್ಲಾವು ಉಲ್ಲಾಸವಾಗಿರುತ್ತವೆ ಎಂಬುದೇ ಅಮೃತಮತಿ ಸಿನಿಮಾದ ಆಶಯವಾಗಿದೆ ಎಂದರು.
ಚಲನಚಿತ್ರ ಕುರಿತು ಡಾ.ಮುರಳೀಧರ್ ಮಾತನಾಡಿದರು, ಸಾಹಿತಿ ಓ.ನಾಗರಾಜಯ್ಯ ಸ್ವಾಗತಿಸಿ, ತುಮಕೂರು ವಿ.ವಿ.ಯ ಕನ್ನಡ ಅಧ್ಯಾಪಕರಾದ ನಾಗಭೂಷಣ ಬಗ್ಗನಡು ನಿರೂಪಿಸಿದರು.